Wednesday 28 September 2011

ನೆನಪೇ



ಭಾವ ಮಡುಗಟ್ಟಿ, ಇನ್ನು ತಡೆಯಲಾರದಾದಂತಾಗ ಆಗುವುದೇ ಭಾವಪ್ರವಾಹ, ಇಲ್ಲಿ ಇರುವುದು ಕೇವಲ ಭಾವಸ್ರಾವವಷ್ಟೇ. ಕೆಲವೊಮ್ಮೆ ಸಿಗದ ಶಬ್ದಕ್ಕೋಸ್ಕರ ತಡಕಾಡಿ ಸುಳ್ಳಾಡಬಹುದೇನೋ, ಆದರೆ ಒಂದು ಭಾವಕ್ಕೆ ದ್ರೋಹ ಬಗೆಯಲಾಗದು.  ಇದು ಈ ಕವನ ಸರಣಿಯ ಕೊನೆಯ ಕವಿತೆ. ಅಂಕಣ, ಲೇಖನ , ಕಥೆಗಳನ್ನು ಬರೆಯಲು ಬೇಕಾಗದೇ ಹೋಗುವ ಸ್ಪೂರ್ತಿಯ ಅವಶ್ಯಕತೆ ಕವನಕ್ಕೆ ಬೇಕೇ? ಏನೇ ಇರಲಿ, ’ಅನಾಮಿಕಾ’ದಿಂದ ಪ್ರಾರಂಭಿಸಿ ’ನಿನಗೆ’ ಎಂದು ಭಾವಾರ್ಪಿಸಿ, ಒಂದು ’ಸ್ವಗತ’ ದಲ್ಲಿ ಉಮ್ಮಳಿಸಿ , ’ಇವಳೇ’ ಎಂದು ಕನವರಿಸಿ, ’ನೆನಪೇ’ದಲ್ಲಿ ನಿಲ್ಲುತ್ತಿದೆ. ಆದಷ್ಟು ಬೇಗ ಮುಗಿಸಬೇಕೆಂದುಕೊಂಡಿದ್ದರಿಂದ ಈ ಪದ್ಯದ ಕೊನೆಯ ಸಾಲುಗಳು ಅವಸರದ ಸಾಹಿತ್ಯ ಎನಿಸುತ್ತವೆಯೇ? ನನಗೆ ಹಾಗೆನ್ನಿಸಿತು. ಓದು ನಿಮ್ಮದು.

ಮರೆತು ಹೋದೆ ಎಂದರೆ ಮರೆತು ಹೋದೀತೇ
ಸುತ್ತಿ ಬಳಸಿ ಮತ್ತೆ ಅಲ್ಲೇ ಬರುವ ನೆನಪ ಮಾಲಿಕೆಯೇ||

ಒಂದು ಕನಸ ಹೆಸರಲಿ ಕಳೆದುಹೋದ
ರಾತ್ರಿಗಳೆಷ್ಟೋ ಇಷ್ಟಪಟ್ಟು; ಮನಸನೆಟ್ಟು.
ಕಣ್ಣ ಮುಚ್ಚಿ ಕೂತರೂ ಸಹ, ರೆಪ್ಪೆಗಡಿಯ
ಧಿಕ್ಕರಿಸಿ ದಾಟಿ ಬಂದ ಚಿತ್ರಗಳೆಷ್ಟೋ
ಹೃದಯ ಬಿಕರಿಯಾಗಿದ್ದರ ಬಗ್ಗೆ, ನನಗೇ
ಮಾಹಿತಿಯಿಲ್ಲದ್ದಕ್ಕೆ ಪರಿತಪಿಸಿದ್ದೆಷ್ಟೋ||೧||

ಇಲ್ಲಿ ಅಲ್ಲಿ ಎಲ್ಲಾ ನೀನೇ, ಯಾರೂ ಇಲ್ಲ
ಇಲ್ಲವೆಂದರೂ ಅಲ್ಲೂ ನೀನೇ, ನೀನೇ ಎಲ್ಲ
ಇಷ್ಟು ಅಷ್ಟು ಎಷ್ಟು ಎನ್ನಲಿ; ಇಂತಿಷ್ಟೇ ಎನ್ನಲು
ಅಳತೆಯುಂಟೇ, ಮನದಾಳದ ತಿಳಿಯದ ಆಳಕೆ
 ಅನಂತವೊಂದೇ ಮಿತಿಯೇ ನಿನ್ನಯ ಮೋಡಿಗೆ
ಹೋಗದಿದ್ದರೇ ಒಳಿತೇ,ಶಬ್ದಹುಡುಕುವ ಗೋಜಿಗೆ||೨||

