Showing posts with label ಕವನ. Show all posts
Showing posts with label ಕವನ. Show all posts

Sunday, 15 March 2015

ಧರಣಿ ಮಂಡಲ ಮಧ್ಯದೊಳಗೆ

ಪುಣ್ಯಕೋಟಿಯ ಹಾಡನ್ನು ಕೇಳದ ಕನ್ನಡಿಗನಿದ್ದಾನೇ? ಇಲ್ಲವೆನಿಸುತ್ತದೆ. ನಮ್ಮ ಮತ್ತು ನಮ್ಮ ಹಿಂದಿನ  ಪೀಳಿಗೆಯವರೆಲ್ಲರಿಗೂ ಸುಪರಿಚಿತವಾಗಿರುವ ಹಸುವಿನ ಹಾಡದು. ರಾಗಬದ್ಧವಾಗಿ ಹಾಡಲು ಬರುವ, ಜಾನಪದ ಸೊಗಡಿರುವ, ಶುದ್ಧ ಕನ್ನಡದ ಅದ್ಭುತ ರಚನೆಯಿದು. ಮಗುವಿನ ಬಗೆಗಿನ ತಾಯಿಯ ಮಮತೆಯನ್ನು, ಅದಕ್ಕಿಂತ ಹಿರಿದಾದ ಸತ್ಯದ ಸತ್ವವನ್ನು ಎತ್ತಿಹಿಡಿಯುವ ಗೋವಿನಷ್ಟೇ, ’ಸುಳ್ಳು ಹೇಳುವ ಎಲ್ಲ ಅವಶ್ಯಕತೆಯಿದ್ದರೂ ಈ ಪುಣ್ಯಕೋಟಿ ಕೂಡ ಸತ್ಯವನ್ನು ಹೇಳುತ್ತಿರಲೂಬಹುದು’ ಎಂದು ಯೋಚಿಸಿ ಅದರ ಸತ್ಯಸಂಧತೆಯನ್ನು ರುಜುವಾತುಪಡಿಸಲು ಅವಕಾಶಕೊಡುವ ಮತ್ತು ಧರ್ಮಮಾರ್ಗದಲ್ಲಿ ನಡೆದ ಗೋವನ್ನು ತಿನ್ನದೇ ಬಿಡುವ ವ್ಯಾಘ್ರನೂ ಆಪ್ತನಾಗುತ್ತಾನೆ. ಅದಕ್ಕೇ ಈ ಹಾಡು ಇಷ್ಟೆಲ್ಲ ಮಕ್ಕಳ/ದೊಡ್ಡವರ ಹೃದಯದಲ್ಲಿ ಮನೆಮಾಡಿರುವುದು.

ನನಗೆ ಈ ಹಾಡಿನ ಪರಿಚಯವಾಗಿದ್ದು ನಾನು ೩-೪ ವರ್ಷದವನಾಗಿದ್ದಾಗ. ಆಗ ನಾನು ವರ್ಷದ ಎಂಟು ತಿಂಗಳು ಅಜ್ಜನ ಮನೆಯಲ್ಲಿರುತ್ತಿದ್ದೆ. ಪ್ರತಿ ಸಂಜೆ ದಿನದ ಆಟವೆಲ್ಲ ಮುಗಿದ ಬಳಿಕ ಕೈಕಾಲು ತೊಳೆದು ಬಂದು ದೇವರ ಕೋಣೆಯಲ್ಲಿ ಕುಳಿತು ಬಾಯಿಪಾಟ ಒಪ್ಪಿಸಿದ ಬಳಿಕ ದೊಡ್ಡಮ್ಮ ಹೇಳುತ್ತಿದ್ದ ಹಾಡು ಇದು. ಎಷ್ಟು ಕೇಳಿದರೂ ಸಾಕೆನಿಸದು, ಪ್ರತೀ ದಿನವೂ ಕೇಳಲೇಬೇಕು, ಪ್ರತೀ ದಿನವೂ ಪುಣ್ಯಕೋಟಿಯನ್ನು ಮೆಚ್ಚಲೇಬೇಕು, ಪುಣ್ಯಕೋಟಿಯು ಕರುವನ್ನು ಸಮಾಧಾನಿಸುವಾಗ ಕರುವಿನ ಜೊತೆಗೆ ನಾನೂ ಕಣ್ಣೀರಾಗಲೇಬೇಕು, ಪುಣ್ಯಕೋಟಿ ಸಾಯುವುದಿಲ್ಲ ಎಂದು ಗೊತ್ತಾದಾಗ ಒಂದು ಸಮಾಧಾನ ಹುಟ್ಟಿ ನಾನು ಕಣ್ಣೊರೆಸಿಕೊಳ್ಳಬೇಕು, ಅರ್ಬುತ ಪ್ರಾಣತ್ಯಾಗ ಮಾಡುವಾಗ ಸತ್ಯವನ್ನೇ ಮಾತನಾಡಬೇಕು ಎಂಬ ನೀತಿಯನ್ನು ದೊಡ್ಡಮ್ಮ ಹೇಳಲೇಬೇಕು. ಈ ದಿನಚರಿ ವರ್ಷಗಟ್ಟಲೇ ನಡೆದಿತ್ತು. ಪ್ರತೀ ದಿನವೂ ಅತ್ತರೂ ಒಂದು ದಿನವೂ ಹಾಡು ಕೇಳುವುದು ತಪ್ಪುತ್ತಿರಲಿಲ್ಲ. ಈ ಹಾಡಿನಲ್ಲಿ ಅಂತದ್ದೊಂದು ಮೋಡಿ ಇತ್ತು, ಹೇಳುತ್ತಿದ್ದ ರೀತಿಯಲ್ಲಿ ತಿರುತಿರುಗಿ ಕೇಳಿದರೂ ಬೇಜಾರು ಬರದ ಆಕರ್ಷಣೆ ಇತ್ತು, ಕತೆಯಲ್ಲಿ ಪ್ರತಿ ಬಾರಿಯೂ ಅಂದಿನ ಬಾಲ-ಸುಬ್ರಹ್ಮಣ್ಯನ ಕಣ್ಣುಗಳಲ್ಲಿ ನೀರಿಳಿಸುವಷ್ಟು ಹಾಗೂ ಮತ್ತೂ ಒಂದಿಷ್ಟು ಭಾವನಾತ್ಮಕತೆ ಇತ್ತು.

ಪುಣ್ಯಕೋಟಿಯದ್ದು ಒಂದು ಸರಳ ನೀತಿಕತೆ. ಪುಣ್ಯಕೋಟಿ ಕರ್ನಾಟ ದೇಶದ ಒಬ್ಬ ಗೊಲ್ಲನ ದೊಡ್ಡಿಯ ಗೋವು. ಒಂದು ದಿನ ಮೇಯಲು ಕಾಡಿಗೆ ಹೋಗಿದ್ದಾಗ ಅರ್ಬುತ ಎಂಬ ವ್ಯಾಘ್ರ(ನೆನಪಿಟ್ಟುಕೊಳ್ಳಿ, ಅದು ದುಷ್ಟವ್ಯಾಘ್ರವಲ್ಲ, ಬರೀ ವ್ಯಾಘ್ರ)ನ ಕೈಯಲ್ಲಿ ಸಿಕ್ಕಿಕೊಂಡು ಬೀಳುತ್ತಾಳೆ. ಬಗೆದು ತಿನ್ನುತ್ತೇನೆ ಎನ್ನುವ ಹುಲಿರಾಯನಲ್ಲಿ ತನ್ನ ಚಿಕ್ಕ ಕರುವಿಗೆ ಕೊನೆಯ ಬಾರಿ ಮೊಲೆಯಿತ್ತು ಬೀಳ್ಕೊಟ್ಟು ಬರುತ್ತೇನೆ, ದಯವಿಟ್ಟು ಹೋಗಿ ಬರಲು ಅವಕಾಶ ಮಾಡಿಕೊಡು ಎನ್ನುತ್ತದೆ. ಪುಣ್ಯಕೋಟಿಯನ್ನು ಮೊದಮೊದಲು ಅನುಮಾನಿಸಿದರೂ ನಂತರ ಅರ್ಬುತ ಪುಣ್ಯಕೋಟಿಗೆ ಹೋಗಿಬರಲು ಅವಕಾಶ ಮಾಡಿಕೊಡುತ್ತದೆ. ಎಂತಿದ್ದರೂ ಹೀಗೆ ಹೋದ ಹಸು ಎಂದಿಗೂ ತಿರುಗಿಬರಲಾರದು ಎಂಬ ಧೈರ್ಯದಲ್ಲಿದ್ದ ಅರ್ಬುತನ ನಂಬಿಕೆಯನ್ನು ಸುಳ್ಳು ಮಾಡುವಂತೆ ಪುಣ್ಯಕೋಟಿ ತಿರುಗಿ ಬರುತ್ತಾಳೆ, ಅದೂ ಅವಸರ ಅವಸರವಾಗಿ. ತನ್ನ ಲೆಕ್ಕಾಚಾರವನ್ನು ಬುಡಮೇಲು ಮಾಡಿ, ಸತ್ಯವನ್ನು ಮೆರೆದ ಪುಣ್ಯಾತ್ಗಿತ್ತಿ ಪುಣ್ಯಕೋಟಿಯಂತವಳ ಬಗ್ಗೆ ಸಂಶಯ ಪಟ್ಟೆನಲ್ಲಾ, ಇವಳನ್ನು ತಿನ್ನಲು ಹವಣಿಸಿದೆನಲ್ಲಾ ಎಂಬ ತನ್ನನ್ನು ತಾನೇ ಹಳಿದುಕೊಂಡು ಬೆಟ್ಟದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇಲ್ಲಿ ಅರ್ಬುತ ಸಾಯವ ಅಗತ್ಯವಿರಲಿಲ್ಲ ಎಂಬುದು ನಿಜವಾದರೂ ಇಷ್ಟು ಚಂದದ ನೆನಪುಗಳನ್ನು ಕೊಟ್ಟ ಹಾಡಿನ ಅಷ್ಟು ಚಿಕ್ಕ ತಪ್ಪನ್ನು ಕೆದಕುವುದು ಕೃತಘ್ನತೆಯಾದೀತು.

ಎಲ್ಲವೂ ರಾಗ ಬದ್ಧ ಇಲ್ಲಿ, ಪ್ರಾಸದ ಜೊತೆಗೆ. ಎಲ್ಲವೂ ನೀತಿಯುಕ್ತ ಇಲ್ಲಿ, ಖಳನಾಗಿ ಚಿತ್ರಿತವಾದ ಹುಲಿರಾಯನೂ ನೀತಿಯ ಗೆರೆಯನ್ನು ದಾಟಿ ನಡೆಯಲಾರ. ಪುಣ್ಯಕೋಟಿಯಂತೂ ನಮ್ಮ ಕರ್ನಾಟ ದೇಶದ ಲೋಕಲ್ ಸತ್ಯ ಹರಿಶ್ಚಂದ್ರ. ಮುಂಜಾವಿನ ಸಮಯದಲ್ಲಿ ಕೊಳಲನ್ನು ಬಾರಿಸುತ್ತಾ ಎಲ್ಲ ಗೋವುಗಳ ಹೆಸರು ಹಿಡಿದು ಕರೆವ ಗೊಲ್ಲನ ಚಿತ್ರಣವೂ ಇಲ್ಲಿ ಸ್ಪಟಿಕ ಸ್ಪಷ್ಟ. ಹುಲಿಯ ಬಳಿ ಕೊನೆಯ ಬಾರಿ ಮಗುವನ್ನು ನೋಡಿಬರಲು ಕಳಿಸಿಕೊಡಲು ಕೇಳಿಕೊಳ್ಳುವಾಗ, ತನ್ನ ಒಡಹುಟ್ಟು ದನಗಳ ಬಳಿ ತನ್ನ ಕರುವನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳುವಾಗ, ಮತ್ತೆ ಹುಲಿಯ ಎದುರು ಬಂದು ನಿಂತು ಈಗ ನನ್ನನ್ನು ತಿನ್ನು ಎಂದು ಹೇಳುವಾಗ ಪುಣ್ಯಕೋಟಿಯ ಗಂಟಲು ಉಬ್ಬಿ ಬರುವುದೂ ವೇದ್ಯವಾಗಿಸುವಷ್ಟು ಶಕ್ತಿಶಾಲಿ ನಮ್ಮ ಈ ಪುಣ್ಯಕೋಟಿಯ ಹಾಡು. ಕಥನ-ಕಾವ್ಯಗಳ ಪ್ರ‍ೇಮಿಗಳ ಪಾಲಿಗೆ(ನಾನೂ ಒಬ್ಬ ಈ ಗುಂಪಿನಲ್ಲಿ) ಪುಣ್ಯಕೋಟಿಯ ಹಾಡು ಹೃದಯಕ್ಕೆ ಅತಿ ಹತ್ತಿರವಾದದ್ದು. ಜನಪದದ ಕೊಡುಗೆಯಾದ ಈ ಹಾಡಿನ ಬಳಕೆಯೇ ಈ ಹಾಡಿಗೆ, ಹಾಡು ಕಟ್ಟಿದ ಅನಾಮಿಕ ಜನಪದಕ್ಕೆ ನಾವು ಕೊಡಬಹುದಾದ ಕೊಡುಗೆ. ನಮ್ಮ ಮನೆಯ ಮಕ್ಕಳಿಗೆ ಹೇಳಿಕೊಡುವ ಮೂಲಕ, ತಂತ್ರಜ್ಞಾನದ ಇಂದಿನ ಕಾಲದಲ್ಲಿ, ಕೊನೆಪಕ್ಷ ಯೂಟ್ಯೂಬಿನಲ್ಲಿ ಕೇಳಿಸುವ ಮೂಲಕ ಈ ಹಾಡನ್ನು, ಇಂತದ್ದೇ ಎಷ್ಟೋ ಹಾಡು-ಕಥೆಗಳನ್ನು ಉಳಿಸಬಹುದು, ಬೆಳೆಸಬಹುದು. ಉಳಿಸೋಣ, ಬೆಳೆಸೋಣ ನಾವು.

ಸೂಚನೆ.  ಪುಣ್ಯಕೋಟಿಯ ಹಾಡಿನ ಯೂಟ್ಯೂಬಿನ ಕೊಂಡಿ ಪುಣ್ಯಕೋಟಿ . ಒಮ್ಮೆ ಕೇಳಿಬಿಡಿ, ಬಾಲ್ಯಕ್ಕೊಮ್ಮೆ ಹೋಗಿಬನ್ನಿ. 

