Sunday 29 May 2011

ತಲ್ಲಣಿಸದಿರು...

ಈ post ಹುಟ್ಟಿದ್ದು ಒಂದು ತಿಂಗಳ ಮೊದಲು, ಒಂದು ಕ್ಷಣದಲ್ಲಿ ಹುಟ್ಟಿದ  ಬಾವವನ್ನು ಹಾಗೇ  ಬರೆಯಲು ತೆಗೆದುಕೊಂಡಿದ್ದು ಒಂದೆರಡು ಗಂಟೆ . ಅದರಿಂದ  ಅಲ್ಲಲ್ಲಿ ಅಪ್ರಬುಧ್ಧ ಎನ್ನಿಸಬಹುದಾದರೂ ಇದನ್ನು ಇಲ್ಲಿ publish ಮಾಡದೇ ಇರಲಾರದಾದೆ . ಒಂದು ಕ್ಷಣದ ಕೋಪವನ್ನು ತಡೆಯಲಾರದೆ ಮುಂದೆ ಪರಿತಪಿಸುವುದರ ಬದಲು ....

ಸಿಟ್ಟು ಮಾಡಬೇಡವೇ ಮನವೇ, ಸುಮ್ಮನಿರು
ಕೆಟ್ಟ ಆವೇಶ ಯಾಕೆ ನಿನಗೆ ಮಾತಿನಲ್ಲಿ
ಪುಟ್ಟ ಕಾರಣವೇ ಸಾಕೇ, ನಿನ್ನ
ಕಟ್ಟು ತಪ್ಪಿ ಹೀಗೆ ಹರಿಯಗೊಡಲು ||


ಕೊಡವು ಬಿದ್ದಿತ್ತು ಮುಂಗುಸಿಯ ಮೇಲೆ
ಒಡನೆ ಸತ್ತಿತ್ತು ತನ್ನದಲ್ಲದ ತಪ್ಪಿಗೆ
ಒಡೆದಿತ್ತು ಹಾಲು ಮರಳಿ ಸರಿಯಾಗದಂತೆ
ಒಂದು ನಿಮಿಷದಾವೇಶದ ಗುರುತಿಗೆ


ಕೋಪ ಮಾಡಿಕೊಳ್ಳಲಾರೆ ಇನ್ನು ಎಂದೆ
ತಾಪ ತಡೆದುಕೊಂಬೆ ಒಳಗೆ ಎಂದೆ
ಪಾಪ! ಮರೆತುಹೋಯಿತೆ ನಿನಗೆ ಅಲ್ಲೇ
ದೀಪ ಬೆಂಕಿಯಾಯ್ತೇ ಗಾಳಿ ಸಿಕ್ಕಿದಲ್ಲೇ


ಒತ್ತರಿಸಿ ಬಂದಿತ್ತಲ್ಲೇ ರೋಷ, ಪಿತ್ತ ಕರಗಿ
ಚಿತ್ತ ಮರುಗಿತ್ತಲ್ಲೇ ದುಡುಕಿಗೆ, ಹುಡುಗುಬುದ್ಧಿಗೆ
ಎತ್ತ ಹೋದರೋ ನಿನ್ನ ದುಡುಕಿಗೆ ಬೇಸರಿಸಿ,
ಪತ್ತೆ ಇಲ್ಲದ ರೀತಿಯಲ್ಲಿ ಅನಂತದೊಳಗೆ

