Friday, 20 May 2011

ಒಬ್ಬ ರಾಘವೇಂದ್ರ ಹೆಗಡೆಯ ನೆನಪಿಗೆ

ಹೌದಲ್ಲ, ಆಗಲೇ ನಾಲ್ಕು ವರ್ಷಗಳು ಆಗಿ ಹೋದವು. ಹೀಗೆ ಇದೇ ಮೇ ಕಳೆದು ಮಳೆ  ಬರಲು ಸುರುವಾಗುವ ಸಮಯದಲ್ಲಿಯೇ,  ಒಂದು ದಿನ ಗೆಳೆಯ ಗುರು ಭಟ್ಟನಿಗೆ ಕರೆ ಮಾಡಿದಾಗ ಆ ಘೋರ ತಿಳಿದಿದ್ದು. ಅವನು ಹೇಳಿದ್ದನ್ನು ಅರಗಿಸಿಕೊಳ್ಳುವುದಿರಲಿ ನಂಬಲೇ ಸಾಧ್ಯವಾಗಲಾರದಾಯ್ತು. ಯಾವಾಗಲೂ ಮಾಡುವಂತೆ ಏನೋ ಒಂದು prank  ಮಾಡುತ್ತಿರಬಹುದೇನೋ ಎಂದುಕೊಂಡೆ, ಹಾಗೆ ಆಗಿದ್ದರೆ ಒಳ್ಳೆಯದಿತ್ತು. ಆದರೆ ಬದುಕು ಹಾಗೇ, ಎಲ್ಲವೂ ನಾವು ಬಯಸಿದ ಹಾಗೇ ಆದರೆ ಕ್ರೂರ ವಿಧಿಗೆ ಸಂತೋಷವೆಲ್ಲಿ? ಗುರು ನಮ್ಮ ರಾಘು ಇದ್ನಲ್ಲ, ಅವನು ಮೊನ್ನೆ ಹೋಗ್ಬಿಟ್ಟ ಅಂತೆಎಂದಾಗ, ’ಹೇಗೆ?’ ಎಂದು ಕೇಳಬೇಕೆಂಬಷ್ಟರ  ಮಟ್ಟಿಗೂ ಪ್ರಜ್ಞೆ ಇರದಂತೆ ಗರ ಬಡಿದ ಹಾಗಾಗಿಹೋಗಿತ್ತು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಭಟ್ಟನೇ ಕರುಳಿನಲ್ಲೇನೋ ತೊಂದರೆಯಿತ್ತಂತೆ, ಹೊಟ್ಟೆ ನೋವು ಎಂದು ಆಗಾಗ ಹೇಳುತ್ತಿದ್ದನಲ್ಲ, ಅದೇ ಇದ್ದಿರಬಹುದು.   ಎಂದ ಎನ್ನುವಷ್ಟಕ್ಕೆ ಒಂದು ಅಧ್ಯಾಯದ ಅಂತ್ಯವಾಗುತ್ತದೆ. 
          ಅದಕ್ಕಿಂತ ಒಂದು ವರ್ಷ ಹಿಂದಕ್ಕೆ ಹೋಗೋಣ. ನಾನು ೧ ಪಿ.ಯು. ಗೆ ಹಿಂದೆ ಮುಂದೆ ಗೊತ್ತಿಲ್ಲದ ಉಜಿರೆಗೆ ಹೋಗಿ ಸಿದ್ಧವನಕ್ಕೆ ( ನಮ್ಮ ಹಾಸ್ಟೆಲ್ ಹೆಸರದು) ಕಾಲಿಟ್ಟಿದ್ದೆ. ನಾನು ಬಂದಿದ್ದೇ ಲೇಟು, ಉಳಿದವರೆಲ್ಲ ಮೊದಲೇ ಬಂದಿದ್ದರಾಗಿ, ಹೊಸ ಪ್ರದೇಶದಲ್ಲಿ ಇಬ್ಬರು ಅಪರಿಚಿತರು ಮೊದಲು ಭೇಟಿಯಾದ ಕೂಡಲೇ ಹುಟ್ಟುವ ಗೆಳೆತನ ಮೂಡುವ ಅವಕಾಶ ಹಾಗೆ ತಪ್ಪಿ ಹೋಗಿತ್ತು. ಅದರ ಮೇಲೆ ಇವನು ಟಾಪರ್ ಅಂತೋಎಂಬ ಆಶ್ಚರ್ಯ, ಉದ್ವೇಗ ಭರಿತ  ಕೌತುಕ, ಹಾಗೂ ಇವನು ಸಾಮಾನ್ಯರ ಜೊತೆಗೆ ಹೊಂದಿಕೊಳ್ಳಲಾರದ ಭಿನ್ನತಳಿ ಎಂಬ ಪೂರ್ವಾಗ್ರಹದಿಂದ ಎಷ್ಟೋ ಹುಡುಗರು ಅಷ್ಟು ಹೊತ್ತಿಗಾಗಲೇ ಪೀಡಿತರಾಗಿದ್ದರೇನೋ ಎಂಬಷ್ಟರ ಮಟ್ಟಿಗೆ ನನಗೆ ರೂಮಿಗೆ ಬಂದ ಒಂದು ಗಂಟೆಯೊಳಗೆ ಏಕಾಂಗಿತನ ಕಾಡತೊಡಗಿತ್ತು. ಯಾರೂ ಮಾತನಾಡಲೂ ಸಿಗದ ಹಾಗಾಗಿ ಸುಮ್ಮನೇ ಕುಳಿತಿದ್ದೆ. ಆಗ ಯಾವ ಮಾಯೆಯಿಂದ ಬಂದೆಯೋ ನೀನು, ಅದೇ ರಭಸ, ಅದೇ ದಾಪುಗಾಲುಗಳು, ನಡೆದರೆ ನೆಲವೇ ಶಬ್ದ ಮಾಡುವ ಕುಳ್ಳ, ಬೊಜ್ಜಲ್ಲದಿದ್ದರೂ ಬೊಜ್ಜೆನಿಸುವ ದಪ್ಪನೆಯ ಶರೀರ. ಮೊದಲಿದ್ದ ಅಲ್ಪ ಪರಿಚಯವೇ ಸಾಕಾಗಿ ನನ್ನ ಬೆನ್ನ ಮೇಲೊಂದು ಗುದ್ದು ಬಿದ್ದಿತ್ತು. ಅಗಲಿದ್ದ ಜೀವದ ಗೆಳೆಯರ ಪುನರ್ಮಿಲನದಲ್ಲಿ ಮಾತನಾಡಹುದಾದ ಶೈಲಿ. ಸರ್ರನೇ ನಿನ್ನ ರೂಮಿಗೆ ಕರೆದುಕೊಂಡು ಹೋಗಿ ನಿನ್ನ ಅಮ್ಮ ಮಾಡಿಕೊಟ್ಟಿದ್ದ ಏನೋ ಕಜ್ಜಾಯವನ್ನು, ನನಗೇ ಕೊಡಲು ನಿಮ್ಮಮ್ಮ ಹೇಳಿದ್ದರೇನೋ ಎಂಬಂತೆ ಕೊಟ್ಟೆ. ಸಂಜೆ ಬಂದು ನಿನ್ನ ಬ್ಯಾಗನ್ನು ನೋಡಿಕೊಳ್ಳುತ್ತೇನೆ ಎಂಬ ಭರವಸೆ ಕೊಟ್ಟೆ. ನಿನ್ನ ಶೈಲಿಯೇ ಹಾಗೆ, ಯಾವ ಪೀಠಿಕೆಗೆ ಆಗಲೀ, ಯಾವ formalityಗೆ ಆಗಲೀ ಅವಕಾಶವಿಲ್ಲ.ಎಲ್ಲವೂ ನೇರಾನೇರ.
          ಎರಡು ಫ಼್ಲೋರ್ ಗಳ ಅಂತರ ನಮ್ಮಿಬ್ಬರ ರೂಮುಗಳ ಮಧ್ಯೆ ಇತ್ತಾದರೂ ಅದೇನೂ ಅಷ್ಟರ ಮಟ್ಟಿಗಿನ ಅಂತರ ಎನಿಸಲಿಲ್ಲ. ಪ್ರತೀ ಸಲವೂ ನೀನು ಬರುತ್ತಿದ್ದೆ ಏನೋ ಒಂದು ವಿಷಯ ಇಟ್ಟುಕೊಂಡು. ಹೊಸಿಲ ಹೊರಗಿನಿಂದಲೇ ಗಟ್ಟಿಯಾಗಿ ಏನೋ ಒಂದನ್ನು ಕೂಗಿಕೊಂಡು ಬರುವ ರೀತಿಗೇ ಇದು ರಾಘವೇಂದ್ರನೇ ಎಂದು ಗೊತ್ತಾಗುತ್ತಿತ್ತು, ತುಡುಗು ದನಕ್ಕೆ ಕಟ್ಟಿದ ಗಂಟೆಯ ಶಬ್ದದ ಹಾಗೆ, ಆ ಹೋಲಿಕೆಯನ್ನೂ ನೀನೇ ಕೊಟ್ಟಿದ್ದು. ಕೆಲವೊಮ್ಮೆ ಕಿರಿಕಿರಿಯಾಗುವ ಹಾಗಾಗುತ್ತಿತ್ತಾದರೂ ಹಾಗೆ ಮಾಡಲು ಗೆಳೆಯನಿಗೆ ಮಾತ್ರ ಹಕ್ಕಿದೆಯಲ್ಲವೇ. ಅದರ ಬಗ್ಗೇನೂ ತಕರಾರಿಲ್ಲ ಬಿಡು. ನನಗಿನ್ನೂ ನೆನಪಿದೆ, ಪ್ರತೀ ಶನಿವಾರವೂ ಹಾಸ್ಟೆಲ್ ನಲ್ಲಿ ತೋರಿಸುತ್ತಿದ್ದ ಫಿಲಂಗೆ ಹೋಗುವ ಮುಂಚೆ ನಮ್ಮ ರೂಮಿಗೆ ಬರುವುದು, ನನಗೆ ಬರಲು ಹೇಳುವುದು, ನಾನು ಇಷ್ಟವಿಲ್ಲ ಎಂದು ಹೇಳುವುದು, ಆದರೂ ಎಳೆದುಕೊಂಡು ಹೋಗುವುದು, ನಾನಲ್ಲೇ ನಿದ್ದೆ ಮಾಡುವುದು, ನಿನಗೂ ನೋಡಲು ಮನಸ್ಸು ಬಾರದೇ ಎದ್ದು ಬರುವುದು, ಇದು ಎಷ್ಟುಬಾರಿಯೋ? ಲೆಕ್ಕ ಇಟ್ಟವರಾರು. ಕೊನೆಕೊನೆಗೆ ನಿನಗೇ ಬೇಜಾರಾಗಿ ನೀನೂ ಹೋಗುವುದನ್ನು ನಿಲ್ಲಿಸಿದೆ , atleast ನನ್ನನ್ನು ಕರೆಯುವುದನ್ನು ನಿಲ್ಲಿಸಿದೆ. ಹೋಗಲಿ ಬಿಡು.
          ಎಷ್ಟೋ ನೆನಪುಗಳು, ಆಡಿಕೊಂಡ ಎಷ್ಟೋ ಮಾತುಗಳು , ಆಡದೇ ಹೋದ ಎಷ್ಟೋ ಯೋಚನೆಗಳು. ಒಂದೊಂದು ನೆನಪೂ ಚಿನ್ನದ ಬೆಲೆಯದ್ದು, ಬೆಲೆಯಿಡಲು ಸಾಧ್ಯವಾದರೆ. ಏನೋ tease ಮಾಡಿದರೆ ಅದನ್ನೇ ಸೀರಿಯಸ್ ಆಗಿ ತೆಗೆದುಕೊಂಡು ೨೫ ಡಿಪ್ಸ್ ನ್ನು ನಿತ್ತ ನೆಲದಲ್ಲಿ ಹೊಡೆದು ತೋರಿಸಿದ್ದು ಆಗ ಆಶ್ಚರ್ಯವೆನಿಸಿದರೂ ಈಗ funny ಅನಿಸುತ್ತದೆ. ಯಾವಗಲೋ ಒಮ್ಮೆ NTSE ಟ್ರೇನಿಂಗ್ ಸಮಯದಲ್ಲಿ ಕೆಮಿಸ್ಟ್ರಿ ಕ್ಲಾಸಿನಲ್ಲಿ ಆಯ್ಕೆಗಳನ್ನು ಕೊಡುವ ಮೊದಲೇ ಉತ್ತರ ಸಿಆಯ್ಕೆ ಎಂದು ಹೇಳುವಷ್ಟರ ಮಟ್ಟಿಗೆ ನಿದ್ರೆ ಮಾಡುತ್ತಿದ್ದ ನನ್ನ ಸಾಮರ್ಥ್ಯವನ್ನು ಆಡಿಕೊಳ್ಳುತ್ತಿದ್ದ ಬಗೆ ನನಗೇ ನಗೆ ತರಿಸುತ್ತದೆ ಎಂದರೆ ಅದು ಸುಳ್ಳಲ್ಲ. ರೀಡಿಂಗ್ ಟೇಬಲ್ ಮೇಲೆ ಅಪ್ಪ ಅಮ್ಮನ ಒಂದು ಛಾಯಾಚಿತ್ರ ಇಟ್ಟುಕೊಂಡು, ಪ್ರತೀ ಸಲ ಓದಲು ಕೂರುವ ಮೊದಲು ನಮಸ್ಕರಿಸುತ್ತಿದ್ದ ನಿನ್ನ ಅಭ್ಯಾಸವನ್ನು ನಾನು ಆಡಿಕೊಂಡಿದ್ದು , ನೀನು ಉರಿದುಕೊಂಡಿದ್ದು , ನಾನು ಕ್ಷಮೆ ಕೇಳಲೂ ಹಿಂಜರಿದಿದ್ದು , ಇವೆಲ್ಲಾ ನನ್ನ ಹುಡುಗಾಟದ ಅತಿರೇಕ ಎಂದು ಇವತ್ತು ಎನ್ನಿಸುತ್ತದೆ. ಇದೆಲ್ಲದರ ಮಧ್ಯದಲ್ಲಿ ನಿನಗೆ ಆವಾಗಾವಾಗ ಬರುತ್ತಿದ್ದ ಹೊಟ್ಟೆನೋವು ಗಮನಕ್ಕೆ ಬರದಂತೆ ಹೋಯಿತೇ, ಅಥವಾ ಹಾಗೆ ತೋರಿಸಿಕೊಂಡು ಸಂತಾಪ ಹುಟ್ಟಿಸಿಕೊಳ್ಳುವುದು ನಿನ್ನ ಜಾಯಮಾನಕ್ಕೆ ಆಗಿಬಾರದು ಎಂದು ಸುಮ್ಮನಾದೆಯೇ. ಏನೋ ಹೀಗೇ ಅದೊಂದು ಹದದಲ್ಲಿ ಹೋಗುತ್ತಿತ್ತು ಬದುಕು ಆ ಸಂಜೆಯವರೆಗೆ. ಅದೇನೋ ಚಿಕ್ಕ ಮಾತೇ ದೊಡ್ಡ ವಾದವಾಗಿ ಮನಸ್ಸೆಲ್ಲಾ ಹುಳಿಹುಳಿಯಾಗಿದ್ದು ಒಂದು ಹಂತ. ಮತ್ತೆ ಎದುರಲ್ಲಿ ಸಿಕ್ಕಾಗ ಪರಿಚಯದ ನಗೆ ನಕ್ಕು ಮಾತನಾಡುವಷ್ಟು ಆತ್ಮೀಯತೆ ಮತ್ತೆ ಮೂಡಿತಾದರೂ ಅದು ಹೃದಯದಿಂದ ಬಂದಿದ್ದಲ್ಲ ಎಂದು ಇಬ್ಬರಿಗೂ ಗೊತ್ತಾಗುತ್ತಿತ್ತು. ಮತ್ತೆ ಅದೇ ಭಾವ ಮೂಡಲು ಸಮಯ ಬೇಕಾಗುತ್ತಿತ್ತು. ನಾನು ಕಾಯಲು ತಯಾರಿದ್ದೆ. ಆದರೆ ಕಾಯಲು ನೀನು ಬಹಳ ದಿನ ಉಳಿಯಲಿಲ್ಲವಲ್ಲ.
          ಹಾಗೆ ಒಂದು ವರ್ಷದ ಕೊನೆಗೆ ಫಲಿತಾಂಶ ಬಂದಿತ್ತು. ಆಶ್ಚರ್ಯಕರವಾಗಿ ಸಿದ್ಧವನದ ಎಲ್ಲಾ ಘಟಾನುಘಟಿಗಳ ಮಧ್ಯೆ ಒಬ್ಬ ರಾಘವೇಂದ್ರ ಹೆಗಡೆ ಫಸ್ಟ್ ಬಂದಿದ್ದ. ಯಾರು ಊಹಿಸಿದ್ದರೋ ಬಿಟ್ಟಿದ್ದರೋ ಗೊತ್ತಿಲ್ಲ, ಈ ಒಬ್ಬ ರಾಘವೇಂದ್ರ ಹೆಗಡೆ ಭಯಂಕರ ಕೂಲ್ ಆಗಿದ್ದ. ಎಷ್ಟು ಜನ ಶುಭ ಹಾರೈಸಿದ್ದರೋ, ಎಷ್ಟು ಜನ ಮನದಲ್ಲೇ ಮುಲುಗಿದರೋ ಗೊತ್ತಿಲ್ಲ , ನಾನಂತೂ ಮುಂದಿನ ವರ್ಷ ನೋಡಿಕೊಳ್ಳುತ್ತೇನೆಂಬ ಸ್ಪೂರ್ತಿ ಪಡೆದಿದ್ದೆ. ನಿಜವೆಂದರೆ ನಾನು ಖುಷಿ ಪಟ್ಟಿದ್ದೆ, ನಾನಂತೂ ಆ ಸ್ಥಾನವನ್ನೂ ಪಡೆಯುವುದನ್ನು ಬಯಸುತ್ತಿರಲಿಲ್ಲವಾಗಿ ಒಬ್ಬ ನಮ್ಮೂರಿನವನು ಫಸ್ಟ್ ಬಂದ ಎಂಬ ಹೆಮ್ಮೆ ಹೆಗಲೇರಿತ್ತು. ಹೆಗಲೇರಿದ ಹೆಮ್ಮೆ ಮನಸ್ಸಿನಲ್ಲಿಳಿಯುವ ಮೊದಲೇ ನಿನ್ನ ಕರುಳು ಕೈ ಕೊಟ್ಟಿತ್ತು. ಮಾಡಿದ ಆಪರೇಶನ್ ಕೂಡ ಕೈ ಕೊಟ್ಟು ನೀನು ಎಲ್ಲರನ್ನು ಬಿಟ್ಟು ಅನಂತವನ್ನು ಸೇರಿದ್ದೆ.
         