Monday, 24 June 2013

ಅಪ್ಪ

ಹತ್ತು ದಿನದ ಕೆಳಗೆ ಅಪ್ಪಂದಿರ ದಿನವಿತ್ತು ಎಂದು ಎಲ್ಲಾ ಬ್ಲಾಗಿಗರು ಬ್ಲಾಗನ್ನು ಪೋಸ್ಟ್ ಮಾಡಿದಾಗಲೇ ತಿಳಿದದ್ದು ನನಗೆ. ಅಷ್ಟರ ಮಟ್ಟಿಗೆ ಮರೆತಿದ್ದೇನೆ ಅಪ್ಪನನ್ನು? ಸಾಧ್ಯವೇ ಇಲ್ಲ. ಅಕ್ಷರಶಃ ಪ್ರತಸ್ಮರಣೀಯರಾದ ಅಪ್ಪನನ್ನು ಹಾಗೆ ಮರೆಯಲಾದೀತೇ? ಅಪ್ಪನ ದಿನ ಮಾತ್ರ ಮರೆತು ಹೋಗಿತ್ತು ಅಷ್ಟೇ. ಯಾಕೋ ಏನೋ ಬರೆಯಬೇಕೆಂಬ ಮೂಡು ಬಂದು ಕೂತು ಬಿಟ್ಟಿತ್ತು ತಲೆಯಲ್ಲಿ. ಮೊದಲೇ ಅಪ್ಪನ ಬಗ್ಗೆ ಎರಡು ಬಾರಿ ಬರೆದಿದ್ದೆನಾದರೂ ಬರೆಯಲು ಬೇಕಾದಷ್ಟು ವಿಷಯಗಳಿದ್ದವು ಬಿದಿದ್ ಅಪ್ಪನ ಬಗ್ಗೆ. ಹಾಗೆ ಹುಟ್ಟಿದ್ದು ಈ ಗದ್ಯದಂತಹ ಪದ್ಯ. ಗದ್ಯವೇ ಇದು? ಅಲ್ಲ ಎನಿಸುತ್ತದೆ . ಪದ್ಯವೇ ಇದು? ಮೊದಲೇ ಅಲ್ಲ. ಸ್ವಲ್ಪ ಶಿಸ್ತಿನ ಹಿಡಿತಕ್ಕೊಳಪಡಿಸಿದ ಭಾವಗಳು ಅಷ್ಟೇ ಇವು, ಗದ್ಯಪದ್ಯವೆಂಬ ಭೇಧವಿಲ್ಲದೆ. 

ಅಪ್ಪಾ ನೆನಪಿದೆಯೇ ನಿನಗೆ ,
ದವಾಖಾನೆಯ ವಾಸನೆಯ ನಡುವೆ ಮೊದಲ ಬಾರಿ ಮುತ್ತು ಸುರಿದಂತೆ ನಾನತ್ತಿದ್ದು;
ಕಿಟಕಿಯ ಪಕ್ಕದ ಹಾಸಿಗೆಯ ಗಡಿಯಲ್ಲಿ ಅಂಗಾತದಿಂದ ನಾನು ಮಗ್ಗುಲು ಬದಲಿಸಿದ್ದು;
ಜಾತ್ರೆಯ ಮನೆಯ ಗದ್ದಲದ ಅಂಗಳದಲ್ಲಿ ಅಳುಕುತ್ತಾ ನಾ ಮೊದಲ ಹೆಜ್ಜೆ ಹಾಕಿದ್ದು* ;
ಅಜ್ಜನ ಮನೆಯ ಚಾವಡಿಯಲ್ಲಿ ಮಲಗಿಸಿ, ಪೂರ್ತಿ ಮಳೆಗಾಲಕ್ಕೊಂದು ಬಾಯ್ ಹೇಳಿದ್ದು**.
ಹೋಗಲಿ ಬಿಡು, ನೆನಪಿರಲಿಕ್ಕಿಲ್ಲ ನಿನಗೆ; ಹೇಗಾದರೂ ನೆನಪಿದ್ದೀತು ಈ ಚಿಲ್ಲರೆ ಘಟನೆಗಳು,
ನನ್ನ ನಾಳೆಗಳಿಗಾಗಿ ನಿನ್ನ ವರ್ತಮಾನವ ಅರ್ಪಿಸುವ ನಿನ್ನ ಬಿಡುವಿಲ್ಲದ ಚಟದ ಮಧ್ಯೆ. ॥೧॥


ಅಪ್ಪಾ ಗಮನಿಸಿದ್ದೆಯೇ ನೀನು,
ಕೂಸುಮರಿಯಾಗಿ ನಿನ್ನ ಬೆನ್ನು ಹತ್ತಲೆಂದೇ ಎಷ್ಟೋ ಸಲ ನಾ ಊಟ ಬೇಡವೆಂದಿದ್ದು;
ಕೋಪದ ಕೆಂಪುಕಣ್ಣಿಗೆ ಹೆದರಿ ಬೇಡವೆಂದಾಗಲೂ ಮುದುರಿ ಊಟಕ್ಕೆ ಬಂದು ಕೂತಿದ್ದು
ಶಾಲೆಯ ಮೊದಲ ದಿನ ಹುಡುಗು ಬುದ್ದಿಗೆ ನೀ ಬಾರಿಸಿದಾಗಲೂ ನಾ ಹಲ್ಲು ಕಚ್ಚಿ ನಿಂತಿದ್ದು;
ಊರಿಡೀ ನನ್ನ ಹೊಗಳಿದಾಗಲೂ ನಿನ್ನೊಂದು ನಗೆಯ ಕೊಡುಗೆಗಾಗಿ ನಾನು ಹಂಬಲಿಸಿದ್ದು;
ಇರಲಿಕ್ಕಿಲ್ಲ ಬಿಡು, ಗೊತ್ತಿರಲಿಕ್ಕಿಲ್ಲ ನಿನಗೆ; ನನ್ನ ಈ ಸಣ್ಣ ಕೋರಿಕೆಗಳು ಕನವರಿಕೆಗಳು ;
ಮಗನೆಂಬ ಕನಸನ್ನು ಹಗಲು ರಾತ್ರಿಯೆಂದೆಣಿಸದೆ ಕಂಡ ನಿನ್ನ ಹುಚ್ಚುತನದ ಮಧ್ಯೆ ॥೨॥

ಅಪ್ಪಾ ಗೊತ್ತಿದೆಯೇ ನಿನಗೆ ,
ನೀ ಹೇಳಿದ ಎಲ್ಲ ಆದರ್ಶಪುರುಶರ ಕಥೆಗಳಿಗಿಂತ ನನಗೆ ನಿನ್ನ ಕಥೆಯೇ ಸ್ಪೂರ್ತಿಯಾಗಿದ್ದು;
ನಿನಗೇ ತಿಳಿಯದ ಹಾಗೆ ನಿನ್ನ ಬದುಕ ಕಟ್ಟಿಕೊಂಡಿದ್ದಲ್ಲದೇ ನಮ್ಮ ಬದುಕನೂ ಕಟ್ಟಿಕೊಟ್ಟಿದ್ದು;
ಅಪ್ಪನ ಕಂಡ ನೆನಪಿಲ್ಲದ ನೀನು ನನ್ನ ಮಟ್ಟಿಗೆ ಜಗತ್ತಿನ  ಅತಿ ಆದರ್ಶ ಅಪ್ಪನಾಗಿರುವುದು;
ಒರಟುತನದಲ್ಲಿ ಮುಚ್ಚಿಟ್ಟಷ್ಟೂ ನಿನ್ನ ಪ್ರೀತಿ ; ಹೃದಯಕ್ಕೆ ವ್ಯಕ್ತವಾದದ್ದು ಮತ್ತೆ ಹತ್ತಿರವಾದದ್ದು;
ಯಾವುದರ ಬಗೆಗಾದರೂ ಕಲ್ಪನೆಯಿತ್ತೇ ನಿನಗೆ; ಬಂದೇ ಇರಲಿಕ್ಕಿಲ್ಲ ಬಿಡು ಈ ಆಲೊಚನೆಗಳು;
ಗೊತ್ತಾಗಿ ನಿನಗಾದರೂ ಏನಾಗಬೇಕಿದೆ ನನ್ನ ಭವಿಷ್ಯದ ನಿನ್ನದೇ ಯೋಚನೆಗಳ ಮಧ್ಯೆ ॥೩॥

ಟಿಪ್ಪಣಿಗಳು:

*ನಾನು  ನಡಿಗೆ ಕಲಿತದ್ದು ಅತಿ ತಡವಾಗಿ. ಅಜ್ಜನ ಮನೆಯಿದ್ದ ಊರಲ್ಲಿ ಜಾತ್ರೆಯಿದ್ದಾಗ, ಪೌರೋಹಿತ್ಯದ ಮನೆಯ ಗಡಿಬಿಡಿಅಲ್ಲಿ ಎಲ್ಲ ಓಡಾಡುತ್ತಿದ್ದಾಗ ಯಾರಿಗೂ ಕಾಣದಂತೆ ಚಪ್ಪರಕ್ಕೆ ಕಟ್ಟಿದ್ದ ಕಂಬಗಳ ಮಧ್ಯೆ ನದೆದಿದ್ದೆನಂತೆ ನಾನು.