ಒಂದು ಮನಸಿಗೆ ಒಂದೇ ಅಲ್ಲವೇ ಕನಸು;
ಎಲ್ಲ ಕನಸಲ್ಲಿಯೂ ಬರುವುದೇ ನಿನ್ನ ಮನಸೇ
ಮಾನಸ ವಿಶಾಲ, ಅನಂತವೆಲ್ಲ ಹೌದಲ್ಲ,
ನೀನೊಬ್ಬಳೇ ಹೇಗೆ ಹಬ್ಬಿ ಕುಳಿತೆಯೇ;
ನಿನ್ನಿಂದ ಅಷ್ಟಿಷ್ಟು ಸರಿ ಇದ್ದ ನನ್ನ ನೆನಪು,
ಸ್ವಾಧೀನ ತಪ್ಪುವ ಹಾಗಾಗಿ ಹೋಯಿತೇ.||೩||

Saturday 24 September 2011

ಇವಳೇ!



ಇವಳೇ ಅವಳೇ ಇಲ್ಲಿ ಅಲ್ಲಿ ಎಲ್ಲೆಲ್ಲೂ ಇಹಪರಕೆಲ್ಲ ಮೀರಿದವಳೇ
ನೀನೆಂದರೆ, ದೇವರು ನನಗಾಗಿ ಮಾಡಿದ ಗುಣಸಮುಚ್ಛಯವೇ
ನಿನ್ನ ನೆನಪೆಂದರೆ ನಾನುತ್ತರವ ಬಯಸದ ಪ್ರಶ್ನೆಗಳ ಗುಚ್ಛವೇ ||ಪ||

ಶಬ್ದ ಸಿಗದೇ ತಡವರಿಸಿ ತೊಳಲುವುದೇ ನಿನಗೆ ಪ್ರಿಯವೇ
ಮನದ ತುಂಬ ರಂಗೇರಿಸಿದ್ದು ನಿನ್ನ ನೋಟದ ಮದರಂಗಿಯೇ
ಬರಿ ನಗೆಯಿಂದಲೇ ಎದೆಭಾರವಾಗಿಸುವುದೇ ನಿನ್ನಾಟವೇ
ಕಣ್ಣ ಮುಚ್ಚಿಯೂ ನಿನ್ನ ನೋಡುವಂತಾಗುವುದು ನಿನ್ನ ಕೃಪೆಯೇ||೧||

ನಿನ್ನ ಅನವರತ ಕನವರಿಸುತಲಿರುವುದೇ ನಿನ್ನ ಮೋಡಿಯೇ
ಏನೂ ಇರದೇ ಖುಷಿಯಾಗುವಂತಾಗುವುದೇ ನಿನ್ನ ನೆನಪೇ
ಎಲ್ಲಾ ಮರೆತು ರಾಮನ ಭಜಿಸಿದ್ದು ನಿನ್ನೊಲುಮೆಗಾಗಿಯೇ
ನನಗೇ ಗಾಬರಿಯಾಗುವಂತಾಡಿದ್ದು ನನ್ನೆದೆಯ ಕಲರವವೇ||೨||

ಎಲ್ಲಾ ಕಡೆ ನಿನ್ನನ್ನೇ ಕಂಡಂತೆ ಭ್ರಮಿಸಿದ್ದು ನನ್ನ ತಪ್ಪೇ
ತಪ್ಪು ಸರಿ ವಿವೇಚನೆ ಬದಿಗೊತ್ತಿ ಕೊರಗಿದ್ದು ನನ್ನ ವಿಧಿಯೇ
ಸೊಗಸಾದ ಸಾಂಗತ್ಯ ಭಾವಿಸಿ ಕುಣಿದಿದ್ದು ಬರಿ ಕನಸೇ
ಏನು ಮಾಡಲೆಂಬ ಅಖಂಡ ಗೊಂದಲಕೆ ನೀ ಕಾರಣವೇ||೩||