ಯಾವುದೇ ವಸ್ತುವಿರಲಿ, ವ್ಯಕ್ತಿಯಿರಲಿ , ಅದರ ಅಸ್ತಿತ್ವದ ಮಹತ್ವ ಅದು ಇರುವಾಗ ತಿಳಿಯಲಾರದು. ಅದನ್ನು ಕಳೆದುಕೊಂಡ ಮೆಲೆಯೇ ಅದನ್ನು ಎಷ್ಟು ಕಳೆದುಕೊಂಡಿದ್ದೇವೆ ಎಂಬುದರ ಅಂದಾಜು ಸಿಗುವುದು. ಈಗ ಹೀಗೇ ಒಮ್ಮೆ ಹಿಂತಿರುಗಿ ನೋಡಿಕೊಂಡರೆ ಅದೆಷ್ಟು ಸವಿಘಳಿಗೆಗಳನ್ನು ಒಂದು ಅಹಂನ ಹೆಸರಿನಲ್ಲಿ ಕಳೆಯಗೊಟ್ಟೆವು ಎನಿಸುತ್ತದೆ. ಆ ಅಪ್ರಬುದ್ಧತೆಗೆ ,ಮರುಕ ಹುಟ್ಟುತ್ತದೆ. ಹಾಗೆಂದೂ ನೀನೇ ನನ್ನ 'best friend' ಆಗಿದ್ದೆ ಎಂದರೆ ಅದು ಸುಳ್ಳಾಗಬಹುದೇನೋ, ಆದರೆ ನಿನ್ನನ್ನು ಇಂದಿಗೂ miss ಮಾಡಿಕೊಳ್ಳುವಷ್ಟರ ಮಟ್ಟಿಗೆ ನಾನು ನಿನ್ನನ್ನು ನೆನಪಿಟ್ಟಿದ್ದೇನೆ, ಹಾಗೂ  ಸಮಯಕ್ಕೆ ಏನನ್ನಾದರೂ ಮರೆಸುವ ಶಕ್ತಿಯಿದೆ ಎಂಬುದು ಎಲ್ಲ ಸರಿಯೂ ಸತ್ಯವಾಗಬೇಕೆಂದೇನೂ ಇಲ್ಲ ಎಂದು ಹೇಳುವುದಷ್ಟನ್ನು ಈ ಲೇಖನ ಮಾಡಬಲ್ಲುದಾದರೆ ಅಲ್ಲಿಗೆ ಇದು ಸಾರ್ಥಕ್ಯವನ್ನು ಕಂಡೀತು.