** ಅಪ್ಪ ಅಮ್ಮ ಇಬ್ಬರೂ ಶಿಕ್ಷಕರಿದ್ದುದರಿಂದ, ಶಿರಸಿಯಂತ ಶಿರಸಿಯೆಂಬ ಮಲೆನಾಡಿನಲ್ಲಿ  ನನ್ನನ್ನು ಶಾಲೆಗೇ ಕರೆದುಕೊಂಡು ಹೋಗುವುದು ಇಬ್ಬರಿಗೂ ಅಸಾಧ್ಯಾವಿದ್ದುದರಿಂದ ನನ್ನನ್ನು ಕಡಲತಡಿಯ ಕುಂದಾಪುರದಲ್ಲಿ ಅಜ್ಜನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದರು ಮೇ ತಿಂಗಳ ಕೊನೆಯಲ್ಲಿ ಒಂದು ದಿನ ನನ್ನನ್ನು ಮಲಗಿಸಿ ಬರುವಾಗ ದೊಡ್ಡ ಮಾವಿನ ಹಣ್ಣನ್ನು ತರುತ್ತೇವೆ ಎಂದು ಹೇಳಿ  ಹೋಗುತ್ತಿದ್ದ ಅಪ್ಪನನ್ನು ಮತ್ತೆ ನೋಡುತ್ತಿದ್ದುದು ನಾನು ಅಕ್ಟೊಬರ್ ರಜೆಯಲ್ಲಿಯೇ.


Thursday, 9 May 2013

ಏತಕೆ ಹೀಗಾಗಿದೆ ನಮ್ಮಯ ಬದುಕು...



ಬಹಳ ದಿನಗಳಾಗಿದ್ದವು ಹೀಗೊಂದು ಕವನ ಬರೆಯಬೇಕು ಎಂದುಕೊಂಡು. ಭಾವ ಗಟ್ಟಿಗೊಂಡಾಗ ಶಬ್ದ ಸಿಕ್ಕುತ್ತಿರಲಿಲ್ಲ, ಶಬ್ದ ಮೂಡಿದಾಗ ಜನ್ಮಜಾತ ಸೋಮಾರಿತನ ಬಿಡುತ್ತಿರಲಿಲ್ಲ. ಇರಲಿ ಬಿಡಿ, ವಿಷಯಕ್ಕೆ ಬಂದರೆ, ಒಂದೇ ಎರಡೇ, ಎಷ್ಟು ಸಮಸ್ಯೆಗಳು ನಮ್ಮ ಭಾರತಮ್ಮನಿಗೆ. ಜೀವನವಿಡೀ ಕೂತು ಪ್ರಯತ್ನಿಸಿದರೂ ಬಿಡಿಸಲಾಗದ ಕಗ್ಗಂಟಾಗುತ್ತಿದೆ ನಮ್ಮದೇ ಸಮಾಜ ಅಥವಾ ತನ್ನ ಲೋಭಕ್ಕೋಸ್ಕರ ನಮ್ಮ ಸಮಾಜವನ್ನು ಈ ಪ್ರಪಾತದ ಅಂಚಿಗೆ ನೂಕುತ್ತಿದ್ದಾರೆ ಸ್ವಾರ್ಥಚಿತ್ತದ ಮೂಢರು. ನಮ್ಮ ನಡುವೆಯೇ ನಡೆಯುತ್ತಿರುವ ದೆಲ್ಲಿ ಅತ್ಯಾಚಾರದಂತಹ, ಯೆಡ್ಡಿ ರಾಜಕೀಯದಂತಹ ಕೆಲವು ಘಟನೆಗಳು, ಅತಿ ಆಶಾವಾದಿಯನ್ನೂ ನಿರಾಶಾವಾದದ ಕಡೆ ಮುಖಮಾಡುವಂತೆ ಮಾಡಿಬಿಡಬಹುದು. ಈ ಕವನವೂ ಅಂತಹ ನಿರಾಶಾವಾದದ ಒಂದು ಅಭಿವ್ಯಕ್ತಿ ಎನ್ನಿಸಿದರೆ ಅದು ತಪ್ಪಲ್ಲ, ಆದರೆ ಈ ಕವನದ ಆಶಯ ಈ ನಿರಾಶೆಯ ಕಾರ್ಮೋಡದ ಆಚೆ ಒಳ್ಳೆಯ ಸಮಾಜದ ಬೆಳ್ಳಿರೇಖೆಯೊಂದಿದೆ ಎಂಬುದು, ಅದರ ಕಡೆ ನಾವೆಲ್ಲ ದುಡಿಯಬೇಕೆಂಬುದು.



ಏತಕೆ ಹೀಗಾಗಿದೆ ನಮ್ಮಯ ಬದುಕು, ಕಾಣದು ಮಾನವತೆ ಮಾನವನೆದೆಯಲ್ಲಿ,
ಒಳ್ಳೆಯತನವನೂ ನಂಬದ ಹಾಗೆ ಬೆಳೆದಿದೆ ಕ್ರೌರ್ಯವು ನಮ್ಮಯ ನಡುವಲ್ಲಿ
ಬದಲಾಯಿಸಬೇಕಿದೆ ನಮ್ಮಯ ನಾಡನು; ಯೋಚಿಸಬೇಕಿದೆ ನಾವುಗಳು
ನಮ್ಮಯ ಕತ್ತಲೆ ಮೆಟ್ಟಿ ನಿಲ್ಲಲೇಬೇಕು ಕಾದಿವೆ ಬೆಳಕಿನ ನಾಳೆಗಳು॥ಪ॥

ಬಾಲೆಗಳನೂ ಬಿಡದ ಕಾಮಣ್ಣನಾಗುತಿಹರಲ್ಲಾ ನಮ್ಮಜನ;
ಸ್ತ್ರೀಯಲ್ಲಿ ದೇವರನ್ನು ಕಂಡಿದ್ದು ನಮ್ಮವರೇನೇ?
ಅಮ್ಮ, ಅಕ್ಕ, ಗೆಳತಿ, ಮಗಳಾಗಿಯೂ ಗೊತ್ತಿರುವವಳನ್ನು;
ಮನೆಯ ಹೊರಗೆ ಕಂಡಿದ್ದು ಬರಿ ಕಾಮದ ಕಣ್ಣಿಂದಲೇ?||೧||

ನಮ್ಮ ರಕ್ತವ ಕುಡಿದು ತೇಗುತಿಹರಲ್ಲಾ ನಮ್ಮದೇ ನಾಯಕರು;
ಸಂಬಳವ ಹಿಂತಿರುಗಿಸಿದ ಶಾಸ್ತ್ರಿಗಳು ಹುಟ್ಟಿದ್ದು ಇಲ್ಲೇನಾ? *
ಮಾತೆತ್ತುವ ಮೊದಲು ಲಂಚಕೆ ಚಾಚುವರಲ್ಲ ಬೊಗಸೆಯನ್ನು;
’ಜನಸೇವೆಯ ದೇವಸೇವೆಯೆಂದವರು’ ನಾವೇನಾ? ||೨||

