Friday 21 November 2014

ಬೇಲೂರು, ಹಳೆಬೀಡು, ಶ್ರವಣಬೆಳಗೊಳ - ನಾನು ಕಂಡಂತೆ

ಇತಿಹಾಸವನ್ನು ಇಷ್ಟಪಡುವವರಿಗೆ ಬೇಲೂರು, ಹಳೆಬೀಡು ಚಿನ್ನದ ಗಣಿಯಿದ್ದಂತೆ, ಎಷ್ಟು ಸಲ ನೋಡಿದರೂ ಮುಗಿಯದು, ಎಷ್ಟು ಸಲ ಕಣ್ಣು ತುಂಬಿಕೊಂಡರೂ ಸಾಕೆನಿಸದು, ಎಷ್ಟು ಕೊಂಡಾಡಿದರೂ ಹೆಚ್ಚೆನಿಸದು. ಹೊಯ್ಸಳರು ಕಟ್ಟಿದ ಇಲ್ಲಿನ ದೇಗುಲಗಳು ಅತ್ಯುನ್ನತ ಶ್ರೇಣಿಯ ಶಿಲ್ಪಕಲೆಯ ತಾಣಗಳಾಗಿವೆ. ಹಳೆಬೀಡಿನ ಹೊರಭಾಗದ ಕೆತ್ತನೆಗಳಿಗೆ ಬೇಲೂರಿನ ಒಳಭಾಗದ ಕೆತ್ತನೆಗಳೇ ಸಾಟಿ, ಬೇರೆಲ್ಲ ಹೋಲಿಕೆಗಳೂ ಚಿಲ್ಲರೆ ಎನ್ನಿಸಿಬಿಡಬಹುದು. ಬೇಲೂರಿನ ಶಿಲಾಬಾಲಿಕೆಯರ ಬಗ್ಗಂತೂ ಮಾತನಾಡುವುದೇ ಬೇಡ. ಸೌಂದರ್ಯವನ್ನು ಹೋಲಿಸುವ ಮಾನವೇ ಆಗಿಬಿಟ್ಟಿವೆ ಈ ಶಿಲ್ಪಗಳು. ಇಂತಹ ಬೇಲೂರು,ಹಳೇಬೀಡಿಗೆ ಮತ್ತು ಶ್ರವಣಬೆಳಗೊಳಕ್ಕೆ ಹೋಗುತ್ತಿದ್ದೇವೆ, ಬರುತ್ತೀಯಾ? ಎಂದು ಬ್ಲಾಗ್ಗೆಳೆಯ(ಬ್ಲಾಗು+ಗೆಳೆಯ, ಕಂಗ್ಲೀಶು ಸಂಧಿ) ಪ್ರಶಸ್ತಿ ಕೇಳಿದಾಗ ಇಲ್ಲವೆಂದು ನಾನಾದರೂ ಹೇಗೆ ಹೇಳಿಯೇನು. ಹೀಗೆ ಬೇಲೂರು ಹಳೇಬೀಡುಗಳನ್ನು ಎರಡನೇ ಬಾರಿ ನೋಡುವ ಭಾಗ್ಯ ನನ್ನದಾಗಿ, ಒಂದು ಭಾನುವಾರ(೦೯/೧೧/೨೦೧೪)ದಂದು ಪ್ರಶಸ್ತಿ, ಹರೀಶ್, ಸುಮುಖರ ಜೊತೆ ಹೊಯ್ಸಳರ ಶಿಲಾಸ್ವರ್ಗಗಳಿಗೆ ಹೊರಟಿದ್ದೆ.

ಒಡೆಗಲ್ ಬಸದಿ
ಮಾಗಿಯ ಬೆಳಗ್ಗೆ ನಾಲ್ಕೂವರೆಗೆ ಎದ್ದು ನಿತ್ಯಕರ್ಮಾದಿಗಳನ್ನು ಮುಗಿಸಿಕೊಂಡು ಬುಕ್ ಮಾಡಿದ್ದ ಕಾರನ್ನು ಹತ್ತಿ ಕೂತಾಗ ಗಂಟೆ ಐದೂಮುಕ್ಕಲು. ಮೊದಲು ಹೊರಟಿದ್ದು ತ್ಯಾಗಮೂರ್ತಿ ಗೊಮ್ಮಟೇಶನ ಊರು ಶ್ರವಣಬೆಳಗೊಳಕ್ಕೆ. ಊರ ಒಳಹೊಕ್ಕುವ ಮೊದಲೇ ದೂರಿಂದಲೇ ಕಾಣಸಿಗುತ್ತಾನೆ ಭವ್ಯಮೂರ್ತಿ ಗೊಮ್ಮಟೇಶ್ವರ. ಶ್ರವಣಬೆಳಗೊಣದಲ್ಲಿ ಮುಖ್ಯವಾಗಿ
ಇರುವುದು ಎರಡು ಬೆಟ್ಟಗಳು. ಗೊಮ್ಮಟೇಶ್ವರ ಇರುವ ವಿಂಧ್ಯಗಿರಿ ಮತ್ತು ಚಂದ್ರಗುಪ್ತ ಮೌರ್ಯ ಇದ್ದ ಚಂದ್ರಗಿರಿ. ವಿಂಧ್ಯಗಿರಿಯ ಬುಡದಲ್ಲಿ ಎಳನೀರೊಂದನ್ನು ಕುಡಿದು ಬೆಟ್ಟ ಹತ್ತಲು ಸುರುವಿಟ್ಟಾಗ ೯ ಗಂಟೆ. ಹತ್ತಿದಷ್ಟಕ್ಕೂ ಮುಗಿಯದ ಮೆಟ್ಟಿಲುಗಳನ್ನು ಹತ್ತುತ್ತ ಹಿಂದೆ ಕಾಣುವ ಕಲ್ಯಾಣಿ ಅದರ ಹಿನ್ನೆಲೆಯಲ್ಲಿನ ಚಂದ್ರಗಿರಿಯ ಸೊಬಗನ್ನು ಸವಿಯುವುದೇ ಸುಖ.  ಶ್ರವಣಬೆಳಗೊಳ ಪ್ರಸಿದ್ಧವಾಗಿದ್ದು ವೈರಾಗ್ಯದ ಸಂಕೇತವಾದ ಒಂದು ಭವ್ಯ ಮೂರ್ತಿಯಿಂದಲೇ ಆದರೂ, ಇಲ್ಲಿರುವ ಉಳಿದ ಶಿಲ್ಪಗಳು, ಬಸದಿಗಳೂ ಶಿಲ್ಪ ಸೌಂದರ್ಯದಲ್ಲಿ ಕಡಿಮೆಯೇನಿಲ್ಲ. ಬೆಟ್ಟ ಹತ್ತುವಾಗ ಮೊದಲು ಸಿಗುವುದು ಒಡೆಗಲ್ ಬಸದಿ(ಮುಖ್ಯ ಮಂಟಪಕ್ಕೆ ಓರೆಯಾಗಿಟ್ಟ ಕಲ್ಲುಗಳ ಆಧಾರ ಇರುವುದರಿಂದ ಈ ಹೆಸರು) ಅಥವಾ ತ್ರಿಕೂಟ ಬಸದಿ (ಮೂರು ಪೀಠಗಳಿರುವುದರಿಂದ ಈ ಹೆಸರು). ನೇಮಿನಾಥ, ಶಾಂತಿನಾಥ, ವೃಷಭನಾಥರೆಂಬ ಮೂವರು ತೀರ್ಥಂಕರರ ಪೂಜೆ ಇಲ್ಲಿ ನಡೆಯುತ್ತದೆ. ಆ ಶಾಂತ ವಾತಾವರಣದಲ್ಲಿ ಬಿಳಿ ಬಣ್ಣದ ಬಟ್ಟೆಯನ್ನು ಸುತ್ತಿಕೊಂಡಿದ್ದ ಅರ್ಚಕರು ತಿಲಕ ಇಟ್ಟಾಗ ರೋಮಾಂಚನದಂತಹ ಸುಂದರ ಅನುಭವವಾಯ್ತು. ಬಸದಿ, ಮೂರ್ತಿಗಳಷ್ಟೇ ಅಲ್ಲದೇ ಈ ಬೆಟ್ಟದ ಮೇಲೆ ಅಲ್ಲಲ್ಲಿ ಶಾಸನಗಳನ್ನು, ಸಾವಿರಾರು ವರ್ಷಗಳ ಹಿಂದಿನ ಬರಹಗಳನ್ನು ಗಮನಿಸಬಹುದು.
ವೈರಾಗ್ಯಮೂರ್ತಿ ಗೊಮ್ಮಟೇಶ್ವರ

ಅಲ್ಲಿಂದ ದಾಟಿ ಮುಂದೆ ಸಾಗಿದರೆ ಸಿಗುವುದು ಚಾವುಂಡರಾಯನ ತ್ಯಾಗದ ಕಂಬ. ಎರಡಂತಸ್ತಿನ ಈ ಕಂಬದಿಂದ ಗಂಗಮಂತ್ರಿ ಚಾವುಂಡರಾಯ ಬಡಬಗ್ಗರಿಗೆ ದಾನಮಾಡುತ್ತಿದ್ದುದಲ್ಲದೇ ತನ್ನ ಜೀವನವನ್ನೂ ಇಲ್ಲಿಯೇ ತ್ಯಾಗ ಮಾಡಿದನೆಂಬ ಪ್ರತೀತಿ ಇದೆ. ಮುಂದೆ ಸಾಗಿದರೆ ಸಿಗುವುದು ಗೊಮ್ಮಟನ ಮಂದಿರದ ದ್ವಾರ, ’ಅಖಂಡ ಬಾಗಿಲು’. ದೇಶದಲ್ಲಿಯೇ ದೊಡ್ಡದಾದ ಪದ್ಮಪಾಣಿಯಾಗಿ ಕುಳಿತ ಗಜಲಕ್ಷ್ಮಿಯ ಉಬ್ಬುಶಿಲ್ಪವನ್ನು ಈ ಬಾಗಿಲಿನ ಮೇಲೆ ಕಾಣಬಹುದು. ಇಲ್ಲಿಯೇ ಅಕ್ಕಪಕ್ಕದಲ್ಲಿ ಬಾಹುಬಲಿ ಮತ್ತು ಭರತನ ಅಪರೂಪದ, ಆಳೆತ್ತರದ ವಿಗ್ರಹಗಳಿವೆ. ಇದೆಲ್ಲವೂ ಒಂದು ತೂಕವಾದರೆ ಮುಂದೆ ಇರುವ ಬಾಹುಬಲಿಯ ಮೂರ್ತಿಯದ್ದೇ ಒಂದು ತೂಕ. ಎಲ್ಲವನ್ನೂ ತ್ಯಾಗ ಮಾಡಿ, ವೈರಾಗ್ಯದ ಮೂರ್ತರೂಪವಾಗಿ ನಿಂತ ಬಾಹುಬಲಿಯ ಗಂಗರ ಶಿಲ್ಪಕಲೆಯ ಅದ್ಭುತ ಸಾಧನೆ. ಬೋಳು ಬೆಟ್ಟದ ಮೇಲೆ ಕ್ರೇನುಗಳಿಲ್ಲದ ಕಾಲದಲ್ಲಿ ೫೭ ಅಡಿ ಎತ್ತರದ ಈ ಏಕಶಿಲಾಮೂರ್ತಿಯನ್ನು, ಈ ಬಸದಿಗಳನ್ನು ಕೆತ್ತಿ, ನಿಲ್ಲಿಸಿದ ಶಿಲ್ಪಿಗಳ ಬಗ್ಗೆ ಹೆಮ್ಮೆ ಮೂಡುತ್ತದೆ. ೧೧ ಶತಮಾನಗಳಷ್ಟು ದೀರ್ಘಕಾಲ ಬಿಸಿಲು, ಗಾಳಿ, ಮಳೆಗೆ ಮೈಯ್ಯೊಡ್ಡಿ ನಿಂತ ಗೊಮ್ಮಟನ ಭವ್ಯ ಮೂರ್ತಿಯ ಕಾಲ್ಬುಡದಲ್ಲಿ ನಿಂತಾಗ ನಾವೆಲ್ಲ ಎಷ್ಟು ಚಿಕ್ಕವರು ಎಂಬ ನಿಜಭಾವ ಮನಸ್ಸಲ್ಲಿ ಮೂಡಿತ್ತು.

ಚಾವುಂಡರಾಯ ಬಸದಿ
ವಿಂಧ್ಯಗಿರಿಯ ಎದುರಿರುವ ಪುಷ್ಕರಣಿಯನ್ನು(ಈ ಪುಷ್ಕರಣಿಯಿಂದಲೇ ಬೆಳಗೊಳ(ಬಿಳಿ ಕೊಳ) ಎಂಬ ಹೆಸರು ಬಂದಿರುವುದು) ಬಳಸಿ ಹೋದರೆ ಸಿಗುವುದು ಚಂದ್ರಗಿರಿ, ವಿಂಧ್ಯಗಿರಿಗೆ ಹೋಲಿಸಿದರೆ ಇದು ಸ್ವಲ್ಪ ಚಿಕ್ಕದಿರುವುದರಿಂದ ಚಿಕ್ಕಬೆಟ್ಟ ಎಂಬ ಹೆಸರೂ ಇದೆ. ಚಂದ್ರಗುಪ್ತ ಮೌರ್ಯ ತನ್ನ ಮಗ ಬಿಂದುಸಾರನಿಗೆ ಪಟ್ಟಾಭಿಷೇಕ ಮಾಡಿ ಗುರು ಭದ್ರಬಾಹುರಿಂದ ಜೈನದೀಕ್ಷೆಯನ್ನು ತೆಗೆದುಕೊಂಡು ಉಪವಾಸ ಮಾಡಿ ಮರಣವನ್ನಪ್ಪಿದನೆಂದು ಹೇಳಲಾಗಿರುವ ಗುಹೆ ಇಲ್ಲಿದೆ. ಅಷ್ಟೇ ಅಲ್ಲದೇ ಈ ಬೆಟ್ಟದ ಮೇಲೆ ಕತ್ತಲೆ ಬಸದಿ, ಚಂದ್ರಗುಪ್ತ ಬಸದಿ, ಶಾಸನ ಬಸದಿ, ಶಾಂತಿನಾಥ ಬಸದಿ ಹೀಗೆ ಒಟ್ಟಾರೆ ೧೪ ಬಸದಿಗಳಿವೆ. ಇವುಗಳ ಮಧ್ಯ ಗಮನ ಸೆಳೆಯುವುದು ಚಾವುಂಡರಾಯ ಬಸದಿ. ’ಬಿರುದುರುವಾರಿಗಳ
ಯಕ್ಷಿಯ ಮೂರ್ತಿ
ಯಕ್ಷಿಣಿಯ ಮೂರ್ತಿ
ಮುಖತಿಳಕ’ ಎಂಬ ಬಿರುದನ್ನು ಹೊಂದಿದ್ದ ಗಂಗಾಚಾರಿ ಕೆತ್ತಿದ ನೇಮಿನಾಥರ ವಿಗ್ರಹವನ್ನು ಹೊಂದಿರುವ ಈ ಎರಡಂತಸ್ತಿನ ಬಸದಿಯ ಹೊರಗೋಡೆಯ ಮೇಲೆ ಅತ್ಯಂತ ಸುಂದರ ಕೆತ್ತನೆಗಳಿವೆ. ಇದನ್ನು ಸ್ವತಃ ಚಾವುಂಡರಾಯನೇ ಕಟ್ಟಿಸಿದನೇ ಅಥವಾ ಅವನ ನೆನಪಲ್ಲಿ ಬೇರಾರೋ ಕಟ್ಟಿಸಿದರೋ ಎಂಬ ಬಗ್ಗೆ ಗೊಂದಲಗಳಿವೆ. ಈ ಬಸದಿಗಳಲ್ಲಿ ಗಮನ ಸೆಳೆಯುವ ಶಿಲ್ಪಗಳೆಂದರೆ ಯಕ್ಷಿ ಮತ್ತು ಯಕ್ಷಿಣಿಯರದ್ದು. ಬಸದಿಗಳಲ್ಲಿನ ತೀರ್ಥಂಕರರ ಮೂರ್ತಿ ದಿವ್ಯವಾಗಿ ಅಲೌಕಿಕವಾಗಿ ಕಂಡರೆ ಈ ಯಕ್ಷಿ-ಯಕ್ಷಿಣಿಯರ ಮೂರ್ತಿಗಳು ಶಿಲ್ಪಕಲೆಯ ಅದ್ಭುತ ಸಾಧನೆಗಳಾಗಿ ಆಕರ್ಷಿಸುತ್ತವೆ. ಹೆಚ್ಚು ಕಡಿಮೆ ೧೧ ಶತಮಾನಗಳನ್ನು ಕಂಡಿರುವ ಈ ಗಂಗರ ಬಸದಿಗಳು ಮುಸ್ಲಿಂ ರಾಜರ ಧಾಳಿಗೂ, ಬ್ರಿಟಿಷರ ಕಳ್ಳತನಕ್ಕೂ ತುತ್ತಾಗದೇ ಉಳಿದಿದ್ದು ಜೈನಭಕ್ತರ, ಕಲಾರಸಿಕರ ಪುಣ್ಯ ಎನ್ನಿಸುತ್ತದೆ.