Friday 20 May 2011

ಒಬ್ಬ ರಾಘವೇಂದ್ರ ಹೆಗಡೆಯ ನೆನಪಿಗೆ

ಹೌದಲ್ಲ, ಆಗಲೇ ನಾಲ್ಕು ವರ್ಷಗಳು ಆಗಿ ಹೋದವು. ಹೀಗೆ ಇದೇ ಮೇ ಕಳೆದು ಮಳೆ  ಬರಲು ಸುರುವಾಗುವ ಸಮಯದಲ್ಲಿಯೇ,  ಒಂದು ದಿನ ಗೆಳೆಯ ಗುರು ಭಟ್ಟನಿಗೆ ಕರೆ ಮಾಡಿದಾಗ ಆ ಘೋರ ತಿಳಿದಿದ್ದು. ಅವನು ಹೇಳಿದ್ದನ್ನು ಅರಗಿಸಿಕೊಳ್ಳುವುದಿರಲಿ ನಂಬಲೇ ಸಾಧ್ಯವಾಗಲಾರದಾಯ್ತು. ಯಾವಾಗಲೂ ಮಾಡುವಂತೆ ಏನೋ ಒಂದು prank  ಮಾಡುತ್ತಿರಬಹುದೇನೋ ಎಂದುಕೊಂಡೆ, ಹಾಗೆ ಆಗಿದ್ದರೆ ಒಳ್ಳೆಯದಿತ್ತು. ಆದರೆ ಬದುಕು ಹಾಗೇ, ಎಲ್ಲವೂ ನಾವು ಬಯಸಿದ ಹಾಗೇ ಆದರೆ ಕ್ರೂರ ವಿಧಿಗೆ ಸಂತೋಷವೆಲ್ಲಿ? ಗುರು ನಮ್ಮ ರಾಘು ಇದ್ನಲ್ಲ, ಅವನು ಮೊನ್ನೆ ಹೋಗ್ಬಿಟ್ಟ ಅಂತೆಎಂದಾಗ, ’ಹೇಗೆ?’ ಎಂದು ಕೇಳಬೇಕೆಂಬಷ್ಟರ  ಮಟ್ಟಿಗೂ ಪ್ರಜ್ಞೆ ಇರದಂತೆ ಗರ ಬಡಿದ ಹಾಗಾಗಿಹೋಗಿತ್ತು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಭಟ್ಟನೇ ಕರುಳಿನಲ್ಲೇನೋ ತೊಂದರೆಯಿತ್ತಂತೆ, ಹೊಟ್ಟೆ ನೋವು ಎಂದು ಆಗಾಗ ಹೇಳುತ್ತಿದ್ದನಲ್ಲ, ಅದೇ ಇದ್ದಿರಬಹುದು.   ಎಂದ ಎನ್ನುವಷ್ಟಕ್ಕೆ ಒಂದು ಅಧ್ಯಾಯದ ಅಂತ್ಯವಾಗುತ್ತದೆ. 
          ಅದಕ್ಕಿಂತ ಒಂದು ವರ್ಷ ಹಿಂದಕ್ಕೆ ಹೋಗೋಣ. ನಾನು ೧ ಪಿ.ಯು. ಗೆ ಹಿಂದೆ ಮುಂದೆ ಗೊತ್ತಿಲ್ಲದ ಉಜಿರೆಗೆ ಹೋಗಿ ಸಿದ್ಧವನಕ್ಕೆ ( ನಮ್ಮ ಹಾಸ್ಟೆಲ್ ಹೆಸರದು) ಕಾಲಿಟ್ಟಿದ್ದೆ. ನಾನು ಬಂದಿದ್ದೇ ಲೇಟು, ಉಳಿದವರೆಲ್ಲ ಮೊದಲೇ ಬಂದಿದ್ದರಾಗಿ, ಹೊಸ ಪ್ರದೇಶದಲ್ಲಿ ಇಬ್ಬರು ಅಪರಿಚಿತರು ಮೊದಲು ಭೇಟಿಯಾದ ಕೂಡಲೇ ಹುಟ್ಟುವ ಗೆಳೆತನ ಮೂಡುವ ಅವಕಾಶ ಹಾಗೆ ತಪ್ಪಿ ಹೋಗಿತ್ತು. ಅದರ ಮೇಲೆ ಇವನು ಟಾಪರ್ ಅಂತೋಎಂಬ ಆಶ್ಚರ್ಯ, ಉದ್ವೇಗ ಭರಿತ  ಕೌತುಕ, ಹಾಗೂ ಇವನು ಸಾಮಾನ್ಯರ ಜೊತೆಗೆ ಹೊಂದಿಕೊಳ್ಳಲಾರದ ಭಿನ್ನತಳಿ ಎಂಬ ಪೂರ್ವಾಗ್ರಹದಿಂದ ಎಷ್ಟೋ ಹುಡುಗರು ಅಷ್ಟು ಹೊತ್ತಿಗಾಗಲೇ ಪೀಡಿತರಾಗಿದ್ದರೇನೋ ಎಂಬಷ್ಟರ ಮಟ್ಟಿಗೆ ನನಗೆ ರೂಮಿಗೆ ಬಂದ ಒಂದು ಗಂಟೆಯೊಳಗೆ ಏಕಾಂಗಿತನ ಕಾಡತೊಡಗಿತ್ತು. ಯಾರೂ ಮಾತನಾಡಲೂ ಸಿಗದ ಹಾಗಾಗಿ ಸುಮ್ಮನೇ ಕುಳಿತಿದ್ದೆ. ಆಗ ಯಾವ ಮಾಯೆಯಿಂದ ಬಂದೆಯೋ ನೀನು, ಅದೇ ರಭಸ, ಅದೇ ದಾಪುಗಾಲುಗಳು, ನಡೆದರೆ ನೆಲವೇ ಶಬ್ದ ಮಾಡುವ ಕುಳ್ಳ, ಬೊಜ್ಜಲ್ಲದಿದ್ದರೂ ಬೊಜ್ಜೆನಿಸುವ ದಪ್ಪನೆಯ ಶರೀರ. ಮೊದಲಿದ್ದ ಅಲ್ಪ ಪರಿಚಯವೇ ಸಾಕಾಗಿ ನನ್ನ ಬೆನ್ನ ಮೇಲೊಂದು ಗುದ್ದು ಬಿದ್ದಿತ್ತು. ಅಗಲಿದ್ದ ಜೀವದ ಗೆಳೆಯರ ಪುನರ್ಮಿಲನದಲ್ಲಿ ಮಾತನಾಡಹುದಾದ ಶೈಲಿ. ಸರ್ರನೇ ನಿನ್ನ ರೂಮಿಗೆ ಕರೆದುಕೊಂಡು ಹೋಗಿ ನಿನ್ನ ಅಮ್ಮ ಮಾಡಿಕೊಟ್ಟಿದ್ದ ಏನೋ ಕಜ್ಜಾಯವನ್ನು, ನನಗೇ ಕೊಡಲು ನಿಮ್ಮಮ್ಮ ಹೇಳಿದ್ದರೇನೋ ಎಂಬಂತೆ ಕೊಟ್ಟೆ. ಸಂಜೆ ಬಂದು ನಿನ್ನ ಬ್ಯಾಗನ್ನು ನೋಡಿಕೊಳ್ಳುತ್ತೇನೆ ಎಂಬ ಭರವಸೆ ಕೊಟ್ಟೆ. ನಿನ್ನ ಶೈಲಿಯೇ ಹಾಗೆ, ಯಾವ ಪೀಠಿಕೆಗೆ ಆಗಲೀ, ಯಾವ formalityಗೆ ಆಗಲೀ ಅವಕಾಶವಿಲ್ಲ.ಎಲ್ಲವೂ ನೇರಾನೇರ.
          ಎರಡು ಫ಼್ಲೋರ್ ಗಳ ಅಂತರ ನಮ್ಮಿಬ್ಬರ ರೂಮುಗಳ ಮಧ್ಯೆ ಇತ್ತಾದರೂ ಅದೇನೂ ಅಷ್ಟರ ಮಟ್ಟಿಗಿನ ಅಂತರ ಎನಿಸಲಿಲ್ಲ. ಪ್ರತೀ ಸಲವೂ ನೀನು ಬರುತ್ತಿದ್ದೆ ಏನೋ ಒಂದು ವಿಷಯ ಇಟ್ಟುಕೊಂಡು. ಹೊಸಿಲ ಹೊರಗಿನಿಂದಲೇ ಗಟ್ಟಿಯಾಗಿ ಏನೋ ಒಂದನ್ನು ಕೂಗಿಕೊಂಡು ಬರುವ ರೀತಿಗೇ ಇದು ರಾಘವೇಂದ್ರನೇ ಎಂದು ಗೊತ್ತಾಗುತ್ತಿತ್ತು, ತುಡುಗು ದನಕ್ಕೆ ಕಟ್ಟಿದ ಗಂಟೆಯ ಶಬ್ದದ ಹಾಗೆ, ಆ ಹೋಲಿಕೆಯನ್ನೂ ನೀನೇ ಕೊಟ್ಟಿದ್ದು. ಕೆಲವೊಮ್ಮೆ ಕಿರಿಕಿರಿಯಾಗುವ ಹಾಗಾಗುತ್ತಿತ್ತಾದರೂ ಹಾಗೆ ಮಾಡಲು ಗೆಳೆಯನಿಗೆ ಮಾತ್ರ ಹಕ್ಕಿದೆಯಲ್ಲವೇ. ಅದರ ಬಗ್ಗೇನೂ ತಕರಾರಿಲ್ಲ ಬಿಡು. ನನಗಿನ್ನೂ ನೆನಪಿದೆ, ಪ್ರತೀ ಶನಿವಾರವೂ ಹಾಸ್ಟೆಲ್ ನಲ್ಲಿ ತೋರಿಸುತ್ತಿದ್ದ ಫಿಲಂಗೆ ಹೋಗುವ ಮುಂಚೆ ನಮ್ಮ ರೂಮಿಗೆ ಬರುವುದು, ನನಗೆ ಬರಲು ಹೇಳುವುದು, ನಾನು ಇಷ್ಟವಿಲ್ಲ ಎಂದು ಹೇಳುವುದು, ಆದರೂ ಎಳೆದುಕೊಂಡು ಹೋಗುವುದು, ನಾನಲ್ಲೇ ನಿದ್ದೆ ಮಾಡುವುದು, ನಿನಗೂ ನೋಡಲು ಮನಸ್ಸು ಬಾರದೇ ಎದ್ದು ಬರುವುದು, ಇದು ಎಷ್ಟುಬಾರಿಯೋ? ಲೆಕ್ಕ ಇಟ್ಟವರಾರು. ಕೊನೆಕೊನೆಗೆ ನಿನಗೇ ಬೇಜಾರಾಗಿ ನೀನೂ ಹೋಗುವುದನ್ನು ನಿಲ್ಲಿಸಿದೆ , atleast ನನ್ನನ್ನು ಕರೆಯುವುದನ್ನು ನಿಲ್ಲಿಸಿದೆ. ಹೋಗಲಿ ಬಿಡು.
          ಎಷ್ಟೋ ನೆನಪುಗಳು, ಆಡಿಕೊಂಡ ಎಷ್ಟೋ ಮಾತುಗಳು , ಆಡದೇ ಹೋದ ಎಷ್ಟೋ ಯೋಚನೆಗಳು. ಒಂದೊಂದು ನೆನಪೂ ಚಿನ್ನದ ಬೆಲೆಯದ್ದು, ಬೆಲೆಯಿಡಲು ಸಾಧ್ಯವಾದರೆ. ಏನೋ tease ಮಾಡಿದರೆ ಅದನ್ನೇ ಸೀರಿಯಸ್ ಆಗಿ ತೆಗೆದುಕೊಂಡು ೨೫ ಡಿಪ್ಸ್ ನ್ನು ನಿತ್ತ ನೆಲದಲ್ಲಿ ಹೊಡೆದು ತೋರಿಸಿದ್ದು ಆಗ ಆಶ್ಚರ್ಯವೆನಿಸಿದರೂ ಈಗ funny ಅನಿಸುತ್ತದೆ. ಯಾವಗಲೋ ಒಮ್ಮೆ NTSE ಟ್ರೇನಿಂಗ್ ಸಮಯದಲ್ಲಿ ಕೆಮಿಸ್ಟ್ರಿ ಕ್ಲಾಸಿನಲ್ಲಿ ಆಯ್ಕೆಗಳನ್ನು ಕೊಡುವ ಮೊದಲೇ ಉತ್ತರ ಸಿಆಯ್ಕೆ ಎಂದು ಹೇಳುವಷ್ಟರ ಮಟ್ಟಿಗೆ ನಿದ್ರೆ ಮಾಡುತ್ತಿದ್ದ ನನ್ನ ಸಾಮರ್ಥ್ಯವನ್ನು ಆಡಿಕೊಳ್ಳುತ್ತಿದ್ದ ಬಗೆ ನನಗೇ ನಗೆ ತರಿಸುತ್ತದೆ ಎಂದರೆ ಅದು ಸುಳ್ಳಲ್ಲ. ರೀಡಿಂಗ್ ಟೇಬಲ್ ಮೇಲೆ ಅಪ್ಪ ಅಮ್ಮನ ಒಂದು ಛಾಯಾಚಿತ್ರ ಇಟ್ಟುಕೊಂಡು, ಪ್ರತೀ ಸಲ ಓದಲು ಕೂರುವ ಮೊದಲು ನಮಸ್ಕರಿಸುತ್ತಿದ್ದ ನಿನ್ನ ಅಭ್ಯಾಸವನ್ನು ನಾನು ಆಡಿಕೊಂಡಿದ್ದು , ನೀನು ಉರಿದುಕೊಂಡಿದ್ದು , ನಾನು ಕ್ಷಮೆ ಕೇಳಲೂ ಹಿಂಜರಿದಿದ್ದು , ಇವೆಲ್ಲಾ ನನ್ನ ಹುಡುಗಾಟದ ಅತಿರೇಕ ಎಂದು ಇವತ್ತು ಎನ್ನಿಸುತ್ತದೆ. ಇದೆಲ್ಲದರ ಮಧ್ಯದಲ್ಲಿ ನಿನಗೆ ಆವಾಗಾವಾಗ ಬರುತ್ತಿದ್ದ ಹೊಟ್ಟೆನೋವು ಗಮನಕ್ಕೆ ಬರದಂತೆ ಹೋಯಿತೇ, ಅಥವಾ ಹಾಗೆ ತೋರಿಸಿಕೊಂಡು ಸಂತಾಪ ಹುಟ್ಟಿಸಿಕೊಳ್ಳುವುದು ನಿನ್ನ ಜಾಯಮಾನಕ್ಕೆ ಆಗಿಬಾರದು ಎಂದು ಸುಮ್ಮನಾದೆಯೇ. ಏನೋ ಹೀಗೇ ಅದೊಂದು ಹದದಲ್ಲಿ ಹೋಗುತ್ತಿತ್ತು ಬದುಕು ಆ ಸಂಜೆಯವರೆಗೆ. ಅದೇನೋ ಚಿಕ್ಕ ಮಾತೇ ದೊಡ್ಡ ವಾದವಾಗಿ ಮನಸ್ಸೆಲ್ಲಾ ಹುಳಿಹುಳಿಯಾಗಿದ್ದು ಒಂದು ಹಂತ. ಮತ್ತೆ ಎದುರಲ್ಲಿ ಸಿಕ್ಕಾಗ ಪರಿಚಯದ ನಗೆ ನಕ್ಕು ಮಾತನಾಡುವಷ್ಟು ಆತ್ಮೀಯತೆ ಮತ್ತೆ ಮೂಡಿತಾದರೂ ಅದು ಹೃದಯದಿಂದ ಬಂದಿದ್ದಲ್ಲ ಎಂದು ಇಬ್ಬರಿಗೂ ಗೊತ್ತಾಗುತ್ತಿತ್ತು. ಮತ್ತೆ ಅದೇ ಭಾವ ಮೂಡಲು ಸಮಯ ಬೇಕಾಗುತ್ತಿತ್ತು. ನಾನು ಕಾಯಲು ತಯಾರಿದ್ದೆ. ಆದರೆ ಕಾಯಲು ನೀನು ಬಹಳ ದಿನ ಉಳಿಯಲಿಲ್ಲವಲ್ಲ.
          ಹಾಗೆ ಒಂದು ವರ್ಷದ ಕೊನೆಗೆ ಫಲಿತಾಂಶ ಬಂದಿತ್ತು. ಆಶ್ಚರ್ಯಕರವಾಗಿ ಸಿದ್ಧವನದ ಎಲ್ಲಾ ಘಟಾನುಘಟಿಗಳ ಮಧ್ಯೆ ಒಬ್ಬ ರಾಘವೇಂದ್ರ ಹೆಗಡೆ ಫಸ್ಟ್ ಬಂದಿದ್ದ. ಯಾರು ಊಹಿಸಿದ್ದರೋ ಬಿಟ್ಟಿದ್ದರೋ ಗೊತ್ತಿಲ್ಲ, ಈ ಒಬ್ಬ ರಾಘವೇಂದ್ರ ಹೆಗಡೆ ಭಯಂಕರ ಕೂಲ್ ಆಗಿದ್ದ. ಎಷ್ಟು ಜನ ಶುಭ ಹಾರೈಸಿದ್ದರೋ, ಎಷ್ಟು ಜನ ಮನದಲ್ಲೇ ಮುಲುಗಿದರೋ ಗೊತ್ತಿಲ್ಲ , ನಾನಂತೂ ಮುಂದಿನ ವರ್ಷ ನೋಡಿಕೊಳ್ಳುತ್ತೇನೆಂಬ ಸ್ಪೂರ್ತಿ ಪಡೆದಿದ್ದೆ. ನಿಜವೆಂದರೆ ನಾನು ಖುಷಿ ಪಟ್ಟಿದ್ದೆ, ನಾನಂತೂ ಆ ಸ್ಥಾನವನ್ನೂ ಪಡೆಯುವುದನ್ನು ಬಯಸುತ್ತಿರಲಿಲ್ಲವಾಗಿ ಒಬ್ಬ ನಮ್ಮೂರಿನವನು ಫಸ್ಟ್ ಬಂದ ಎಂಬ ಹೆಮ್ಮೆ ಹೆಗಲೇರಿತ್ತು. ಹೆಗಲೇರಿದ ಹೆಮ್ಮೆ ಮನಸ್ಸಿನಲ್ಲಿಳಿಯುವ ಮೊದಲೇ ನಿನ್ನ ಕರುಳು ಕೈ ಕೊಟ್ಟಿತ್ತು. ಮಾಡಿದ ಆಪರೇಶನ್ ಕೂಡ ಕೈ ಕೊಟ್ಟು ನೀನು ಎಲ್ಲರನ್ನು ಬಿಟ್ಟು ಅನಂತವನ್ನು ಸೇರಿದ್ದೆ.
         
