Tuesday 30 August 2011

ನಿನಗೆ ...

ಹದವ ಮರೆತಿದೆ ಹೃದಯ,
ಬದಲಾಗಿ ಬಿಟ್ಟಿದೆ ಬದುಕು,
ಸಮಯ ಉರುಳಿದೆ ತಿಳಿಯದೇ.
ಸಾವಿರ ’ಜಿಬಿ’ಯ ಮೆದುಳ ತುಂಬ,
ನಿನ್ನ ನೆನಪಿನದೇ ಕಾರುಬಾರು.  
ಏನ ಮಾಡಲಿ ನಾ,ಎಲ್ಲಿ ಹೋಗಲಿ,
ಎಲ್ಲ ನಿನ್ನದೇ, ನನ್ನದೆಲ್ಲಾ, ಎಲ್ಲವೂ.

ಹೆಸರಲ್ಲೇ ಖುಷಿಯಿದೆ ರವ*ದಿ,
ಉಸಿರಲ್ಲೇ ಬೆರೆತಿದೆ ಮುದದಿ.
ಬರೆದಾಗಿದೆ ನನ್ನಯ ಭವಿತ ;
ಸಾವಿರ ಭಾವ ಒಮ್ಮೆಲೆ ಮೂಡಿ,
ನನ್ನೆದೆಯು ಕುಸಿದಿತ್ತಲ್ಲೇ,
ಭೂಮಿ ಭಾರವ ಹೊತ್ತಂತೆ.
ಕಳೆದು ಹೋದ ನನ್ನ ನಾನೇ
ಹುಡುಕಾಡಿದೆ ದಡ ಮುಟ್ಟದಂತೆ. 

ಯಾರು ನೀನೋ, ಏನು ಮಾಯೆಯೋ
ಏನೂ ತಿಳಿಯದಂತೆ, ಏನು ಮೋಡಿ-
ಮಾಡಿದೆಯೋ ಒಂದು ನೋಟದಲ್ಲಿ .
ನಿನಗೆಲ್ಲಿ ಗೊತ್ತು ನನ್ನೆದೆಯ ಪಾಡು,
ಮುಗಿಲು ಮುಟ್ಟಿದೆ ದಿಗಿಲು ಇಲ್ಲಿ. 
ಮರೆವನೇ ಮರೆಯುವ  ತರಹದಿ 
ಮಾಡಿ ಬಿಟ್ಟಿತ್ತು ನಿನ್ನ ನೆನಪಲೀಲೆ.

*ರವ = ಶಬ್ದ 

Thursday 25 August 2011

ಒಂದು ಡೈರಿಯ ಕಥೆ ( ಮುಂದುವರಿದಿದೆ)


ಟ್ರೇನಿನಲ್ಲಿ ಸಿಕ್ಕಿದ ಬ್ಯಾಗನ್ನು ಹಿಂದಿರುಗಿಸುವ ನೆಪದಲ್ಲಿ ಅನಾಮಿಕಾ ಅದರೊಳಗಿದ್ದ ಡೈರಿಯನ್ನು ಓದಲು ಪ್ರಾರಂಭಿಸುತ್ತಾಳೆ. 

ಮುಂದೆ ಓದಿ ...