ಚೆನ್ನಕೇಶವ ದೇವಸ್ಥಾನದ ಪ್ರವೇಶದ್ವಾರ
ಗಂಗರ ಶ್ರವಣಬೆಳಗೊಳವನ್ನು(ಹೊಯ್ಸಳ ಶಿಲ್ಪಕಲಾಕೃತಿಗಳು ಇಲ್ಲಿ ಇವೆಯಾದರೂ ಬೆಳಗೊಳ ಹೆಚ್ಚು ಕಡಿಮೆ ಪೂರ್ತಿಯಾಗಿ ಗಂಗರದ್ದೇ) ನೋಡಿಯಾದ ಮೇಲೆ ಹೊರಟಿದ್ದು ಹೊಯ್ಸಳರ ಬೇಲೂರಿಗೆ. ಹೊಯ್ಸಳರ ರಾಜಧಾನಿಯಾಗಿ, ಶಿಲಾಬಾಲಿಕೆಯರ ತವರೂರಾಗಿ, ಚೆನ್ನಕೇಶವನ ನೆಲೆಯೂರಾಗಿ, ಶಿಲ್ಪಕಲಾಸಗ್ಗವಾಗಿ ಮೆರೆದ ಮೆರೆಯುತ್ತಿರುವ ಬೇಲೂರಿನ ಚೆನ್ನಕೇಶವ ದೇವಸ್ಥಾನ ಸಮುಚ್ಛಯದಲ್ಲಿ ಚೆನ್ನಕೇಶವ ದೇವಸ್ಥಾನವಲ್ಲದೇ ಕಪ್ಪೆ ಚೆನ್ನಿಗರಾಯ, ಸೌಮ್ಯನಾಯಕಿ(ಲಕ್ಷ್ಮಿ), ರಂಗನಾಯಕಿ(ಅಂಡಾಳ್) ದೇವಸ್ಥಾನ,  ವೀರ ನಾರಾಯಣ ದೇವಸ್ಥಾನಗಳಿವೆ. ಆದರೂ ಮುಖ್ಯ ಆಕರ್ಷಣೆ ಚನ್ನಕೇಶವ ದೇವಸ್ಥಾನವೇ.ಬೇಲೂರಿನ ಚೆನ್ನಕೇಶವ ದೇವಾಲಯ ವಿಜಯನಗರ ಸಾಮ್ರಾಟರ ಕುಲದೇವತೆಯಾದ್ದರಿಂದ ವಿಜಯನಗರದ  ರಾಜರ ಕೊಡುಗೆಗಳೂ ಇಲ್ಲಿವೆ. ಚೆನ್ನಕೇಶವ ದೇವಾಲಯದ ಎದುರಿಗಿರುವ ಗರುಡಸ್ಥಂಭ, ಎದುರಿಗಿರುವ ರಾಜಗೋಪುರಗಳು ವಿಜಯನಗರ ಸಾಮ್ರಾಜ್ಯದ ರಚನೆಗಳು.

ಚೋಳರ ವಿರುದ್ಧದ ತಲಕಾಡು ಯುದ್ಧದ ವಿಜಯದ ನೆನಪಿಗಾಗಿ ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನ ಚೆನ್ನಕೇಶವ ದೇವಸ್ಥಾನವನ್ನು ಕಟ್ಟಿಸಲು ಪ್ರಾರಂಭಿಸಿದನಾದರೂ ಈ
ದೇವಸ್ಥಾನ ಕಟ್ಟಿ(ಕೆತ್ತಿ) ಮುಗಿದಿದ್ದು ೧೦೩ ವರ್ಷಗಳ ನಂತರ, ವಿಷ್ಣುವರ್ಧನನ ಮೊಮ್ಮಗ ವೀರಬಲ್ಲಾಳನ ಕಾಲದಲ್ಲಿ. ಹೊಯ್ಸಳರ ಶಿಲ್ಪಕಲೆಯಂತೆ ಎತ್ತರಿಸಿದ ನಕ್ಷತ್ರಾಕಾರದ ಜಗಲಿಯ ಮೇಲೆ ಕಟ್ಟಿರುವ ಈ ಏಕಕೂಟ ದೇವಸ್ಥಾನ ಉಳಿದೆಲ್ಲ ದೇವಸ್ಥಾನಗಳಿಗಿಂತ ಎದ್ದು ನಿಲ್ಲುವುದು ಒಳಾಂಗಣದಲ್ಲಿರುವ ಸೂಕ್ಷ್ಮಕೆತ್ತನೆಗಳಿಗೆ, ಹೊರ ಆವರಣದಲ್ಲಿರುವ ಶಿಲಾಬಾಲಿಕೆಯರ ಸೌಂದರ್ಯಕ್ಕೆ, ಪ್ರತೀ ಶಿಲ್ಪದಲ್ಲೂ ವ್ಯಕ್ತವಾಗಿರುವ ಕಲಾಭಿರುಚಿಗೆ. ಒಳಾಂಗಣದಲ್ಲಿ ಒಟ್ಟಾರೆಯಾಗಿ ೪೮ ಕಂಬಗಳಿದ್ದು, ಪ್ರತಿಯೊಂದು ಕಂಬವೂ ಉಳಿದ ಕಂಬಗಳಿಗಿಂತ ಬಹು ಭಿನ್ನವಾದ ಕೆತ್ತನೆಯನ್ನು ಹೊಂದಿದೆ.  ದೇಗುಲದ ಬಲಭಾಗದಲ್ಲಿರುವ ಒಂದು ಕಂಬದ ಮೇಲೆ ದೇಗುಲದಲ್ಲಿರುವ ಎಲ್ಲ ಶಿಲ್ಪಗಳದ್ದೂ ಚಿಕ್ಕ ಪ್ರತಿಕೃತಿಯನ್ನು ಕೆತ್ತಲಾಗಿದೆ. ಮೊದಲು ಈ ಕಂಬವನ್ನು ಕಂಬದ ಮಧ್ಯದ ಆಧಾರದ ಮೇಲೆ ತಿರುಗಿಸಲಾಗುತ್ತಿಂತೆ, ೧೯ನೇ ಶತಮಾನದಲ್ಲಿ ಗೋಪುರ ಕುಸಿದಾಗ ಈ ಕಂಭದ ಮೇಲೆ ಭಾರ ಬಿದ್ದುದರಿಂದ ಈಗ ಅದು ಸಾಧ್ಯವಿಲ್ಲ. ದೇವಮೂರುತಿಯ ಎದುರಿರುವ ಜಯ-ವಿಜಯರ ಮೂರ್ತಿಗಳು, ದೇವಸ್ಥಾನದ ಒಳದ್ವಾರದ ಮೇಲಿರುವ ಅತಿಸೂಕ್ಷ್ಮ ಕೆತ್ತನೆಗಳು, ಅತಿಸುಂದರಿ ಮೋಹಿನಿ ರೂಪಿ ವಿಷ್ಣುವಿನ ವಿಗ್ರಹ, ಛಾವಣಿಯಲ್ಲಿ ಕೆತ್ತಿರುವ ಸುಂದರ ಕಲಾಕೃತಿಗಳು, ಸಾಕ್ಷಾತ್ ಚೆನ್ನಕೇಶವನ ವಿಗ್ರಹ ಎಲ್ಲವೂ ಸೇರಿ ಬೇಲೂರಿನ ಚೆನ್ನಕೇಶವ ದೇವಾಲಯವನ್ನು
ಹೊಯ್ಸಳರ ರಾಜಲಾಂಛನ- ಹುಲಿಯನ್ನು ಕೊಲ್ಲುತ್ತಿರುವ ಸಳ (ಚೆನ್ನಕೇಶವ ದೇಗುಲದ ಬಾಗಿಲಲ್ಲಿ)
ಅತ್ಯಂತ ಸುಂದರ ಒಳಾಂಗಳವುಳ್ಳ ದೇಗುಲವಾಗಿ ಮಾಡುತ್ತವೆ. ಈ ದೇವಾಲಯದಲ್ಲಿರುವ ಒಟ್ಟೂ ೪೨ ಶಿಲಾಬಾಲಿಕೆಯರಲ್ಲಿ ನಾಲ್ಕು ಶಿಲಾಬಾಲಿಕೆಯರ ವಿಗ್ರಹಗಳು ದೇವಸ್ಥಾನದ ಒಳಭಾಗದಲ್ಲಿ ಮೂರ್ತಿಯ ಎದುರಿನ ಕಂಬಗಳ ಮೇಲಿದ್ದು(ಇವುಗಳಲ್ಲಿ ಒಂದು ಸ್ವತಃ ನಾಟ್ಯರಾಣಿ ಶಾಂತಲಾದೇವಿಯನ್ನೇ ಮಾದರಿಯಾಗಿಟ್ಟುಕೊಂಡು ಕೆತ್ತಿದ್ದೆನ್ನಲಾಗಿದೆ) ಉಳಿದ ೩೮ ವಿಗ್ರಹಗಳು ಹೊರ ಆವರಣದ ಗೋಡೆಗಳ ಮೇಲಿವೆ. ದರ್ಪಣಸುಂದರಿ, ಶುಕಭಾಷಿಣಿ, ಕೀರವಾಣಿ, ಮರ್ಕಟಮೋಹಿನಿ  ಹೀಗೆ ವಿವಿಧ ಭಂಗಿಗಳಲ್ಲಿರುವ ಈ ಶಿಲಾಬಾಲಿಕೆಯರ ಶಿಲ್ಪಗಳು ಅತಿಸುಂದರ, ಅತಿಸೂಕ್ಷ್ಮ ಕೆತ್ತನೆಗೆ ಮಾದರಿಗಳಾಗಿವೆ. ಪ್ರತೀ ಚಿತ್ರದಲ್ಲಿಯೂ ಅತಿ ಚಿಕ್ಕ ಮಾಹಿತಿಗೂ ಗಮನಕೊಟ್ಟು ಕೆತ್ತಲಾಗಿದೆ. ಉದಾಹರಣೆಗೆ ಒಂದು ಶಿಲ್ಪದಲ್ಲಿ ಸುಂದರಿ ಹಲಸಿನ ಹಣ್ಣನ್ನು ತಿನ್ನುತ್ತಿರುತ್ತಾಳೆ, ನೊಣವೊಂದು ಹಣ್ಣಿನ ಹತ್ತಿರ ಬಂದಿರುತ್ತದೆ, ಹಲ್ಲಿಯೊಂದು ನೊಣವನ್ನು ಹಿಡಿಯಲು ಕಾಯುತ್ತಿರುತ್ತದೆ, ಹಲ್ಲಿಯ ಮುಖವೂ ಸ್ಪಷ್ಟವಾಗಿ ಕಾಣುವ ಹಾಗೆ ಕೆತ್ತಿರುವುದು ಹೊಯ್ಸಳ ಶಿಲ್ಪಿಗಳ ಹೆಗ್ಗಳಿಕೆಯೇ. ಇನ್ನೊಂದು ಉದಾಹರಣೆಯೆಂದರೆ, ಒಬ್ಬ ಸುಂದರಿ ಸ್ನಾನ ಮಾಡಿ ಅಲಂಕಾರ ಮಾಡಿಕೊಂಡು ಪ್ರಿಯನಿಗಾಗಿ ಕಾಯುತ್ತಿರುತ್ತಾಳೆ, ಸಖಿಯು ಅವಳಿಗೆ ಬಾಳೆಹಣ್ಣನ್ನು ಸುಲಿದು ಕೊಡುತ್ತಿರುತ್ತಾಳೆ. ಕಾಲಬುಡದಲ್ಲಿರುವ ಮಂಗವೊಂದು ಹಣ್ಣಿಗಾಗಿ ಕಾತರದಿಂದ ಕಾಯುತ್ತಿರುವುದಕ್ಕೂ, ಸುಂದರಿ ಗಂಡನಿಗೆ ಕಾಯುತ್ತಿರುವುದಕ್ಕೂ ಸಮೀಕರಿಸಿ ತೋರಿಸಲಾಗಿದೆ. ಶಕ್ತಿಯ ಪ್ರತೀಕವಾದ ಆನೆ,
ಚೆನ್ನಕೇಶವ ದೇವಾಲಯದ ದೀಪಸ್ಥಂಭ - ಏಕಶಿಲಾ ರಚನೆ
ಧೈರ್ಯದ ಪ್ರತೀಕವಾದ ಸಿಂಹ, ವೇಗದ ಗುರುತಾದ ಕುದುರೆ ಹೀಗೆ ಮೂರು ಸಾಲುಗಳಲ್ಲಿ ರಾಜನಿಗಿರಬೇಕಾದ ಗುಣಗಳನ್ನು ದೇವಸ್ಥಾನದ ಸುತ್ತಲೂ ಹೊರಗೋಡೆಯಲ್ಲಿ ಕೆತ್ತಿ ನಿಲ್ಲಿಸಲಾಗಿದೆ. ಅದರ ಮೇಲೆ ಪುರಾಣಗಳ ವಿವಿಧ ಸನ್ನಿವೇಶಗಳನ್ನು, ವಿವಿಧ ದೇವರುಗಳ ಹಲವಾರು ಭಂಗಿಗಳನ್ನು ಕೆತ್ತಲಾಗಿದ್ದು ಇಲ್ಲಿ ಒಟ್ಟಾರೆ ೧೦,೦೦೦ ಇಂತಹ ಶಿಲ್ಪಕಲಾಕೃತಿಗಳಿವೆ. ದೇವರಿಗೇ ಮೋಡಿ ಮಾಡುವಂತಹ ಈ ಶಿಲ್ಪಕಲೆಗೆ ಹುಲುಮಾನವರಾದ ನಾವು ಮರುಳಾಗುವುದು ದೊಡ್ಡ ವಿಷಯವೇ? ಮತ್ತೊಂದು ವಿಶೇಷವೆಂದರೆ ೯ ಶತಮಾನಗಳಷ್ಟು ದೀರ್ಘಕಾಲದಿಂದ ಇಲ್ಲಿ ದಿನವೂ ಪೂಜೆ ಆಗುತ್ತಿರುವುದು ಮತ್ತು ಮತಾಂಧ ಧಾಳಿಕೋರರ ಧಾಳಿಗೆ ಇದು ತುತ್ತಾಗದೇ ಇರುವುದು.

ಚೆನ್ನಕೇಶವ ದೇವಸ್ಥಾನದ ಹಿಂಭಾಗದಲ್ಲಿ ರಂಗನಾಯಕಿ ಮತ್ತು ಸೌಮ್ಯನಾಯಕಿಯರ ದೇವಸ್ಥಾನಗಳಿವೆ. ಗೈಡುಗಳು ಈ ದೇವಸ್ಥಾನಗಳ ಬಗ್ಗೆ ಮಾಹಿತಿಗಳನ್ನು ನೀಡುವುದಿಲ್ಲವಾದರೂ ಇವುಗಳ ಅನುಪಮ ಶಿಲ್ಪಕಲೆಗಳು ಆಸಕ್ತರನ್ನು ಸೆಳೆಯುತ್ತವೆ. ಇವೇ ದೇವಾಲಯಗಳು ಬೇರೆ ಊರಲ್ಲೆಲ್ಲಾದರೂ ಇದ್ದಿದ್ದರೆ ಇವೇ ಪ್ರಸಿದ್ಧ ದೇಗುಲಗಳಾಗಿ ಮೆರೆಯುತ್ತಿದ್ದವೇನೋ, ಆದರೆ
ಬೇಲೂರಿನ ಚೆನ್ನಕೇಶವನ ಪ್ರಭೆಯೆದುರು ಇವು ಸ್ವಲ್ಪ ಮಂಕಾದಂತೆ ಕಾಣುತ್ತವೆ. ಸುಂದರ ಕಂಬಗಳನ್ನು ಬೇಲಿಗೆ ಹಾಕಿರುವದನ್ನು ನೋಡಿದಾಗ ಇರುವ ಮನಸ್ಸು ಅವುಗಳ ಈ ಪಾಡಿಗೆ ಮರುಗಬೇಕೋ, ಅಥವಾ ಇಷ್ಟೆಲ್ಲಾ ಶಿಲ್ಪಕಲಾಸಂಪತ್ತು ಎಂದು ಹೆಮ್ಮೆಪಡುವುದೋ ತಿಳಿಯದೇ ಶ್ರೀಗಂಧದ ಮರವನ್ನು ಕಟ್ಟಿಗೆಯಾಗಿ ಉಪಯೋಗಿಸಿದ ಕಮ್ಮಾರನ ಕಥೆಯ ನೆನಪಾಗುತ್ತದೆ. ಇದೇ ದೇಗುಲದ ಆವರಣದಲ್ಲಿ ನಿಲ್ಲಿಸಿಟ್ಟ(ನೆನಪಿಡಿ. ಹುಗಿಯದೇ, ಕೇವಲ ನಿಲ್ಲಿಸಿಟ್ಟ) ದೀಪಸ್ಥಂಭವೊಂದಿದ್ದು, ಬರೀ ಭಾರಕೇಂದ್ರದ** ಆಧಾರದ ಮೇಲೆ ೯೦೦ ವರ್ಷಗಳಿಂದ ನಿಂತಿರುವುದು ವೈಜ್ಞಾನಿಕ ತಿಳುವಳಿಕೆಗೆ ಸಾಕ್ಷಿ.