ಧರ್ಮ, ಜಾತಿ,ಭಾಷೆಗಳ ಭೇದದಲ್ಲಿ ಹೊಡೆದಾಡುವರಲ್ಲಾ;
ಗಾಂಧಿ ಕಂಡ ಕನಸು ಈ ದ್ವೇಷ ಕ್ರೌರ್ಯಗಳೇ?
ಕಂಡಲ್ಲಿ ಕತ್ತಿಯೆತ್ತಿ ರಕ್ತಚೆಲ್ಲುವರಲ್ಲಾ ಕ್ಷುಲ್ಲಕ ಕಾರಣಗಳಿಗೆ;
ಬುದ್ಧ, ಬಸವ, ಮಹಾವೀರರ  ನಾಡು ಇದುವೇ?||೩||

ಕಾಶ್ಮೀರವ ವೈರಿಗೆ ಬಿಟ್ಟು ನಿರುಪಯೋಗಿ ಜಾಗವೆಂಬರು
ರಕ್ತ ಚೆಲ್ಲಿ ಸ್ವಾತಂತ್ರ್ಯ ಗಳಿಸಿದ್ದು ಈ ಸುಖಕ್ಕೇ?
ಇರದ ಭೇದಗಳ ಹುಟ್ಟಿಸಿ ಮತವ ಗಿಟ್ಟಿಸುವರಲ್ಲಾ
’ಒಂದು ನಾಡು ಒಂದು ಕನಸು’ ಎಂದವರು ನಾವೇನಾ?||೪||


ಟಿಪ್ಪಣಿ:
* - ಲಾಲ ಬಹಾದ್ದೂರ್ ಶಾಸ್ತ್ರಿಗಳು ಅಧಿಕಾರದಲ್ಲಿದ್ದಾಗ ಒಮ್ಮೆ ಅವರಿಗೆ ತಮ್ಮ ಹೆಂಡತಿ ತನ್ನ ಸಂಬಳದಲ್ಲಿ ಸ್ವಲ್ಪ ಭಾಗವನ್ನು ಪ್ರತೀ ತಿಂಗಳೂ ಉಳಿತಾಯ ಮಾಡುತ್ತಿದ್ದುದು ಗೊತ್ತಾಗುತ್ತದೆ. ಆಗ ಅವರು ತನ್ನ ಸಂಬಳದಲ್ಲಿ ಅಷ್ಟುಭಾಗ ’ಹೆಚ್ಚುವರಿ’  ಎಂದು ತೀರ್ಮಾನಿಸಿ ಅಷ್ಟನ್ನು ಸರಕಾರಕ್ಕೆ ಹಿಂತಿರುಗಿಸಿದ್ದರು. ಎಂತಹ ನಿಸ್ವಾರ್ಥ ಉದಾತ್ತ ಭಾವ ಅಲ್ಲವೇ? ಇಂದಿನ ರಾಜಕಾರಣಿಗಳನ್ನು ಅವರ ಪಾದಧೂಳಿಗೆ ಹೋಲಿಸಲಾದರೂ ಸಾಧ್ಯವಿದೆಯೇ?


Wednesday, 1 May 2013

ಹಾಡು ಮುಗಿದರೇನು...




ಬಹಳ ಹಿಂದೆ ಬರೆದ ಕವನ. ಬ್ಲಾಗಿಗೆ ಹಾಕಬಾರದು ಎಂದುಕೊಂಡಿದ್ದೆ, ಆದರೂ ಪ್ರಕಟಿಸುತ್ತಿದ್ದೇನೆ. ದಕ್ಕದ ಪ್ರೀತಿಗೆ, ಮಾತಾಗಿ ಮೂಡದ ಮನಸ್ಸಿನ ಭಾವನೆಗಳಿಗೆ  ಕೊರಗಿ ನರಳುವ ಒಂದು ಮನಸಿನ ಭಾವನೆಗಳೋ ಇವು? ಪ್ರೀತಿಸುತ್ತಿದ್ದೇನೆ ಎಂಬ ಭಾವವನ್ನು ಪ್ರೀತಿಸಿದ ಹುಚ್ಚುಮನಸ್ಸಿನ ಗೊಂದಲವೋ ಇವು? ಎಲ್ಲ ಬಿಟ್ಟೆನೆಂದ ಮೇಲೂ ಬಿಡಲಾಗದ ಬಂಧದೊಳಗೆ ಸಿಕ್ಕಿಬಿದ್ದ ತೊಳಲಾಟಗಳೇ ಇವು? ನಿರ್ಧಾರ ನಿಮ್ಮದು.


ಹಾಡು ಮುಗಿದರೇನು ಭಾವದ ತೊಳಲಾಟ ಮುಗಿದೀತೇ ಈ ಜನುಮದಲಿ
ಕನಸು ಒಡೆದು ಹೋದರೂ ಅದರ ಮಂಪರು ಸರಿದೀತೇ ಅರೆಕ್ಷಣದಲಿ||ಪ||

ಬಾಗಿಲುಗಳಿಲ್ಲದ ಮಾನಸದೂರಿಗೆ ಪುನಃ ಲಗ್ಗೆಯ ಹಾಕಿದವಳೇ
ಇನಿತೂ ಸುಳಿವಿಲ್ಲದಂತೆ ಪೂರಾ ಕೊಳ್ಳೆಯ ಹೊಡೆದವಳೇ
ತನ್ನಯ ವಿನಹ ನಿನಗೇನಿದೆ ಜಗದಲಿ ಎಂದು ಸವಾಲೆಸೆದವಳೇ
ದಿನವಹಿ ನೆನೆದರೂ ತಿರುಗಿ ತಾ ಹೊಸದೆನಿಸುವ ನಿತ್ಯನೂತನಳೇ||೧||

ಅಗೆದಗೆದು ಮೊಗೆದರೂ ಮುಗಿದು ಹೋಗದಂತ ಚೈತನ್ಯದ ಬುಗ್ಗೆಯೇ
ಅರಳುವ ಮೊದಲೇ ಪರಿಮಳ ಬೀರುವ ಅದಮ್ಯ ಸ್ಪೂರ್ತಿಯ ಮೊಗ್ಗೆಯೇ
ಜ್ಯೋತಿರ್ವರ್ಷಗಳಿಗೆ ಹಿರಿದಾದ ಮನವ ಹಿಡಿಯಲಿ ಬಂಧಿಸಿದ ಶಕ್ತಿಯೇ
ಅರೆನಗೆಯಲಿ ನೀ ದೊರಕಿಸುವುದು ಏಳು ಜನುಮಗಳಿಗಧಿಕದ ಮುಕ್ತಿಯೇ||೨||

ಮನವ ದೇಹದಿಂದಗಲಿಸಿ ಅಪಹರಿಸಿದಾಕೆ ನೀನಾತ್ಮಬಂಧುವೇ
ಬಿಂದುಮಾತ್ರದ ಸಂಧಾನದಲಿ ಬಂಧನಕ್ಕಿಕ್ಕಿದ ಪ್ರೇಮಸಿಂಧುವೇ
ಕೊಳ್ಳೆ ಹೋದ ಮನವಿದು ನೋಯದು, ಲೂಟಿಯ ಧಾಟಿಗೆ ಮರುಳಾಗಿ
ಮೈಮರೆತಿದೆ ದೇಹಹೀನ ಮನಸು,ವಿರಹದ ಸುಖಕೆ ತನ್ಮಯವಾಗಿ||೩||

Saturday, 2 March 2013

ಸೀತೆಯ ಸ್ವಗತ


ಇದು ೫೦ನೆಯ ಪೋಸ್ಟ್ , ಕಳೆದ ಎರಡೂವರೆ ವರ್ಷಗಳಿಂದ ಈ ಬ್ಲಾಗನ್ನು ಇಷ್ಟಪಟ್ಟು, ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು.


