Showing posts with label kavana. Show all posts
Showing posts with label kavana. Show all posts

Sunday, 15 March 2015

ಧರಣಿ ಮಂಡಲ ಮಧ್ಯದೊಳಗೆ

ಪುಣ್ಯಕೋಟಿಯ ಹಾಡನ್ನು ಕೇಳದ ಕನ್ನಡಿಗನಿದ್ದಾನೇ? ಇಲ್ಲವೆನಿಸುತ್ತದೆ. ನಮ್ಮ ಮತ್ತು ನಮ್ಮ ಹಿಂದಿನ  ಪೀಳಿಗೆಯವರೆಲ್ಲರಿಗೂ ಸುಪರಿಚಿತವಾಗಿರುವ ಹಸುವಿನ ಹಾಡದು. ರಾಗಬದ್ಧವಾಗಿ ಹಾಡಲು ಬರುವ, ಜಾನಪದ ಸೊಗಡಿರುವ, ಶುದ್ಧ ಕನ್ನಡದ ಅದ್ಭುತ ರಚನೆಯಿದು. ಮಗುವಿನ ಬಗೆಗಿನ ತಾಯಿಯ ಮಮತೆಯನ್ನು, ಅದಕ್ಕಿಂತ ಹಿರಿದಾದ ಸತ್ಯದ ಸತ್ವವನ್ನು ಎತ್ತಿಹಿಡಿಯುವ ಗೋವಿನಷ್ಟೇ, ’ಸುಳ್ಳು ಹೇಳುವ ಎಲ್ಲ ಅವಶ್ಯಕತೆಯಿದ್ದರೂ ಈ ಪುಣ್ಯಕೋಟಿ ಕೂಡ ಸತ್ಯವನ್ನು ಹೇಳುತ್ತಿರಲೂಬಹುದು’ ಎಂದು ಯೋಚಿಸಿ ಅದರ ಸತ್ಯಸಂಧತೆಯನ್ನು ರುಜುವಾತುಪಡಿಸಲು ಅವಕಾಶಕೊಡುವ ಮತ್ತು ಧರ್ಮಮಾರ್ಗದಲ್ಲಿ ನಡೆದ ಗೋವನ್ನು ತಿನ್ನದೇ ಬಿಡುವ ವ್ಯಾಘ್ರನೂ ಆಪ್ತನಾಗುತ್ತಾನೆ. ಅದಕ್ಕೇ ಈ ಹಾಡು ಇಷ್ಟೆಲ್ಲ ಮಕ್ಕಳ/ದೊಡ್ಡವರ ಹೃದಯದಲ್ಲಿ ಮನೆಮಾಡಿರುವುದು.

ನನಗೆ ಈ ಹಾಡಿನ ಪರಿಚಯವಾಗಿದ್ದು ನಾನು ೩-೪ ವರ್ಷದವನಾಗಿದ್ದಾಗ. ಆಗ ನಾನು ವರ್ಷದ ಎಂಟು ತಿಂಗಳು ಅಜ್ಜನ ಮನೆಯಲ್ಲಿರುತ್ತಿದ್ದೆ. ಪ್ರತಿ ಸಂಜೆ ದಿನದ ಆಟವೆಲ್ಲ ಮುಗಿದ ಬಳಿಕ ಕೈಕಾಲು ತೊಳೆದು ಬಂದು ದೇವರ ಕೋಣೆಯಲ್ಲಿ ಕುಳಿತು ಬಾಯಿಪಾಟ ಒಪ್ಪಿಸಿದ ಬಳಿಕ ದೊಡ್ಡಮ್ಮ ಹೇಳುತ್ತಿದ್ದ ಹಾಡು ಇದು. ಎಷ್ಟು ಕೇಳಿದರೂ ಸಾಕೆನಿಸದು, ಪ್ರತೀ ದಿನವೂ ಕೇಳಲೇಬೇಕು, ಪ್ರತೀ ದಿನವೂ ಪುಣ್ಯಕೋಟಿಯನ್ನು ಮೆಚ್ಚಲೇಬೇಕು, ಪುಣ್ಯಕೋಟಿಯು ಕರುವನ್ನು ಸಮಾಧಾನಿಸುವಾಗ ಕರುವಿನ ಜೊತೆಗೆ ನಾನೂ ಕಣ್ಣೀರಾಗಲೇಬೇಕು, ಪುಣ್ಯಕೋಟಿ ಸಾಯುವುದಿಲ್ಲ ಎಂದು ಗೊತ್ತಾದಾಗ ಒಂದು ಸಮಾಧಾನ ಹುಟ್ಟಿ ನಾನು ಕಣ್ಣೊರೆಸಿಕೊಳ್ಳಬೇಕು, ಅರ್ಬುತ ಪ್ರಾಣತ್ಯಾಗ ಮಾಡುವಾಗ ಸತ್ಯವನ್ನೇ ಮಾತನಾಡಬೇಕು ಎಂಬ ನೀತಿಯನ್ನು ದೊಡ್ಡಮ್ಮ ಹೇಳಲೇಬೇಕು. ಈ ದಿನಚರಿ ವರ್ಷಗಟ್ಟಲೇ ನಡೆದಿತ್ತು. ಪ್ರತೀ ದಿನವೂ ಅತ್ತರೂ ಒಂದು ದಿನವೂ ಹಾಡು ಕೇಳುವುದು ತಪ್ಪುತ್ತಿರಲಿಲ್ಲ. ಈ ಹಾಡಿನಲ್ಲಿ ಅಂತದ್ದೊಂದು ಮೋಡಿ ಇತ್ತು, ಹೇಳುತ್ತಿದ್ದ ರೀತಿಯಲ್ಲಿ ತಿರುತಿರುಗಿ ಕೇಳಿದರೂ ಬೇಜಾರು ಬರದ ಆಕರ್ಷಣೆ ಇತ್ತು, ಕತೆಯಲ್ಲಿ ಪ್ರತಿ ಬಾರಿಯೂ ಅಂದಿನ ಬಾಲ-ಸುಬ್ರಹ್ಮಣ್ಯನ ಕಣ್ಣುಗಳಲ್ಲಿ ನೀರಿಳಿಸುವಷ್ಟು ಹಾಗೂ ಮತ್ತೂ ಒಂದಿಷ್ಟು ಭಾವನಾತ್ಮಕತೆ ಇತ್ತು.

ಪುಣ್ಯಕೋಟಿಯದ್ದು ಒಂದು ಸರಳ ನೀತಿಕತೆ. ಪುಣ್ಯಕೋಟಿ ಕರ್ನಾಟ ದೇಶದ ಒಬ್ಬ ಗೊಲ್ಲನ ದೊಡ್ಡಿಯ ಗೋವು. ಒಂದು ದಿನ ಮೇಯಲು ಕಾಡಿಗೆ ಹೋಗಿದ್ದಾಗ ಅರ್ಬುತ ಎಂಬ ವ್ಯಾಘ್ರ(ನೆನಪಿಟ್ಟುಕೊಳ್ಳಿ, ಅದು ದುಷ್ಟವ್ಯಾಘ್ರವಲ್ಲ, ಬರೀ ವ್ಯಾಘ್ರ)ನ ಕೈಯಲ್ಲಿ ಸಿಕ್ಕಿಕೊಂಡು ಬೀಳುತ್ತಾಳೆ. ಬಗೆದು ತಿನ್ನುತ್ತೇನೆ ಎನ್ನುವ ಹುಲಿರಾಯನಲ್ಲಿ ತನ್ನ ಚಿಕ್ಕ ಕರುವಿಗೆ ಕೊನೆಯ ಬಾರಿ ಮೊಲೆಯಿತ್ತು ಬೀಳ್ಕೊಟ್ಟು ಬರುತ್ತೇನೆ, ದಯವಿಟ್ಟು ಹೋಗಿ ಬರಲು ಅವಕಾಶ ಮಾಡಿಕೊಡು ಎನ್ನುತ್ತದೆ. ಪುಣ್ಯಕೋಟಿಯನ್ನು ಮೊದಮೊದಲು ಅನುಮಾನಿಸಿದರೂ ನಂತರ ಅರ್ಬುತ ಪುಣ್ಯಕೋಟಿಗೆ ಹೋಗಿಬರಲು ಅವಕಾಶ ಮಾಡಿಕೊಡುತ್ತದೆ. ಎಂತಿದ್ದರೂ ಹೀಗೆ ಹೋದ ಹಸು ಎಂದಿಗೂ ತಿರುಗಿಬರಲಾರದು ಎಂಬ ಧೈರ್ಯದಲ್ಲಿದ್ದ ಅರ್ಬುತನ ನಂಬಿಕೆಯನ್ನು ಸುಳ್ಳು ಮಾಡುವಂತೆ ಪುಣ್ಯಕೋಟಿ ತಿರುಗಿ ಬರುತ್ತಾಳೆ, ಅದೂ ಅವಸರ ಅವಸರವಾಗಿ. ತನ್ನ ಲೆಕ್ಕಾಚಾರವನ್ನು ಬುಡಮೇಲು ಮಾಡಿ, ಸತ್ಯವನ್ನು ಮೆರೆದ ಪುಣ್ಯಾತ್ಗಿತ್ತಿ ಪುಣ್ಯಕೋಟಿಯಂತವಳ ಬಗ್ಗೆ ಸಂಶಯ ಪಟ್ಟೆನಲ್ಲಾ, ಇವಳನ್ನು ತಿನ್ನಲು ಹವಣಿಸಿದೆನಲ್ಲಾ ಎಂಬ ತನ್ನನ್ನು ತಾನೇ ಹಳಿದುಕೊಂಡು ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿ ಅರ್ಬುತ ಸಾಯವ ಅಗತ್ಯವಿರಲಿಲ್ಲ ಎಂಬುದು ನಿಜವಾದರೂ ಇಷ್ಟು ಚಂದದ ನೆನಪುಗಳನ್ನು ಕೊಟ್ಟ ಹಾಡಿನ ಅಷ್ಟು ಚಿಕ್ಕ ತಪ್ಪನ್ನು ಕೆದಕುವುದು ಕೃತಘ್ನತೆಯಾದೀತು.