ಹೊಯ್ಸಳೇಶ್ವರ ದೇವಾಲಯ, ಹಳೆಬೀಡು
ಬೇಲೂರನ್ನು ಬಿಟ್ಟು ಮುಂದೆ ಹೋಗಿದ್ದು ಹೊಯ್ಸಳರ ರಾಜಧಾನಿ ಹಳೇಬೀಡಿಗೆ. ಎರಡು ವಿಷ್ವಪ್ರಸಿದ್ಧ ಪ್ರವಾಸಿಕೇಂದ್ರಗಳನ್ನು ಜೋಡಿಸುವ ಬೇಲೂರು-ಹಳೆಬೀಡು ರಸ್ತೆಯೂ ಒಂದು ಮಟ್ಟಕ್ಕೆ ಉತ್ಖನನಕ್ಕೆ ಇಡಾಗಿದ್ದು, ವಾಹನಚಾಲನೆ ನರಕಸದೃಶವಾಗಿದೆ. ಬೇಲೂರು ಕೇಶವರೂಪಿ ವಿಷ್ಣುವಿನದಾದರೆ ಹಳೆಬೀಡು ಹೊಯ್ಸಳೇಶ್ವರ ಎಂಬ ಹೆಸರಿನಿಂದ ಪರಿಚಿತನಾಗಿರುವ ಶಿವನದ್ದು. ಈ ದೇಗುಲ ನಕ್ಷತ್ರಾಕಾರದ ಎತ್ತರಿಸಿದ ಜಗುಲಿಯ ಮೇಲಿರುವ ದ್ವಿಕೂಟ ರಚನೆ. ಒಂದು ಭಾಗದಲ್ಲಿ ಹೊಯ್ಸಳೇಶ್ವರನ ಪೂಜೆ ನಡೆದರೆ(ಹೊಯ್ಸಳೇಶ್ವರ ಎಂಬುದು ರಾಜ ವಿಷ್ಣುವರ್ಧನನ ಬಿರುದೂ ಸಹ)
ಹೊಯ್ಸಳೇಶ್ವರ ದೇವಾಲಯದ ನಂದಿ
ಮತ್ತೊಂದು ಭಾಗದಲ್ಲಿ ಶಾಂತಲೇಶ್ವರನ(ಶಾಂತಲೇಶ್ವರ ಹೆಸರು ರಾಣಿ ಶಾಂತಲೆಯ ಹೆಸರಿನಿಂದ ಬಂದಿದ್ದು) ಪೂಜೆ ನಡೆಯುತ್ತದೆ. ಎರಡು ದೇವಮೂರ್ತಿಯ ಮುಂದೂ ಕಲ್ಲಿನಲ್ಲಿ ಪ್ರತಿಬಿಂಬ ಕಾಣುವಷ್ಟು ನುಣುಪಾದ ಕಲ್ಲಿನ ಬೃಹದಾಕಾರದ ಒಂದೊಂದು ನಂದಿಯ ವಿಗ್ರಹಗಳಿವೆ. ಈ ದೇವಸ್ಥಾನವು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ತೆರೆದಿದ್ದು ಇದರ ಆವರಣದಲ್ಲಿ ಪುರಾತತ್ವ ಇಲಾಖೆಯವರ ಒಂದು ವಸ್ತು ಸಂಗ್ರಹಾಲಯವಿದೆ.

ಗಾತ್ರದಲ್ಲಿ, ಶಿಲ್ಪಗಳ ಸಂಖ್ಯೆಯಲ್ಲಿ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ಚೆನ್ನಕೇಶವ ದೇವಾಲಯಕ್ಕಿಂತ ದೊಡ್ಡದಾಗಿದ್ದು ಇಲ್ಲಿ ೨೦ ಸಾವಿರದಷ್ಟು ಶಿಲ್ಪಗಳನ್ನು ಕೆತ್ತಲಾಗಿದೆ. ಚೆನ್ನಕೇಶವ ದೇವಾಲಯದ ಒಳಾಂಗಣದ ಸೌಂದರ್ಯದಿಂದ ಪ್ರಸಿದ್ಧವಾದರೆ ಹೊಯ್ಸಳೇಶ್ವರ ದೇವಾಲಯದ ಹೊರಗೋಡೆಯ ಮೇಲಿನ ಕೆತ್ತನೆಗಳು ವಿಶ್ವಪ್ರಸಿದ್ಧ. ಇಡೀ
ದೇವಾಲಯದ ಹೊರಮೈಗುಂಟ ಕೆಳಗೆ ಆನೆ, ನಂತರ ಸಿಂಹ, ಅದರ ಮೇಲೆ ಹೂಮಾಲೆ, ಅದರ ಮೇಲೆ ಕುದುರೆ, ಮಕರ ಹೀಗೆ ವಿವಿಧ ಗುಣಗಳ ಸಂಕೇತಗಳ ೧೧ ಪದರಗಳ ಕೆತ್ತನೆಗಳಿವೆ. ಅದರ ಮೇಲೆ ಪುರಾಣಗಳ ವಿವಿಧ ಪ್ರಸಂಗಗಳನ್ನು, ದೇವದೇವಿಯರ ವಿವಿಧ ಭಂಗಿಗಳ ಚಿತ್ರಗಳನ್ನು ಕೆತ್ತಲಾಗಿದೆ. ಬಾಳೆಮರಗಳ ಮರೆಯಿಂದ ವಾಲಿಗೆ ಬಾಣ ಹೂಡುವ ಶ್ರೀರಾಮಚಂದ್ರ, ರಾಕ್ಷಸನ ಮರ್ಧನ ಮಾಡಿ ಮುಖದ ಚರ್ಮವನ್ನು ಕೈಯ್ಯಲ್ಲೇ ಹಿಡಿದೆಳೆದ ರುದ್ರ ಭಯಂಕರ ಈಶ್ವರ, ಅತಿ ಅಪರೂಪಕ್ಕೆ ನರ್ತನ ಭಂಗಿಯಲ್ಲಿರುವ ಶ್ರೀಲಕ್ಷ್ಮಿ, ಕಲ್ಲಿಂದಲೋ ಕಂಬದಿಂದಲೋ ಎದ್ದೇ ಬಂದಿದ್ದಾನೇನೋ ಎಂಬಂತೆ ಕಾಣುವ
ಬ್ರಹ್ಮ- ವಿಷ್ಣು - ಮಹೇಶ್ವರ
ಉಗ್ರನರಸಿಂಹ, ಪದ್ಮವ್ಯೂಹದ ಒಳಹೊರಟಿರುವ ಅಭಿಮನ್ಯು, ಸೃಷ್ಟಿ-ಸ್ಥಿತಿ-ಲಯಕರ್ತುಗಳಾದ ಬ್ರಹ್ಮ ವಿಷ್ಣು ಮಹೇಶ್ವರರ ಬ್ರಹತ್ ಕೆತ್ತನೆ, ಪಾರ್ವತಿ ತನ್ನ ಮೇಲೆ ಕೂತಿದ್ದಕ್ಕೆ ಸಿಟ್ಟು ಮಾಡಿ ಒಡೆಯ ಶಿವನ ಕೈಯ್ಯಲ್ಲಿ ನೇವರಿಸಿಕೊಳ್ಳುವ ನಂದಿ ಇವುಗಳ ಸೌಂದರ್ಯವನ್ನು ಶಬ್ದಗಳ ಬಂಧದಲ್ಲಿ ಕಟ್ಟಿಹಾಕಲಾದೀತೇ? ಎಷ್ಟು ನೋಡಿದರೂ ಸಾಕೆನಿಸದ ಈ ಕಲಾದೇಗುಲವನ್ನು ನೋಡಿಯೇ ಆನಂದಿಸಬೇಕು.

ಹೊಯ್ಸಳರು ಆಳ್ವಿಕೆಯ ಮಧ್ಯಭಾಗದಲ್ಲಿ ರಾಜಧಾನಿ ಹಳೆಬೀಡಿಗೆ ಬದಲಾಯಿಸಲ್ಪಡುತ್ತದೆ. ಹಾಗೆಯೇ ಅವರ ಕಲಾರಾಜಧಾನಿಯಾಗೂ ಇದು ಮೆರೆಯುತ್ತದೆ. ೧೨೦ ವರ್ಷಗಳ ಕಟ್ಟಲ್ಪಟ್ಟ ಈ ದೇವಾಲಯ ಮುಸ್ಲೀಮರ ಧಾಳಿಗೆ ಒಳಗಾಗುವಾಗ ಇನ್ನೂ ನಿರ್ಮಾಣಾವಸ್ಥೆಯಲ್ಲಿಯೇ ಇತ್ತು.
ಬಾಳೆಮರಗಳ ಮರೆಯಿಂದ ವಾಲಿಗೆ ಬಾಣ ಹೂಡುವ ಶ್ರೀರಾಮಚಂದ್ರ
ಆದ್ದರಿಂದಲೇ ಒಳಾಂಗಣದ ಕೆಲವು ಭಾಗಗಳಲ್ಲಿ, ಕಂಬದ ಕೆತ್ತನೆಗಳಲ್ಲಿ ಕೆಲವು ಕಡೆ ಕೆತ್ತನೆ ನಿಂತಿರುವುದನ್ನು ನೋಡಬಹುದು. ಹಂಪಿಯ ದೌರ್ಭಾಗ್ಯಕ್ಕೆ ಮರುಗುವ ಮನ ಹಳೆಬೀಡು ಮುಸ್ಲಿಮರ ಧಾಳಿಗೊಳಗಾಗಿಯೂ ಆ ಮಟ್ಟಿಗಿನ ದುರ್ಗತಿ ಹೊಂದದೇ ಇದ್ದಿದ್ದಕ್ಕೆ ಸಂತಸ ಪಡುತ್ತದೆ. ಆದರೆ ಮುಂದೆ ಬಂದ ಬ್ರಿಟೀಷರು ಇದ್ದ ೭೪ ಶಿಲಾಬಾಲಿಕೆಯರಲ್ಲಿ ೭೦ನ್ನು ಇಂಗ್ಲೆಂಡಿಗೆ ಕದ್ದೊಯ್ದರು ಎಂದಾಗ ಅದೇ ಮನಸ್ಸು ಕುದಿಯುತ್ತದೆ. ಗಾಯದ ಮೇಲೆ ಬರೆ ಎಂಬಂತೆ ಕೆಲವೊಂದಿಷ್ಟುಕಡೆ ಕೆಲವು ಶಿಲ್ಪಗಳು ಸ್ಥಳೀಯರ, ಪ್ರವಾಸಿಗರ ದೌರ್ಜನ್ಯಕ್ಕೆ ತುತ್ತಾಗಿದೆ. ಒಟ್ಟಾರೆಯಾಗಿ ಇಂತ ಭವ್ಯ ಇತಿಹಾಸವನ್ನು, ಕಲೆಯನ್ನು ಹೋದಿರುವ ನಾವು ಭರತೀಯರು ಅದನ್ನು ಉಳಿಸಿಕೊಳ್ಳುವಲ್ಲಿ ಆಸ್ವಾದಿಸುವಲ್ಲಿ ಎಡುವುತ್ತೇವೇನೋ ಎನ್ನಿಸುತ್ತದೆ.

ಇಷ್ತು ಹೊತ್ತಿಗೆ ಸೂರ್ಯಾಸ್ತ ಆಗುತ್ತ ಬಂತು.
ಪದ್ಮವ್ಯೂಹದ ಒಳಹೊರಟಿರುವ ಅಭಿಮನ್ಯು
ಸಮಯಾವಕಾಶದ ಕೊರತೆಯಿದ್ದುದರಿಂದ, ಹಿಂದಿನಿಂದ ಸೆಕ್ಯುರಿಟಿಯವರು ಸೀಟಿ ಊದುತ್ತಾ ಓಡಿಸುತ್ತಿದ್ದುದರಿಂದ ಒಂದಕ್ಕಿಂತ ಒಂದು ಚಂದವಿರುವ ಈ ಶಿಲ್ಪಗಳನ್ನು ಗಡಿಬಿಡಿಯಲ್ಲಿ ನೋಡಬೇಕಾಗಿ/ಚಾಯಾಚಿತ್ರ ತೆಗೆಯಬೇಕಾಗಿ ಬಂತು. ಇದೇ ಗಡಿಬಿಡಿಯಲ್ಲಿ(ಮಾಹಿತಿ ಇರದಿದ್ದುದೂ ಒಂದು ಕಾರಣ :( ) ಕೇದಾರೇಶ್ವರ ದೇವಸ್ಥಾನವನ್ನು ನೋಡದೇ ಬಿಡಬೇಕಾಗಿ ಬಂತು. ಮುಂದೊಮ್ಮೆ ಕನಿಷ್ಟ ಇನ್ನೊಮ್ಮೆ ಬರುತ್ತೇನೆ ಎಂದು ನನ್ನಷ್ಟಕ್ಕೆ ಹೇಳಿಕೊಂಡು ಬೆಂಗಳೂರಿನತ್ತ ತಿರುಗಿ ಹೊರಟೆವು.

ಇತಿಹಾಸದ ಬಗ್ಗೆ ಆಸಕ್ತಿ ಇದ್ದರೆ, ಕದಂಬ, ಗಂಗ, ಚಾಲುಕ್ಯ, ಹೊಯ್ಸಳರೆಂದರೆ-ಕನ್ನಡನಾಡಿನ ಚರಿತ್ರೆಯೆಂದರೆ ಚಿಕ್ಕದೊಂದು ರೋಮಾಂಚನ ಉಂಟಾಗುತ್ತದೆ ಎಂದರೆ, ಶಿಲ್ಪಕಲೆಯನ್ನು ಆಸ್ವಾದಿಸುವ ಗೌರವಿಸುವ ಮನಸ್ಸಿದೆ ಎಂದರೆ, ಕಲ್ಲುಗಳು ಮಾತನಾಡುವುದನ್ನು ಕೇಳಿಸಿಕೊಳ್ಳುವ ಇಚ್ಛೆಯಿದ್ದರೆ, ಅದನ್ನು ಜವಾಬ್ದಾರಿಯುತವಾಗಿ ಅನುಭವಿಸುವ ಪ್ರೌಡಿಮೆ ಇದ್ದರೆ, ನೀವು ಬೇಲೂರು-ಹಳೆಬೀಡನ್ನು ನೋಡಲೇಬೇಕು. ಬೆಂಗಳೂರಿನಿಂದ ಕೇವಲ ೨೦೦ ಕಿ.ಮೀ. ದೂರದಲ್ಲಿರುವ ಇವೆರಡು ಸ್ಥಳಗಳನ್ನು ಒಂದೇ ದಿನದಲ್ಲಿ ನೋಡಿ ಮುಗಿಸಬಹುದು.

ಟಿಪ್ಪಣಿಗಳು:
**. ಬುಡದಲ್ಲಿ ದಪ್ಪವಿದ್ದು ತುದಿಗೆ ಹೋದಂತೆ ನಿರ್ದಿಷ್ಟ ಪ್ರಮಾಣದಲ್ಲಿ ತೆಳ್ಳಗಾಗುತ್ತ ಬಂದರೆ centre of gravity ಕಂಬದ ಮಧ್ಯಭಾಗದಲ್ಲಿ ಬಂದು ಯಾವ ಆಧಾರವೂ ಇಲ್ಲದೇ ಹಾಗೇ ನಿಲ್ಲಬಲ್ಲುದು.


ವಿಶೇಷ ಸೂಚನೆ: ನನ್ನ ತಿಳಿವಿಗೆ ಅರ್ಥವಾದ ಹಾಗೆ, ನನ್ನ ಜ್ಞಾನಕ್ಕನುಗುಣವಾಗಿ ಬರೆದಿದ್ದೇನೆ.  ಯಾವುದಾದರೂ ಅಂಶದ ಬಗ್ಗೆ, ಇಸವಿಯ ಬಗ್ಗೆ, ಇತಿಹಾಸದ ಬಗ್ಗೆ ಏನಾದರೂ ತಪ್ಪಿದ್ದರೆ ಹೇಳಿ, ತಿದ್ದಿಕೊಳ್ಳುತ್ತೇನೆ.

ಇನ್ನೊಂದು ಅತಿ ವಿಶೇಷ ಸೂಚನೆ: ಗೆಳೆಯ ಪ್ರಶಸ್ತಿ ಬೇಲೂರು ಹಳೆಬೀಡಿನ ದೇವಾಲಯಗಳ ಬಗ್ಗೆ ಬರೆದಿದ್ದಾನೆ. ಅದರ ಜೊತೆಗೆ ಹೊಯ್ಸಳರ ಬೇರೆ ದೇವಾಲಯಗಳ ಬಗೆಗೂ ಚಂದದ ಚಿತ್ರಗಳು ಮತ್ತು ಉತ್ತಮ ಮಾಹಿತಿ ಇದೆ. ಓದಿ ನೋಡಿ.
೧. ಪಾತಾಳೇಶ್ವರ ದೇಗುಲ ,ಬೇಲೂರು
೨. ಚೆನ್ನಕೇಶವ ದೇವಾಲಯ, ಬೇಲೂರು
೩. ಕೇದಾರೇಶ್ವರ ದೇವಾಲಯ, ಹಳೇಬೀಡು
೪. ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ದೇವಾಲಯ, ಹಳೇಬೀಡು

Friday 22 August 2014

ಪ್ರತೀ ಮಗುವಿನೊಂದಿಗೂ ಒಬ್ಬಳು ತಾಯಿ ಹುಟ್ಟುತ್ತಾಳೆ ..