Thursday, 5 May 2011

ಅನಾಮಿಕಾ

( ಹೆಸರೇನೆಂದಿಡಲಿ ಎಂದು ತಿಳಿಯದಿದ್ದುದರಿಂದ ಅನಾಮಿಕಎಂಬ ಹೆಸರನ್ನು ಬಳಸುತ್ತಿದ್ದೇನಾಗಲೀ , ಈ ಹೆಸರಿಗೆ ಬೇರಾವ ಅರ್ಥವೂ ಇಲ್ಲ . ಸೂಕ್ತ ಹೆಸರನ್ನು ಸೂಚಿಸಿದರೆ ಸಂತೋಷ , ಹೆಸರೇ ಇಲ್ಲದೇ ಹೋದರೂ ಸಂತೋಷ , ಅಷ್ಟಕ್ಕೂ ಹೆಸರಿನಲ್ಲೇನಿದೆ’ )


ನಿನಗಾಗೇ ಪರಿತಪಿಸುವೆ ನಾ, ನನ್ನಲ್ಲೇ ಒಳಗೊಳಗೆ

ಹೊರಬಾರದೆ ನಲುಗುತಿದೆ ಪರಿಚಯದ ಮುಗುಳುನಗೆ


ಮರೆವನೇ ಮರೆಸುವ ನೀನು ಮರೆಯದಮರ ನೆನಪು

ನಿನ್ನ ಹೆಸರು ಮಾತ್ರ ಸಾಕು ,ಏನು ಪುಳಕ ಏನು ಹುರುಪು

ಚಿತ್ತಭಿತ್ತಿಯಲಿ ಕಾದು ಕೆತ್ತಿರುವೆ ನಿನ್ನಯ ರಮ್ಯಚಿತ್ರ

ಕಂಬನಿಗೊದ್ದೆಯಾಗದೇ ಉಳಿದಿದೆ ನನ್ನ ಪ್ರೇಮಪತ್ರ


ಭಿನ್ನವೆಲ್ಲಿಯದು ಮುನ್ನ ಮರೆತಿಹುದು ನಿನ್ನ ಇರುವಿನಲ್ಲಿ

ನಿನ್ನೆ ಮರಳುವುದು ನಾಳೆ ಬೆಳಗುವುದು ಕಣ್ಣ ನೋಟದಲ್ಲಿ

ನಿನ್ನ ಅತಿಮಾನವ ಹೊಳಪಿನೆದುರು ಬಿಳುಪೇ ಕಡುಗಪ್ಪು

ಅನ್ನ ಸೇರದು, ಹಸಿವು ಮೂಡದು ಏನು ತಪ್ಪು ಯಾರದೊಪ್ಪು


ಯಶವು ಸಿಕ್ಕೀತೇ, ಗುರಿಯ ಮುಟ್ಟೀತೇ ಈ ಒಂದು ಪ್ರೇಮಸುಧೆ

ವಶವು ನಾನಿನಗೆ ನಿತ್ತ ನೆಲದಲ್ಲೇ; ಉತ್ತರವು ಮೂಡಿರದೆ

ಎತ್ತ ನೋಡಿದರತ್ತ ಸುತ್ತ ಮುತ್ತೆಲ್ಲ ಬೆಳಗಿತ್ತು ನಿನ್ನ ಬಿಂಬ

ಕಣ್ಣು ಮುಚ್ಚಿದಡೇನು ಒಳಗಿರುವೆ ನೀನಲ್ಲೇ ಮನದ ತುಂಬ

Sunday, 6 February 2011

ಕನ್ನಡ ಸಾಹಿತ್ಯ ಸಮ್ಮೇಳನ - ಒಂದು ಅನುಭವ ,ಒಂದು ಚಿಂತನೆ


"ನಾಳೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೊಗ್ತಾ ಇದ್ದೇನೆ ,ಬರ್ತೀಯಾ?"
"mad o what dude "
ಇದು ನನ್ನ ಒಬ್ಬ ಕನ್ನಡಿಗ ಮಿತ್ರ , ಅವನ ಗೆಳೆಯನೊಬ್ಬನನ್ನು(ಅವನೂ ಕನ್ನಡಿಗನೇ!!! ) ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದಾಗ ಸಿಕ್ಕಿದ ಉತ್ತರ . ಈ ವಿಷಯಕ್ಕೆ ಮತ್ತೆ ಬರೋಣ, ಈಗ ಕನ್ನಡದ ನುಡಿಹಬ್ಬವನ್ನು ಆಚರಿಸೋಣ.ಬೆಂದಕಾಳೂರಿಗೆ ೩೦ ವರ್ಷಗಳ ನಂತರ ಬಂದಿರುವ ಕನ್ನಡದ ರಥವನ್ನು ಸ್ವಾಗತಿಸೋಣ , ಎಂದೆಲ್ಲಾ ಹೇಳಿಕೊಂಡು ಹೋಗಿದ್ದೆವು ಕನ್ನಡದ ಸಾಹಿತ್ಯ ಸಮ್ಮೇಳನಕ್ಕೆ.