ಒಂದಿಷ್ಟು ಪೀಠಿಕೆಯ ಹಾಗೆ ಬರೆದಿದ್ದನಾದರೂ ಅದು ಯಾವ ರೀತಿಯಿಂದಲೂ ವಿಳಾಸ ತಿಳಿಯಲು ಸಹಾಯವಾಗುವಂತೆ ಇರಲಿಲ್ಲ.ಹೆಚ್ಚಿನವು ಅವನ ಜೀವನದ ಬಗ್ಗೆ , ಅದರ ಬಗೆಗಿನ ಅವನ ಅನುಭವದ ಬಗ್ಗೆ ಇತ್ತು. ತಂದೆ ತಾಯಿಯರ ಪ್ರೇಮವಿವಾಹ (ತಾಯಿಯ ಕಡೆಯವರಿಂದ ಬಹಳೇ ವಿರೋಧ ಕಟ್ಟಿಕೊಂಡು) ,ಮೂಲ ದಕ್ಷಿಣ ಕನ್ನಡದ ಜೈನರಾದರೂ ಹುಬ್ಬಳ್ಳಿಯಲ್ಲಿ ವಾಸವಾಗಿರುವುದು,ಎಂಬುದನ್ನು ಬಿಟ್ಟರೆ ಮತ್ತೆಲ್ಲ ವಿವರಗಳೂ unuseful. ಮೂರನೇ ಕ್ಲಾಸಿನಲ್ಲಿ ಅಪ್ಪನಿಗೆ ಗೊತ್ತಿಲ್ಲದಂತೆ ವೆಂಕಪ್ಪ ಶೆಟ್ಟರ ಅಂಗಡಿಗೆ ಹೋಗಿ ಎರಡು ರುಪಾಯಿಯ ಚಿಕ್ಕಿ ತೆಗೆದುಕೊಂಡು ತಿನ್ನುತ್ತಿದ್ದುದು, ಎರಡೂ ಮನೆಯವರ ವಿರೋಧವಿದ್ದರೂ ವಿನಾಯಕ ಮಾವ(ಪ್ರಭಂಜನನ ಅಮ್ಮನ ತಮ್ಮ)ನ ಮಗಳು ಆವಂತಿಯ ಮೇಲೆ ಉಂಟಾದ crush, ಹೀಗೆ ಎಷ್ಟೋ ವಿಷಯಗಳನ್ನು ಮೊದಲ ಬಾರಿಗೆ ಮನಸ್ಸಿನಿಂದ ಹೊರಕ್ಕೆ ಹರಿಯಬಿಟ್ಟಿದ್ದ . ಮುಂದೆ ೯ನೇ ಕ್ಲಾಸಿನಲ್ಲಿರುವಾಗ ಅದೇ ಆವಂತಿ ಮೆದುಳು ಜ್ವರದಿಂದ ತೀರಿಕೊಂಡಾಗ , ಭಾಷೆಗೆ ಇರುವ ಮಿತಿ ನೋವಿಗೆ ಎಲ್ಲಿಂದ ಬರಬೇಕು ಎಂದುಬಿಡುತ್ತಾನೆ. ಅವನು ಬರೆದಿದ್ದೆಲ್ಲಾ ಸತ್ಯವೇ? ಆ ವಾಕ್ಯಗಳು ಸತ್ಯಕ್ಕಿಂತಲೂ ಹೆಚ್ಚು ಪ್ರಾಮಾಣಿಕವಾಗಿದ್ದವು. ಪಿ.ಯು. ವಿನ ಘಟನೆಗಳ ಬಗೆಗಿನ ಅವನ ಕೆಲವು ವಾಕ್ಯಗಳನ್ನು ಅವನು ಬರೆದಂತೆಯೇ ಉದ್ಧರಿಸುತ್ತೇನೆ " ನನಗೆ ಸಹಸ್ರ ವಿಧದಲ್ಲಿ ಸಹಾಯ ಮಾಡಿದ ನವೀನನೊಂದಿಗೆ ಸಹಾ ನಾನು ಪ್ರಾಮಾಣಿಕವಾಗಿರಲಿಲ್ಲ ಎಂಬುದಕ್ಕೆ ನಾನು ದುಃಖ ಪಡುತ್ತೇನೆ,  ಯಾವುದೇ ಕೆಲಸ ಇದ್ದರೂ ದಿನವೂ ಕಾಲೇಜಿಗೆ ಕರ್ತವ್ಯವೇನೋ ಎನ್ನುವ ತರಹ drop ಕೊಡುತ್ತಿದ್ದ ’ನವೀ’ಗೆ , ಆವಂತಿಯ hangoverನಿಂದ ಹೊರ ಬರಲು ಬಹಳೇ ಸಹಾಯ ಮಾಡಿದ ’ನವೀ’ಗೆ , ಎಷ್ಟೋ ಸಲ ನನ್ನನ್ನು ಬಚಾವ್ ಮಾಡಲು ನನ್ನ ತಪ್ಪುಗಳನ್ನು ತನ್ನದೆಂದುಕೊಂಡು ನನ್ನ ಮತ್ತು ಅವನ ಮನೆಗಳೆರಡರಲ್ಲೂ ಬೈಸಿಕೊಳ್ಳುತ್ತಿದ್ದ ’ನವೀ’ಯ ಬಳಿ ಕೂಡಾ ಶೈಕ್ಷಣಿಕ ಅಸೂಯೆಯಿಂದ ವರ್ತಿಸಿದೆನೇ ? ಅದು ಅವನು ನನಗೆ ತೋರಿಸುತ್ತಿದ್ದ ಸಹಾನುಭೂತಿಗೆ ತೋರಿದ ಪ್ರತಿಕಾರ ಎಂದು ಹೇಳಿಕೊಂಡರೂ( ನಾನು ಜಗತ್ತಿನಲ್ಲಿ ಏನೆನ್ನಾದರೂ ಸಹಿಸಬಲ್ಲೆ , ಸಹಾನುಭೂತಿಯನ್ನಲ್ಲ ). ಐ ಐ ಟಿ ಯ ಮೆಟೀರಿಯಲ್ಸ್ , ನಾನು ತರಿಸುತ್ತಿಲ್ಲ ಎಂದಿದ್ದು , ಮಿಗಿಲಾಗಿ ಪ್ರಣಮ್ಯಳ ಬಗೆಗಿನ ನವೀನನ ಪ್ರೇಮವನ್ನು ಬಹಿರಂಗ ಮಾಡಿ ’ನವೀ’ಯ image ಹಾಳು ಮಾಡಿ ಹಾಕಿದ್ದು . ಕೇವಲ ತಮಾಷೆಗೆಂದು ಬರೆದಿದ್ದ ಒಂದು ಪತ್ರ , ಯಾರು ಯಾರದೋ ಕೈ ತಲುಪಿ ಕೊನೆಗೆ ಪ್ರಾಂಶುಪಾಲರು  ’ideal ಹುಡುಗ’ ನವೀನನಿಗೆ ಛೀಮಾರಿ ಹಾಕುವ ಹಾಗಾಗಿ ನವೀನ ಖಿನ್ನತೆಗೆ ಹೋಗುವಷ್ಟರ ಮಟ್ಟಿಗೆ ಬೇಜಾರಾಗಿ ಇದ್ದಾಗಲೂ ಸತ್ಯ ಒಪ್ಪಿಕೊಳ್ಳದೇ ಹೋಗಿದ್ದು ಅಕ್ಷಮ್ಯವೇ.ಆದರೆ ಅದೇ ಸಿಟ್ಟಿನಲ್ಲಿ ಪ್ರಣಾಮ್ಯಳ ಬಳಿ ಹೋಗಿ ಒಂದು ದಿನ ನಿನ್ನನ್ನು ನೋಡಿಕೊಳ್ಳೂತ್ತೇನೆ ಎಂದು ಧಮಕಿ ಹಾಕಿದರೂ , ಮುಂದೆ ಅವಳು ನನಗೆ ಬಹಳ ಕ್ಲೋಸ್ ಆಗಿದ್ದು ನಿಜ. ನವೀನ ಐ.