ಡುಮ್ಮು, ಮುದ್ದು, ಕಂದು, ಚಂದು, ಪಾಪು ಇತ್ಯಾದಿ ನಾಮಾಂಕಿತ ಆದ್ಯಾ ಪುಟ್ಟಿ,

ಮೊದಲನೆಯದಾಗಿ ಎರಡನೇ ಹುಟ್ಟು ಹಬ್ಬದ ಶುಭಾಷಯಗಳು. ಅದ್ಭುತ ಸಂತೋಷಮಯ ಯಶಸ್ಸಿನ ಜೀವನ ನಿನ್ನದಾಗಲಿ.

ಇಂದಿಗೆ ಎರಡು ವರ್ಷವಾಯ್ತು, ನೀನು ಹುಟ್ಟಿ. ಎಷ್ಟು ಬೇಗ ಒಂದು ವರ್ಷ ಕಳೆದು ಹೋಯಿತು ಎನ್ನಿಸುತ್ತದೆ. ಮೊನ್ನೆಯಷ್ಟೇ ಅಮ್ಮ ಫೋನ್ ಮಾಡಿ ’ಭವಾನಿಗೆ ಆಪರೇಶನ್ ಆಯ್ತು, ಹೆಣ್ಣು ಮಗು. ಇಬ್ಬರೂ ಹುಷಾರಾಗಿದ್ದಾರೆ’ ಎಂದು ಹೇಳಿದ ಹಾಗಿದೆ.  ನಾನು ಅಫೀಸಿನಲ್ಲಿದ್ದೆ ಎಂಬುದನ್ನೂ ಮರೆತು ಒಂದು ಖುಷಿಯಲ್ಲಿ ಜಿಗಿದಿದ್ದು ಇನ್ನೂ ನೆನಪಿದೆ.  ವೈಯಕ್ತಿಕವಾಗಿ ಹೇಳಬೇಕೆಂದರೆ ಆ ಸಮಯದಲ್ಲಿ ಸಾಕಷ್ಟು ಪೆಟ್ಟುಗಳನ್ನು ತಿಂದಿದ್ದ, ಒಂದಾದ ಮೇಲೆ ಒಂದು ಕಹಿಯನ್ನೇ ಉಣ್ಣುತ್ತಾ ಬಂದಿದ್ದ ನಾನು ಬಹಳ ದಿನಗಳ ನಂತರ ಒಂದು ವಿಷಯವನ್ನು ಬಹಳೇ ಇಷ್ಟಪಟ್ಟು ಖುಷಿಪಟ್ಟಿದ್ದೆ. ನೀನು ಹುಟ್ಟಿದ ಹಿಂದಿನ ವಾರವಷ್ಟೇ ಮನೆಯಿಂದ ಬಂದಿದ್ದೆನಾದರೂ ಯಾವಾಗ ಮನೆಗೆ ಹೋಗುತ್ತೇನೋ ಎಂದು ಕಾತರಿಸಿ ಕಾಯತೊಡಗಿದ್ದೆ. ’ತಾಯಿಯಂತ ಅಕ್ಕ’ ತಾಯಿಯಾದಳು ಎಂಬ ಸಂತೋಷ, ನಾನು ಮಾವನಾದೆನೆಂಬ ಆನಂದ, ಎಲ್ಲಕ್ಕಿಂತ ಹೆಚ್ಚಾಗಿ ಅಕ್ಕ ಮತ್ತು ಅವಳ ಮಗಳು ಇಬ್ಬರೂ ಆರೋಗ್ಯವಂತರಾಗಿದ್ದಾರೆ ಎಂಬ ಸಮಾಧಾನ ಎಲ್ಲ ಸೇರಿ ಅದೊಂತರಾ ಅಮೃತಘಳಿಗೆ.

ನಮ್ಮ ಮನೆಯಲ್ಲಿ ನಾನು ಅಕ್ಕ(ನಿನ್ನಮ್ಮ ಭವಾನಿ, ನಿನ್ನ ಭಾಷೆಯಲ್ಲಿ ಬನಾನಿ) ಇಬ್ಬರೇ ಮಕ್ಕಳು. ಅಕ್ಕನಾದರೂ ತಾಯಿಯಂತೆ ನನ್ನನ್ನು ಆಡಿಸಿ ಬೆಳೆಸಿದ್ದಳು. ಆದರೆ ನನಗೆ? ನಾನೇ ಕಿರಿಯವನು. ಎಲ್ಲರೂ ನನ್ನನ್ನು ಆಡಿಸಿದವರೇ ಹೊರತು, ನಾನು ಯಾರನ್ನೂ ಆಡಿಸಿದ ನೆನಪಿಲ್ಲ. ಕಸಿನ್ಸ್ ಬಳಗದಲ್ಲಿಯೂ ತೀರಾ ನಾನು ಆಡಿಸುವಷ್ಟು ಚಿಕ್ಕವರು ಯಾರೂ ಇರಲಿಲ್ಲ, ಇದ್ದರೂ ಮೊದಲೇ ಕಿಡಿಗೇಡಿ/ಹಾಳುಗೇಡಿಯಾದ ನನ್ನನ್ನು ಅಷ್ಟು ಚಿಕ್ಕ ಮಕ್ಕಳ ಆಟಿಕೆಯ ಹತ್ತಿರ ಹೋಗಲೇ ಬಿಡುತ್ತಿರಲಿಲ್ಲ, ಇನ್ನು ಚಿಕ್ಕ ಮಕ್ಕಳನ್ನು ಆಡಿಸುವುದೆಲ್ಲ ಕನಸಿನ ಮಾತು. ಕೆಲವೊಮ್ಮೆ ಅಮ್ಮನ ಬಳಿ ನನಗೊಬ್ಬ ಚಿಕ್ಕ ತಮ್ಮನೋ/ತಂಗಿಯೋ ಬೇಕೆಂದು ಗಲಾಟೆ ಮಾಡುತ್ತಿದ್ದೆ ನಾನು, ತೀರಾ ಇತ್ತೀಚಿನವರೆಗೂ( ;) ). ಅಮ್ಮ, ’ನಿನ್ನನ್ನು ಬೆಳೆಸುವುದರಲ್ಲಿಯೇ ನನಗೆ ಏಳು ಹನ್ನೊಂದಾಯ್ತು, ಇನ್ನೊಂದು? ಸಾಧ್ಯವೇ ಇಲ್ಲ!’ ಎಂದು ಬಿಡುತ್ತಿದ್ದಳು. ಮತ್ತೊಂದು ಕಾರಣವೆಂದರೆ, ಚಿಕ್ಕವನಾಗಿದ್ದಾಗಿನಿಂದ ನನ್ನನ್ನು ಕಂಡರೆ ಚೀರಿಕೊಂಡ, ರಂಪ ಮಾಡಿಕೊಂಡ ಚಿಕ್ಕಮಕ್ಕಳೇ ಜಾಸ್ತಿ. ನನ್ನನ್ನು ಕಂಡರೆ ಅದಾವ ಕೆಂಪುಕಣ್ಣಿನ ಭೂತವನ್ನು ಕಂಡಂತಾಗುತ್ತಿತ್ತೋ ಏನೋ ಗೊತ್ತಿಲ್ಲ, ನಗುತ್ತಾ ಆಡುತ್ತಾ ಇದ್ದ ಮಕ್ಕಳೂ ನನ್ನ ಹತ್ತಿರ ಬಂದಕೂಡಲೇ ಅಳಲು ಸುರುಮಾಡಿಬಿಡುತ್ತಿದ್ದವು. ಆಗೆಲ್ಲಾ ನನಗೆ ನಮ್ಮ ಮನೆಯಲ್ಲೇ ಒಂದು ಮಗು ಇದ್ದಿದ್ದರೆ ಆ ಮಗುವಿಗೆ ನನ್ನ ಮುಖ ನೋಡಿ ನೋಡಿ ಅಭ್ಯಾಸವಾಗಿಯಾದರೂ ಅದು ಅಳುತ್ತಿರಲಿಲ್ಲವೇನೋ ಮತ್ತು ಅದು ಅಳದೇ ಇದ್ದದ್ದನ್ನು ನೋಡಿಯಾದರೂ ಉಳಿದ ಅಳುವ ಯಂತ್ರಗಳು ಬಾಯ್ಮುಚ್ಚಿಕೊಳ್ಳುತ್ತಿದ್ದವೋ ಏನೋ ಎಂದು ಅನಿಸುತ್ತಿತ್ತು. ಅದಕ್ಕೆಲ್ಲ ಉತ್ತರವಾಗಿಯೇನೋ ಎಂಬಂತೆ ಬಂದವಳು ನೀನು.

  ನೆನಪಿದೆ ಇಂದಿಗೂ. ನೀನು ಹುಟ್ಟಿದಾಗ ನನಗೆ ಅಲ್ಲಿ ಇರಲಾಗಲಿಲ್ಲವೆಂದು ಬಹಳೇ ಪರಿತಪಿಸಿದ್ದೆ. ಹೊಸದಾಗಿ ಸೇರಿದ್ದ ಕೆಲಸದ ಮಧ್ಯೆ ರಜೆ ಸಿಗದೇ ಇದ್ದುದರಿಂದ ನಿನ್ನನ್ನು ನೋಡಲು ಆ ವಾರಾಂತ್ಯದ ವರೆಗೂ ಕಾಯಬೇಕಾಗಿ ಬಂದಿತ್ತು. ಅಂದಿನ ನನ್ನ ಸಡಗರವನ್ನು ನೆನೆಸಿಕೊಂಡರೆ ನನಗೇ ಕಣ್ಣು ಮಂಜಾಗುತ್ತದೆ, ಕಾರಣವಿಲ್ಲದೇ. ನಿನ್ನ ಮೊದಲ ಫೋಟೋ ತೆಗೆದಿದ್ದು ನಾನೇ ಎಂಬುದೇ ನನಗೆ ಹೆಮ್ಮೆಯ ವಿಷಯ. ಕಡಲತಡಿಯ ಬಿಸಿಹವೆಯ ನಮ್ಮ ಮನೆಯಲ್ಲಿ ನಾನು ಬಾಯಿಯಲ್ಲಿ ಗಾಳಿ ಹಾಕಿದಾಗ ನೀನು ತೊಟ್ಟಿಲಲ್ಲಿಯೇ ನನ್ನ ಕಡೆ ತಿರುಗಿ ನಕ್ಕಂತೆ ಮುಖಮಾಡಿದರೆ ನನಗೊಂದು ಧನ್ಯಭಾವ. ನೀ ಚಿಕ್ಕವಳಿದ್ದಾಗ ರಾತ್ರಿಯಲ್ಲೇನಾದರೂ ಎದ್ದು ಗಲಾಟೆ ಮಾಡಿ ಮಲಗಿದ್ದ ಎಲ್ಲರನ್ನು ಎಬ್ಬಿಸಿದಾಗ ನಾನೂ ಎದ್ದರೆ ನನಗೆ ಒಳಗೊಳಗೇ ಖುಷಿ. ಎಂಟು ತಿಂಗಳಿಗೆ ತಿರುಗಿ ಬರುತ್ತಿ ಎಂದು ಗೊತ್ತಿದ್ದರೂ. ತೊಟ್ಟಿಲಲ್ಲಿ ನೀನು ಕಾಲು ಇಟ್ಟುಕೊಳ್ಳುತ್ತಿದ್ದ ವಿಧಾನಕ್ಕೆ ಕಪ್ಪೆಕಾಲು ಎಂದೂ, ಚಿಕ್ಕ ಕುತ್ತಿಗೆಯ ಮುಖಕ್ಕೆ ಕುಮಾರಸ್ವಾಮಿ ಎಂದು ಹೆಸರಿಡುವಲ್ಲಿ ಏನೋ ಮುದ. ಮಕ್ಕಳನ್ನು ಎತ್ತಿಕೊಳ್ಳಲು ಬಾರದ ನಾನು ನಿನ್ನನ್ನು ಎತ್ತಿಕೊಂಡಾಗ ನೀನು ಅಳದೇ ಹೋದರೆ, ಸ್ಕೈಪಿನಲ್ಲಿ ಮಾತನಾಡುವಾಗ ನೀನು ನನ್ನನ್ನು ’ ಸುಬ್ಬು ಮಾಮಾ’ ಎಂದು ಕೂಗಿದರೆ ನನಗದು ಹೇಳಿತೀರದ ಸಂಭ್ರಮ. ಬರಿ ಎರಡು ವರ್ಷಗಳಲ್ಲಿ ಎಷ್ಟೆಲ್ಲಾ ಸಂತೋಷಗಳನ್ನು ಕೊಟ್ಟಿರುವೆಯೇ, ಮುದ್ದುಮರಿ.

ಪ್ರತೀ ಮಗುವಿನೊಂದಿಗೂ ಒಬ್ಬಳು ತಾಯಿ ಹುಟ್ಟುತ್ತಾಳೆ. ನನ್ನ ಅಕ್ಕನಲ್ಲಿ ಒಬ್ಬಳು ತಾಯಿ ಹುಟ್ಟಿದ್ದು ನಿನ್ನಿಂದಲೇ? ಗೊತ್ತಿಲ್ಲ ಪುಟ್ಟಮ್ಮ. ನಿನಗೆ ಗೊತ್ತಿಲ್ಲದ ಗುಟ್ಟೆಂದರೆ ನನ್ನನ್ನು ನಿನ್ನಮ್ಮನ ಮೊದಲ ಮಗ ಎಂದು ಅಕ್ಕನ ಫ್ರೆಂಡ್ಸ್ ಆಡಿಕೊಳ್ಳುತ್ತಿದ್ದರು. ಬಹುಶಃ ಎಲ್ಲಾ ಅಕ್ಕಂದಿರೂ ತಮ್ಮ ತಮ್ಮ ತಮ್ಮಂದಿರಿಗೆ ತಾಯಿಸಮಾನರೇ. ಆ ಲೆಕ್ಕದಲ್ಲಿ ನಿನ್ನ ಮೇಲಿರುವ ಆಕೆಯ ಪ್ರೀತಿಯೆಲ್ಲವೂ ಮೊದಲು ನನ್ನ ಮೇಲಿದ್ದುದೇ(:P). ನನ್ನ ಮೇಲಿನ ಆಕೆಯ ಪ್ರೀತಿಯಲ್ಲಿ ಸ್ವಲ್ಪ ಭಾಗವನ್ನು ನಿನ್ನೊಂದಿಗೆ ಹಂಚಿಕೊಳ್ಳಲು ಅಭ್ಯಂತರವೇನೂ ಇಲ್ಲ ನನ್ನದು, ಬದಲಾಗಿ ನನ್ನದೂ ಸ್ವಲ್ಪ ಪ್ರೀತಿ ಸೇರಿಸಿ ಮುದ್ದಿಸೇನು. ಬೇರೆ ದಾರಿಯಾದರೂ ಏನಿದೆ ಹೇಳು ನನಗೆ, ನಿನ್ನ ಮೋಡಿಯಲ್ಲಿ ಬಿದ್ದವನಿಗೆ.

ಕಂದು, ನೀನೆಂದರೆ ನಮಗೆಲ್ಲ ಒಂದು ಕನಸು, ಜೊತೆಗೆ ಒಂದಷ್ಟು ಕಾತರಗಳು, ಕಳವಳಗಳು, ಹಾರೈಕೆಗಳು, ಬೇಡಿಕೆಗಳು, ಯೋಚನೆಗಳು, ಆಲೋಚನೆಗಳು, ಜಾಗ್ರತೆಗಳು, ಚಿಂತೆಗಳು. ನೀನೆಂದರೆ ನಿನ್ನಮ್ಮನ ಜೀವ, ಅಪ್ಪನ ಪ್ರೀತಿ, ಮಾವಯ್ಯನ ಅಮರ ಬಾಂಧವ್ಯ, ಅಮ್ಮಮ್ಮನ ಚೈತನ್ಯ, ಅಜ್ಜನನ್ನು ಕರಗಿಸಬಲ್ಲ ಶಕ್ತಿ. ನೀನು ಕುಮಟಾದ ಅನಿಲಣ್ಣನ ಆಸ್ಪತ್ರೆಯಲ್ಲಿ ಹುಟ್ಟಿದ್ದು, ನಿನ್ನ ಮೊದಲ ವರ್ಷದ ಹುಟ್ಟುಹಬ್ಬದಲ್ಲಿ ನೀನು ನಿನ್ನ ಪುಟಾಣಿ ಕುರ್ಚಿಯಿಂದ ಬಿದ್ದಿದ್ದು ಎಲ್ಲ ಇಂದು ನಿನ್ನೆಯದೆನ್ನುವಷ್ಟು ಹೊಸತಾಗಿ ನೆನಪಿದೆ, ಆದರೆ ಆಗಲೇ ನಿನ್ನ ಎರಡನೇ ವರ್ಷದ ಹುಟ್ಟುಹಬ್ಬ ಬಂದಾಗಿದೆ. ಮೊದಲೆರಡು ವರ್ಷಗಳ ನೆನಪು ಯಾರಿಗೂ ಇರುವುದಿಲ್ಲವಾದ್ದರಿಂದ ಎರಡನೆಯ ಹುಟ್ಟುಹಬ್ಬ ನಿನ್ನ ಬಾಲ್ಯದ ಬಾಗಿಲು. ಈ ಎರಡು ವರ್ಷಗಳಲ್ಲಿ ಮನೆಯೊಳಗೆ ಕಟ್ಟಿಕೊಂಡ ನಿನ್ನ ಪ್ರೀತಿಯ ಸಾಮ್ರಾಜ್ಯವನ್ನು ಮನೆಯಿಂದ ಹೊರಗೆ ಬೆಳೆಸುವ ಸಮಯ.  ಮುಂದಿನ ನಾಲ್ಕು ವರ್ಷಗಳು ಶಾಲೆಗೆ ಕಳಿಸುವ ಮೊದಲು ಸಿಗುವ ಅಮೂಲ್ಯ ಕಾಲ, ಅದರ ಆರಂಭ ಈ ಹುಟ್ಟುಹಬ್ಬ.