ಎಲ್ಲವೂ ರಾಗ ಬದ್ಧ ಇಲ್ಲಿ, ಪ್ರಾಸದ ಜೊತೆಗೆ. ಎಲ್ಲವೂ ನೀತಿಯುಕ್ತ ಇಲ್ಲಿ, ಖಳನಾಗಿ ಚಿತ್ರಿತವಾದ ಹುಲಿರಾಯನೂ ನೀತಿಯ ಗೆರೆಯನ್ನು ದಾಟಿ ನಡೆಯಲಾರ. ಪುಣ್ಯಕೋಟಿಯಂತೂ ನಮ್ಮ ಕರ್ನಾಟ ದೇಶದ ಲೋಕಲ್ ಸತ್ಯ ಹರಿಶ್ಚಂದ್ರ. ಮುಂಜಾವಿನ ಸಮಯದಲ್ಲಿ ಕೊಳಲನ್ನು ಬಾರಿಸುತ್ತಾ ಎಲ್ಲ ಗೋವುಗಳ ಹೆಸರು ಹಿಡಿದು ಕರೆವ ಗೊಲ್ಲನ ಚಿತ್ರಣವೂ ಇಲ್ಲಿ ಸ್ಪಟಿಕ ಸ್ಪಷ್ಟ. ಹುಲಿಯ ಬಳಿ ಕೊನೆಯ ಬಾರಿ ಮಗುವನ್ನು ನೋಡಿಬರಲು ಕಳಿಸಿಕೊಡಲು ಕೇಳಿಕೊಳ್ಳುವಾಗ, ತನ್ನ ಒಡಹುಟ್ಟು ದನಗಳ ಬಳಿ ತನ್ನ ಕರುವನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳುವಾಗ, ಮತ್ತೆ ಹುಲಿಯ ಎದುರು ಬಂದು ನಿಂತು ಈಗ ನನ್ನನ್ನು ತಿನ್ನು ಎಂದು ಹೇಳುವಾಗ ಪುಣ್ಯಕೋಟಿಯ ಗಂಟಲು ಉಬ್ಬಿ ಬರುವುದೂ ವೇದ್ಯವಾಗಿಸುವಷ್ಟು ಶಕ್ತಿಶಾಲಿ ನಮ್ಮ ಈ ಪುಣ್ಯಕೋಟಿಯ ಹಾಡು. ಕಥನ-ಕಾವ್ಯಗಳ ಪ್ರ‍ೇಮಿಗಳ ಪಾಲಿಗೆ(ನಾನೂ ಒಬ್ಬ ಈ ಗುಂಪಿನಲ್ಲಿ) ಪುಣ್ಯಕೋಟಿಯ ಹಾಡು ಹೃದಯಕ್ಕೆ ಅತಿ ಹತ್ತಿರವಾದದ್ದು. ಜನಪದದ ಕೊಡುಗೆಯಾದ ಈ ಹಾಡಿನ ಬಳಕೆಯೇ ಈ ಹಾಡಿಗೆ, ಹಾಡು ಕಟ್ಟಿದ ಅನಾಮಿಕ ಜನಪದಕ್ಕೆ ನಾವು ಕೊಡಬಹುದಾದ ಕೊಡುಗೆ. ನಮ್ಮ ಮನೆಯ ಮಕ್ಕಳಿಗೆ ಹೇಳಿಕೊಡುವ ಮೂಲಕ, ತಂತ್ರಜ್ಞಾನದ ಇಂದಿನ ಕಾಲದಲ್ಲಿ, ಕೊನೆಪಕ್ಷ ಯೂಟ್ಯೂಬಿನಲ್ಲಿ ಕೇಳಿಸುವ ಮೂಲಕ ಈ ಹಾಡನ್ನು, ಇಂತದ್ದೇ ಎಷ್ಟೋ ಹಾಡು-ಕಥೆಗಳನ್ನು ಉಳಿಸಬಹುದು, ಬೆಳೆಸಬಹುದು. ಉಳಿಸೋಣ, ಬೆಳೆಸೋಣ ನಾವು.