ಐ.ಟಿ. ಯಲ್ಲಿ ಉತ್ತೀರ್ಣನಾಗಿ , ನಾನು ಆಗದೇ ಹೋಗಿದ್ದು ನನ್ನ ’ಚತುರ್’ತನಕ್ಕೆ ಆದ ಶಿಕ್ಷೆಯೇ ? " ಎಂದು ತನ್ನನ್ನೇ ಕೇಳಿಕೊಂಡು  ನವೀನನ ಬಗೆಗಿನ ಅಧ್ಯಾಯವನ್ನು ಅಂತ್ಯ ಮಾಡುತ್ತಾನೆ. ಈ ವಿಷಯದಲ್ಲಿ ನಿಜವಾಗಿಯೂ ಪ್ರಭಂಜನನ ತಪ್ಪಿತ್ತೇ ಅಥವಾ ಇದು ಅವನ ಅಕಾರಣ ಪ್ರಾಯಶ್ಚಿತ್ತವೇ ?  ಸರಿಯಾದ ಮಾಹಿತಿಯಿಲ್ಲದೇ ಅವಸರದ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ ಎಂದು ಆ ವಿಷಯವನ್ನು ಅಲ್ಲಿಗೇ ಬಿಟ್ಟೆ.
ಅವನು ಮುಂದುವರಿಯುತ್ತಾ ಹೇಳುತ್ತಾನೆ" ಹೊಸ ನಗರ , ಹೊಸ ಜೀವನ , ಹೊಸ ಗೆಳೆಯರು , ಹೀಗೆ ಮೊದಲ ಸೆಮಿಸ್ಟರ್ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಕಳೆದು ಹೋಗಿತ್ತು. ಅತಿ ಶಿಸ್ತಿನಿಂದ ಬೆಳೆಸಿದವರಿಗೆ , ಸ್ವಾತಂತ್ರ್ಯ ಮತ್ತು ಅವಕಾಶ ಒಟ್ಟಿಗೆ ಸಿಕ್ಕರೆ ಏನಾಗುತ್ತದೋ ಅದೇ ಅಯಿತು . ಚಲನಚಿತ್ರಗಳು, ಇಂಟರ್ನೆಟ್ ,ವೀಡಿಯೋ ಗೇಮ್ ಗಳು, ಮೊದಲಿನಿಂದ ಇದ್ದ ಪಠ್ಯೇತರ ಸಾಹಿತ್ಯದ ಪುಸ್ತಕ ಓದುವಿಕೆ , ಎಲ್ಲನೂ ಸೇರಿ ಮೊದಲ ಸೆಮಿಸ್ಟರ್ ನ್ನು ಭಯಂಕರ ವೈಫಲ್ಯವಾಗಿಸಿಬಿಟ್ಟವು. ಅದಕ್ಕಿಂತಲೂ ಹೆಚ್ಚು ಕಳವಳಕಾರಿಯಾಗಿದ್ದು ಅಗುತ್ತಿದ್ದ ನೈತಿಕ ಅಧಃಪತನ ,ಗಾಂಧಿವಾದಿ ಮಂಜಪ್ಪಯ್ಯ ಜೈನ್ ರ ಮೊಮ್ಮಗ ಅಶ್ಲೀಲ ಚಿತ್ರಗಳನ್ನು ನೋಡಿದ ಎನ್ನುವಲ್ಲಿಗೆ ನೈತಿಕತೆ ಒಂದು ಪಾತಾಳವನ್ನು ಮುಟ್ಟಿ ಆಗಿತ್ತು. ಅದಕ್ಕೆ ಗೆಳೆಯರನ್ನೂ , ಇಂಟೆರ್ನೆಟ್ಟನ್ನೂ ದೂರಿದರೆ ಅದು ಕೇವಲ ತಪ್ಪು ಜಾರಿಸುವ ಪ್ರಯತ್ನವಾಗುತ್ತದೆಯಾದ್ದರಿಂದ ತಪ್ಪೆಲ್ಲ ಅಗತ್ಯವಾದಷ್ಟು ಗಟ್ಟಿಯಾಗಿಲ್ಲದ ನನ್ನ ಮನೋನಿರ್ಧಾರದ್ದೇ , ಎನ್ನುವುದು ಹೆಚ್ಚು ಸಮಂಜಸ. ಹೀಗಿರುವಾಗ ಅಪ್ಪ ನನ್ನ ಹುಟ್ಟಿದ ಹಬ್ಬದ ಉಡುಗೊರೆಯಾಗಿ ಅಜ್ಜ ಮಂಜಪ್ಪಯ್ಯರ ಡೈರಿಯನ್ನು ಕೊಟ್ಟಿದ್ದು. ಅದು ನಿಜವಾಗಿಯೂ ನನ್ನ ಬದುಕನ್ನೇ ಬದಲಾಯಿಸಿತು. ಸತ್ಯ , ನ್ಯಾಯ ನಿಷ್ಟೆಯ ಬಗ್ಗೆ ಅವರ ಅಭಿಪ್ರಾಯ ಎಂತಹವರನ್ನು ಬದಲಾಯಿಸುವಂತಿತ್ತು. ಒಂದೊಂದು ಸಲ ಓದಿದಾಗ ಒಂದೊಂದು ಅರ್ಥ ಕಂಡು , ನನ್ನ  ಬಗ್ಗೆ ನನಗೇ ಅಸಹ್ಯ ಮೂಡಲಾರಂಭಿಸಿತು.ಎಂದು ಹೀಗೆ ಎಷ್ಟೋ ಚಿಕ್ಕ ದೊಡ್ದ ವಿಷಯಗಳ ಬಗ್ಗೆ, ಅವುಗಳ ಸರಿ-ತಪ್ಪು ನಿಲುವುಗಳ ಬಗ್ಗೆ  ಪ್ರಭಂಜನನು ಚರ್ಚೆ ಮಾಡುತ್ತ ಹೋಗುತ್ತಾನೆ. ತನ್ನ ಪ್ರತಿಯೊಂದು ಕಾರ್ಯವನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ವಿಶ್ಲೇಷಣೆ ಮಾಡಿಕೊಳ್ಳುತ್ತಾನೆ. ಹೀಗೆಯೇ ಮುಂದಿನ ಮೂರು ಸೆಮಿಸ್ಟರ್ ಗಳ ಮತ್ತೊಂದಿಷ್ಟು ಅಷ್ಟೇನೂ ,ಮಹತ್ವದ್ದು ಎನಿಸದಂತಹ ಘಟನೆಗಳು , ಒಂದಿಷ್ಟು ಅನುಭವಗಳು ,ಒಂದಿಷ್ಟು ಉಚಿತ ಉಪದೇಶಗಳು,ಡೈರಿಯ ಉಳಿದ ಹಾಳೆಗಳನ್ನು ತುಂಬುತ್ತದೆ.  