ನಡುಮಧ್ಯಾಹ್ನದ ಬಿಸಿಲಿನಲ್ಲಿ national collegeನ ಮೈದಾನದ ಒಳ ಹೊಕ್ಕವರು ಮೊದಲು ಅರಸಿದ್ದು , ಕಂಡದ್ದು ಪುಸ್ತಕ ಪ್ರದರ್ಶನವನ್ನು. ಕನ್ನಡ ಪುಸ್ತಕಗಳೆಂದರೆ ಬಾಯ್ಬಿಡುವ ನನಗೆ ಸ್ವರ್ಗವೇ ಭೂಮಿಗೆ ಬಂದಂತಿತ್ತು , ಅಲ್ಲಿನ ಪುಸ್ತಕ ಮಳಿಗೆಗಳನ್ನು ನೋಡಿ. ನಿಜಕ್ಕೂ  ಮನದಣಿಯೆ ನೋಡಿ ಖುಷಿ ಪಡುವಷ್ಟು ಪುಸ್ತಕಗಳು ,  frequent ಆಗಿ ಕಿವಿಗೆ  ಬೀಳುತ್ತಿದ್ದ ಕನ್ನಡ ಸಂಭಾಷಣೆಗಳು ( ಊರಿನ ವಾತಾವರಣವನ್ನು ನೆನಪಿಸುವಷ್ಟು ) , ರಿಯಾಯಿತಿಯೇನೂ ಅಲ್ಲದೇ ಹೋದರೂ ರಿಯಾಯಿತಿ ಎನ್ನಿಸುವ ಆಕರ್ಷಕ offerಗಳು ಎಲ್ಲಾ ಅದ್ಭುತವಾಗಿ ಕಂಡಿದ್ದು ಆಶ್ಚರ್ಯವೇನೂ ಅಲ್ಲ .ಆದರೆ ಅದ್ಭುತಗಳೂ ಅತಿಶಯಗಳೂ ಈ ಸಮ್ಮೇಳನದ ಮಟ್ಟಿಗೆ ಅಲ್ಲಿಗೇ ಮುಗಿದು ಹೋಗಿದ್ದು ದುರಂತ . ಪುಸ್ತಕ ಪ್ರದರ್ಶನದ ಹೆಚ್. ನರಸಿಂಹಯ್ಯ ಮಹಾದ್ವಾರದಿಂದ ಹೊರಬಂದು ಸಮ್ಮೇಳನದ ಸಭಾಂಗಣದ ಕೆಂಪೇಗೌಡ ಮಹಾದ್ವಾರವನ್ನು(ಅವುಗಳ ಮಧ್ಯದ ಅಂತರ ೧೦ಮೀ ಅಷ್ಟೇ !! ) ಪ್ರವೇಶಿಸುವುದರ ಒಳಗೆ ಉಸಿರು ಹಿಡಿದುಕೊಳ್ಳುವಷ್ಟು ಸಾಕಾಗಿತ್ತು. ಹೇಗೋ ಕಷ್ಟ ಪಟ್ಟು ಜನಜಂಗುಳಿಯ ಮಧ್ಯೆ ಹೋಗಿ ನಿಂತರೆ , ಕನ್ನಡ ಕಂಡ ಒಬ್ಬ ಅತ್ಯುತ್ತಮ ದೂರದರ್ಶನ ನಿರೂಪಕಿ ಅಪರ್ಣ ಹಾಗೂ ಚಂದನದ ಮಹೇಶ್ ಜೋಷಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು . ನಾಡಗೀತೆಗೆ ಚಪ್ಪಾಳೆ ಹೊಡೆವಂತ ಅಪಭೃಂಶವಾದರೂ , ಕಾರ್ಯಕ್ರಮವನ್ನು ನೋಡಲು ಅಕ್ಷರಶಃ ಸಾವಿರಾರು ಜನರು ನಿಂತಿದ್ದರೂ ಅವರಿಗೆ ತೊಂದರೆಯಾದೀತೆಂದು ಲೆಕ್ಕಿಸದೇ ಓಡಿಯಾಡಿದ chips , biscuits ಮಾರಾಟಗಾರರ ಹಪಾಹಪಿ ಕಿರಿಕಿರಿಯಾದರೂ , ಹಾಡು-ಕುಣಿತವಾಗಿ ಬಂದ ಕುವೆಂಪುರವರ ಎರಡು ಉನ್ನತ ಕೊಡುಗೆಗಳಾದ ನಾಡಗೀತೆ , ರೈತಗೀತೆಗಳು ಒಮ್ಮೆ ಎಲ್ಲರನ್ನು ರೋಮಾಂಚನಗೊಳಿಸಿದ್ದನ್ನು ಯಾವ ಕನ್ನಡಿಗನೂ ಅಲ್ಲಗಳೆಯಲಾರ. ಆದರೂ ಬೆಜಾರಿಗೆ ಕಾರಣವಾಗುತ್ತಿದುದೆಂದರೆ ನಮ್ಮ ಆಸೆಬುರುಕ ರಾಜಕಾರಣಗಳಿಗೆ ಸಿಗುತ್ತಿದ್ದ ಮಹತ್ವ - ಯಾವ ಸಾಹಿತಿಗೂ ಸಿಗದ  ಜೈಕಾರ , ಚಪ್ಪಾಳೆಗಳು ನಮ್ಮ ಸ್ವಘೋಷಿತ ’ ಜನಪ್ರಿಯ ’ ರಾಜಕಾರಣಿಗಳಿಗೆ ದೊರಕಿದ್ದು ನನ್ನ ಪ್ರಕಾರ ಸಾಹಿತ್ಯದ ಘೋರ ವೈಫಲ್ಯವೇ.  ನಮ್ಮ ಮಾನ್ಯ ಮಂತ್ರಿವರ್ಯರೊಬ್ಬರು "ಪಕ್ಷಭೇದ ಮರೆತು ಒಂದೇ ವೇದಿಕೆಯನ್ನು ಹಂಚಿಕೊಂಡ ತಮ್ಮ ಸಹೋದ್ಯೋಗಿ" ಗಳ ಹೃದಯವೈಶಾಲ್ಯತೆಯನ್ನು ಮೆಚ್ಚಿ ಹೊಗಳಿದ್ದಕ್ಕೆ ಎಲ್ಲರೂ ಮುಸಿ ಮುಸಿ ನಕ್ಕರೋ ಅಥವಾ ನನಗೆ ಮಾತ್ರ ಹಾಗೆನಿಸಿತೋ ನಾನು ತಿಳಿಯಲಿಲ್ಲ. ( "ಇರಬೆಕಾದದ್ದು ಇರಬೇಕಾದ ಕಡೆ ಇಲ್ಲದೇ ಹೋದರೆ ,ಇರಕೂಡದ ಕಡೆ ಏನಾದರೂ ಇದ್ದರೆ ಅದು ಕಸ" ಎಂದು ಕೈಲಾಸಂ ವ್ಯಾಖ್ಯಾನಿಸಿದ್ದರು ಎಂಬ ನೆನಪು,  ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣಿಗಳು ಕಸವೇ ಅಥವಾ ಮತ್ತೇನೋ ಕೈಲಾಸಮ್ಮೇ ಹೇಳಬೇಕು.)