ಪೀಠಿಕೆ : ನಾವು ಯೋಚಿಸುವ ಎಲ್ಲ ಮಾತುಗಳನ್ನು ನಾವು ಹೇಳುವುದಿಲ್ಲ, ಹೇಳಲೂಬಾರದು ಬಿಡಿ. ಕೆಲವೊಂದು ಮಾತುಗಳು ನಮ್ಮಲ್ಲಿಯೇ ಉಳಿದು ಹೋಗುತ್ತವೆ, ಯಾವುದಾದರೂ ಕಾರಣದಿಂದಕೆಲವೊಮ್ಮೆ ಧೈರ್ಯದ ಕೊರತೆಯಿಂದ, ಕೆಲವೊಮ್ಮೆ ಧರ್ಮದ ಹೆದರಿಕೆಯಿಂದ, ಕೆಲವೊಮ್ಮೆ ಹೇಳಬಾರದೆಂದು ತೀರ್ಮಾನಿಸಿದ್ದರಿಂದ. ಎಲ್ಲರಲ್ಲಿಯೂ ಈ ಮಾತುಗಳಿರುತ್ತವೆ. ಸೀತೆಯಲ್ಲಿಯೂ ಇಂತಹ ಮಾತುಗಳು ಒಂದಿಷ್ಟು ಉಳಿದಿದ್ದವೇ? ಗೊತ್ತಿಲ್ಲ. ಅದನ್ನು ನೋಡುವ ಪ್ರಯತ್ನವಷ್ಟೇ ಇದು. ಶ್ರೀರಾಮಚಂದ್ರನ ಎಂದರೆ ಧರ್ಮಸ್ವರೂಪಿ ಆತ. ಯಾವುದು ಧರ್ಮ ಎಂಬುದರ ಬಗೆಗಿನ ವಿವೇಚನೆಯಲ್ಲಿ ಆತನನ್ನು ಮೀರಿಸಿದವರಿಲ್ಲ. ಆದರೆ ಸಂಸಾರ ಎಂದರೆ ಧರ್ಮ ಒಂದೇ ಅಲ್ಲ ಅಲ್ಲವೇ? ಆಧುನಿಕ ಜಗತ್ತಿನ ಮೌಲ್ಯಗಳ ಭೂತಗನ್ನಡಿಯಲ್ಲಿ ಶ್ರೀರಾಮಚಂದ್ರನನ್ನು ನೋಡುವ ತಪ್ಪುಪ್ರಯತ್ನವೇ ಇದು? ನೀವೇ ನಿರ್ಣಾಯಕರು.

ಕೇಳಿದನೇ ರಾಮದೇವ ನನ್ನ ಇಚ್ಛೆಯ, ನನ್ನದೇ ಸ್ವಯಂವರದಲ್ಲಿ
ಗಣಿಸಿದನೇ ಸತಿಯನ್ನು, ಪಿತೃವಾಕ್ಯ ಪರಿಪಾಲನೆಯ ಸಡಗರದಲ್ಲಿ
ಬೆಲೆಯಿತ್ತೇ ನನ್ನ ಮಾತಿಗೆ, ಅಳುವಿಗೆ, ಸಂದೇಹದ ಅಗ್ನಿಪರೀಕ್ಷೆಯಲ್ಲಿ
ಏನಾಯ್ತು ಪತಿಧರ್ಮ, ನನ್ನ ಅಪಹರಣದಿಂದ ಬಿಡಿಸಿ ಮತ್ತೆ ಕಾಡಿಗೆ ಅಟ್ಟಿದಲ್ಲಿ

ಎತ್ತಲಾಗದ ಬಿಲ್ಲ ದಾಶರಥಿ ಮುರಿದಾಗ ಜಾನಕಿಯ ಮನವ ಗೆದ್ದನೇ
ಅರ್ಥವಾಗದ ಧರ್ಮಕ್ಕೆ ವನವಾಸಕ್ಕೆ ಹೋಗೆಂದರೆ ಯಾಕೆಂದು ಕೇಳಿದೆನೇ
ಪತಿವ್ರತೆ ಏಕಪತ್ನೀವೃತಸ್ಥರಾದ ಮಾತ್ರಕ್ಕೆ ಅದು ಆದರ್ಶ ಜೋಡಿಯೇ
ಎಲ್ಲಿತ್ತು ದಾಂಪತ್ಯ ದಂಡಕ, ಅಶೋಕವನ, ವಾಲ್ಮಿಕಿ ಅಶ್ರಮಗಳ ಮಧ್ಯೆ

ಅಬಲೆಯೆಂದರು, ಆದರ್ಶ ಸ್ತ್ರೀಯೆಂದರು, ನನ್ನ ಬಯಕೆಗಳೇ ಅವು
ನನಗೆ ಬೇಕಿದ್ದುದು ಒಂದಿಷ್ಟು ನೆಮ್ಮದಿ, ಅಲ್ಲೇ ಒಂದು ಪ್ರೀತಿಯ ತಾವು
ಈ ಪಾತಿವ್ರತ್ಯ, ಈ ಅನುಮಾನ, ಈ ಜಂಜಾಟ ಸಾಕಾಗಿ ಹೋಗಿತ್ತು
ಅನುಮಾನಿಸದೇ ಕೈಚಾಚಿದ ತಾಯಿ ಭೂಮಿಯ ಮಡಿಲಲ್ಲಿ ಜಾಗವಿತ್ತು


ವಿ. ಸೂ. : ಇದು ಕೇವಲ ನನ್ನ ಭಾವನೆಗಳು, ಕೇವಲ ನನ್ನೊಬ್ಬನ ವಿಚಾರಗಳು. ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಉದ್ದೇಶ ನನ್ನಲ್ಲಿಲ್ಲ. ಹಾಗೇನಾದರೂ ಅನಿಸಿದರೆ ಈ ಮೂಢನನ್ನು ಕ್ಷಮಿಸಿಬಿಡಿ ಒಮ್ಮೆ. 

Saturday, 3 November 2012

ಮತ್ತಿನ್ನೇನು ಬೇಕು



ನಿನ್ನೊಲವಿನ ಸಾಗರದಿ ನಾ ಮುಳುಗುವಂತಿದ್ದರೆ  
ನೀನರಿಯದೆ ಹೋದರೂ ನಾನಲ್ಲಿಯೇ ಇದ್ದರೆ 
ಮತ್ತಿನ್ನೇನು ಬೇಕು
ಜೀವಕೆ ಈ ಜೀವನಕಷ್ಟು ಸಾಕು ||ಪ||

ನಿನ್ನದೇ ನೆನಪಿನಲಿ ನಾ ಬವಳಿ ಬೆಂಡಾಗಿರೆ
ಕನಸಾಗಿಯಾದರೂ ನೀನೊಮ್ಮೆ ಸೋಕಿದರೆ
ಸಾವಿರದ ಗುಂಪಿನಲ್ಲೂ ಎದ್ದು ಕಾಣುವ ನೀ
ಎದ್ದು ನಿತ್ತರೂ ಕಾಣದ ನನ್ನೊಮ್ಮೆ ಗುರುತಿಸಿದರೆ
ಮತ್ತಿನ್ನೇನು ಬೇಕು
ಜೀವಕೆ ಜೀವನಕಷ್ಟು ಸಾಕು ||1||