ಕೊನೆಯ ಲಿಖಿತ ಪುಟದಲ್ಲಿದ್ದ ಈ ಸಾಲುಗಳು ನನ್ನ ಗಮನ ಸೆಳೆದಿದ್ದಂತೂ ಹೌದು " ನಾವೆಷ್ಟೇ ಒಳ್ಳೆಯವರಾಗಿರಹೋದರೂ ,ಪ್ರಾಮಾಣಿಕವಾಗಿರಹೋದರೂ , ಕೆಲವೊಂದು ಸಲ ವಿಧಿಯೋ ,ಆಕಸ್ಮಿಕಗಳೋ ನಿಮ್ಮನ್ನು ಅತ್ಯಂತ ಕೀಳಾಗಿ ಬಿಂಬಿಸಬಹುದು. ಆಗ ಅಂತಹವುಗಳನ್ನು ನಿರ್ಲಕ್ಷಿಸಿ , ನಿಮ್ಮ ತತ್ವಗಳಿಗೆ ಅಂಟಿಕೊಂಡಿರಬೇಕು ಎಂದು ನಾನೆಲ್ಲೋ ಮೊದಲು ಬರೆದಿದ್ದ ನೆನಪು , ಆದರೆ ಅದೆಷ್ಟು ಕಷ್ಟ ಎಂಬುದರ ಅನುಭವ ಇವತ್ತಾಯ್ತು , ಈಗಷ್ಟೇ ನಿದ್ರೆಯಿಂದ ಎಚ್ಚರವಾದರೂ ಮತ್ತೆ ಈಗ ಬಹಳ ನಿದ್ದೆ ಬರುತ್ತಿದೆಯಾದ್ದರಿಂದ ಈ ಘಟನೆಯ ಬಗ್ಗೆ ನಾಳೆ ಬರೆಯುತ್ತೇನೆ" ತಾರೀಕನ್ನು ನೋಡಿದರೆ ಮೇ ೨೯-೨೦೧೦, ಎಂದರೆ ನಿನ್ನೆ.
ಯಾರೂ ನೋಡಲಾರರು ಎಂಬ ಧೈರ್ಯವು ಎಂತಹ ತಪ್ಪನ್ನೂ ಮಾಡಲು ಪ್ರೋತ್ಸಾಹ ಕೊಡುತ್ತದೆ ಎಂಬುದೆಲ್ಲ ನಿಜವೆನಿಸಿ ನಾನೂ ಒಂದು ಡೈರಿಯನ್ನು ಬರೆಯಬೇಕೆಂಬ ಖಚಿತ ನಿರ್ಧಾರ ಮಾಡಿದ್ದೆ. ಆದರೆ ಇವಾವುವೂ ಬ್ಯಾಗ್ ನ್ನು ಹಿಂತಿರುಗಿಸುವ ನನ್ನ ಉದ್ದೇಶಕ್ಕೆ ಸಹಾಯಕಾರಿಯಾಗಲಿಲ್ಲವಾಗಿ ಮಾರನೆ ದಿನ ಕಾಲೇಜಿಗೆ ಫೋನು ಮಾಡಿ USN  ಉಪಯೋಗಿಸುವುದೇ ಅನಿವಾರ್ಯವಾಯಿತು.ಕಾಲೇಜಿನಿಂದ ವಿಳಾಸ ಮತ್ತು ಮನೆಯ ದೂರವಾಣಿ ಸಂಖ್ಯೆ ಪಡೆದು , ಮನೆಗೆ ಕರೆ ಮಾಡಿದರೆ ಅವನ ಅಮ್ಮ "ಅವನು ಇವತ್ತು ಬೆಳಿಗ್ಗೆಯಷ್ಟೇ ದಿಲ್ಲಿಗೆ ಹೊದ, ಅದೇನೋ internship ಅಂತೆ. ಹಾಂ, ಒಂದು ಬ್ಯಾಗ್ ನ್ನು ರೈಲಿನಲ್ಲಿ ಕಳೆದುಕೊಂಡನಂತೆ , ಬಹಳೇ ಪೇಚಾಡಿಕೊಂಡ ,ಅದೇನೇನೋ ಮಹತ್ವದ documents ಎಲ್ಲಾ ಇತ್ತಂತೆ " , ಎಂದು ಹೇಳಿ ಅವನ ಮೊಬೈಲ್ ಸಂಖ್ಯೆಯನ್ನು ಕೊಟ್ಟರು. ಪ್ರಭಂಜನ್ ಗೆ ಕರೆ ಮಾಡಿದರೆ ನಾನೆಣಿಸಿದ್ದಕ್ಕಿಂತ ಬಹಳ ಶಾಂತವಾಗಿದ್ದ ," ಸರಿ ಹಾಗಾದರೆ , ನೀವು ಡೈರಿಯನ್ನು ಓದಿಲ್ಲ ಎಂದು ನಾನು ನಂಬಲಾರೆ. ಎಂತಿದ್ದರೂ ನೀವು ಡೈರಿಯನ್ನು ಓದಿಯಾಗಿದೆ ,ಅದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ . ನಾನು ಬರುವುದು ಆಗಸ್ಟ್ ಪ್ರಾರಂಭದಲ್ಲಿ , ಕಾಲೇಜು ಆರಂಭವಾಗುವುದಕ್ಕಿಂತ ಒಂದು ವಾರ ಮೊದಲು .,ನಾನೇ ಬೆಳಗಾವಿಗೆ ಬರುತ್ತೇನೆ ತೆಗೆದುಕೊಂಡು ಹೋಗಲು. ನಮ್ಮ ಮನೆಗೆ ಬ್ಯಾಗ್ ನ್ನು ಕೊಟ್ಟರೆ ಅವರು ಓದುವ ಅವಕಾಶ ಇದೆಯಾದ್ದರಿಂದ ಅದು ನಿಮ್ಮ ಬಳಿಯಿರುವುದೇ ಸುರಕ್ಷಿತ . ನಿಜವೆಂದರೆ  ಡೈರಿ ಬರೆಯಲು ಪ್ರಾರಂಭಿಸಿದ್ದೇ ಅವರ ಕಲ್ಪನೆಯ ’ಪ್ರಭಂಜನ’ನ ಮಟ್ಟಕ್ಕೆ ನಾನು ನನ್ನನ್ನು ಪುನರುತ್ಥಾನ ಮಾಡಿಕೊಳ್ಳಲಿಕ್ಕೆ, .ಅಷ್ಟೇ. ಮುಂದೊಂದು ದಿನ ನಾನೇ ಹೇಳುತ್ತೇನೆ . ಏಕೆಂದರೆ ’ನನ್ನ ಮಗ ಹಿಂದೊಂದು ದಿನ ಹಾಳಾಗಿದ್ದನಾದರೂ ಮತ್ತೆ ಅವನಷ್ಟಕ್ಕೆ ಅವನೇ ಸ್ಫೂರ್ತಿ ಪಡೆದು ಸರಿಯಾದ ಎಂಬುದು ಎಷ್ಟು ಸಮಾಧಾನ ಕೊಡುತ್ತದೆಯೋ , ಅಷ್ಟೇ ಚಿಂತೆಯನ್ನು ನನ್ನ ಮಗ ಈಗ ದಾರಿ ತಪ್ಪಿದ್ದಾನೆ ಎಂಬುದು ಕೊಡುತ್ತದೆ ’ "  ಎಂದು ಒಂದೇ ಉಸಿರಿನಲ್ಲಿ ಹೇಳಿ ನಿಲ್ಲಿಸಿದ . ನಾನು ಕೇಳಬೇಕೆಂದಿದ್ದನ್ನೆಲ್ಲ ಕೇವಲ ಧ್ವನಿ ಬದಲಾವಣೆಯಿಂದಷ್ಟಲೇ ಗುರುತಿಸಿ , ಅದಕ್ಕೆ ತಕ್ಕ ಸಮಜಾಯಿಷಿ ಕೊಟ್ಟ ಪ್ರಭಂಜನನ ಬಗ್ಗೆ ಮೆಚ್ಚುಗೆ ಮೂಡಿದ್ದು ಸಹಜವೇ.