ಸೂಚನೆ.  ಪುಣ್ಯಕೋಟಿಯ ಹಾಡಿನ ಯೂಟ್ಯೂಬಿನ ಕೊಂಡಿ ಪುಣ್ಯಕೋಟಿ . ಒಮ್ಮೆ ಕೇಳಿಬಿಡಿ, ಬಾಲ್ಯಕ್ಕೊಮ್ಮೆ ಹೋಗಿಬನ್ನಿ. 

Saturday, 12 November 2011

ಹಿಂದೆ ಮುಂದೆ ನೋಡದೇ ಬಂದು ಬಿಡು ಕನಸೆ

ಇದು ೨೫ನೇ ಪೋಸ್ಟ್. ಎಷ್ಟು ಬೇಗ ಇಷ್ಟು ಬರೆದೆ ಎನ್ನಿಸುತ್ತದೆ. ಈ ಬ್ಲಾಗ್ ಎಂಬ ಮಾಧ್ಯಮ ಇಲ್ಲದೆ ಹೋಗಿದ್ದರೆ ಇಷ್ಟು ಬರೆಯುತ್ತಿರಲಿಲ್ಲ ಎಂಬುದು ದಿಟ.   ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.

ಅದಿರಲಿ , ಬೇರೇನಾದರೂ ಬರೆಯಬೇಕೆಂದುಕೊಂಡು ಮನಸ್ಸಲ್ಲಿ ತುಂಬಿಕೊಂಡರೂ ಮನಸ್ಸಿನಲ್ಲಿ ಮತ್ತದೇ ಭಾವಲಹರಿ ಮೂಡಿ ಕೂಡುತ್ತಿದೆ. ನನಗೇ ಏಕತಾನತೆ ಎನಿಸುವ ಮಟ್ಟಿಗೆ ಒಂದೇ ವಿಷಯದ ಬಗ್ಗೆ ಬರೆಯುತ್ತಿದ್ದೇನೆ. ಗೊತ್ತಿಲ್ಲ ಎಲ್ಲಿಯವರೆಗೆ ಎಂದು. ಅಷ್ಟಕ್ಕೂ ಎಲ್ಲವೂ ಗೊತ್ತಿದ್ದರೆ ಜೀವನಕ್ಕೆ ಅರ್ಥವೇನು? ಇರಲಿ ಬಿಡಿ. ನನ್ನ ಕವನ, ಅದಾವುದನ್ನೂ ಯೋಚಿಸದೆ ಹಾಗೆ ಸುಮ್ಮನೆ ಓದಿಕೊಳ್ಳಿ.