Sunday 11 September 2011

ಗುರು ದೇವೋ ಭವ



ಹೌದು! ಒಂದು ವಾರದ ಹಿಂದೆ ಇದನ್ನು ಪ್ರಕಟಿಸಿದ್ದರೆ ಸಂದರ್ಭಕ್ಕೆ ಸೂಕ್ತವಾಗಿರುತ್ತಿತ್ತು, ಆದರೆ ನಾನಾ ಕಾರಣಗಳಿಂದಾಗಿ ಅದು ಸಾಧ್ಯವಾಗದೇ ಹೀಗೆ ಒಂದು ವಾರದ ಮುಂದೂಡಿಕೆಗೆ ಕ್ಷಮೆ ಕೇಳಿಕೊಂಡು ಈ ಅಂಕಣವನ್ನು ಬರೆಯುತ್ತಿದ್ದೇನೆ.
ಅಕ್ಷರವೊಂದನ್ನು ಕಲಿಸಿದಾತನೂ ಗುರು ಎಂಬ ಕವಿವಾಣಿಯೇ ಹೇಳುವಂತೆ ಗುರು ಎಂಬ ಶಬ್ದದ ವ್ಯಾಪ್ತಿ, ಅದರ ಕೀರ್ತಿ ದೊಡ್ಡದು. ಎಲ್ಲರಿಂದಲೂ ಒಂದಿಲ್ಲೊಂದು ರೀತಿಯಲ್ಲಿ ನಾವು ಏನನ್ನಾದರೂ ಕಲಿಯುವುದರಿಂದ ಎಲ್ಲರೂ ಗುರುಮಾನ್ಯರೇ. ಹಾಗಿರುವಾಗ ಜೀವನದಲ್ಲಿ ಮರೆಯದಂತಹ ಶಿಕ್ಷಕರಾಗಿ, ಬದುಕನ್ನು ಕಲಿಸಿಕೊಟ್ಟ ಒಂದಿಷ್ಟು ಜನ ಶಿಕ್ಷಕರ ಬಗ್ಗೆ ಕೃತಜ್ಞತೆಯ ಎರಡು ಮಾತನಾಡುವುದಷ್ಟು ಸಾಧ್ಯವಾದರೆ ನಾನು ಧನ್ಯ.
ಎಲ್ಲರಿಗೂ ಸಾರ್ವತ್ರಿಕವಾಗಿ ಮೊದಲ ಗುರುವೆಂದರೆ ತಾಯಿಯೇ. ಅಂಬೆಗಾಲಿಕ್ಕುವುದರಿಂದ ಹಿಡಿದು ಅಕ್ಷರಾಭ್ಯಾಸ ಮಾಡುವುದರವರೆಗೆ ಎಲ್ಲವನ್ನೂ ಕೈ ಹಿಡಿದು ತಿದ್ದಿ ತೀಡಿ ಕಲಿಸುವುದು ಅಮ್ಮನೇ. ಆದರೆ ಇಲ್ಲಿ ಮನೆಯಲ್ಲಿ ಮರೆಯಾಗಿಯೇ ಉಳಿಯುವ ಗುರುವಿನ ಪಾತ್ರ ಅಪ್ಪನದ್ದು. ಅಮ್ಮನ ಒಲವಿನಲ್ಲಿಯೇ ಒಂದಾಗಿ, ಅಲ್ಲಿನ ಶಿಕ್ಷಣಕ್ಕೆ ಸಿಟ್ಟಿನ ಅಗತ್ಯವಾದಾಗ ಮಾತ್ರ ಪ್ರತ್ಯಕ್ಷವಾಗುವ ಅಪ್ಪ ಇಲ್ಲಿಯೂ ಮರೆಯಲ್ಲಿಯೇ ಕುಳಿತುಕೊಳ್ಳುವ ಮರೆತು ಹೋಗುವ ಹೀರೋನೇ! ಜೀವಕ್ಕೆ ಜೀವವೇ ಆದ ಗಣಿತದ ಮೂಲವಾದ ಮಗ್ಗಿಗಳಿಂದ ಹಿಡಿದು, ಕಾಗುಣಿತ ಅಭ್ಯಾಸದವರೆಗೂ ಅಪ್ಪನ ಪಾತ್ರ ದೊಡ್ಡದು. ಅಪ್ಪನ ಶಕ್ತಿಸಾಮರ್ಥ್ಯ ಕೇವಲ ಶೈಕ್ಷಣಿಕವಿಚಾರಗಳಿಗೆ ಸೀಮಿತವಾಗದೇ, ಅದರಾಚೆಗಿನ ಬದುಕಿಗೂ ಹಬ್ಬಿದೆ.ಆತ ಬದುಕಿ ತೋರಿಸಿದ ಜೀವನವೇ ಆದರ್ಶಪ್ರಾಯ. ನಾನು ಕಲಿಯಲು ಸಾಧ್ಯವಾಗದೇ ಹೋಗಿರುವ ಎಷ್ಟೋ ವಿಷಯಗಳನ್ನೂ ಹೇಳಿಕೊಟ್ಟ ಅಪ್ಪ, ಕಡೇ ಪಕ್ಷ ನನ್ನ ಮಟ್ಟಿಗಂತೂ ಒಬ್ಬ ಮಹಾನ್ ಶಿಕ್ಷಕನೇ.