ಅಷ್ಟು ಹೊತ್ತಿಗಾಗಲೇ ಮಧ್ಯಾಹ್ನದ ಊಟದ ಹೊತ್ತು ದಾಟಿ ಹೊಟ್ಟೆ ತಾಳ ಹಾಕುತ್ತಿದ್ದುದರಿಂದಲೋ , ಹಿಂದಿನ ಉಡುಪಿ ಸಮ್ಮೇಳನದ ಭೋಜನ ವ್ಯವಸ್ಥೆಯ ಯಶಸ್ಸಿನ ಕಥೆಗಳಿಂದ ಪ್ರಭಾವಿತವಾಗಿಯೋ ನಾನು ತಿರುಗಿ ಹೋಗುವ ಗೆಳೆಯರ ಮಾತಿಗೆ ಜಗ್ಗದೇ ಭೋಜನದ (ಅ?)ವ್ಯವಸ್ಥೆಯಿದ್ದ ’ಮಕ್ಕಳ ಕೂಟ’ ಕಡೆಗೆ ಹೆಜ್ಜೆ ಹಾಕಿದೆ, ಗೆಳೆಯರನ್ನೂ ಕರೆದುಕೊಂಡು. ಪ್ರಾಯ ಕಳೆದರೂ ಪ್ರೌಢರಾಗದ ( ಗೆಳೆಯ ರಾಹುಲ್ ನ ಆಂಗ್ಲ ಪದಪ್ರಯೋಗ ’grown ups who are yet to grow up' ಕನ್ನಡೀಕರಣ ) ಜನರ ಅಕಾರಣ ಆತುರವೋ, ’ಸರದಿಯ ಸಾಲು’ (queue) ಎಂಬುದರ ಅರ್ಥ ತಿಳಿಯದ , ತಿಳಿದರೂ ತಿಳಿಯದಂತಿರುವ ಪ್ರಜೆಗಳ ಜಾಣಮೂರ್ಖತ್ವವೋ, ಸಮ್ಮೇಳನದ ಸಂಘಟಕರ ವ್ಯವಸ್ಥೆಯಲ್ಲಾದಲೋಪವೋ , ಅಥವಾ ನಮ್ಮ ಬೆಂದಕಾಳೂರಿನ ’traffic ನ ಪ್ರಭಾವವೋ ಒಟ್ಟಾರೆಯಾಗಿ ಊಟದ ವ್ಯವಸ್ಥೆ ದೊಡ್ಡ ಅಧ್ವಾನವಾಗಿ ಹೋಗಿತ್ತು . ಅನ್ನವಿದ್ದಾಗ plate ಇಲ್ಲದೇ , plate ಸಿಕ್ಕಿದಾಗ ಅನ್ನವಿಲ್ಲದೇ ,ಎರಡೂ ಸಿಕ್ಕಿದಾಗ ಸಾಂಬಾರ್ ಖಾಲಿಯಾಗಿ ಅನುಭವಿಸಿದ ಹಸಿವೆಗೆ ಅದಕ್ಕಿಂತ ದೊಡ್ಡದಾದ frustration ಗೆ , ಇವೆಲ್ಲದರ ಮಧ್ಯೆ ಅನಾಗರೀಕವಾಗಿ ನಡೆದುಕೊಳ್ಳುತ್ತಿದ್ದ ನಾಗರೀಕರ ಮನಸ್ಥಿತಿಗೆ ಎಂತಹವರೂ ರೋಸಿ ಹೋಗದೇ ಇರಲಾರರು. ಬೆಂಗಳೂರಿನ trafficನ ಅವಾಂತರಕ್ಕೆ ಬಲಿಯಾಗಿ ಪದಾರ್ಥಗಳನ್ನು ಮುಟ್ಟಿಸಲಾರದೇ ಹೊದ cateringನವರ ತಪ್ಪಾ?, ಸಾಲನ್ನು ತಪ್ಪಿಸಿ ನುಗ್ಗಿ ಬರುತ್ತಿದ್ದ ಜನರನ್ನು ನಿಯಂತ್ರಿಸಲಾರದೇ ಅಸಹಾಯಕ ಪ್ರೇಕ್ಷಕರಾದ ,ಕನ್ನಡದ ಸೇವೆ ಎಂದು ನಿಸ್ವಾರ್ಥವಾಗಿ ದುಡಿದ ಸ್ವಯಂಸೇವಕರ,ಸಂಘಟಕರ ತಪ್ಪಾ? ಮತ್ತಾವ ಕಾರಣವೂ ಇಲ್ಲದೇ ಕೇವಲ ಕನ್ನಡದ ನುಡಿಜಾತ್ರೆ ಎಂದು ನಾಡಿನ ವಿವಿಧ ಭಾಗಗಳಿಂದ ರಾಜಧಾನಿಗೆ ಬಂದು , ಒಂದು ಊಟಕ್ಕೂ ಕಷ್ಟಪಡಬೇಕಾಗಿ ಬಂದಾಗ ಉಂಟಾದ ಹತಾಷೆಯಿಂದ ಕನಲಿದರೂ ದಾಂಧಲೆಮಾಡದ ಕನ್ನಡಾಭಿಮಾನಿಗಳ ತಪ್ಪಾ? ಒಂದು breking news ಕೊಡುವ ಭರದಲ್ಲಿ ತಾವು ಜನರಿಗೆ ಮತ್ತಿಷ್ಟು ತೊಂದರೆ ಕೊಡುತ್ತಿದ್ದೇವೆ ಎಂಬುದನ್ನು ಗಮನಿಸದೇ ಹೋದ ದೂರದರ್ಶನ ವರದಿಗಾರರ ತಪ್ಪಾ? apparently, 'no one killed jessica' , ಎಂದರೆ ಯಾರೊಬ್ಬರದ್ದೂ ತಪ್ಪಲ್ಲ,ಎಲ್ಲರದ್ದೂ ತಪ್ಪು . ೨:೧೫ನಿಂದ ೩:೪೫ ವರೆಗೆ ಕಾದ ಮೇಲೂ ಊಟ ಸಿಕ್ಕದೇ ಹೋದಾಗ ಉಂಟಾಗುವ ಹತಾಶೆ , ಆಕ್ರೋಶಗಳಿವೆಯಲ್ಲಾ ಅವುಗಳು ಸಾಹಿತ್ಯದ ಬಗೆಗಿನ ಅತ್ಯಂತ ಗಹನ ಆಸಕ್ತಿಯನ್ನೂ ತಿಂದು ಹಾಕಿ ಬಿಡಬಲ್ಲದು, ಅಷ್ಟಕ್ಕೂ ಯಾವುದೇ ಲಲಿತಕಲೆಯಾದರೂ ಅಗತ್ಯವೆನಿಸುವುದು ಹೊಟ್ಟೆ ತುಂಬಿದ ಮೇಲಷ್ಟೇ?  