ಹಾಡಲ್ಲದ ನನ್ನ ಹಾಡಿಗೆ ನೀ ಕಿವಿಯಾದರೆ
ನಗುಬಾರದ ಜೋಕಿಗೆ ನೀನೊಮ್ಮೆ ನಕ್ಕರೆ
ನಿನ್ನ ಘಮದ ನಡುವೆ ನಾ ಕಳೆದುಹೋದರೆ
ಅಲ್ಲಿ ನನ ಸುಳಿವನ್ನು ನೀನೇ ಪತ್ತೆಹಚ್ಚಿದರೆ
ಮತ್ತಿನ್ನೇನು ಬೇಕು
ಜೀವಕೆ ಜೀವನಕಷ್ಟು ಸಾಕು ||2||

ನಿನ್ನ ಯೋಚನೆಗಳಲಿ ನಾನೊಮ್ಮೆ ಬಂದರೆ
ಅದರಿಂದ ಮುಗುಳುನಗೆಯೊಂದು ಮೂಡಿದರೆ
ನಿನಗೆ ನನ್ನ ಮೇಲೊಂದು ಭಾವ ಮಡುಗಟ್ಟಿದರೆ
ನನ ಜೊತೆಗಿರುವ ಆಲೋಚನೆ ಹುಟ್ಟಿದರೆ
ಜೀವಕೆ ಮತ್ತಿನ್ನೇನು ಬೇಕು
ಈ ಜೀವನವೇ ಸಾಕು ||3||

Friday, 16 December 2011

ಮನುಜ...



ಯಾರ ಹೊಗಳಿಕೆಗೆ ಏನು ಬೆಲೆ;
ಯಾವ ಮೆಚ್ಚಿಗೆಗೆ, ಏಕೆ ನಟನೆ
ದೇವನಿರುತ ಸರ್ವಾಂತರ್ಯಾಮಿಯಾಗಿ
ಎಲ್ಲಬಲ್ಲವನ ಮೆಚ್ಚಿಸದೇ ದಕ್ಕೀತೆ ಸಗ್ಗ
ನಮ್ಮತನವ ನಾವು ಮರೆತು, ಜನರ
ವಿಚಾರಕೆ ಸಲ್ಲದ ಮನ್ನಣೆಯಿತ್ತು.

ಅನಂತ ಮನದ ಸುತ್ತ ಚಿಕ್ಕ ಬೇಲಿ ಹಾಕಿ
ಎಲ್ಲ ನೆನಪಿಟ್ಟುಕೊಂಬೆನೆಂಬ ಹೊಂಚಹಾಕಿ
ಬಣ್ಣದ ಕೋಟೆಯ ಮಧ್ಯದಲಿ ನಾವಡಗಿ
ನಮ್ಮ ಹಗಲುವೇಷಕೆ ನಾವೆ ನಾಚಿ
ನಮ್ಮದಲ್ಲದ ಬದುಕ ನಾವು ಬಾಳಿ
ಕಳೆದುಕೊಂಡೆವೆಂದು ಪರತಪಿಸಬಹುದೆ.

ಅನ್ಯರತಪ್ಪಿಗೆ ಭೂತಗನ್ನಡಿಯಿಟ್ಟು
ತನ್ನ ತಪ್ಪನು ಒಪ್ಪಿತಗೊಳಿಸಿ,
ವಾದದಲ್ಲಿ ಗೆದ್ದೆನೆಂದರೆ,ಮಾತಿನಲ್ಲಿ
ಮೀರಿದೆನೆಂದರೆ ಕ್ಷಮೆಯು ಉಂಟೇ;
ನಿಜದ ಪಶ್ಚಾತ್ತಾಪವಿರದೆ ಮಾಡಿದ
ಪಾಪದೋಷಕೆ ಮುಕ್ತಿಯುಂಟೇ?

ಇರಲಾರದ ಭ್ರಮೆಯ ಮೂಡಿಸಿ
ಮನದ ಮೇಲೆ ಘಾಸಿಮಾಡಿ
ಬುದ್ಧಿಯುದ್ಧವ ಗೆದ್ದೆನೆಂದರೇನಂತೆ
ಗೆಲ್ಲಲಾದೀತೆ ನಿಜವ ಬುದ್ಧಿಮಾತ್ರಕೆ
ಸುಳ್ಳಿನಲೆಯ ಮೇಲೆ ನಿಜವ ಸೇರಿ
ದಕ್ಕಬಹುದೇ ದಿಕ್ಕು, ದೇವಬಲ್ಲ!

Wednesday, 28 September 2011

ನೆನಪೇ



ಭಾವ ಮಡುಗಟ್ಟಿ, ಇನ್ನು ತಡೆಯಲಾರದಾದಂತಾಗ ಆಗುವುದೇ ಭಾವಪ್ರವಾಹ, ಇಲ್ಲಿ ಇರುವುದು ಕೇವಲ ಭಾವಸ್ರಾವವಷ್ಟೇ. ಕೆಲವೊಮ್ಮೆ ಸಿಗದ ಶಬ್ದಕ್ಕೋಸ್ಕರ ತಡಕಾಡಿ ಸುಳ್ಳಾಡಬಹುದೇನೋ, ಆದರೆ ಒಂದು ಭಾವಕ್ಕೆ ದ್ರೋಹ ಬಗೆಯಲಾಗದು.  ಇದು ಈ ಕವನ ಸರಣಿಯ ಕೊನೆಯ ಕವಿತೆ. ಅಂಕಣ, ಲೇಖನ , ಕಥೆಗಳನ್ನು ಬರೆಯಲು ಬೇಕಾಗದೇ ಹೋಗುವ ಸ್ಪೂರ್ತಿಯ ಅವಶ್ಯಕತೆ ಕವನಕ್ಕೆ ಬೇಕೇ? ಏನೇ ಇರಲಿ, ’ಅನಾಮಿಕಾ’ದಿಂದ ಪ್ರಾರಂಭಿಸಿ ’ನಿನಗೆ’ ಎಂದು ಭಾವಾರ್ಪಿಸಿ, ಒಂದು ’ಸ್ವಗತ’ ದಲ್ಲಿ ಉಮ್ಮಳಿಸಿ , ’ಇವಳೇ’ ಎಂದು ಕನವರಿಸಿ, ’ನೆನಪೇ’ದಲ್ಲಿ ನಿಲ್ಲುತ್ತಿದೆ. ಆದಷ್ಟು ಬೇಗ ಮುಗಿಸಬೇಕೆಂದುಕೊಂಡಿದ್ದರಿಂದ ಈ ಪದ್ಯದ ಕೊನೆಯ ಸಾಲುಗಳು ಅವಸರದ ಸಾಹಿತ್ಯ ಎನಿಸುತ್ತವೆಯೇ? ನನಗೆ ಹಾಗೆನ್ನಿಸಿತು. ಓದು ನಿಮ್ಮದು.