ನಾವು ಕಾಲೇಜು ಜೀವನದಲ್ಲಿ ಬರುವ ಶಿಕ್ಷಕರನ್ನು ತೆಗಳಬಹುದು, ಅವರ ಭಂಗಿಗಳನ್ನು ಆಡಿಕೊಂಡು ನಗಾಡಬಹುದು, ಆದರೆ ಪ್ರೈಮರಿ ಸ್ಕೂಲಿನಲ್ಲಿ ಪಾಠ ಮಾಡಿದ ಗುರುಗಳನ್ನು ಹೀಗೆ ಆಡಿಕೊಳ್ಳುವವರನ್ನು ನಾನಂತೂ ನೋಡಿಲ್ಲ. ಅದು ಆ ಶಿಕ್ಷಕರು ಉ(ಬೆ)ಳೆಸಿಕೊಂಡು ಬಂದಿರುವ ಗೌರವ. ಅದು ಒಬ್ಬ ಗುರುವಿನ ನಿಸ್ವಾರ್ಥ ದುಡಿಮೆಗೆ ಕೊಡಲ್ಪಡುವ ಒಂದು ಚಿಕ್ಕ ಮರ್ಯಾದೆ. ಸುಖಾ ಸುಮ್ಮನೇ ಮಗ್ಗಿ ಬರೆಯಲು ಹೇಳಿ, ಪೇಪರ್ ಅಡ್ಡ ಹಿಡಿದುಕೊಂಡು ಕ್ಲಾಸಿನಲ್ಲಿಯೇ ನಿದ್ದೆ ಮಾಡುತ್ತಿದ್ದ XYZ ಸರ್ ಬಗ್ಗಾಗಲೀ, ತಮ್ಮ ಮಗನಿಗೆ ಹೆಚ್ಚು ಮಾರ್ಕ್ಸ್ ಬರುವಂತೆ ಪರೀಕ್ಷಾ ಪತ್ರಿಕೆಯನ್ನು ಸೆಟ್ ಮಾಡುತ್ತಿದ್ದ ABC ಮೇಡಮ್ ಬಗ್ಗೆ ಆಗಲೀ ಆಗ ಕೋಪ ಸ್ವಲ್ಪ ಬರುತ್ತಿತ್ತೇನೋ ಈಗಂತೂ ಮೂಡುವುದು ಕೇವಲ ಅನಾಲೋಚಿತ ಗೌರವವಷ್ಟೇ. ಹಾಗೆ ನೋಡಿದರೆ ಅವರು ಹಾಗೆ ಮಾಡಿದ್ದರಿಂದಲೇ ನನ್ನ ಜೀವನದಲ್ಲಿ ಎಷ್ಟೋ ಬದಲಾವಣೆಯಾಗಿದೆ ಎಂದು ಎನಿಸುತ್ತದೆ, ಇಂದಿಗೂ ನನ್ನ ಕೈಬರಹ ಓದುವ ಮಟ್ಟಿಗೆ ಎಂದರೆ ಅದು XYZರಿಂದಲೇ, ಹಾಗೆ ABC ಮಾಡದೇ ಹೋಗಿದ್ದರೆ ನನಗೆ ಗಣಿತದ ಬಗ್ಗೆ ಹಾಗೆ ಕೆಚ್ಚು ಬಂದು ಅದು ಒಂದು ಪ್ರೀತಿಯಾಗಿ ಬದಲಾಗುತ್ತಿರಲೇ ಇಲ್ಲವೇನೋ? ಯಾರಿಗೆ ಗೊತ್ತು. ಅಪ್ಪ ಅಮ್ಮನೇ ಶಾಲೆಯಲ್ಲೂ ಶಿಕ್ಷಕರಾಗಿ ನೋಡುವ ಭಾಗ್ಯ ನನ್ನ ಪಾಲಿಗಿದ್ದುದರಿಂದ ಮತ್ತೊಂದು ಸಲ ಅವರನ್ನು ನೆನಪಿಸಿಕೊಂಡು ಪ್ರೌಢ ಶಾಲೆಯ ಕಡೆ ಹೊರಳುತ್ತೇನೆ.