ಚೆನ್ನಾಗಿ ಗೊತ್ತು ನನಗೆ, ನಿನಗಿದೆಲ್ಲಾ ಓದಲು ಬರುವುದಿಲ್ಲ ಎಂದು. ಆದರೂ ಬರೆದಿದ್ದೇನೆ. ಮುಂದೊಂದು ದಿನ ನೀ ಬೆಳೆದು ದೊಡ್ಡವಳಾದಾಗ ಓದಿಕೊಂಡು ಖುಷಿ ಪಡಬಹುದೇನೋ, ನಗಬಹುದೇನೋ ಎಂದು. ನೂರ್ಕಾಲ ಬಾಳು ಕಂದಾ, ಎಲ್ಲಾ ಯಶಸ್ಸೂ ಸಿಗಲಿ ನಿನಗೆ. ಯಾವತ್ತೂ ಸಂತೋಷದಿಂದಿರು, ಸುಖ ಮಾತ್ರ ಇರದ ಜಗತ್ತಿನಲ್ಲಿಯ ದುಃಖಗಳಲ್ಲೂ ಖುಷಿಯಾಗಿರು. ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು ಮತ್ತೊಮ್ಮೆ, ಸಾವಿರ ಮುತ್ತುಗಳ ಜೊತೆಗೆ.

ಇಂತಿ ನಿನ್ನ ಮಾವಯ್ಯ
ಸುಬ್ಬು

Thursday 10 April 2014

ಹಂಪಿ - ನಾನು ಕಂಡಂತೆ

ಹಂಪಿ, ಮುಸಲರ ಧಾಳಿಯ ವಿರುದ್ಧ ದಕ್ಷಿಣ ಭಾರತಕ್ಕೆ ರಕ್ಷೆಯಾಗಿ ನಿಂತ ವಿಜಯನಗರದ ರಾಜರ ರಾಜಧಾನಿಯಾಗಿ ಮೆರೆದ ಜಾಗವಿದು, ಮುತ್ತು-ಹವಳಗಳನ್ನು ಬೀದಿಬದಿಯಲ್ಲಿ ಮಾರಿದ ಸಮೃದ್ಧಿಯ ಸಿರಿವಂತಿಕೆಯ ನೆನಪಾಗಿ ಉಳಿದಿರುವ ಗುರುತಿದು. ಎಂತೆಲ್ಲ ವೈಭವಗಳನ್ನು ಕಂಡು ಮೆರೆದು ಈಗ ಹೃದಯವಿದ್ರಾವಕ ರೀತಿಯಲ್ಲಿ ಭಗ್ನವಾಗಿ ಕುಳಿತು ಮನ ಮರುಗಿಸುವ ವಿಶ್ವ ಪರಂಪರೆ ತಾಣವಿದು. ಹನುಮಂತನ ಜನ್ಮಸ್ಥಳವಾಗಿ, ವಾಲಿ-ಸುಗ್ರೀವರ ಯುದ್ಧಕಣವಾಗಿ, ಶಬರಿ ಶ್ರೀರಾಮಚಂದ್ರನಿಗೆ ಕಾದ ತಾಣವಾಗಿ ಹೀಗೆ ಪುರಾಣವನ್ನು ಹಾಸಿಹೊದ್ದಿರುವ ಪುಣ್ಯಭೂಮಿಯಿದು.

ನಾನು ಚಿಕ್ಕಂದಿನಿಂದಲೂ ನೋಡಬೇಕೆಂದಿದ್ದ ಕೆಲವು ಸ್ಥಳಗಳಲ್ಲಿ ಹಂಪಿ ಒಂದು. ಚಿಕ್ಕಂದಿನಿಂದಲೇ ಇತಿಹಾಸದ ಬಗ್ಗೆ ಒಲವಿದ್ದ ನನಗೆ ಹಂಪಿ ಆಸಕ್ತಿಕರವಾಗಿ ಗೋಚರಿಸಿದ್ದು ಆಶ್ಚರ್ಯವಲ್ಲ. ಎಷ್ಟ್ ದಿನಗಳ ಯೋಚನೆಯ ನಂತರ ಅಂತೂ ಕೊನೆಗೆ ಹಂಪಿಗೆ ಹೋಗುವ ಸುಯೋಗ ಯುಗಾದಿಯ ವಾರಾಂತ್ಯದ(ಮಾರ್ಚ್ ೨೯-೩೦) ರಜೆಯಲ್ಲಿ ಬಂದಿತ್ತು. ಹೋಗುವ ಮೊದಲು ವಿಜಯನಗರದ ಇತಿಹಾಸವನ್ನು ಸ್ವಲ್ಪ ಓದಿದರೆ ಎಷ್ಟರ ಮಟ್ಟಿಗೆ ಇತಿಹಾಸವನ್ನು ಮರೆತಿದ್ದೆ ಎಂಬುದು ನೆನಪಾಗಿತ್ತು.ಹೊರಡುವ ಎರಡು ದಿನಗಳ ಹಿಂದಿನಿಂದಲೇ ಮನದಲ್ಲಿ ಏನೋ ಒಂದು ಸಡಗರ, ಸಂಭ್ರಮ, ಕುತೂಹಲ. ಹೊರಟಿದ್ದು ನಾನು ಮತ್ತು ಗೆಳೆಯರಾದ ಶಶಾಂಕ, ರಾಜೀವ, ನವೀನ ಮತ್ತು ಗುರು ಭಟ್ಟ. ಶುಕ್ರವಾರ ಸಂಜೆ ಕೆಲಸ ಮುಗಿಸಿ ಹೊರಟ ನಮಗೆ ಸಿಕ್ಕಿದ್ದು ಈ. ಕ. ರ. ಸಾ. ಸಂ. ದ ಕೆಂಪು ಬಸ್ಸಿನ ಕೊನೆಯ ಸೀಟು.(ಕೆಂಪು ಬಸ್ಸಿನ ಕೊನೆಯ ಸೀಟಿನ ಪ್ರಯಾಣ ಯಾವುದನ್ನೂ ಅತಿಯಾಗಿ ಪ್ಲಾನ್ ಮಾಡಲು ಹೋಗದ ಬ್ಯಾಚುಲರ್ ಬದುಕಿನ ಭಾಗವದು). ಹೊಸಪೇಟೆಗೆ ಹೋಗಿ ಮುಟ್ಟಿದ್ದು ಬೆಳಗಿನ ಜಾವ ಐದುವರೆಗೆ. ಅಲ್ಲಿಂದ ಹಂಪಿಗೆ ಹೋಗಿ ಒಂದು ವಿರುಪಾಕ್ಷ ದೇವಸ್ಥಾನದ ಹತ್ತಿರ ಒಂದು ರೂಮನ್ನು ಹಿಡಿದು ಸ್ನಾನಾದಿ ನಿತ್ಯಕರ್ಮಗಳನ್ನು ಮುಗಿಸಿ ದಿನದ ತಿರುಗಾಟಕ್ಕೆ ಅಣಿಯಾದೆವು.
ಹಂಪಿಯ ಕಲ್ಲಿನ ರಥ 

ಹಂಪಿಯಲ್ಲಿ ಸುತ್ತಮುತ್ತ ತಿರುಗಾಡಲು ಬಾಡಿಗೆ ಸೈಕಲ್, ಬೈಕ್, ರಿಕ್ಷಾಗಳ ವ್ಯವಸ್ಥೆಯಿದೆ. ನದಿಯ ಬಲದಂಡೆಯ ಎಲ್ಲ ಸ್ಥಳಗಳನ್ನು ಒಂದೆ ದಿನ ನೋಡುವ ಯೋಚನೆಯಿದ್ದಿದ್ದರಿಂದ ಹಾಗೂ ಗುರುತು ಪರಿಚಯವಿರದ ಅತಿಸೆಖೆಯ ಸ್ಥಳದಲ್ಲಿ ತಿರುಗಾಡುವುದರೊಳಗೆ ಬಸವಳಿಯುವ ಭಯವಿದ್ದುದರಿಂದ ರಿಕ್ಷಾದಲ್ಲಿ ಹೋಗಲು ನಿಶ್ಚಿಯಿಸಿ ಮೊದಲು ನಾವಿದ್ದ ಜಾಗದಿಂದ ಅತಿದೂರದ ವಿಜಯವಿಠ್ಠಲ ದೇವಸ್ಥಾನಕ್ಕೆ ಹೊರಟೆವು. ಪ್ರಭುದೇವರಾಯ ಕಟ್ಟಿದ ದೇವಸ್ಥಾನಕ್ಕೆ ಮುಖಮಂಟಪ, ಸಂಗೀತ ಮಂಟಪ, ಕಲ್ಲಿನರಥಗಳನ್ನೆಲ್ಲ ಸೇರಿಸಿದ್ದು ಕೃಷ್ಣದೇವರಾಯ. ಎದುರಿನ ಗೋಪುರದ ಒಳಹೊಕ್ಕ ಕೂಡಲೇ ಕಣ್ಣಿಗೆ ಬೀಳುವುದು ಕಲ್ಲಿನರಥ. ಗರುಡನ ಮೂರ್ತಿಯಿರುವ ಈ ರಥ ಏಳು ಕಲ್ಲುಗಳಿಂದ ಮಾಡಿದ್ದಾದರೂ ಏಕಶಿಲಾಕೆತ್ತನೆಯೇನೋ ಎಂಬ ಸಂಶಯ ಬರುವಷ್ಟು ನಾಜೂಕಾಗಿ ಕೆತ್ತಲ್ಪಟ್ಟಿದೆ. ರಥವೆಳೆಯುವ ಕುದುರೆಗಳು ವಿಜಯನಗರದ ಮೇಲಾದ ಧಾಳಿಯಲ್ಲಿ ಮುರಿದು ಹೋಗಿದ್ದು, ಪುರಾತತ್ವ ಇಲಾಖೆಯವರು ಉತ್ಖನನದಲ್ಲಿ ಸಿಕ್ಕ ಎರಡು ಆನೆಯ ಮೂರ್ತಿಗಳನ್ನು ಕುದುರೆಗಳ ಜಾಗದಲ್ಲಿ ನಿಲ್ಲಿಸಿದ್ದಾರೆ. ಬಿಸಿಲು-ಮಳೆಗೆ ಮೈಯ್ಯೊಡ್ಡಿ ನಿಂತ ರಥದ ಬದಿಗಳಲ್ಲಿ ಇಂದಿಗೂ ಅಂದು ಬಳಸಿದ ಕಾಡಿಗೆಯ ಕಪ್ಪು, ಅಲಂಕಾರದ ಹಸಿರು, ಕೆಂಪು ಬಣ್ಣಗಳನ್ನು ಗಮನಿಸಬಹುದು. ರಥದ ಚಕ್ರಗಳು ತುಸು ಸವೆಯಲು ಕಾರಣವಾದ ಪ್ರವಾಸಿಗರ ಸ್ಪರ್ಷದ ಬಗ್ಗೂ, ಕಲೆಯ ಸ್ವರ್ಗವ ಗುರುತಿಸದೇ ಹಂಪಿಯನ್ನು ಧ್ವಂಸ ಮಾಡಿದ ಪಂಚ ಸುಲ್ತಾನರ ಬಗ್ಗೂ ಹೇಸಿಕೆ ಹುಟ್ಟಿಸುತ್ತದೆ ಶಿಥಿಲಾವಸ್ಥೆಗೆ ಬಂದಿರುವ ಶಿಲ್ಪಗಳು.

ಸಂಗೀತ ಮಂಟಪ, ನಾಜೂಕಾಗಿ ಕೆತ್ತಲ್ಪಟ್ಟ ನೃತ್ಯ ಮಂಟಪ

ವಿಜಯ ವಿಠ್ಠಲ ದೇವಸ್ಥಾನದಲ್ಲಿರುವ ಕೃಷ್ಣದೇವರಾಯನ ಶಿಲ್ಪ,
ಯುದ್ಧಕ್ಕೆ ಹೊರಟು ನಿಂತ ಭಂಗಿ
ರಥದ ಮುಂದಕ್ಕೇ ಇರುವುದು ವಿಜಯವಿಠ್ಠಲ ದೇವಸ್ಥಾನ. ಜಗತ್ಪ್ರಸಿದ್ಧ ಸಂಗೀತ ಮಂಟಪ ಈ ದೇವಸ್ಥಾನದ ಭಾಗವೇ. ಪ್ರತೀ ಕಲ್ಲಿನ ಕಂಬವೂ ನಾಲ್ಕು-ಆರು-ಏಳು ಹೀಗೆ ಭಿನ್ನ ಭಿನ್ನ ಸಂಖ್ಯೆಯ ಮರಿಕಂಬಗಳನ್ನು ಹೊಂದಿದ್ದು, ಪ್ರತೀ ಕಂಬ-ಮರಿಕಂಬ ಹೊರಡಿಸುವ ಧ್ವನಿಯೂ ಭಿನ್ನವೇ. ಕೃಷ್ಣದೇವರಾಯನ ಎರಡನೇ ಹೆಂಡತಿ ಚಿನ್ನಾಂಬಿಕೆ ಈ ಮಂಟಪದಲ್ಲಿ ನೃತ್ಯ ಮಾಡುತ್ತಿದ್ದರೆ ಉಳಿದ ಪ್ರಜೆಗಳು ನೋಡದಂತೆ ಮಾಡಲು ಪರದೆ ಹೊದಿಸುತ್ತಿದ್ದರಂತೆ. ಈ ಪರದೆ ಹಾಕಲು ಬಳಸುತ್ತಿದ್ದ ಕೊಂಡಿಗಳನ್ನು, ಅದರ ಮುಖಾಂತರವೇ ಮಳೆಗಾಲದಲ್ಲಿ ನೀರು ಬಿದ್ದು ಹರಿದುಹೋಗುವಂತೆ, ಶ್ರಾವಣದಲ್ಲಿ ದೀಪಾರಾಧನೆಯ ಸಮಯದಲ್ಲಿ ದೀಪ ಹತ್ತಿಸಿಡಲು ಬಳಕೆಯಾಗುವಂತೆ ಕೆತ್ತಲಾಗಿದೆ. ಈಗ ಪುರಾತತ್ವ ಇಲಾಖೆ ಜೀರ್ಣೋದ್ಧಾರ ಮಾಡುತ್ತಿರುವುದರಿಂದ ಹಾಗೂ ಮೊದಲು ಬಂದ ಪ್ರವಾಸಿಗರು ಹೆಚ್ಚು ಶಬ್ದ ಬರಲಿ ಎಂದು ಈ ಕಲ್ಲುಗಳನ್ನು ಕೀಗಳಿಂದ, ಕಲ್ಲುಗಳಿಂದ ಹೊಡೆದು ಶಿಥಿಲಗೊಳಿಸಲಾರಂಭಿಸಿದ್ದರಿಂದ ಈಗ ಈ ಮಂಟಪದ ಒಳಗೆ ಯಾರನ್ನೂ ಬಿಡುತ್ತಿಲ್ಲ.  ಅಷ್ಟರ ಮಟ್ಟಿಗೆ ಅದು ನಮ್ಮ ದುರಂತವೇ. ಇಡೀ ದೇವಸ್ಥಾನದ ಹೊರಗೋಡೆಯ ಮೇಲೆಲ್ಲ ರಾಮ ವನವಾಸಕ್ಕೆ ಹೊರಟದ್ದರಿಂದ ಶ್ರೀರಾಮ ಪಟ್ಟಾಭಿಷೇಕದವರೆಗಿನ ರಾಮಾಯಣದ ವಿವಿಧ ಸನ್ನಿವೇಶಗಳನ್ನು ಕೆತ್ತಲಾಗಿದೆ. ಈ ದೇವಸ್ಥಾನದ ಆವರಣದಲ್ಲಿರುವ ಎಲ್ಲ
ಮಂಟಪಗಳೂ ಅದ್ಭುತವಾಗಿ ಕೆತ್ತಲ್ಪಟ್ಟಿವೆ ಎಂದಷ್ಟೇ ಹೇಳಿದರೆ ಈ ಸೌಂದರ್ಯಕ್ಕೆ ಅವಮಾನ ಮಾಡಿದಂತೆಯೇ. ಶಬ್ದಗಳಲ್ಲಿ ಎಲ್ಲವನ್ನು ಕಟ್ಟಿಕೊಡಲು ನಾನು ಶಕ್ತನಲ್ಲವೇನೋ? ಗೊತ್ತಿಲ್ಲ. ಈ ದೇವಸ್ಥಾನದ ಎದುರುಗಡೆ, ಸುಮಾರು ೫೦೦-೬೦೦ ಮೀ ದೂರದವರೆಗೆ ದಾರಿಯ ಇಕ್ಕೆಲಗಳಲ್ಲಿಯೂ ಸಾಲಾಗಿ ನಿಲ್ಲಿಸಿದ ಕಲ್ಲಿನ ಮಂಟಪದತಹ ರಚನೆಗಳಿವೆ. ವಿಜಯನಗರದ ಕಾಲದಲ್ಲಿ, ಮುತ್ತು ರತ್ನ ಗಳನ್ನು ಬೀದಿಬದಿ ಮಾರುತ್ತಿದ್ದರು ಎಂದು ಕೇಳಿದ್ದೆವಲ್ಲಾ, ಅದು ಇಲ್ಲಿಯೇ ಎಂದು ಗೈಡ್ ಹೇಳಿದಾಗ ನನ್ನಲ್ಲಿ ಒಂದು ರೋಮಾಂಚನ.
ವಿಜಯ ವಿಠ್ಠಲ ದೇವಸ್ಥಾನದಲ ಎದುರಿರುವ ಕಲ್ಲಿನ ಮಂಟಪಗಳು,
ಬೀದಿಬದಿಯಲ್ಲಿ ಮುತ್ತುರತ್ನಗಳನ್ನು ಮಾರುತ್ತಿದ್ದುದು ಇಲ್ಲಿಯೇ