ಹೀಗೆ ಯಾರ ಮೇಲೆಂದು ಸ್ಪಷ್ಟವಾಗಿರದ ಒಂದು ಕ್ರೋಧ ಹುಟ್ಟಿ ಮನೆಗೆ ವಾಪಸ್ ಹೊರಟಾಗ ಮಧ್ಯಾಹ್ನ ೪:೨೦. ನಾನೇಕೆ ಇಷ್ಟೆಲ್ಲಾ ಊಟದ ವ್ಯವಸ್ಥೆಯ ಬಗ್ಗೆ ಬರೆದೆನೆಂದರೆ ಅದರಲ್ಲಿ ಅಷ್ಟರ ಮಟ್ಟಿಗೆ ಸುಧಾರಣೆ ಸಾಧ್ಯವಿತ್ತು ಎಂದೇ ಹೊರತು ಬೇರಾವ ಕಾರಣದಿಂದಲೂ ಅಲ್ಲ.
ಈಗ ಮತ್ತೆ ಮೊದಲು ಹೇಳಿದ " mad o wat ?" ಪ್ರಸಂಗಕ್ಕೆ ಬರೋಣ , " ಏಕೆ ಹೀಗಾಗುತ್ತಿದೆ ? ನಮ್ಮ ಕನ್ನಡದ ಸಮ್ಮೇಳನ ಎಂಬ ಭಾವನೆ ಏಕೆ ನಮಗೆ ಬರುತ್ತಿಲ್ಲ , ಬರುವುದಿಲ್ಲ . ಎಲ್ಲಿ ವಿಫಲವಾಗುತ್ತಿದೆ ಕನ್ನಡ , ಕನ್ನಡತನ? " ಎಂದೆಲ್ಲಾ ಯೋಚಿಸುವ ಮೊದಲು ಸಮ್ಮೇಳನಕ್ಕೆ ಹೋಗಿ ನನಗೆ ಮಾಡಲಾಗಿದ್ದಾದರೂ ಏನು ? ಎರಡು ಪುಸ್ತಕಗಳನ್ನು ತೆಗೆದುಕೊಂಡೆ ಎಂಬುದನ್ನು ಬಿಟ್ಟರೆ ಯಾವ ಪುರುಷಾರ್ಥಸಾಧನೆಯಾಯಿತು ನಾನು ಅಲ್ಲಿಗೆ ಹೋಗಿ ? ನಾನು ಅಲ್ಲಿ ಕಂಡದ್ದನ್ನೆಲ್ಲವನ್ನೂ ನಾನು ಕಂಡದ್ದಕ್ಕಿಂತ ಬಹಳೇ ಸ್ಪುಟವಾಗಿ ಮನೆಯಲ್ಲಿ ಕೂತೇ ಕಾಣಬಹುದಾದ ಅವಕಾಶವನ್ನು ದೂರದರ್ಶನ ತಂದುಕೊಟ್ಟಿಲ್ಲವೇ ? ಈ blog ಬರೆಯುವಷ್ಟು ಸಿಟ್ಟು ಬಂತೆಂಬದನ್ನು ಬಿಟ್ಟರೆ ಮತ್ತಾವ ಉಪಯೋಗವೂ ಕಂಡುಬಂದಿಲ್ಲ . ಇನ್ನು metro ಆಗುವ ಆತುರದಲ್ಲಿ ಕನ್ನಡವೇ ಕಳೆದು ಹೋಗುವ ಸ್ಥಿತಿಯಲ್ಲಿರುವಾಗ ಸಾಹಿತ್ಯ ಸಮ್ಮೇಳನ ಹೇಗೆ ಮುಂದಿನ ಪೀಳಿಗೆಯವರಲ್ಲಿ ಉತ್ಸಾಹ ಹುಟ್ಟಿಸಬಹುದು. national college ನ ಮೈದಾನ ತುಂಬಿ ಹೋಗುವಷ್ಟು ಜನರಿದ್ದದ್ದು ಹೌದಾದರೂ ಅದರಲ್ಲಿ ಯುವಜನಾಂಗದ ಪಾಲು ಗಣನೀಯವಾಗಿ ಕಡಿಮೆ. ಪುಸ್ತಕ ಪ್ರದರ್ಶನದಲ್ಲಿಯೂ , ಓದುವ ಚಟಕ್ಕೆ ಬಿದ್ದ ಹಳೆ ತಲೆಮಾರಿನ ಹಿರಿಯರೆದುರು ಉಳಿದವರ ಸಂಖ್ಯೆ ಬೆರಳೆಣಿಕೆ ಎನ್ನಿಸುವಷ್ಟಿತ್ತು.  ಈ ಸಂಗತಿಗಳೆಲ್ಲಾ ಆತಂಕ , ಹೋಗಲಿ ಒಂದು ಬೇಜಾರನ್ನೂ ನಮ್ಮಲ್ಲಿ ಮೂಡಿಸಲಾರದೇ ?
ಮತ್ತೊಮ್ಮೆ ಹಿಂದೊಮ್ಮೆ ಬಳಸಿದ್ದ ಅದೇ ವಾಕ್ಯವನ್ನು ಮತ್ತೊಮ್ಮೆ ಉಚ್ಛರಿಸುತ್ತಾ , "ಯಾವುದೇ ಭಾಷೆ , ಸಂಸ್ಕೃತಿ ಉಳಿಯುವುದು ಅದಕ್ಕಾಗಿ ’ಅರ್ಥವಿಲ್ಲದೇ’ ಹೋರಾಡುವುದರಿಂದಾಗಲೀ , ನಾನು ಅದರ ಅಭಿಮಾನಿ ಎಂದು ಹೇಳಿಕೊಳ್ಳೂವುದರಿಂದಾಗಲೀ ಅಲ್ಲ , ಅದರನ್ನು ದಿನನಿತ್ಯದ ಜೀವನದಲ್ಲಿ ಬಳಸುವುದರಿಂದ " ಎಂದು ಹೇಳಿ ಇದಕ್ಕೆ " ಸಂಸ್ಕೃತವೇ ಅತ್ಯುತ್ತಮ ಉದಾಹರಣೆ " ಎಂದಕೊಂಡು ಈ ಲೇಖನಕ್ಕೆ ಅಂತ್ಯ ಹೇಳುತ್ತಿದ್ದೇನೆ.