ವಿಶ್ವದಲ್ಲಿ ಇರುವ ಎಲ್ಲಾ ಉತ್ತಮ ಶಿಕ್ಷಕರನ್ನೂ ಸೇರಿಸಿ ಒಂದು ಗ್ರುಪ್ ಮಾಡಿ ಒಂದು ಶಾಲೆಗೆ ಕಳುಹಿಸಿದರೆ ಹೇಗಿರುತ್ತದೆಯೋ ಹಾಗಿತ್ತು ನಮ್ಮ ಹೈಸ್ಕೂಲು. ಸುಬ್ಬುವಿನ ಅಧಿಕಪ್ರಸಂಗಿತನವನ್ನು ವೈಜ್ಞಾನಿಕ ಕುತೂಹಲವಾಗಿ ಬದಲಾಯಿಸಿದ ಶೈಲಾ ಮೇಡಮ್, ಕನಿಷ್ಟ ಎರಡು ಸಾವಿರ ಪೇಜ್ ಗಳಷ್ಟಾದರೂ ನೋಟ್ಸ್ ಬರೆಸಿ ೧೦ನೇ ಕ್ಲಾಸಿನಲ್ಲಿ ೯೯ ಅಂಕ ಬರುವಂತೆ ಮಾಡಿದ KN ಮಿಸ್, ಜೀವನದಲ್ಲಿ ಮೊದಲ ಬಾರಿಗೆ ಇಂಗ್ಲೀಷ್ ಎಂಬ ಭಾಷೆಯ ಮಹತ್ವವನ್ನು ಹೇಳಿಕೊಟ್ಟ RV ಹೆಗಡೆ ಸರ್, ಕನ್ನಡದ ಕಿಚ್ಚನ್ನು ಎಲ್ಲರ ಎದೆಯೊಳಗೂ ಹಚ್ಚುವಂತೆ ಪಾಠ ಮಾಡುತ್ತಿದ್ದ ರೇಣುಕಾ ಮೇಡಮ್, ಇದಿಷ್ಟೇ ಜೀವನ ಅಲ್ಲವೆಂಬಂತೆ ಮಳೆಯಲ್ಲಿ ಆಡುವ ಕ್ರಿಕೆಟ್ ನ ಮಜವನ್ನು ತೋರಿಸಿಕೊಟ್ಟ ಸ್ವಾಮಿ ಸರ್,ಹೀಗೆ ಇವರನ್ನೆಲ್ಲಾ ಗುರುಗಳಾಗಿ ಹೊಂದಲು ನಾವೆಷ್ಟು ಅದೃಷ್ಟವಂತರು ಎನಿಸುತ್ತದೆ. ಹಾಗೆ ಹೈಸ್ಕೂಲ್ ಕಾಲವನ್ನು ಸುವರ್ಣಯುಗವಾಗಿ ಮಾಡುವಲ್ಲಿ ಇವರೆಲ್ಲರ ಪಾತ್ರ ಹಿರಿದು.
ಇನ್ನು ಪಿ. ಯು. ಗೆ ಬಂದರೆ ಯಾರ ಹೆಸರನ್ನು ಬರೆಯಲಿ ಯಾರ ಹೆಸರನ್ನು ಬಿಡಲಿ ಎಂಬುದೇ ದೊಡ್ಡ ತಲೆಬಿಸಿ, ಹಾಗಿತ್ತು ಅವರ ಜ್ಞಾನದ ಮಟ್ಟ, ಹಾಗಿತ್ತು ಅವರ ಕಲಿಸುವ ಪರಿ, ಹಾಗಿತ್ತು ಅವರು ತಮ್ಮ ವಿದ್ಯಾರ್ಥಿಗಳನ್ನು ನಡೆಸಿಕೊಳ್ಳುತ್ತಿದ್ದ ರೀತಿ. SDM ಕಾಲೇಜಿನಲ್ಲಿಯೇ ನಾನು ಇಂದಿಗೂ ನಾನು ಕಂಡ ಶ್ರೇಷ್ಟ ಶಿಕ್ಷಕ ಎಂದು ಗೌರವಿಸುವ ಕೇಶವ್ ರನ್ನು ಭೇಟಿಯಾಗಿದ್ದು. ಅವರು ನಡೆದಾಡುವ ವಿಶ್ವಕೋಶ ಮಾತ್ರ ಆಗಿದ್ದರೆ ಅವರೇ the best ಆಗುತ್ತಿರಲಿಲ್ಲವೇನೋ, ಅದು ಅವರು ಮಾತನಾಡುತ್ತಿದ್ದ ವಿಷಯಗಳಷ್ಟೇ ಅಲ್ಲ, ಅವರು ಬದುಕಿದ ಪರಿಯೂ ಅಷ್ಟೇ ಆದರ್ಶಪ್ರಾಯ, ಅನುಕರಣೀಯ.