ವಿಜಯವಿಠ್ಠಲ ದೇವಸ್ಥಾನದ ಹಿಂದೆಯೇ ತುಂಗಭದ್ರಾ ನದಿಗೆ ತಾಗಿ ಪುರಂದರ ಮಂಟಪ ಇದೆ. ಸದ್ಯಕ್ಕೆ ದುರಸ್ತಿ
ತುಲಾಭಾರ ಮಂಟಪ, ವಿಶೇಷ ಸಮಾರಂಭಗಳಲ್ಲಿ
ರಾಜನನ್ನು ಚಿನ್ನದಲ್ಲಿ ತೂಕ ಮಾಡಿ ಅದನ್ನು ಪ್ರಜೆಗಳಿಗೆ ಹಂಚುತ್ತಿದ್ದರಂತೆ
ಮಾಡುತ್ತಿದ್ದಾರಾದ್ದರಿಂದ ನಾವು ಒಳಗೆ ಹೋಗಲಿಲ್ಲ. ಅಲ್ಲಿಯೇ ಪಕ್ಕದಲ್ಲಿ ತುಲಾಭಾರ ಮಂಟಪವಿದೆ. ವಿಜಯ ವಿಠ್ಠಲ ದೇಗುಲದ ಎದುರುಗಡೆ ಸ್ವಲ್ಪ ಮುಂದಕ್ಕೆ ಕುದುರೆಗೊಂಬೆ ಮಂಟಪವಿದೆ. ಎಲ್ಲ ಕಡೆ ನಾಮಫಲಕಗಳನ್ನು ಹಾಕಿಟ್ಟಿದ್ದಾರಾದರೂ ಮತ್ತೇನೂ ಮಾಡಿಲ್ಲ. ನಮ್ಮ ಸಂಸ್ಕೃತಿಯನ್ನು, ನಮ್ಮ ಇತಿಹಾಸವನ್ನು ಹೇಳುವ ಈ ಜಾಗಗಳ ಬಗ್ಗೆ ನಾವು/ ಸರ್ಕಾರ ಇನ್ನೊಂದು ಸ್ವಲ್ಪ ಹೆಚ್ಚು ಜಾಗೃತಿ ತೋರಿಸಬೇಕೇನೋ ಎನ್ನಿಸಿತು. ಹಲವಾರು ಚಿಕ್ಕಚಿಕ್ಕ ದೇವಸ್ಥಾನಗಳ ಬಳಿ ಯಾರೂ ಇರುವುದಿಲ್ಲ, ಯಾರಾದರೂ ದುಷ್ಕರ್ಮಿಗಳು ಅತಿಸುಲಭದಲ್ಲಿ ವಿಕೃತಿ ಮಾಡಬಹುದು. ಅದಕ್ಕೆ ಉದಾಹರಣೆ ತುಲಾಭಾರ ಮಂಟಪದ ಪಕ್ಕಕ್ಕಿರುವ ಗೋಡೆಯ ಮೇಲೆ ಕಾಣಸಿಗುವ ಇಂಗ್ಲೀಷಿನಲ್ಲಿ ಕೆತ್ತಲ್ಪಟ್ಟ ಅಮರಪ್ರೇಮಿಗಳ(ವ್ಯಂಗ್ಯದ ದನಿಯಲ್ಲಿ ಓದಿಕೊಳ್ಳಿ) ಹೆಸರುಗಳು.

ರಾಣಿಯರ ಸ್ನಾನಗೃಹ


ನವರಾತ್ರಿ ಮೈದಾನದ ದೊಡ್ಡ ವೇದಿಕೆ
ವಿಜಯವಿಠ್ಠಲ ದೇವಸ್ಥಾನವನ್ನು ನೋಡಿ ಮುಗಿಸಿ ಬಂದವರು ಮುಂದೆ ಹೋಗಿದ್ದು ರಾಣಿಯ ಸ್ನಾನ ಗೃಹಕ್ಕೆ, ಈಗ ಸ್ನಾನ ಮಾಡಲು ಯಾವ ರಾಣಿಯೂ ಇಲ್ಲ, ಕೊನೆಗೆ ನೀರೂ ಇಲ್ಲ ಈ ಸ್ನಾನಗ್ರಹದಲ್ಲಿ. ಯಾರದರೂ ರಾಜಾತಿಥಿಗಳು ಬಂದಾಗ ಇಲ್ಲಿಗೆ ಕರೆದುಕೊಂಡು ಬರುತ್ತಿದ್ದರಂತೆ ವಿಹಾರಕ್ಕೆ ವಿನೋದಕ್ಕೆ ಮತ್ತು ಸ್ನಾನಕ್ಕೆ. ಇದನ್ನು ಮುಗಿಸಿಕೊಂಡು ಹೋಗಿದ್ದು ನವರಾತ್ರಿ ದಿಬ್ಬಕ್ಕೆ. ಎಕರೆಗಟ್ಟಲೇ ದೊಡ್ಡ ಸಮತಟ್ಟಾದ ಮೈದಾನ. ಅದರ ತುಂಬಾ ಚಿಕ್ಕ ಚಿಕ್ಕ ವೇದಿಕೆಗಳು. ಒಂದು ಕಡೆ ಮೂವತ್ತು-ನಲ್ವತ್ತು ಅಡಿ ಎತ್ತರದ ಕಲ್ಲಿನ ವಿಶಾಲವಾದ ವೇದಿಕೆ. ಈಗ ಮೈಸೂರಿನಲ್ಲಿ ಆಗುತ್ತಿರುವ ನವರಾತ್ರಿ(ದಸರಾ) ಉತ್ಸವ ಮೊದಲು ಹಂಪಿಯಲ್ಲಾಗುತ್ತಿತ್ತಂತೆ. ಆಗ ಈ ಮೈದಾನದ ತುಂಬೆಲ್ಲ ಕಾರ್ಯಕ್ರಮಗಳು. ಮುಖ್ಯ ಕಾರ್ಯಕ್ರಮ ಈ
ನವರಾತ್ರಿ ಮೈದಾನದ ಕಲ್ಯಾಣಿ
ದೊಡ್ಡ ವೇದಿಕೆಯ ಮೇಲೆ. ಈ ವೇದಿಕೆಯಲ್ಲಿಯೂ ಸೂಕ್ಷ್ಮ ಸುಂದರ ಕೆತ್ತನೆಗಳನ್ನು ಗಮನಿಸಬಹುದು. ಇದೇ ಮೈದಾನದ ಒಂದು ಬದಿಗೆ ಕಲ್ಯಾಣಿ ಒಂದಿದೆ. ಸಂಪೂರ್ಣವಾಗಿ symmetric ಆಗಿರುವ ಇದೂ ಒಂದು ಆಕರ್ಷಣೆಯ ಕೇಂದ್ರವೇ. ಈ ಮೈದಾನದಲ್ಲಿಯೇ ಒಂದು ಪಿಸುಮಾತಿನ ಕೆಳಮಹಡಿಯಿದೆ, ನೋಡಿದೆವಾದರೂ ನಮಗೆ ಅದರ ಮಹತ್ವ ತಿಳಿಯಲಿಲ್ಲ.

ಇಲ್ಲಿಂದ ಹೊರಬಂದ ಕೂಡಲೇ ಸಿಗುವುದು ಹಜಾರ ರಾಮ ದೇವಸ್ಥಾನ. ಗೋಡೆಯ ಮೆಲೆಲ್ಲ ರಾಮಾಯಣದ ವಿವಿಧ ಚಿತ್ರಗಳನ್ನು ಕೆತ್ತಿರುವುದರಿಂದ ಹಜಾರ ರಾಮ- ಸಾವಿರ ರಾಮರ ದೇಗುಲ ಎಂಬ ಹೆಸರು ಬಂದಿದೆ. ಉಳಿದೆಲ್ಲ ಕೆತ್ತನೆಗಳಿಗಿಂತ ವಿಭಿನ್ನವಾಗಿ ಕಾಣುವ ಈ ದೇಗುಲದ

ಹಜಾರ ರಾಮಚಂದ್ರ ದೇವಸ್ಥಾನದ ಕೆಲವು ಶಿಲ್ಪಗಳು
ಶಿಲ್ಪಗಳು ತಮ್ಮ ಮೇರು ಸೌಂದರ್ಯದಿಂದ ಎದ್ದು ಕಾಣುತ್ತವೆ. ರಾಜಕುಟುಂಬದವರ ಖಾಸಗಿ ದೇಗುಲವಾಗಿದ್ದ ಇದು, ಹಂಪಿಗೆ ಕೇಂದ್ರಬಿಂದುವಿನಂತಹ ಪ್ರದೇಶದಲ್ಲಿದೆ. ಇದರ ಹಿಂದೆಯೇ ಕೃಷ್ಣದೇವರಾಯನ ಅರಮನೆಯಿತ್ತು ಎಂಬ ವದಂತಿ ಇದೆ. (ಪಂಚ ಸುಲ್ತಾನರ ಧಾಳಿಯಲ್ಲಿ ಹಂಪಿಯ ಅರಮನೆಯನ್ನು ಸುಟ್ಟು ಹಾಕುತ್ತಾರೆ. ಯಾರಿಗೂ ಕೃಷ್ಣದೇವರಾಯನ ಅರಮನೆ ಎಲ್ಲಿದೆ ಎಂದು ನಿಖರವಾಗಿ ನಿರ್ಧರಿಸಲಾಗಿಲ್ಲ.)
ಕಮಲ್ ಮಹಲ್

ಹಜಾರ ರಾಮನ ದೇಗುಲ ನೋಡಿ ಬಂದ ನಾವು ಮುಂದೆ ಹೋಗಿದ್ದು ಹಂಪಿಯ ಮತ್ತೊಂದು ಪ್ರಸಿದ್ಧ ಸ್ಮಾರಕ ಕಮಲ್
ಗಜಶಾಲೆ
ಮಹಲ್ ಗೆ. ಸುತ್ತಲೂ ಹುಲ್ಲುಹಾಸಿನಿಂದ ಸುತ್ತುವರೆದಿರುವ ಇದು ನಿಜಕ್ಕೂ ಚಾಯಚಿತ್ರಗ್ರ್ರಹಕರಿಗೆ ಹೇಳಿ ಮಾಡಿಸಿದ ಜಾಗ. ಎಲ್ಲ ಕೋನಗಳೂ ದಿವ್ಯವೇ, ಭವ್ಯವೇ , ದೃಶ್ಯಕಾವ್ಯವೇ. ಕಮಲದ ರೂಪದಲ್ಲಿರುವುದರಿಂದ ಕಮಲ ಮಹಲ್ ಎಂಬ ಹೆಸರು ಬಂದಿದೆ ಎಂದು ಬೇರೆ ಹೇಳಬೇಕೆಂದೇನಿಲ್ಲ. ಎಲ್ಲವನ್ನೂ ಕಲ್ಲಿನಿಂದ ನಿರ್ಮಿಸಲಾಗಿರುವ ಹಂಪಿಯಲ್ಲಿ ಕಮಲ ಮಹಲ್ ಸುಣ್ಣ ಮತ್ತು ಇಟ್ಟಿಗೆಯಿಂದ ಕಟ್ಟಲ್ಪಟ್ಟಿದೆ. ಇದರ ಹಿಂದಿನ ಆವರಣದಲ್ಲಿ ಗಜಶಾಲೆಯಿದೆ. ಕಮಾನಿನ ಆಕಾರದಲ್ಲಿರುವ ಪ್ರತೀ ರಚನೆಯೂ ರಾಜನ/ದೇವರ ಮೆರವಣಿಗೆಯ ರಾಜಾನೆಗಳಿಗೆ ಆಶ್ರಯ ಕೊಟ್ಟಿತ್ತು. ಇದರ ಎದುರಿರುವ ಮೈದಾನದಲ್ಲಿ ಕವಾಯತುಗಳು, ಮೆರವಣಿಗೆಗಳು ನಡೆಯುತ್ತಿದ್ದವಂತೆ. ಕಮಲ್ ಮಹಲ್ ಮತ್ತು ಗಜಶಾಲೆಯ ವಾಸ್ತುಶಿಲ್ಪವು ವಿಜಯನರದ ಶಿಲ್ಪಕಲೆಯ ಮೇಲೆ ಮುಸ್ಲಿ ವಾಸ್ತುಶಿಲ್ಪದ ಪ್ರಭಾವವನ್ನು ನೋಡಬಹುದು.


ಭೂಮ್ಯಾಂತರ್ಗತ ಶಿವ ದೇವಾಲಯ
ಇಲ್ಲಿಂದ ಹೊರಟವರಿಗೆ ಮುಂದೆ ಸಿಕ್ಕಿದ್ದು ಭೂಮ್ಯಾಂತರ್ಗತ ಶಿವ ದೇವಸ್ಥಾನ. ಎದುರಿರುವ ನಂದಿಯ ವಿಗ್ರಹದ ಆಧಾರದ ಮೇಲೆ ಇಲ್ಲೊಂದು ಶಿವ ದೇವಸ್ಥಾನವಿರಬಹುದು ಎಂಬ ಯೋಚನೆ ಬಂದು ಸಿಕ್ಕ ಈ ದೇಗುಲ ಭೂ ಮಟ್ಟಕ್ಕಿಂತ ಕೆಳಗಿದೆ. ಅರ್ಧ ತುಂಬಿಕೊಂಡಿರುವ ನೀರನ್ನು ತೆಗೆಯುವ, ಶಿಥಿಲಗೊಂಡ ದೇಗುಲವನ್ನು ಪುನಃ ನಿಲ್ಲಿಸುವ ಕಾಮಗಾರಿ ವರ್ಷಾನುಗಟ್ಟಲೆಯಿಂದ ನಡೆಯುತ್ತಲೇ ಇದೆ, ಹಾಗೆಂದು ಅಲ್ಲಿಯೇ ಕೆಲಸ ಮಾಡುತ್ತ ಈಗ ನಿವೃತ್ತಿಯ ಪ್ರಾಯಕ್ಕೆ ಬಂದಿರುವ ಓರ್ವ ಕೆಲಸಗಾರರು ಬೇಜಾರಲ್ಲಿ ಹೇಳಿದರೆ ವಿಜಯನಗರದ ರಾಜರ ನಿಟ್ಟುಸಿರು ಕೊರಳಿಗೆ ತಾಗಿದಂತಿತ್ತು.