ಯಾವುದೇ ವಸ್ತುವಿರಲಿ, ವ್ಯಕ್ತಿಯಿರಲಿ , ಅದರ ಅಸ್ತಿತ್ವದ ಮಹತ್ವ ಅದು ಇರುವಾಗ ತಿಳಿಯಲಾರದು. ಅದನ್ನು ಕಳೆದುಕೊಂಡ ಮೆಲೆಯೇ ಅದನ್ನು ಎಷ್ಟು ಕಳೆದುಕೊಂಡಿದ್ದೇವೆ ಎಂಬುದರ ಅಂದಾಜು ಸಿಗುವುದು. ಈಗ ಹೀಗೇ ಒಮ್ಮೆ ಹಿಂತಿರುಗಿ ನೋಡಿಕೊಂಡರೆ ಅದೆಷ್ಟು ಸವಿಘಳಿಗೆಗಳನ್ನು ಒಂದು ಅಹಂನ ಹೆಸರಿನಲ್ಲಿ ಕಳೆಯಗೊಟ್ಟೆವು ಎನಿಸುತ್ತದೆ. ಆ ಅಪ್ರಬುದ್ಧತೆಗೆ ,ಮರುಕ ಹುಟ್ಟುತ್ತದೆ. ಹಾಗೆಂದೂ ನೀನೇ ನನ್ನ 'best friend' ಆಗಿದ್ದೆ ಎಂದರೆ ಅದು ಸುಳ್ಳಾಗಬಹುದೇನೋ, ಆದರೆ ನಿನ್ನನ್ನು ಇಂದಿಗೂ miss ಮಾಡಿಕೊಳ್ಳುವಷ್ಟರ ಮಟ್ಟಿಗೆ ನಾನು ನಿನ್ನನ್ನು ನೆನಪಿಟ್ಟಿದ್ದೇನೆ, ಹಾಗೂ  ಸಮಯಕ್ಕೆ ಏನನ್ನಾದರೂ ಮರೆಸುವ ಶಕ್ತಿಯಿದೆ ಎಂಬುದು ಎಲ್ಲ ಸರಿಯೂ ಸತ್ಯವಾಗಬೇಕೆಂದೇನೂ ಇಲ್ಲ ಎಂದು ಹೇಳುವುದಷ್ಟನ್ನು ಈ ಲೇಖನ ಮಾಡಬಲ್ಲುದಾದರೆ ಅಲ್ಲಿಗೆ ಇದು ಸಾರ್ಥಕ್ಯವನ್ನು ಕಂಡೀತು.