ಹಿಂದೆ ಮುಂದೆ ನೋಡದೇ ಬಂದು ಬಿಡು ಕನಸೆ
ಎರಡು ಕೈ ಚಾಚಿ ಸ್ವಾಗತಿಸಲು ನನ್ನ ಮನಸಿದೆ
ಆಕರ್ಷಣೆಯ ಮೂಲವೇ ತಪ್ಪಿಹೋದರೇನಂತೆ
ಅದನು ಮೀರಿ ಸೆಳೆದು ಬಿಡುವುದು ನಿನಗೆ ಹೊಸದೆ||ಪ||

ಮೊದಲ ಬಾರಿ ಹುಟ್ಟಿ ಅರಳಿದ  ಭಾವನೆಯೇ
ಹೆಸರಿನ ಗೊಡವೆಯೇಕೆ ನಿನಗೆ ಅದು ಬೇಕೆ?
ಪದೆ ಪದೆ ಮನದಾಳ ಕಲಕುವ ಬಯಕೆಯೇ
ನನಗೇ ತಿಳಿಯದೇ ಹೋಗಿದೆ ಏನಿದು ಹಂಚಿಕೆ||೧||

 ಯಾವ ರಾಗವೋ ಯಾವ ತಾಳವೋ ತಿಳಿಯದು
ನನಗೆ ತಿಳಿದಿದ್ದು ಒಂದೆ ಅದು ನಿನ್ನ ಅನುರಾಗ
ಚಿಮ್ಮಿ ಬಂದವು ಭಾವದ ಒರತೆ  ಕಟ್ಟು ಮೀರಿ
ಭಾವಗಳಭಾವದ ಬರಡುತನವ ನೀಗಿದಾಗ||೨||

ಬರೀ ಮಾತೊಂದಕೆ ಸುತ್ತೆಲ್ಲ ಹೊರಜಗತ್ತು
ಮಸುಕು ಮಬ್ಬಾಗಿದೆ ನನಗೆ ಗೊತ್ತೇ ಇಲ್ಲದೇ
ಕಾದು ಸಾಕಾಗಿದೆ ನಿನ್ನನೇ ಹುಡುಕಿದೆ
ವಲಸೆ ಹೋಗಿದೆ ನನ್ನೆದೆ ತಿರುಗಿ ಬಾರದೆ||೩||

ಹೃದಯ ಬಡಿಯದೆ ನಿಂತಿದೆ ನೀ ಬರಬಹುದೆ ಎಂದು
ನಗೆಯೊಂದನೆಸೆಯಬಾರದೆ ಸಾಕಾಗಿದೆ ನೊಂದು
ಪ್ರೀತಿಯಲಿ ನಾನು ಉನ್ಮತ್ತ ನನಗಾವ ಪ್ರಮೇಯ
ನಶೆ ತಲೆಗೇರಿದೆ ಇಳಿವ ದಾರಿ ತಿಳಿಯದೆ ಅಯೋಮಯ||೪||

Saturday, 5 November 2011

ಒಂದಿಷ್ಟು ಹನಿಗವನಗಳು




ಒಲವು ಭಾಷ್ಪೀಕರಿಸಿ ಮಾತಾಗಿ
ಮಾತು ಘನಿಸಿ ಮೌನವಾಗಿ
ಮೌನ ಕರಗಿ ಅಶ್ರುವಾಗಿ
ಕೆನ್ನೆಯನಪ್ಪಳಿಸುವುದೆ
ಪ್ರೇಮ ವರ್ಷಚಕ್ರವೇ


ಇದೆ ಕೊನೆಯ ಬಾರಿ ಎಂದು
ಮರೆತು ಬಿಡುವೆ ಇನ್ನು ಎಂದು
ಕಟ್ಟು ಹಾಕಿ ಕುಳಿತರೂ
ಬತ್ತಿ ಹೋಗದ ನೆನಪೇ
ನಿನಗೇನ ಮಾಡಲಿ ನಾನು?