ಒಂದೂವರೆ ತಿಂಗಳ ನಂತರ...
ನನ್ನ ಜೀವನದ ದೊಡ್ಡ ಆಶ್ಚರ್ಯ ಆಗಿದ್ದು ಬೆಳಗಾವಿಯ ರೈಲ್ವೇ ನಿಲ್ದಾಣದಲ್ಲಿ , ಪ್ರಭಂಜನನನ್ನು ನೋಡಿದಾಗ. ಊಹೆಗಳೂ ಮುಟ್ಟದಷ್ಟು ಚಿಕ್ಕದಾಗಿತ್ತು ಜಗತ್ತು , ಪ್ರಭಂಜನ ಎದುರು ಬಂದು ನಿಂತಾಗ ಭೂಮಿ ಬಾಯಿ ಬಿಡಬಾರದೇ ಎನಿಸಿದ್ದು ಅವನ ಡೈರಿಯನ್ನು ಓದಿದ್ದ ನಾಚಿಕೆಯಿಂದಲ್ಲ . ಅರ್ಧ ಸತ್ತ ಒಂದು ಕಾಲು , ಕ್ಷಣಕ್ಷಣಕ್ಕೂ ಸರಿ ಪಡಿಸಿಕೊಳ್ಳುತ್ತಿದ್ದ ಕನ್ನಡಕ ,ನಿಮ್ಮ ಸಹಾನುಭೂತಿ ನೀವೆ ಇಟ್ಟುಕೊಳ್ಳಿ ಎಂದು ಕಣ್ಣಿನಲ್ಲೇ ಹೇಳಿಕೊಂಡು ಬರುವ ಈ ಪ್ರಭಂಜನ ಹಾಗೂ ಅಂದು ರಾತ್ರಿ ರೈಲಿನಲ್ಲಿ  ವಿನಾಕಾರಣ ನನ್ನ ಕೈಯಲ್ಲಿ ಬೈಸಿಕೊಂಡ ಆ ಕುಂಟು ಹುಡುಗ ಇಬ್ಬರೂ ಒಬ್ಬರೇ ಆದ್ದರಿಂದ . ಸಹಾನುಭೂತಿಯ ಬಗೆಗಿನ ಅವನ ಕೋಪ , ನವೀನನ ಕೊಡುತ್ತಿದ್ದ ಡ್ರಾಪ್ ನ ಮಹತ್ವ, ಅವನು ಬರೆದ ಕೊನೆಯ ದಿನದ ಅನುಭವ ಎಲ್ಲವೂ ಈಗ ಒಂದು ಸ್ಪಷ್ಟವಾದ ರೂಪ ಪಡೆಯತೊಡಗಿದವು.ನಾನೇನು ಮಾತನಾಡಲಿ ಎಂದು ತಡವರಿಸುತ್ತಿರುವಾಗ ಅವನೇ ಮಾತನಾಡತೊಡಗಿಡದ " ನೀವೇನೂ ಸಂಕೋಚಪಟ್ಟುಕೊಳ್ಳಬೇಡಿ , ಆ ದಿನ ನಿಮ್ಮ ಪರಿಸ್ಥಿತಿಯಲ್ಲಿ ನಾನಿದ್ದು , ನಾನು ಒಬ್ಬ ಹುಡುಗಿಯಾಗಿದ್ದರೂ ನೀವು ಮಾಡಿದ್ದನ್ನೇ ,ಮಾಡುತ್ತಿದ್ದೆನೇನೋ! ನೀವು ನನ್ನ ಅಳಲನ್ನು ಓದಿದ್ದರಿಂದ ನಿಮಗೆ ಮತ್ತೂ ಮುಜುಗರವೆನ್ನಿಸಬಹುದಷ್ಟೇ, ಈ ಡೈರಿಯ ವಿಷಯ ನಮ್ಮಿಬ್ಬರಲ್ಲಿಯೇ ಇರಲಿ , ಯಾರಿಗೂ ದಯವಿಟ್ಟು ಹೇಳಬೇಡಿ " ಎಂದು ತಿರಸ್ಕರಿಸಲಾಗದಂತೆ ಬೇಡಿಕೆಯನ್ನಿಟ್ಟು ಮಾತು ಮರೆತವನಂತೆ ನಿಂತ . ಮನಸ್ಸನ್ನು ಅರಿಯುವ ಅವನ ಶಕ್ತಿಗೆ ಬೆರಗಾಗಿ ,ಇಡೀ ಒಂದು ವರ್ಷದ ಡೈರಿಯಲ್ಲಿ  ಒಂದು ಸಲವೂ ತನ್ನ ಅಂಗವೈಕಲ್ಯದ ಬಗ್ಗೆ ಪ್ರಸ್ತಾಪಿಸದ ಅವನ ಆತ್ಮಗೌರವದ ಬಗ್ಗೆ ಪ್ರಶಂಸೆ ಮೂಡಿ ಮಾತನಾಡಬೇಕೆನ್ನೆಸಿದರೂ ಮಾತನಾಡಲಾರದೇ ಹೋದೆ. ನಾನು ಗೊಂದಲದಲ್ಲಿ ಮಾತನಾಡದಿದ್ದನ್ನು ನಿರಾಸಕ್ತಿ ಎಂದು ಅಪಾರ್ಥ ಮಾಡಿಕೊಂಡನೋ , ಅವನಿಗೂ ಮಾತಾಡಲು ಏನೂ ಸಿಗಲಿಲ್ಲವೋ ಈ ಭೇಟಿ ಇಷ್ಟಕ್ಕೇ ಸಾಕು ಎನ್ನುವಂತೆ " ಧನ್ಯವಾದಗಳು , ಕಳೆದು ಹೋಯ್ತೆಂದುಕೊಂಡಿದ್ದ ಅತಿ ಮಹತ್ವದ ಈ ಬ್ಯಾಗ್ ನ್ನು ಸಿಗುವಂತೆ ಮಾಡಿದ್ದಕ್ಕೆ" ಎಂದು ಹೇಳಿ , ನಾನು ತಲೆ ಅಲ್ಲಾಡಿಸಿದ್ದನ್ನು ನೋಡಿದ ಮೇಲೆ , ಮತ್ತೆ ಹಿಂತಿರುಗಿ ನೋಡದೇ ಹೋದ.
                                                                                                                         