ಗಣೇಶ್ ನಾಯಕ್  ರ ತನ್ಮಯತೆ ಇಂದಿಗೂ ವಿಸ್ಮಯವೇ. ಸ್ಮಿತಾ ಮೇಡಮ್ ರ ಜೀವನಪ್ರೀತಿ, ಆತ್ಮವಿಶ್ವಾಸ ನೋಡಿ ಕಲಿಯಬೇಕಾದದ್ದು ಎಷ್ಟೋ ಇದೆ ಎನ್ನಿಸುತ್ತದೆ. ಗಣಪಯ್ಯ ಸರ್ ಮೊದಲ ಕ್ಲಾಸಿನಲ್ಲಿ "ನಾನು ಎಡಚ, ದಯವಿಟ್ಟು ಸ್ವಲ್ಪ ಹೊಂದಿಕೊಳ್ಳಿ" ಎಂದು ಹೇಳಲೇಬೇಕಿರದ ಮಾತನ್ನು ಹೇಳುವಷ್ಟು ವಿನಯವನ್ನು ತಮ್ಮ ಐವತ್ತರ ಹರೆಯದಲ್ಲೂ ಉಳಿಸಿಕೊಂಡು ಬಂದಿದ್ದರು ಎಂಬುದೂ ಅಷ್ಟೇ ಆಶ್ಚರ್ಯಕರವಾಗಿ ಕಾಣುತ್ತದೆ. ಹಾಸ್ಟೆಲ್ ವಾರ್ಡನ್ ಆದರೂ ಎಷ್ಟೋ ವಿಧದಲ್ಲಿ ಬರಿ ಉತ್ತಮಕ್ಕಿಂತ ಉತ್ತಮ ಗುರುವಾಗಿದ್ದರು. ಹೀಗೇ ಬರೆಯುತ್ತಾ ಹೋದರೆ ಎಷ್ಟು ಪೇಜುಗಳನ್ನು ಬೇಕಾದರೂ ವರ್ಣಿಸಬಹುದಾದರೂ ಇದನ್ನು ಇಲ್ಲಿಗೇ ನಿಲ್ಲಿಸುತ್ತಿರುವುದು ಉಳಿದವರ ಕೊಡುಗೆಯನ್ನು ಅಲ್ಲಗಳೆದಂತೆ ಎಂದು ದಯಮಾಡಿ ಭಾವಿಸಬಾರದು.
ಇನ್ನು ಪೆಸಿಟ್ ನ ಗುರುಗಳ ಬಗೆಗೆ ನಾನು ಬರೆಯದೇ ಇರುವುದೇ ಒಳ್ಳೆಯದು ಭಾವಿಸುತ್ತೇನಾದರೂ ಕೆಲವು ಲೆಕ್ಚರರ್ ಗಳ ಹೆಸರನ್ನಾದರೂ ಇಲ್ಲಿ ಹೇಳದೇ ಹೋಗುವುದು ಅಪಮಾನ ಎನಿಸಬಹುದು. ಎಲ್ಲ ಬಲ್ಲ ಹಿಟ್ಲರ್ ಎನಿಸುತ್ತಿದ್ದ RV ಅಯ್ಯರ್, ಕೈಯ್ಯನ್ನು ೧೮೦ ಡಿಗ್ರಿ ತಿರುಗಿಸಬಲ್ಲವರಾಗಿದ್ದ MGG, ಅಸಾಧ್ಯ Digital Communicationನ್ನೂ ಸಹ ಅತಿ ಸರಳವಾಗಿ ಹೇಳಿಕೊಂಡು ಹೋದ ಕೆ ರಘುನಾಥ್ ಸರ್, ವಿಧ್ಯಾರ್ಥಿಗಳಿಗೇ ಬಂಕ್ ಹಾಕುವ ಬಗ್ಗೆ ಉಪಾಯ ಹೇಳಿಕೊಡುವಷ್ಟು ಮಕ್ಕಳೊಳಗೊಬ್ಬರಾಗುತ್ತಿದ್ದ ಸ್ನೇಹಲ್ ಪಿಂಟೋ ಹೀಗೆ ಮರಳುಗಾಡಿನ ಮರೀಚಿಕೆಯಂತೆ ಬೆರಳೆಣಿಕೆಯಷ್ಟು ಜನ ಶಿಕ್ಷಕರು ಸಿಗಬಹುದು. ಆದರೆ ಇಂಜಿನಿಯರಿಂಗ್ ನಲ್ಲಿ ಶಿಕ್ಷಕರಾಗುವವರು ನಮ್ಮ ನಮ್ಮ ಗೆಳೆಯರೇ. ಅಥವಾ ನಮ್ಮ ಗೆಳೆಯ ಬಳಗವೇ. ’Education for the real word' ಎಂದೇ ಹೇಳಿಕೊಂಡು ಬರುವ PESIT ನ ಫ್ರೆಂಡುಗಳು ನಿಮ್ಮನ್ನು ನಿಜವಾದ ಪ್ರಪಂಚಕ್ಕೆ ತಯ್ಯಾರು ಮಾಡುತ್ತಾರೆ, ಎಂಬಲ್ಲಿಗೆ ಅವರಿಗೂ ಒಂದು ಧನ್ಯವಾದ ಸಲ್ಲುತ್ತದೆ.