ನಿನಗರ್ಥವಾಗದ ಹಾಗೆ
ನಾ ನಿನ್ನ ಪ್ರೀತಿಸಿದೆನೆಂದರೆ
ಅದು ನನ್ನ ತಪ್ಪೇ ನೀನೇ ಹೇಳು
ನನಗೆ  ಹೇಳಲರಿಯದು ಎಂದು
ನನ್ನ ಮನದಾಳದ ಒಡತಿಯೇ
ನಿನಗೆ ನಿಜವಾಗಿಯೂ ತಿಳಿಯದೇ

ಪ್ರಿಯಸಖಿ ಎಂದರೂ
ಈಡಿಯಟ್ ನೀನೆಂದರೂ
ಜೀವದುಸಿರು ಎಂದರೂ
ಭಾವಸ್ರಾವದ ಸೆಲೆಯೆಂದರೂ
ಮನಬಿಟ್ಟು ಹೋಗೆಂದರೂ
ಕೈ ಚಾಚಿ ಬಾ ಎಂದರೂ
ಯಾವಾಗ ನಾ ಏನೇ ಎಂದರೂ
ಎಲ್ಲೆಡೆ ಹಾಸುಹೊಕ್ಕಾಗಿರುವುದು
ಅಲ್ಲೆಲ್ಲ ಕಾಣುವುದು ಬರೀ ನೀ ಮಾತ್ರವೇ

Wednesday, 28 September 2011

ನೆನಪೇ



ಭಾವ ಮಡುಗಟ್ಟಿ, ಇನ್ನು ತಡೆಯಲಾರದಾದಂತಾಗ ಆಗುವುದೇ ಭಾವಪ್ರವಾಹ, ಇಲ್ಲಿ ಇರುವುದು ಕೇವಲ ಭಾವಸ್ರಾವವಷ್ಟೇ. ಕೆಲವೊಮ್ಮೆ ಸಿಗದ ಶಬ್ದಕ್ಕೋಸ್ಕರ ತಡಕಾಡಿ ಸುಳ್ಳಾಡಬಹುದೇನೋ, ಆದರೆ ಒಂದು ಭಾವಕ್ಕೆ ದ್ರೋಹ ಬಗೆಯಲಾಗದು.  ಇದು ಈ ಕವನ ಸರಣಿಯ ಕೊನೆಯ ಕವಿತೆ. ಅಂಕಣ, ಲೇಖನ , ಕಥೆಗಳನ್ನು ಬರೆಯಲು ಬೇಕಾಗದೇ ಹೋಗುವ ಸ್ಪೂರ್ತಿಯ ಅವಶ್ಯಕತೆ ಕವನಕ್ಕೆ ಬೇಕೇ? ಏನೇ ಇರಲಿ, ’ಅನಾಮಿಕಾ’ದಿಂದ ಪ್ರಾರಂಭಿಸಿ ’ನಿನಗೆ’ ಎಂದು ಭಾವಾರ್ಪಿಸಿ, ಒಂದು ’ಸ್ವಗತ’ ದಲ್ಲಿ ಉಮ್ಮಳಿಸಿ , ’ಇವಳೇ’ ಎಂದು ಕನವರಿಸಿ, ’ನೆನಪೇ’ದಲ್ಲಿ ನಿಲ್ಲುತ್ತಿದೆ. ಆದಷ್ಟು ಬೇಗ ಮುಗಿಸಬೇಕೆಂದುಕೊಂಡಿದ್ದರಿಂದ ಈ ಪದ್ಯದ ಕೊನೆಯ ಸಾಲುಗಳು ಅವಸರದ ಸಾಹಿತ್ಯ ಎನಿಸುತ್ತವೆಯೇ? ನನಗೆ ಹಾಗೆನ್ನಿಸಿತು. ಓದು ನಿಮ್ಮದು.

ಮರೆತು ಹೋದೆ ಎಂದರೆ ಮರೆತು ಹೋದೀತೇ
ಸುತ್ತಿ ಬಳಸಿ ಮತ್ತೆ ಅಲ್ಲೇ ಬರುವ ನೆನಪ ಮಾಲಿಕೆಯೇ||

ಒಂದು ಕನಸ ಹೆಸರಲಿ ಕಳೆದುಹೋದ
ರಾತ್ರಿಗಳೆಷ್ಟೋ ಇಷ್ಟಪಟ್ಟು; ಮನಸನೆಟ್ಟು.
ಕಣ್ಣ ಮುಚ್ಚಿ ಕೂತರೂ ಸಹ, ರೆಪ್ಪೆಗಡಿಯ
ಧಿಕ್ಕರಿಸಿ ದಾಟಿ ಬಂದ ಚಿತ್ರಗಳೆಷ್ಟೋ
ಹೃದಯ ಬಿಕರಿಯಾಗಿದ್ದರ ಬಗ್ಗೆ, ನನಗೇ
ಮಾಹಿತಿಯಿಲ್ಲದ್ದಕ್ಕೆ ಪರಿತಪಿಸಿದ್ದೆಷ್ಟೋ||೧||