ಟಿಪ್ಪಣಿ :

ಇದೊಂದು ಕಾರಣವಾಗಬಹುದೆಂದು ನಾನು ಭಾವಿಸೆನಾದರೂ ಈ ಕಥೆಯನ್ನು ಬರೆಯುವಾಗ ಬೇರೊಂದು ಐಡಿಯಾ ಬಂದು ಅದು ಈ ಕಥೆಯ ಮೇಲೆ ಒಂದಿಷ್ಟು ಪ್ರಭಾವ ಬೀರಿದ್ದರಿಂದ ಸ್ವಲ್ಪ ಅಪೂರ್ಣ ಎನಿಸಬಹುದೇ ಈ ಕಥೆ ? ನೀವೇ ತೀರ್ಪುಗಾರರು.


Saturday 20 August 2011

ಒಂದು ಡೈರಿಯ ಕಥೆ


ಒಂದು ಕಥೆ ; ಪೂರ್ತಿಯಾಗಿ ಒಂದೇ ಸಲಕ್ಕೆ ಬರೆದರೆ ಬಹಳ ದೊಡ್ಡದಾಗಬಹುದೆಂಬ ಹೆದರಿಕೆಯಿಂದ ಎರಡು ಭಾಗವಾಗಿ ಅತಿಚಿಕ್ಕ ಧಾರಾವಾಹಿಯಾಗಿ ಪೋಸ್ಟಿಸುತ್ತಿದ್ದೇನೆ. 

ಮೊದಲ ಭಾಗ : 