Thursday 5 May 2011

ಅನಾಮಿಕಾ

( ಹೆಸರೇನೆಂದಿಡಲಿ ಎಂದು ತಿಳಿಯದಿದ್ದುದರಿಂದ ಅನಾಮಿಕಎಂಬ ಹೆಸರನ್ನು ಬಳಸುತ್ತಿದ್ದೇನಾಗಲೀ , ಈ ಹೆಸರಿಗೆ ಬೇರಾವ ಅರ್ಥವೂ ಇಲ್ಲ . ಸೂಕ್ತ ಹೆಸರನ್ನು ಸೂಚಿಸಿದರೆ ಸಂತೋಷ , ಹೆಸರೇ ಇಲ್ಲದೇ ಹೋದರೂ ಸಂತೋಷ , ಅಷ್ಟಕ್ಕೂ ಹೆಸರಿನಲ್ಲೇನಿದೆ’ )


ನಿನಗಾಗೇ ಪರಿತಪಿಸುವೆ ನಾ, ನನ್ನಲ್ಲೇ ಒಳಗೊಳಗೆ

ಹೊರಬಾರದೆ ನಲುಗುತಿದೆ ಪರಿಚಯದ ಮುಗುಳುನಗೆ


ಮರೆವನೇ ಮರೆಸುವ ನೀನು ಮರೆಯದಮರ ನೆನಪು

ನಿನ್ನ ಹೆಸರು ಮಾತ್ರ ಸಾಕು ,ಏನು ಪುಳಕ ಏನು ಹುರುಪು

ಚಿತ್ತಭಿತ್ತಿಯಲಿ ಕಾದು ಕೆತ್ತಿರುವೆ ನಿನ್ನಯ ರಮ್ಯಚಿತ್ರ

ಕಂಬನಿಗೊದ್ದೆಯಾಗದೇ ಉಳಿದಿದೆ ನನ್ನ ಪ್ರೇಮಪತ್ರ


ಭಿನ್ನವೆಲ್ಲಿಯದು ಮುನ್ನ ಮರೆತಿಹುದು ನಿನ್ನ ಇರುವಿನಲ್ಲಿ

ನಿನ್ನೆ ಮರಳುವುದು ನಾಳೆ ಬೆಳಗುವುದು ಕಣ್ಣ ನೋಟದಲ್ಲಿ

ನಿನ್ನ ಅತಿಮಾನವ ಹೊಳಪಿನೆದುರು ಬಿಳುಪೇ ಕಡುಗಪ್ಪು

ಅನ್ನ ಸೇರದು, ಹಸಿವು ಮೂಡದು ಏನು ತಪ್ಪು ಯಾರದೊಪ್ಪು


ಯಶವು ಸಿಕ್ಕೀತೇ, ಗುರಿಯ ಮುಟ್ಟೀತೇ ಈ ಒಂದು ಪ್ರೇಮಸುಧೆ

ವಶವು ನಾನಿನಗೆ ನಿತ್ತ ನೆಲದಲ್ಲೇ; ಉತ್ತರವು ಮೂಡಿರದೆ

ಎತ್ತ ನೋಡಿದರತ್ತ ಸುತ್ತ ಮುತ್ತೆಲ್ಲ ಬೆಳಗಿತ್ತು ನಿನ್ನ ಬಿಂಬ

ಕಣ್ಣು ಮುಚ್ಚಿದಡೇನು ಒಳಗಿರುವೆ ನೀನಲ್ಲೇ ಮನದ ತುಂಬ