ಇಲ್ಲಿ ಅಲ್ಲಿ ಎಲ್ಲಾ ನೀನೇ, ಯಾರೂ ಇಲ್ಲ
ಇಲ್ಲವೆಂದರೂ ಅಲ್ಲೂ ನೀನೇ, ನೀನೇ ಎಲ್ಲ
ಇಷ್ಟು ಅಷ್ಟು ಎಷ್ಟು ಎನ್ನಲಿ; ಇಂತಿಷ್ಟೇ ಎನ್ನಲು
ಅಳತೆಯುಂಟೇ, ಮನದಾಳದ ತಿಳಿಯದ ಆಳಕೆ
 ಅನಂತವೊಂದೇ ಮಿತಿಯೇ ನಿನ್ನಯ ಮೋಡಿಗೆ
ಹೋಗದಿದ್ದರೇ ಒಳಿತೇ,ಶಬ್ದಹುಡುಕುವ ಗೋಜಿಗೆ||೨||

ಒಂದು ಮನಸಿಗೆ ಒಂದೇ ಅಲ್ಲವೇ ಕನಸು;
ಎಲ್ಲ ಕನಸಲ್ಲಿಯೂ ಬರುವುದೇ ನಿನ್ನ ಮನಸೇ
ಮಾನಸ ವಿಶಾಲ, ಅನಂತವೆಲ್ಲ ಹೌದಲ್ಲ,
ನೀನೊಬ್ಬಳೇ ಹೇಗೆ ಹಬ್ಬಿ ಕುಳಿತೆಯೇ;
ನಿನ್ನಿಂದ ಅಷ್ಟಿಷ್ಟು ಸರಿ ಇದ್ದ ನನ್ನ ನೆನಪು,
ಸ್ವಾಧೀನ ತಪ್ಪುವ ಹಾಗಾಗಿ ಹೋಯಿತೇ.||೩||

Saturday, 24 September 2011

ಇವಳೇ!



ಇವಳೇ ಅವಳೇ ಇಲ್ಲಿ ಅಲ್ಲಿ ಎಲ್ಲೆಲ್ಲೂ ಇಹಪರಕೆಲ್ಲ ಮೀರಿದವಳೇ
ನೀನೆಂದರೆ, ದೇವರು ನನಗಾಗಿ ಮಾಡಿದ ಗುಣಸಮುಚ್ಛಯವೇ
ನಿನ್ನ ನೆನಪೆಂದರೆ ನಾನುತ್ತರವ ಬಯಸದ ಪ್ರಶ್ನೆಗಳ ಗುಚ್ಛವೇ ||ಪ||

ಶಬ್ದ ಸಿಗದೇ ತಡವರಿಸಿ ತೊಳಲುವುದೇ ನಿನಗೆ ಪ್ರಿಯವೇ
ಮನದ ತುಂಬ ರಂಗೇರಿಸಿದ್ದು ನಿನ್ನ ನೋಟದ ಮದರಂಗಿಯೇ
ಬರಿ ನಗೆಯಿಂದಲೇ ಎದೆಭಾರವಾಗಿಸುವುದೇ ನಿನ್ನಾಟವೇ
ಕಣ್ಣ ಮುಚ್ಚಿಯೂ ನಿನ್ನ ನೋಡುವಂತಾಗುವುದು ನಿನ್ನ ಕೃಪೆಯೇ||೧||

ನಿನ್ನ ಅನವರತ ಕನವರಿಸುತಲಿರುವುದೇ ನಿನ್ನ ಮೋಡಿಯೇ
ಏನೂ ಇರದೇ ಖುಷಿಯಾಗುವಂತಾಗುವುದೇ ನಿನ್ನ ನೆನಪೇ
ಎಲ್ಲಾ ಮರೆತು ರಾಮನ ಭಜಿಸಿದ್ದು ನಿನ್ನೊಲುಮೆಗಾಗಿಯೇ
ನನಗೇ ಗಾಬರಿಯಾಗುವಂತಾಡಿದ್ದು ನನ್ನೆದೆಯ ಕಲರವವೇ||೨||