Sunday 4 September 2011

ಸ್ವಗತ...


ಕಟ್ಟಿ ಹಾಕಲೇಕಳಲ, ಉಕ್ಕಿ ಹರಿಯಲಿಕ್ಕೆ ಬಿಡು
ಅಪ್ಪಳಿಸಿ ಮರೆಯಾಗುವ ಅಲೆಯಂತೆ
ಹೊರಹಾಕಿಬಿಡು ಉಮ್ಮಳಿಸಿ ಬರುವ ದುಃಖವ
ಎಂದೆಂದಿಗೂ ತಿರುಗಿಬಾರದಂತೆ
ಹೇಳಿಕೊಳ್ಳಲಾಗದಿದ್ದರೇನಂತೆ ಬಿಕ್ಕಿಬಿಡು
ಬತ್ತಿಹೋಗಲಿ ಕಣ್ಣೀರಿನ ಒರತೆ||೧||

ಹೃದಯ ಬೆಂದು ಸೀದು ಹೋಗುವ ಮುನ್ನ
ಆರಿಸಿಬಿಡು ಜೀವಮರೆಯದ ಭೀತಿ
ಮಳೇನೀರು ಹರಿವ ಹೊಳೆಯಾಗಿ ಇಳೆಯ
ಕೊಳೆಯ ಕೊಚ್ಚಿಹಾಕುವ ರೀತಿ
ಭೋರ್ಗರೆದು ಹರಿಯಲಿ ನಿನ್ನೆದೆಯ ನೋವು
ಮುಳುಗಿಹೋಗಲಿ ಅನುಭೂತಿ||೨||

ಸಾಕು ಎಂದಿತು ಮನಸು, ಇನ್ನೂ ಮುಗಿದಿಲ್ಲ
ಎಂದು ಕನವರಿಸಿತು ಕನಸು
ಅದಮ್ಯವೊಂದು ಅತಿ ರಮ್ಯವೆಂದು ಹುಡುಕಿ
ಕಂಡಿತ್ತು ಕುರುಡು ಕನಸು
’ನಿನಗಲ್ಲ ಇದುವು, ತರವಲ್ಲ ನಿನ್ನಿರುವು ಕನಸೆ’
ತೊಲಗಾಚೆ ಎಂದಿತ್ತು ಮನಸು||೩||