ಇಂದಿಗೂ ನೆನಪಿದೆ . ಅದು ಶನಿವಾರ ೨೯ನೇ ತಾರಿಕು . ಮಧ್ಯಾಹ್ನವಷ್ಟೇ ಸೆಮಿಸ್ಟರ್ ಪರೀಕ್ಷೆ ಮುಗಿದಿತ್ತು., ಬೆಂಗಳೂರಿನ ಬಿಂಕದ ಬಲೆಯಿಂದ ತಪ್ಪಿಸಿಕೊಂಡು , ಬೆಳಗಾವಿಯೆಂಬ ಸ್ವಚ್ಛಂದ ಆಕಾಶದಲ್ಲಿಹಾರಲು ಮನವು ತವಕಿಸುತ್ತಿತ್ತು. ಬೇರೆಲ್ಲೂ ಜಾಗ ಸಿಗದೇ , ಬಹುತೇಕ ತುಂಬಿದ್ದ ಸಾಮಾನ್ಯ ಬೋಗಿಯಲ್ಲಿ ಜಾಗ ಹಿಡಿಯುವಲ್ಲಿ ನಾನು ನೃಪತುಂಗ (ನನ್ನ ದೊಡ್ಡಮ್ಮನ ಮಗ , ನನಗಿಂತ ಒಂದು ವರ್ಷಕ್ಕೆ ದೊಡ್ಡವನು , ನಮ್ಮದೇ ಕಾಲೇಜು) ಇಬ್ಬರೂ ಸುಸ್ತಾಗಿ ಹೋಗಿದ್ದೆವು. ನಮ್ಮ ಅಕ್ಕ-ಪಕ್ಕದಲ್ಲಿ ಬರೀ ಗಂಡು ಹುಡುಗರೇ ಇದ್ದದ್ದನ್ನು ಗಮನಿಸಿದಾಗ ಇರಿಸು-ಮುರಿಸಾಗಿದ್ದು ನಿಜ. ಆದರೆ ಅವರಲ್ಲಿಬ್ಬರು ನೃಪತುಂಗನ ಶಾಲಾ ಸಹಪಾಠಿಗಳೆಂದೂ , ಅವರ ಸಹಾಯದಿಂದಲೇ ನಮಗೇ ಸೀಟು ಸಿಕ್ಕಿದಂದು ನೃಪತುಂಗನಿಂದ ತಿಳಿದು ಬಂದಾಗ ಕೃತಜ್ಞತೆ ಮೂಡಿತ್ತು . ಹಿಂದಿನ ದಿನ night out  ಮಾಡಿದ್ದರಿಂದಲೇ ಏನೋ , ಎಂದೂ ರೈಲಿನಲ್ಲಿ ನಿದ್ದೆ ಮಾಡದ ನನಗೂ ಸ್ವಲ್ಪ ಕಣ್ಣು ಮುಚ್ಚಿ ಬಂದಂತಾಗುತ್ತಿತ್ತು.ಹೀಗೆ ತೂಕಡಿಸುತ್ತಿರುವಾಗ ಕಾಲ ಮೇಲೆ ಏನೋ ಯಮಭಾರದಂತದ್ದು ಬಿದ್ದಂತಾಯ್ತು. ಕಣ್ಣುಜ್ಜಿ ನೋಡಿದರೆ ಎದುರು ಬದಿಯಲ್ಲಿ ಕುಳಿತಿದ್ದ ಹುಡುಗರಲ್ಲಿ ಒಬ್ಬ ಕೆಳಗೆ ಬಿದ್ದುಕೊಂಡಿದ್ದ. ನನ್ನ ಕಾಲಗಂಟಿನ ಮೇಲೆ ಬಿದ್ದದ್ದು ಅವನ ತಲೆ ಎಂದು ತಿಳಿದು ಭಯಂಕರ ಸಿಟ್ಟು ಬಂತು.
"ರೀ , ಮಿಸ್ಟರ್, ವಿದ್ಯಾವಂತರ ತರಹ ಕಾಣ್ತೀರಾ, ಆದರೂ ಹೀಗಡ್ತೀರಾ, ಹೆಂಗಸರ ಜೊತೆ ಹೇಗೆ behave ಮಾಡಬೇಕು ಅಂತ ಗೊತ್ತಗಲ್ವಾ, ಛೀ........ " ಇನ್ನೂ ಏನೇನೋ ಬೈದುಬಿಡುತ್ತಿದ್ದೆನೇನೋ, ನೃಪತುಂಗ ತಡೆಯದೇ ಹೋಗಿದ್ದರೆ , ಕೆಳಗೆ ಬಿದ್ದಾತನ ಜೀವವಿಲ್ಲದ ಒಂದು ಕಾಲನ್ನು ನೋಡದೇ ಇದ್ದಿದ್ದರೆ. ಒಂದು ಕಾಲಿನ ಮೊಣಕಾಲಿನ ಕೆಳಗಿನ ಭಾಗ ಜೀವವನ್ನೇ ಕಳೆದುಕೊಂಡಿತ್ತು. . ಪಾಪ ಎನ್ನಿಸಿತಾದರೂ "sorry" ಎಂದು ಕೇಳಲು ಅಹಂ ಅಡ್ಡ ಬಂದು ಸುಮ್ಮನಾಗಿ , ಸರಿದು ಕಿಟಕಿಯಾಚೆಗಿನ ಕತ್ತಲನ್ನು ದಿಟ್ಟಿಸುತ್ತಾ ಕುಳಿತೆ.
ಹಾಗೇ ಕುಳಿತವಳಿಗೆ ಬೆಳಿಗ್ಗೆ ನೃಪತುಂಗ ಹುಬ್ಬಳ್ಳಿಯಲ್ಲಿ ಇಳಿಯುವ ಮೊದಲು ಎಬ್ಬಿಸಿದಾಗಲೇ ಎಚ್ಚರವಾಗಿದ್ದು. ನೃಪತುಂಗನಿಗೆ bye  ಮಾಡಿ ನನ್ನ ಸೀಟಿಗೆ ಬಂದು ಕೂರುವುದರೊಳಗೆ ಅವನದ್ದೇ ಫೊನು " ಏ ಅನಾಮಿಕಾ , ನಾನು ರೈಲಿನಲ್ಲೇ ಒಂದು ಬ್ಯಾಗ್ ಬಿಟ್ಟೆ , ಕಪ್ಪು ಬಣ್ಣದ್ದು . ಒಂದು ಸಲ ನೋಡಿಬಿಡು . " ಹೌದು , ನನ್ನ ಸೀಟಿನ ಮುಂದೇ ಇತ್ತು , ಅದನ್ನು ತೆಗೆದು ನನ್ನ ಸೀಟಿನ ಕೆಳಗಿದ್ದ ನನ್ನ ಲಗ್ಗೇಜಿನ ಜೊತೆ ಸೇರಿಸಿಟ್ಟೆ. ಅಕ್ಕ ಪಕ್ಕ , ಎದುರಿಗಿದ್ದ ಹುಡುಗರೆಲ್ಲಾ ಹುಬ್ಬಳ್ಳಿಯಲ್ಲಿಯೇ ಇಳಿದಿದ್ದರು. ಸ್ವಲ್ಪ ಹೊತ್ತಿಗೇ ಪಕ್ಕದ ಬೋಗಿಯಿಂದ ಮತ್ತೊಬ್ಬ ಬಂದು ಒಂದು ಕಪ್ಪು ಬ್ಯಾಗ್ ನ್ನು ಹುಡುಕತೊಡಗಿದಾಗ ನನಗಾಶ್ಚರ್ಯ, ಅವನನ್ನುಕೇಳಿಯೇ ಬಿಟ್ಟೆ .
" ನೀವು ಹುಡುಕುತ್ತಿರುವ ಬ್ಯಾಗ್ ನೃಪತುಂಗ ನದ್ದೇ? "
" ಅಲ್ಲ, ನನ್ನ ಫ್ರೆಂಡ್ ಪ್ರಭಂಜನನದ್ದು . wildcraft ಬ್ಯಾಗ್. ಅವನು ಹುಬ್ಬಳ್ಳಿಯಲ್ಲಿ ಇಳಿದುಕೊಂಡ. ನಾನು ಬೆಳಗಾವಿಗೆ ಹೋಗುವವನಿದ್ದುದರಿಂದ ಹುಡುಕುತ್ತೇನೆಎಂದು ಒಪ್ಪಿಕೊಂಡೆ" ಎಂದು ಹೇಳಿ, " ನೀವೇನಾದರೂ ನೋಡಿದಿರಾ ?" ಎಂದು ಕೇಳಿದ .
ಸುತ್ತ ಮುತ್ತ ಕಣ್ಣು ಹಾಯಿಸಿ ಎಲ್ಲೂ ಕಾಣದಾದಾಗ " ನೋಡಿಲ್ಲವಲ್ಲಾ" ಎಂದೆ.