ನಂತರ ಹೋಗಿದ್ದು ವಿಶ್ವ ಪ್ರಸಿದ್ಧ ಲಕ್ಷ್ಮಿನರಸಿಂಹನ ವಿಗ್ರಹ ನೋಡಲು. ತೊಡೆಯ ಮೇಲೆ ಪತ್ನಿಯನ್ನು ಕೂರಿಸಿಕೊಂಡಿದ್ದ
ಚಿರವಿರಹಿ ಲಕ್ಷ್ಮಿನರಸಿಂಹ 
ನರಸಿಂಹನ ಬಹು ಎತ್ತರದ ವಿಗ್ರಹವಿದು. ಕುಪ್ರಸಿದ್ಧ ಧಾಳಿಯಲ್ಲಿ ಉಳಿದೆಲ್ಲರಿಗಿಂತಲೂ ಹೆಚ್ಚು ಹಾನಿಗೀಡಾಗಿದ್ದು ನಮ್ಮ ಈ ಲಕ್ಷ್ಮಿನರಸಿಂಹನಿಗೆ. ಲಕ್ಷ್ಮಿಯ ವಿಗ್ರಹವನ್ನು ಮುರಿದು ಹಾಕಿದ ಧಾಳಿಕೋರರು ನರಸಿಂಹನ ಕಣ್ಣಲ್ಲಿ ಒಂದು ಅಸಹನೀಯ ವೇದನೆಯನ್ನು ಮೂಡಿಸಿ ಹೋಗಿಬಿಟ್ಟರು. ಪುರಾತತ್ವ ಇಲಾಖೆಯವರು ಅದನ್ನು ಬದಲಾಯಿಸಿದ್ದಾರಾದರೂ ಮೂಲ ದಿವ್ಯ ರೂಪಕ್ಕೆ ತರಲಾದರೂ ಹೇಗೆ ಸಾಧ್ಯವಾದೀತು? ಈ ಮೂರ್ತಿ ಬಹುಕಾಲದವರೆಗೆ ಮನಸ್ಸಲ್ಲೇ ಕಾಡುತ್ತಿರುತ್ತದೆ. ಇದರ ಪಕ್ಕದಲ್ಲೇ ಒಂದು ಬ್ರಹತ್ ಶಿವಲಿಂಗವಿದೆ. ಪ್ರತೀ ಕಲ್ಲೂ ಶಿಲ್ಪವಾಗಿರುವ ಹಂಪಿಯಲ್ಲಿರದಿದ್ದರೆ ಈ ಶಿವಲಿಂಗವೇ ಒಂದು ಪ್ರವಾಸಿ ತಾಣವಾಗುತ್ತಿತ್ತೇನೋ?

ನೂರಾರು ದೇವಸ್ಥಾನಗಳಿರುವ ಹಂಪಿಯಲ್ಲಿ ಇನ್ನೂ ಪೂಜೆ ಆಗುತ್ತಿರುವುದು ಮುಖ್ಯವಾಗಿ ವಿರುಪಾಕ್ಷ ದೇವಾಲಯದಲ್ಲಿ ಮತ್ತು ಉದ್ದಾನ ವೀರಭದ್ರ ದೇವಾಲಯದಲ್ಲಿ. ಉಳಿದೆಲ್ಲ ಕಡೆ ದೇವರ ಮೂರ್ತಿಗಳು ಭಗ್ನವಾಗಿರುವುದರಿಂದ ಈಗ ಪೂಜೆ ನಡೆಯುತ್ತಿಲ್ಲ. ವೀರಭದ್ರ ದೇಗುಲದ ಗೋಪುರದವರೆಗೂ ರಸ್ತೆ ಬಂದು ಕುಳಿತಿದೆ. ಅಷ್ಟೇನೂ ಶಿಲ್ಪಕಲಾ ಮಹತ್ವ ಕಾಣದಾದರೂ(ಇಡೀ ದಿನ ೪೦ ಡಿಗ್ರಿ ಬಿಸಿಲಲ್ಲಿ ತಿರುಗಿದ್ದ ಮನಸ್ಸಿಗೆ ಕಂಡಿಲ್ಲ ಎಂದರೆ ಅದು ನನ್ನ ಸುಸ್ತನ್ನ ಹೇಳುತ್ತದೆಯೇ ವಿನಃ ಸೌಂದರ್ಯರಾಹಿತ್ಯವಿದೆ ಎಂದಲ್ಲ) ಜೀವಂತಿಕೆಯ ದೃಷ್ಟಿಯಿಂದ ಈ ದೇವಸ್ಥಾನ ಮನಸೆಳೆಯುತ್ತದೆ. ಈ ದೇವಾಲಯವನ್ನು ನೋಡಿ ಮುಗಿಸಿದ ಮೇಲೆ ಎಲ್ಲರೂ ಸುಸ್ತಾಗಿದ್ದೆವು. ಹಂಪಿಯ  ಬಗ್ಗೆ ಹೇಳಲೇಬೇಕಾದ ಅಂಶ ಎಂದರೆ ಸೆಕೆ, ಬಾಯಾರಿಕೆ. ಎಷ್ಟು ನೀರು ಕುಡಿದರೂ ಸಾಲದು, ಎಷ್ಟು ನೀರನ್ನು ತಲೆಯ ಮೇಲೆ ಹೊಯ್ದುಕೊಂಡರೂ ಸಾಲದು. ತಾಳಲಾರದ ಸೆಖೆ. ತಲೆಯ ಮೇಲೆ ಒಂದು ಟೊಪ್ಪಿಯನ್ನೂ ಹಾಕದೇ ತಿರುಗಿದ ನಮಗೆ ರೂಮಿಗೆ ಹೋಗಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುವ ಅವಶ್ಯಕತೆಯಾಗಿತ್ತು.

ಮೈ ಕೈ ಕಾಲಲ್ಲೆಲ್ಲ ಸುಸ್ತು. ಮನಸ್ಸಲ್ಲಿ ಬತ್ತದ ಉತ್ಸಾಹ. ಸಂಜೆ ಸೂರ್ಯಾಸ್ತಕ್ಕೆ ಮಾತಂಗ ಪರ್ವತ ಹತ್ತುವುದೆಂದು ನಿರ್ಧರಿಸಿ
ಮಾತಂಗ ಪರ್ವತದ ಮೇಲಿಂದ ಸೂರ್ಯಾಸ್ತ
ಬೆಡ್ಡಿನಲ್ಲಿ ಬಿದ್ದವನಿಗೆ ಅದ್ಭುತ ನಿದ್ದೆ, ಆ ಸೆಖೆಯಲ್ಲಿಯೂ(ಫ್ಯಾನ್ ಕೆಳಗೆ ಬಿದ್ದುಕೊಂಡರೂ ಸ್ವಲ್ಪವೂ ತಂಪಾಗದಂತಹ ಸೆಖೆಯಿದೆ). ಎದ್ದು ಹೊರಟಿದ್ದು ಐದೂವರೆಗೆ. ಆಗಲೇ ಸೂರ್ಯಾಸ್ತದ ಲಕ್ಷಣಗಳು ಕಾಣತೊಡಗಿದ್ದವು. ಹೆಚ್ಚು ಕಮ್ಮಿ ಒಂದರ್ಧ ಕಿ.ಮೀ.ಯನ್ನು ದಡಬಡನೇ ನಡೆದು ಮಾತಂಗ ಪರ್ವತವನ್ನು ತಲುಪಿಕೊಂಡ ನಾವು ಹತ್ತಲು ಸುರುಮಾಡಿದೆವು. ಕಲ್ಲೇ ಗುಡ್ಡವಾಗಿ ನಿಂತಿರುವ ಇಲ್ಲಿಂದ ಹಂಪಿಯ ವಿರುಪಾಕ್ಷ ದೇಗುಲ ಸಮುಚ್ಚಯದ ಒಂದು ಪಕ್ಷಿನೋಟ ಸಿಗುತ್ತದೆ. ಇದರ ಮೇಲೂ ಒಂದು ಗುಡಿಯಿದೆಯಾದರೂ ನನಗೆ ನೋಡಲಾಗಲಿಲ್ಲ. :( ಸೂರ್ಯಾಸ್ತದ ಸಮಯದಲ್ಲಿ ಹಂಪಿಯ ಮಾನವ ನಿರ್ಮಿತ ಅದ್ಭುತ ಶಿಲ್ಪಕಲೆಯು ಪ್ರಕೃತಿಯ ಸುಂದರ ಹಿನ್ನೆಲೆಯೊಂದಿಗೆ ಕಂಗೊಳಿಸುತ್ತದೆ. ನೀವು ಹಂಪಿಯ ಸುತ್ತಮುತ್ತಲಿನ ಯಾವುದಾದರೂ ಗುಡ್ಡವನ್ನು ಹತ್ತಿದರೆ ಸುತ್ತೆಲ್ಲ ಕಾಣುವುದು ಬರೀ ಕಲ್ಲಿನ ರಾಶಿಗಳೇ. ಎಡಕ್ಕೆ ಬಲಕ್ಕೆ ಹಿಂದಕ್ಕೆ ಮುಂದಕ್ಕೆ ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಕಲ್ಲಿನ ರಾಶಿಗಳೇ, ನೀವು ನಿತ್ತಿರುವುದೂ ಒಂದು ಕಲ್ಲಿನ ರಾಶಿಯ ಮೇಲೆಯೇ ಆಗಿರುತ್ತದೆ.

ವಿರುಪಾಕ್ಷ ದೇವಸ್ಥಾನ , ಮುಖ್ಯಬೀದಿ, ಹಂಪಿ
ಮಾತಂಗ ಪರ್ವತವನ್ನು ಇಳಿದು ಬಂದ ನಾವು ಹೋಗಿದ್ದು ಹಂಪಿಯ ಆಕರ್ಷಣೆಯ ಕೇಂದ್ರಬಿಂದುವಾದ, ಕರ್ನಾಟಕದ ಆ ಲೆಕ್ಕದಲ್ಲಿ ಇಡೀ ಭಾರತದಲ್ಲೇ ಅತಿ ಹಳೆಯ (ಪೂಜೆ ನಡೆಯುತ್ತಿರುವ) ದೇವಸ್ಥಾನಗಳಲ್ಲಿ ಒಂದಾದ ವಿರುಪಾಕ್ಷ ದೇವಸ್ಥಾನಕ್ಕೆ. ೭ನೇ ಶತಮಾನದಲ್ಲಿ ಕಟ್ಟಿರಬಹುದೆಂಬ ಅಂದಾಜಿದೆ. ಎಂತಹ ನಾಸ್ತಿಕನ ಬಳಿಯೂ ಒಮ್ಮೆ ಕೈ ಮುಗಿಸಿಕೊಳ್ಳುವ, ದೇವರು ಇದ್ದರೆ ಇಲ್ಲಿಯೇ ಎಲ್ಲೋ ಇರಬಹುದು ಎಂಬ ಭಾವನೆ ಮೂಡಿಸುವ ತಾಕತ್ತು ಈ ದೇವಸ್ಥಾನಕ್ಕಿದೆ. ಎತ್ತರದ ಗೋಪುರ ದಾಟಿ ಒಳಗೆ ಹೋದರೆ ದೊಡ್ಡ ಪ್ರಾಂಗಣ. ನೂರಾರು ಜನ ಕೂತರೂ ಮತ್ತೂ ಖಾಲಿಯೇ ಇದೆ ಎನ್ನಿಸುವಷ್ಟು. ಇದನ್ನು ದಾಟಿ ಒಳಕ್ಕೆ ಹೋದರೆ ಕಲ್ಲಿನ ಮಂಟಪವೊಂದಿದೆ. ಇಲ್ಲಿನ ಕೆತ್ತನೆಗಳೂ ಅದ್ಭುತವಾಗಿದೆ(ಫೋಟೋಗಳಿಲ್ಲ, ಹೆಚ್ಚು ವಿವರಗಳು ಸಿಕ್ಕಿಲ್ಲ, ಆದ್ದರಿಂದ ಬರೀ ಸುಂದರವಾಗಿದೆ ಎಂದಷ್ಟೇ ಹೇಳಲು ಶಕ್ಯ ನಾನು.) ಇಲ್ಲಿ ಪ್ರತಿ ಹೆಜ್ಜೆಗೂ ’ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ’ ಹಾಡು ರಿಂಗಣಿಸುತ್ತದೆ. ತುಂಗಭದ್ರಾ ನದಿಗೆ ತಾಗಿಕೊಂಡಿರುವ ಈ ದೇಗುಲ ಈ ದೇಗುಲದಲ್ಲಿ ಮೂರು ತಲೆಯ ನಂದಿಯಿದೆಯಂತೆ(ನಮಗೆ ನೋಡಲಾಗಲಿಲ್ಲ ಇದನ್ನು, ಮಾಹಿತಿಯಿರದೇ ಇದ್ದುದರಿಂದ), ಇದು ಒಂದು ವಿಚಿತ್ರ, ವಿಶಿಷ್ಟ ಶಿಲ್ಪ ಎಂಬ ಮಾತಿದೆ.

ಇತಿಹಾಸವನ್ನು ಸ್ವಲ್ಪವೇ ಸ್ವಲ್ಪ ಇಷ್ಟ ಪಡುತ್ತೀರಾದರೆ, ಶಿಲ್ಪಕಲೆಗಳನ್ನು ನೋಡುತ್ತಾ ಮೈಮರೆಯಲು ನಿಮಗೆ ಸಾಧ್ಯವಿದೆ ಎಂದಾದರೆ, ಸ್ವಲ್ಪ ಸೆಖೆ ಹೆಚ್ಚಾದರೂ ಉತ್ಸಾಹ ಬತ್ತದು ಎಂಬ ಖಾತರಿ ಇದ್ದರೆ ನೀವು ಹಂಪಿಯನ್ನು ನೋಡಬೇಕು. ವಿಜಯನಗರವೆಂಬ ಸಾಮ್ರಾಜ್ಯ ಸ್ಥಾಪಿತವಾಗಿ, ಬೆಳೆದು, ಮೆರೆದು, ದುರದೃಷ್ಟಕರವಾಗಿ ಅವನತಿ ಹೊಂದಿದ ಗಂಡುಭೂಮಿಯನ್ನು ಮುಟ್ಟಲೇಬೇಕು, ಮುಟ್ಟಿ ನಮಸ್ಕರಿಸಬೇಕು. ಇಲ್ಲಿರುವ ಕಲೆಯ ಸಿರಿವಂತಿಕೆಗೆ ಹೆಮ್ಮೆ ಪಡಬೇಕು, ಭಗ್ನವಾಗಿ ಕುಳಿತ ಶಿಲ್ಪಗಳ ದುರಂತಕ್ಕೆ ಮರುಗಬೇಕು.  ನಾವೂ ಇತಿಹಾಸದ ಭಾಗವಾಗದೇ ಇದ್ದರೆ ಹಾಳು ಕೊಂಪೆಯಾಗಷ್ಟೇ ಪರಿಚಿತವಾಗುವ ಹಂಪಿ, ಇತಿಹಾಸದ ಬಗ್ಗೆ ಸ್ವಲ್ಪ ಕುತೂಹಲ ವಹಿಸಿದರೂ ಸ್ವರ್ಗವೆನಿಸಿಬಿಡುತ್ತದೆ. ಕಲ್ಲೆಲ್ಲವೂ ಶಿಲ್ಪವಾಗಿರುವ ಊರಿದು, ಕೈ ಮುಗಿದು ಒಳಗೆ ಹೋಗಬೇಕು, ಮನಸ್ಸು ಭಾರವಾಗೇ ವಾಪಸ್ಸು ಬರಬೇಕು.
...

Monday 31 March 2014

ರಮ್ಯಚೈತ್ರಕಾಲ

"ಮೊದಲನೆಯದಾಗಿ ಎಲ್ಲರಿಗೂ ಯುಗಾದಿಯ ಶುಭಾಷಯಗಳು. "

ಚೈತ್ರ ಎಂದರೆ ಯುಗದ ಆದಿ, ಒಂದು ಹೊಸ ಋತುಚಕ್ರದ ಪ್ರಾರಂಭ. ಮನುಷ್ಯರಿಗೆ ಮಾತ್ರವಲ್ಲ, ಪ್ರಕೃತಿಗೆ ಕೂಡ ಇದು ಹೊಸ ವರ್ಷದ ಪ್ರಾರಂಭ. ಚೈತ್ರ ಎಂದರೆ ಹಸಿರು  ಚಿಗುರುವ ಸಮಯ, ಕೊರಡು ಕೊನರುವ ಸಮಯ, ಮಾಗಿಯಲ್ಲಿ ಕಳೆದುಕೊಂಡ ತನ್ನ ಹಸಿರಸಾಮ್ರಾಜ್ಯವನ್ನು ಮರುವಶಪಡಿಸಿಕೊಳ್ಳಲು ಪ್ರಕೃತಿ ಸಡಗರದಿಂದ ತಯಾರಾಗುವ ಸಮಯ. ಮಳೆಗಾಲದಲ್ಲಿ ಎಲ್ಲವೂ ಹಸಿರಿನಿಂದ ನಳನಳಿಸಬಹುದು, ಆದರೆ ಎಲ್ಲಕ್ಕೂ ಒಂದು ಪ್ರಾರಂಭ ಬೇಕಲ್ಲವೇ, ಅಂತಹ ಪ್ರಾರಂಭ ಇರುವುದು ಈ ಚೈತ್ರದಲ್ಲಿ. ನಮ್ಮ ಮನುಜಕುಲದ ’ಯುಗಾದಿ’ಯನ್ನು, ಹೊಸವರ್ಷದ ಹಬ್ಬವನ್ನು ಪ್ರಕೃತಿಯ ಹೊಸಋತುವಿಗೆ ಮೇಳೈಸಿದ ನಮ್ಮ ನಾಡಿನ ಹಿರಿಯರು ಎಷ್ಟು ವೈಚಾರಿಕವಾಗಿ, ವೈಜ್ಞಾನಿಕವಾಗಿ ಮುಂದುವರಿದಿದ್ದರು ಅಲ್ಲವೇ? ಪ್ರಕೃತಿಯ ಜೊತೆಗೇ ಬದುಕಿದ ನಮ್ಮ ಪೂರ್ವಜರು ಪ್ರಕೃತಿಯನ್ನೇ ಕಾಲದಂಡವಾಗಿರಿಸಿಕೊಂಡಿದ್ದು, ಗಿಡಮರಗಳು ಚಿಗುರುವ ಕಾಲವನ್ನೇ ಹೊಸವರ್ಷದ ಆರಂಭವನ್ನಾಗಿ ಸ್ವೀಕರಿಸಿದ್ದು ಒಂದು ಸರಳ, ಮಹಾನ್ ಯೋಚನೆ ಎನಿಸುತ್ತದೆ.