ಮರೆತು ಹೋದೆ ಎಂದರೆ ಮರೆತು ಹೋದೀತೇ
ಸುತ್ತಿ ಬಳಸಿ ಮತ್ತೆ ಅಲ್ಲೇ ಬರುವ ನೆನಪ ಮಾಲಿಕೆಯೇ||

ಒಂದು ಕನಸ ಹೆಸರಲಿ ಕಳೆದುಹೋದ
ರಾತ್ರಿಗಳೆಷ್ಟೋ ಇಷ್ಟಪಟ್ಟು; ಮನಸನೆಟ್ಟು.
ಕಣ್ಣ ಮುಚ್ಚಿ ಕೂತರೂ ಸಹ, ರೆಪ್ಪೆಗಡಿಯ
ಧಿಕ್ಕರಿಸಿ ದಾಟಿ ಬಂದ ಚಿತ್ರಗಳೆಷ್ಟೋ
ಹೃದಯ ಬಿಕರಿಯಾಗಿದ್ದರ ಬಗ್ಗೆ, ನನಗೇ
ಮಾಹಿತಿಯಿಲ್ಲದ್ದಕ್ಕೆ ಪರಿತಪಿಸಿದ್ದೆಷ್ಟೋ||೧||

ಇಲ್ಲಿ ಅಲ್ಲಿ ಎಲ್ಲಾ ನೀನೇ, ಯಾರೂ ಇಲ್ಲ
ಇಲ್ಲವೆಂದರೂ ಅಲ್ಲೂ ನೀನೇ, ನೀನೇ ಎಲ್ಲ
ಇಷ್ಟು ಅಷ್ಟು ಎಷ್ಟು ಎನ್ನಲಿ; ಇಂತಿಷ್ಟೇ ಎನ್ನಲು
ಅಳತೆಯುಂಟೇ, ಮನದಾಳದ ತಿಳಿಯದ ಆಳಕೆ
 ಅನಂತವೊಂದೇ ಮಿತಿಯೇ ನಿನ್ನಯ ಮೋಡಿಗೆ
ಹೋಗದಿದ್ದರೇ ಒಳಿತೇ,ಶಬ್ದಹುಡುಕುವ ಗೋಜಿಗೆ||೨||

ಒಂದು ಮನಸಿಗೆ ಒಂದೇ ಅಲ್ಲವೇ ಕನಸು;
ಎಲ್ಲ ಕನಸಲ್ಲಿಯೂ ಬರುವುದೇ ನಿನ್ನ ಮನಸೇ
ಮಾನಸ ವಿಶಾಲ, ಅನಂತವೆಲ್ಲ ಹೌದಲ್ಲ,
ನೀನೊಬ್ಬಳೇ ಹೇಗೆ ಹಬ್ಬಿ ಕುಳಿತೆಯೇ;
ನಿನ್ನಿಂದ ಅಷ್ಟಿಷ್ಟು ಸರಿ ಇದ್ದ ನನ್ನ ನೆನಪು,
ಸ್ವಾಧೀನ ತಪ್ಪುವ ಹಾಗಾಗಿ ಹೋಯಿತೇ.||೩||

Saturday, 24 September 2011

ಇವಳೇ!



ಇವಳೇ ಅವಳೇ ಇಲ್ಲಿ ಅಲ್ಲಿ ಎಲ್ಲೆಲ್ಲೂ ಇಹಪರಕೆಲ್ಲ ಮೀರಿದವಳೇ
ನೀನೆಂದರೆ, ದೇವರು ನನಗಾಗಿ ಮಾಡಿದ ಗುಣಸಮುಚ್ಛಯವೇ
ನಿನ್ನ ನೆನಪೆಂದರೆ ನಾನುತ್ತರವ ಬಯಸದ ಪ್ರಶ್ನೆಗಳ ಗುಚ್ಛವೇ ||ಪ||

ಶಬ್ದ ಸಿಗದೇ ತಡವರಿಸಿ ತೊಳಲುವುದೇ ನಿನಗೆ ಪ್ರಿಯವೇ
ಮನದ ತುಂಬ ರಂಗೇರಿಸಿದ್ದು ನಿನ್ನ ನೋಟದ ಮದರಂಗಿಯೇ
ಬರಿ ನಗೆಯಿಂದಲೇ ಎದೆಭಾರವಾಗಿಸುವುದೇ ನಿನ್ನಾಟವೇ
ಕಣ್ಣ ಮುಚ್ಚಿಯೂ ನಿನ್ನ ನೋಡುವಂತಾಗುವುದು ನಿನ್ನ ಕೃಪೆಯೇ||೧||

ನಿನ್ನ ಅನವರತ ಕನವರಿಸುತಲಿರುವುದೇ ನಿನ್ನ ಮೋಡಿಯೇ
ಏನೂ ಇರದೇ ಖುಷಿಯಾಗುವಂತಾಗುವುದೇ ನಿನ್ನ ನೆನಪೇ
ಎಲ್ಲಾ ಮರೆತು ರಾಮನ ಭಜಿಸಿದ್ದು ನಿನ್ನೊಲುಮೆಗಾಗಿಯೇ
ನನಗೇ ಗಾಬರಿಯಾಗುವಂತಾಡಿದ್ದು ನನ್ನೆದೆಯ ಕಲರವವೇ||೨||

ಎಲ್ಲಾ ಕಡೆ ನಿನ್ನನ್ನೇ ಕಂಡಂತೆ ಭ್ರಮಿಸಿದ್ದು ನನ್ನ ತಪ್ಪೇ
ತಪ್ಪು ಸರಿ ವಿವೇಚನೆ ಬದಿಗೊತ್ತಿ ಕೊರಗಿದ್ದು ನನ್ನ ವಿಧಿಯೇ
ಸೊಗಸಾದ ಸಾಂಗತ್ಯ ಭಾವಿಸಿ ಕುಣಿದಿದ್ದು ಬರಿ ಕನಸೇ
ಏನು ಮಾಡಲೆಂಬ ಅಖಂಡ ಗೊಂದಲಕೆ ನೀ ಕಾರಣವೇ||೩||

Tuesday, 30 August 2011

ನಿನಗೆ ...

ಹದವ ಮರೆತಿದೆ ಹೃದಯ,
ಬದಲಾಗಿ ಬಿಟ್ಟಿದೆ ಬದುಕು,
ಸಮಯ ಉರುಳಿದೆ ತಿಳಿಯದೇ.
ಸಾವಿರ ’ಜಿಬಿ’ಯ ಮೆದುಳ ತುಂಬ,
ನಿನ್ನ ನೆನಪಿನದೇ ಕಾರುಬಾರು.  
ಏನ ಮಾಡಲಿ ನಾ,ಎಲ್ಲಿ ಹೋಗಲಿ,
ಎಲ್ಲ ನಿನ್ನದೇ, ನನ್ನದೆಲ್ಲಾ, ಎಲ್ಲವೂ.

ಹೆಸರಲ್ಲೇ ಖುಷಿಯಿದೆ ರವ*ದಿ,
ಉಸಿರಲ್ಲೇ ಬೆರೆತಿದೆ ಮುದದಿ.
ಬರೆದಾಗಿದೆ ನನ್ನಯ ಭವಿತ ;
ಸಾವಿರ ಭಾವ ಒಮ್ಮೆಲೆ ಮೂಡಿ,
ನನ್ನೆದೆಯು ಕುಸಿದಿತ್ತಲ್ಲೇ,
ಭೂಮಿ ಭಾರವ ಹೊತ್ತಂತೆ.
ಕಳೆದು ಹೋದ ನನ್ನ ನಾನೇ
ಹುಡುಕಾಡಿದೆ ದಡ ಮುಟ್ಟದಂತೆ. 

ಯಾರು ನೀನೋ, ಏನು ಮಾಯೆಯೋ
ಏನೂ ತಿಳಿಯದಂತೆ, ಏನು ಮೋಡಿ-
ಮಾಡಿದೆಯೋ ಒಂದು ನೋಟದಲ್ಲಿ .
ನಿನಗೆಲ್ಲಿ ಗೊತ್ತು ನನ್ನೆದೆಯ ಪಾಡು,
ಮುಗಿಲು ಮುಟ್ಟಿದೆ ದಿಗಿಲು ಇಲ್ಲಿ. 
ಮರೆವನೇ ಮರೆಯುವ  ತರಹದಿ 
ಮಾಡಿ ಬಿಟ್ಟಿತ್ತು ನಿನ್ನ ನೆನಪಲೀಲೆ.

*ರವ = ಶಬ್ದ