ಬೆಳಗಾವಿಯಲ್ಲಿ ರೈಲು ನಿತ್ತು ಇನ್ನೇನು ಇಳಿಯಬೇಕು ಎನ್ನುವಷ್ಟರ ಹೊತ್ತಿಗೆ ನೃಪತುಂಗನ ಮತ್ತೊಂದು ಕಾಲ್ " ಸಿಕ್ತೇನೇ ನನ್ನ ಬ್ಯಾಗ್ , diesel  ಅಂತ ಬರಕಂಡಿದೆ ನೋಡು,...." ಏನೇನೋ ಹೇಳುತ್ತಿದ್ದ . ನಾನು ತೆಗೆದಿರಿಸಿಕೊಂಡಿದ್ದನ್ನು ನೋಡಿದರೆ wildcraft , ಆದ ಪ್ರಮಾದದ ಅರಿವಾಯ್ತು, ಆ ಹುಡುಗ ಕೇಳಿದಾಗ ಒಂದು ಸಲ ನೋಡುವ ವ್ಯವಧಾನವನ್ನು ತೋರದೇ " ನೋಡಿಲ್ಲ" ಎಂದ ತಪ್ಪಿಗೆ ಮತ್ತೊಂದು ಬ್ಯಾಗನ್ನೂ ಹೊತ್ತು ಮನೆಗೆ ಬಂದೆ.
ಮನೆಗೆ ಬಂದರೆ ರೈಲಿನ ಕಥೆಯ ಸುಳಿವೂ ನೆನಪಿರದ ಹಾಗೆ ಅಪ್ಪ ಅಮ್ಮನನ್ನು ಭೇಟಿಯಾದ ಸಂಭ್ರಮದಲ್ಲಿ ಮುಳುಗಿದೆ. ಮಧ್ಯಾಹ್ನ ಊಟವಾದ ನಂತರ ಲಘು ನಿದ್ದೆ ಮಾಡಲು ಹೋದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಅದೇ wildcraft ಬ್ಯಾಗ್ ತನ್ನ ಅಸ್ತಿತ್ವವನ್ನು ಜ್ಞಾಪಿಸಿತು.ತೆಗೆಯಲೇ , ಬೇಡವೇ ಎಂಬ ಗೊಂದಲದಲ್ಲಿಯೇ ಬ್ಯಾಗ್ ನ್ನು ತೆರೆದೆ. ಒಂದು ಟವೆಲ್, ಒಂದು shaving set , ಐದಾರು english ಪುಸ್ತಕಗಳು , ಯಾವುವೂ ನನಗೆ ಆ ಬ್ಯಾಗ್ ನ್ನು ಹಿಂತಿರುಗಿಸುವಲ್ಲಿ ಸಹಾಯ ಮಾಡುವಂತಹ ಸಾಮಾಗ್ರಿಗಳಿರಲಿಲ್ಲ . ಮತ್ತೆ ನೋಡಿದರೆ ಆ ಪುಸ್ತಕಗಳ ಅಡಿಯಲ್ಲಿ ನಲುಗಿ ಹೋಗಿದ್ದರೂ ತನ್ನದೇ ಅಸ್ತಿತ್ವ ಕಾಯ್ದುಕೊಂಡಿರುವಂತೆ ಒಂದು ಡೈರಿ ಇತ್ತು . ಅದೇ ಈ ಕಥೆಯ ಜೀವಾಳ.
ಇನ್ನೊಬ್ಬರ ಡೈರಿಯನ್ನು ಓದಬಾರದೆಂಬ ಪ್ರಜ್ಞೆಯನ್ನು ಮೀರಿ ಕುತೂಹಲ ಬೆಳೆದು ನಿಂತಾಗ , ಆ ಪ್ರಜ್ಞೆಯ ಕೆನ್ನೆಗೆ ಹೊಡೆಯುವಂತೆ ಅವನ ಡೈರಿಯ ಮೊದಲ ಪುಟದಲ್ಲೇ " ಇದು ಒಬ್ಬ ಭಾವುಕನ ಖಾಸಗಿ ಪ್ರದೇಶ , ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ. " ಎಂದು ಬರೆದಿತ್ತು.ಮತ್ತೆ ಇದನ್ನು ಓದುವುದರಿಂದ ಯಾವ ರೀತಿಯಿಂದಲಾದರೂ ಬ್ಯಾಗ್ ನ್ನು ಹಿಂತಿರುಗಿಸಲು ಸಹಾಯ ಆಗಬಹುದೆಂದು ಸುಳ್ಳು ಸುಳ್ಳೇ ನನಗೆ ನಾನೇ ಕಾರಣ  ಕೊಟ್ಟುಕೊಂಡು ,ಓದಲಾರಂಭಿಸಿದೆ.   ಹೆಸರು ಮತ್ತು USN ಬಿಟ್ಟರೆ ಮತ್ತಾವ ವೈಯಕ್ತಿಕ ಮಾಹಿತಿಯೂ ಮೊದಲ ಪುಟಗಳಲ್ಲಿ ಬರೆದಿರಲಿಲ್ಲ . ( ನಮ್ಮದೇ ಕಾಲೇಜು , ೪ನೇ ಸೆಮೆಸ್ಟೆರ್ ಎಂದು ತಿಳಿದಿದ್ದು USNನಿಂದ ) ಬೇರೆ ದಾರಿಯಿಲ್ಲದೇ ಮಾರನೆಯೆ ದಿನ ಕಾಲೇಜಿಗೆ ಫೊನ್ ಮಾಡಿ ಕೇಳುವುದೆಂದು ನಿರ್ಧರಿಸಿ ಡೈರಿಯನ್ನು ಮಡಚಿಟ್ಟೆನಾದರೂ ಮತ್ತೆ ಕದ್ದು ಓದುವ ಮನಸಾಗಿ ತೆಗೆದು ಓದಲು ಕುಳಿತೆ.
ಡೈರಿ ಪ್ರಾರಂಭವಾಗುವುದು ೧-೬-೨೦೦೯ರಿಂದ , ಅಂದರೆ ಪ್ರಭಂಜನರ ಬ್ಯಾಚಿನ ಮೊದಲ ಬೇಸಿಗೆ ರಜೆ ಸುರುವಾದಂದಿನಿಂದ. " ಇದೇನೂ, ಈ ಡೈರಿ ಬರೆಯುವುದೇನೂ  ಎಂದು ಇಲ್ಲದ ಬಯಕೆ ಮೂಡಿ , ಆ ಕ್ಷಣದಲ್ಲಿ ದಾಖಲಿಸಲು ಆರಂಭಿಸಿದ ಹವ್ಯಾಸವಲ್ಲ , ರೂಢಿಸಿಕೊಳ್ಳಬೇಕೆಂದು ಬಹಳೇ ಪ್ರಯತ್ನ ಪಟ್ಟು , ಹಠ ಕಟ್ಟಿ ಕುಳಿತು ಸುರು ಮಾಡಿದ ಅಭ್ಯಾಸ. ಸುಳ್ಳು ಹೇಳುವುದು ಎಷ್ಟು ತಪ್ಪೋ , ಸತ್ಯವನ್ನು ಪೂರ್ತಿಯಾಗಿ ಹೇಳದೇ ಹೋಗುವುದೂ ಅಷ್ಟೇ ಪಾಪ, "ಅಶ್ವತ್ಥಾಮೋ ಹತಃ ಕುಂಜರಃ" ಎಂದ ಹಾಗೆ . ಸಾಮಾನ್ಯ ಮಾತ್ರದವರು ಸತ್ಯಕ್ಕೆ , ಪ್ರಾಮಾಣಿಕತೆಗೆ ತಪ್ಪಿ ನಡೆಯಬಾರದೆಂದರೆ ಹೆಜ್ಜೆ ಹೆಜ್ಜೆಗೂ ನಮ್ಮನ್ನು ತಿದ್ದುವ ಒಂದು ಶಕ್ತಿ ಬೇಕು , ಒಂದು ಸಾಕ್ಷಿ ಬೇಕು, ನಾನು  ಮನೆಯಲ್ಲಿದ್ದಾಗ ಅಕ್ಕ  ಉತ್ಪಲಾ ಇದ್ದ ಹಾಗೆ. ಆಸ್ತಿಕರಿಗೆ ದೇವರು ನೋಡುತ್ತಾನೆಂಬ ಹೆದರಿಕೆ ಇರುವ ಹಾಗೆ. ಅದೇ ಕಾರಣಕ್ಕೆ ನಾನು ಡೈರಿ ಬರೆಯಲಾರಂಭಿಸಿದ್ದು " ಎಂದು ಕಾರಣ ಕೊಟ್ಟುಕೊಳ್ಳುತ್ತಾನೆ.
                                                                                                                             ಮುಂದುವರಿಯುವುದು ...