ಎಲ್ಲಾ ಕಡೆ ನಿನ್ನನ್ನೇ ಕಂಡಂತೆ ಭ್ರಮಿಸಿದ್ದು ನನ್ನ ತಪ್ಪೇ
ತಪ್ಪು ಸರಿ ವಿವೇಚನೆ ಬದಿಗೊತ್ತಿ ಕೊರಗಿದ್ದು ನನ್ನ ವಿಧಿಯೇ
ಸೊಗಸಾದ ಸಾಂಗತ್ಯ ಭಾವಿಸಿ ಕುಣಿದಿದ್ದು ಬರಿ ಕನಸೇ
ಏನು ಮಾಡಲೆಂಬ ಅಖಂಡ ಗೊಂದಲಕೆ ನೀ ಕಾರಣವೇ||೩||

Thursday, 5 May 2011

ಅನಾಮಿಕಾ

( ಹೆಸರೇನೆಂದಿಡಲಿ ಎಂದು ತಿಳಿಯದಿದ್ದುದರಿಂದ ಅನಾಮಿಕಎಂಬ ಹೆಸರನ್ನು ಬಳಸುತ್ತಿದ್ದೇನಾಗಲೀ , ಈ ಹೆಸರಿಗೆ ಬೇರಾವ ಅರ್ಥವೂ ಇಲ್ಲ . ಸೂಕ್ತ ಹೆಸರನ್ನು ಸೂಚಿಸಿದರೆ ಸಂತೋಷ , ಹೆಸರೇ ಇಲ್ಲದೇ ಹೋದರೂ ಸಂತೋಷ , ಅಷ್ಟಕ್ಕೂ ಹೆಸರಿನಲ್ಲೇನಿದೆ’ )


ನಿನಗಾಗೇ ಪರಿತಪಿಸುವೆ ನಾ, ನನ್ನಲ್ಲೇ ಒಳಗೊಳಗೆ

ಹೊರಬಾರದೆ ನಲುಗುತಿದೆ ಪರಿಚಯದ ಮುಗುಳುನಗೆ


ಮರೆವನೇ ಮರೆಸುವ ನೀನು ಮರೆಯದಮರ ನೆನಪು

ನಿನ್ನ ಹೆಸರು ಮಾತ್ರ ಸಾಕು ,ಏನು ಪುಳಕ ಏನು ಹುರುಪು

ಚಿತ್ತಭಿತ್ತಿಯಲಿ ಕಾದು ಕೆತ್ತಿರುವೆ ನಿನ್ನಯ ರಮ್ಯಚಿತ್ರ

ಕಂಬನಿಗೊದ್ದೆಯಾಗದೇ ಉಳಿದಿದೆ ನನ್ನ ಪ್ರೇಮಪತ್ರ


ಭಿನ್ನವೆಲ್ಲಿಯದು ಮುನ್ನ ಮರೆತಿಹುದು ನಿನ್ನ ಇರುವಿನಲ್ಲಿ

ನಿನ್ನೆ ಮರಳುವುದು ನಾಳೆ ಬೆಳಗುವುದು ಕಣ್ಣ ನೋಟದಲ್ಲಿ

ನಿನ್ನ ಅತಿಮಾನವ ಹೊಳಪಿನೆದುರು ಬಿಳುಪೇ ಕಡುಗಪ್ಪು

ಅನ್ನ ಸೇರದು, ಹಸಿವು ಮೂಡದು ಏನು ತಪ್ಪು ಯಾರದೊಪ್ಪು


ಯಶವು ಸಿಕ್ಕೀತೇ, ಗುರಿಯ ಮುಟ್ಟೀತೇ ಈ ಒಂದು ಪ್ರೇಮಸುಧೆ

ವಶವು ನಾನಿನಗೆ ನಿತ್ತ ನೆಲದಲ್ಲೇ; ಉತ್ತರವು ಮೂಡಿರದೆ

ಎತ್ತ ನೋಡಿದರತ್ತ ಸುತ್ತ ಮುತ್ತೆಲ್ಲ ಬೆಳಗಿತ್ತು ನಿನ್ನ ಬಿಂಬ

ಕಣ್ಣು ಮುಚ್ಚಿದಡೇನು ಒಳಗಿರುವೆ ನೀನಲ್ಲೇ ಮನದ ತುಂಬ