ಬೇಸಗೆ ಎಂದರೆ ಅದೊಂದು ಸುಂದರ ಕಾಲ. ಮಳೆಗಾಲದ ವರುಣನ ಆರ್ಭಟವಾಗಲೀ, ಚಳಿಗಾಲದ ಮೈಕೊರೆಯುವ ಚಳಿಯಾಗಲೀ ಇರದ ಹಿತಕಾಲ(ಇತ್ತೀಚೆಗಿನ ಕಾಲದಲ್ಲಿ ಹೆಚ್ಚುತ್ತಿರುವ, ಅತಿಯಾಗಿ ಹೆಚ್ಚಿರುವ ಬಿಸಿಲಿನ ಪ್ರಭಾವಗಳನ್ನು ಹೊರತುಪಡಿಸಿ). ಮುಂಜಿ, ಮದುವೆ ಇತ್ಯಾದಿ ಶುಭಕಾರ್ಯಗಳಿಗಾಗಿ ಮನೆಯವರೆಲ್ಲ ಕಾದ ಪಕ್ವಕಾಲ. ಯುಗಯುಗಗಳು ಕಳೆದರೂ ಯುಗಾದಿ ಮತ್ತೆ ಬರುತ್ತದೆ, ಹಳೆಯ ನೋವನ್ನು ಮರೆಸಿ ಹೊಸ ಖುಷಿಯನ್ನು ತರುತ್ತದೆ, ಎಂದು ನಂಬಿಕೊಂಡ ಜನರ ಪಾಲಿನ ಶುಭಪರ್ವಕಾಲ. ಬಾಡಿದ ಕೊರಡಿನಲ್ಲಿಯೂ ಕೂಡ ಹೊಸಬಾಳಿನ ಆಸೆಯಿಂದ ಕೊನರುವ ಧನಾತ್ಮಕ ಯೋಚನೆ ಮೂಡುವ ಕಾಲ. ರಜೆಯ ಮಜದ ಆಸೆಗೆ ಅದಕ್ಕಿಂತ ಮೊದಲಿರುವ ವಾರ್ಷಿಕ ಪರೀಕ್ಷೆಗಳೂ ಲೆಕ್ಕವಲ್ಲ ಎಂದು ಎಲ್ಲ ಮಕ್ಕಳೂ ಒಟ್ಟಿಗೇ ಲೆಕ್ಕಹಾಕಿಕೊಂಡುಬಿಡುವ ಸಮಯ ಇದು. ಊರಹೊರಗಿನ ಕವಳಿ, ಮುಳ್ಳುಹಣ್ಣು ಇತ್ಯಾದಿ ಗಿಡ ಮಟ್ಟಿಗಳು ಹಣ್ಣುಗಳನ್ನು ಬಿಟ್ಟುಕೊಂಡು ಊರಪೋರರನ್ನು  ಆಮಂತ್ರಿಸುತ್ತಿವೆಯೇನೋ ಎಂಬಂತೆ ಭಾಸವಾಗುವ ಕಾಲ. ಗ್ರಾಮಗಳಲ್ಲಾಗುವ ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಟೂರ್ನಮೆಂಟುಗಳಿಗೂ,  ದೇವರ ತೇರು, ಊರ ಜಾತ್ರೆ ಇತ್ಯಾದಿ ಸಂಭ್ರಮದ ಆಚರಣೆಗಳಿಗೂ ಸೂಕ್ತಕಾಲ. ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರಕಾರ ಬಹುತೇಕ ಮಕ್ಕಳ ಭವಿಷ್ಯ ನಿರ್ಧರಿತವಾಗುವ ಸಾವಿರಾರು ಪ್ರವೇಶ ಪರೀಕ್ಷೆಗಳ, ನೂರಾರು ’ವರ್ಷವಿಡೀ-ಕಲಿತು-ಮೂರು-ಗಂಟೆ-ಕಕ್ಕು’ವ ಪರೀಕ್ಷೆಗಳ ಪರೀಕ್ಷಾಜ್ವರಕಾಲ. ಹುಳಿಕಾಯಿಯ ಮರಕ್ಕೆ ಮಾವಿನಕಾಯಿಗೆ ಕಲ್ಲು ಹೊಡೆಯುವುದರಿಂದ ಹಿಡಿದು ಹಣ್ಣಿಗೆ ಹಾಕಿದ ಈಶಾಡಿ ಹಣ್ಗಾಯಿಗಳನ್ನು ಕದಿಯುವ ತನಕದ ಮಾವಿನ ಹ(ಬ್ಬದ)ಣ್ಣಿನ ಕಾಲ.

ಬೇಸಗೆ ಎಂದರೆ ನೆನಪಾಗುವುದು ಬಾಲ್ಯ. ಅಲ್ಲಿದ್ದ ರಜಾ ಮತ್ತು ಅದರ ಮಜ. ಈಗಲೂ ಬೇಸಗೆ ಎಂದರೆ ನೆನಪಾಗುವುದು ಚಿಕ್ಕಂದಿನಲ್ಲಿ ಪರೀಕ್ಷೆ ಮುಗಿದ ಮೇಲೆ ಒಂದು ದಿನವೂ ತಪ್ಪದಂತೆ ಬೆಳಿಗ್ಗೆಯಿಂದ ಸಂಜೆಯವರೆಗೂ ಆಡುತ್ತಿದ್ದ ಕ್ರಿಕೆಟ್, ಬಾಲ್ ಬ್ಯಾಡ್ಮಿಂಟನ್ ಅಂತಹ ಸ್ಟಾಂಡರ್ಡ್ ಆಟಗಳು, ಗೇರುಬೀಜದ ಬೆಟ್ಟೆ ಆಟ, ಡಬ್ಬಾಡಿಬ್ಬಿಯಂತಹ ಜಾನಪದ ಆಟಗಳು, ರಜೆ ಮುಗಿಯುವ ಹೊತ್ತಿಗೆ ಮಳೆ ಬೀಳದ ಹೊರತು(ರಜೆಯ ಕೊನೆಯಲ್ಲಿ) ಹಣ್ಣಾಗದ ಮುಂಡಕ್ಕಿ ಹಣ್ಣಿಗೆ ಹಾಕಿದ ಶಾಪಗಳು, ಯಾವುದೇ ಗೊತ್ತು ಗುರಿಯಿಲ್ಲದೆ ಅಜ್ಜನ ಮನೆಯ ಸುತ್ತಲಿನ ಹಾಡಿ*ಯಲ್ಲಿ ಸುತ್ತಾಡಿದ ಅಲೆದಾಟಗಳು, ಗಣಪತಿಕಾಯಿ**ಯಲ್ಲಿ ಮೂರ್ತಿ ಮಾಡಿ ಅಜ್ಜನ ಮನೆಯಲ್ಲಿ ’ಪೂಜೆಯ ಆಟ’ ಆಡಿ; ಟೆರೇಸ್ ಮೇಲೆ ಅಡಿಗೆ ಆಡುತ್ತಿದ್ದ ತಂಗಿಯಂದಿರಿಗೆ ಬೆಂಕಿ ಹಚ್ಚಿಕೊಟ್ಟು, ಮನೆಯವರ ಹತ್ತಿರ ಉಗಿಸಿಕೊಂಡ ಬೈಗುಳಗಳು, ಅಜ್ಜನ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಬ್ರಹ್ಮಚಾರಿಯಾಗಿ ಕುಳಿತು ಗಳಿಸಿದ ದಕ್ಷಿಣೆಗಳು, ಬೇಸಗೆಯ ಕೊನೆಯಲ್ಲಿ ಬರುತ್ತಿದ್ದ ಮೊದಲ ಮಳೆಯಲ್ಲಿ ಮನೆಯ ಎದುರ ತೋಡಿನಲ್ಲಿ ಬಿಟ್ಟ ತಿರುಗಿ ಬಾರ ಕಾಗದದ ದೋಣಿಗಳು, ಅವಲಕ್ಕಿ ಮಜ್ಜಿಗೆಯ ಆಸೆಗೆ ದೊಡ್ಡಮ್ಮನಿಗೆ ಮಾಡಿಕೊಡುತ್ತಿದ್ದ ಮನೆಕೆಲಸಗಳು. ಎಲ್ಲದರಲ್ಲಿಯೂ ಚಿಂತೆಗಳಿಲ್ಲದ ಅದಮ್ಯ ಖುಷಿಯಿತ್ತು, ಜಗತ್ತು ನಮ್ಮದೇ ಏನೋ ಎಂಬಷ್ಟು ಸುಖವಿತ್ತು, ಎಲ್ಲ ದಿನವೂ ಹಬ್ಬವೇನೋ ಎಂಬಷ್ಟು ಸಂಭ್ರಮವಿತ್ತು. ನೆಲನೋಡದೆ ಓಡುವ ತರಾತುರಿಯಿತ್ತು, ಬಾಲ್ಯದ ಮುಗ್ಧ ಸಂತೋಷ ಇತ್ತು. ಎಲ್ಲಿ ಹೋದವು ಎಲ್ಲ; ನಾವು ದೊಡ್ಡವರಾದ ಹಾಗೆ***?

ಟಿಪ್ಪಣಿ:
*ಹಾಡಿ - ಕುಂದಾಪುರ ಕಡೆಯ ಶಬ್ದ, ಚಿಕ್ಕ ಕಾಡು ಎಂಬ ಅರ್ಥ ಬರುತ್ತದೆ.  ಮನೆಯ ಸುತ್ತಲೂ ಇರುತ್ತಿದ್ದ ಚಿಕ್ಕ ಚಿಕ್ಕ ಮರಗಳ ಗುಂಪು. ಎಕರೆಗಟ್ಟಲೆ ಇರುತ್ತಿದ್ದುದು ಹೌದಾದರೂ ಅದು ಎಂದಿಗೂ ಕಾಡು ಎಂದು ಕರೆಸಿಕೊಳ್ಳದು.
**ಗಣಪತಿ ಕಾಯಿ -  ಮಲೆನಾಡಿನಲ್ಲಿ/ಕರಾವಳಿಯ ಸಮೀಪದ ಕಾಡುಗಳಲ್ಲಿ ಬೆಳೆಯುವ ಒಂದು ಮರದ ಕಾಯಿ. ಹೊರಗಿನ ಗಟ್ಟಿಯಾದ ಸಿಪ್ಪೆಯನ್ನು ತೆಗೆದರೆ ಒಳಗೆ ಬಾದಾಮಿಯಂತಹ ಆದರೆ ಚಿಕ್ಕುಕಾಯಿಯಷ್ಟು ದೊಡ್ಡ ಬೀಜ. ಅದರೊಳಗೆ ಸೊಂಡಿಲಿನಂತ ಒಂದು ರಚನೆಯಿದ್ದು, ಅರ್ಧ ತೆರೆದ ಕಾಯಿ ಕುಳಿತ ಗಣಪತಿಯ ವಿಗ್ರಹದ ಹಾಗೆ ಕಾಣುತ್ತದೆ. ಬಾಲ್ಯದ ದೇವರ ಆಟಕ್ಕೆ ಬಲಿಯಾದ ಕಾಯಿಗಳೆಷ್ಟೋ, ಲೆಕ್ಕ ಇಟ್ಟವರಾರು.
***ಈಗೇನೂ ಖುಷಿಯಿಲ್ಲ ಎಂದೇನಲ್ಲ, ಆದರೆ ಆ ಸಂತೋಷಗಳನ್ನು ಕಳೆದುಕೊಳ್ಳುತ್ತಿದ್ದೇವೇನೋ ನಾವು ಎನಿಸುತ್ತದೆ.  

Wednesday 12 February 2014

ಕೋಲಸಿರ್ಸಿ - ಊರು ಮತ್ತು ನಾನು

ಒಂದು ತಿಂಗಳ ಕೆಳಗೆ ಅನಿವಾರ್ಯ ಕೆಲಸದ ಮೇಲೆ ಕೋಲಸಿರ್ಸಿಗೆ ಹೋಗಿದ್ದೆ, ಬೆಂಗಳೂರಿನಿಂದ ಊರಿಗೆ. ಇರಲಾಗಿದ್ದು ಕೇವಲ ಮೂರು ಗಂಟೆಗಳಷ್ಟೇ ಆದರೂ ಕಾಡಿದ ನೆನಪುಗಳು, ’ದೇಜಾ ವು’ ಅನ್ನಿಸಿದ ಕ್ಷಣಗಳು ಅಗಣಿತ ಈ ಸಮಯದೊಳಗೆ. ಬಸ್ ಇಳಿದು ಎದುರಲ್ಲೇ ಇರುವ ಮನೆಯ ಮೆಟ್ಟಿಲು ಹತ್ತುವುದರೊಳಗೆ ಕಣ್ಣು ಒಂದು ವರ್ಷದಲ್ಲಿ ಬದಲಾಗಿ ಹೋದ ನೂರಾರು ಬದಲಾವಣೆಗಳನ್ನು ಗುರುತಿಸಿತ್ತು. ಕೊನೆಯ ಸಲ ನೋಡಿದಾಗ ಇದ್ದದ್ದಕ್ಕೂ ಈಗಿನದಕ್ಕೂ ಅರಿವಿಲ್ಲದೆಯೇ ತುಲನೆ ನಡೆದಿತ್ತು. ಮನೆಯ ಪಕ್ಕದಲ್ಲಿದ್ದ ಪಂಚಾಯತ್ ಆಫೀಸಿನ ಹಳೆ ಕಟ್ಟಡ ಹಾಳು ಬೀಳಲಾರಂಭಿಸಿತ್ತು ನಿಧಾನವಾಗಿ. ಮನೆಯ ಎದುರಲ್ಲೇ ಒಂದು ಹೊಸ ಬಸ್ ಸ್ಟಾಂಡ್ ಎದ್ದು ನಿಂತಿತ್ತು ಹಳೆಯದರ ಪಳೆಯಳಿಕೆಗಳ ಮೇಲೆ. ಪಕ್ಕದ ಮನೆಯ ಮಮತಕ್ಕನ ಮನೆಯ ಬೇಲಿ ತುಸುವೇ ವಿಸ್ತರಿಸಿ ನಮ್ಮ ಮನೆಯೊಳಕ್ಕೆ ಬಂದಿತ್ತು. ಎದುರಲ್ಲಿಯೇ ಬೆಳೆದು ನಿಂತಿದ್ದ ಅತಿಹುಳಿ ಮಾವಿನಕಾಯಿಯ ಮರ ಮತ್ತೆ ಹೂ ಬಿಟ್ಟು ಅಲಂಕೃತವಾಗಿತ್ತು. ಊರು ಪ್ರವೇಶಿಸುವ ಮೊದಲೇ ಹೊಸ ಆಸ್ಪತ್ರೆ, ಕಾಲೆಜು ಎಲ್ಲವೂ ಸ್ವಾಗತಿಸಿದ್ದವು ಎಂಬಲ್ಲಿಗೆ ಕೋಲಸಿರ್ಸಿ ಎಂಬ ನಾ ಬೆಳೆದ ಊರು ಬದಲಾಗುವುದರಲ್ಲಿತ್ತು, ಬದಲಾಗುತ್ತಲಿತ್ತು ಮತ್ತು ಬದಲಾಗಿತ್ತು.

ನಾನು ಯಾರ ಬಳಿಯಾದರೂ ನಾ ಬೆಳೆದ ಊರು ಕೋಲಸಿರ್ಸಿ ಎಂದರೆ ಹೆಚ್ಚಿನವರು ಶಿರ್ಸಿಗೂ, ಕೋಲಸಿರ್ಸಿಯ
ಕೋಲಸಿರ್ಸಿ - ಬಯಲು, ಗದ್ದೆ, ಗುಡ್ಡ, ಕಾಡು
ಹೆಸರಿಗೂ ಸಂಬಂಧ ಇರಬೇಕೆಂದೇ ಭಾವಿಸುತ್ತಾರೆ. ಎರಡೂ ಕಡೆ ಮಾರಿಕಾಂಬೆಯೇ ಮುಖ್ಯದೇವತೆ ಎಂಬುದನ್ನು ಬಿಟ್ಟರೆ ಅಂತ ಹೋಲಿಕೆಗಳಿಲ್ಲ. ಕೋಲಸಿರ್ಸಿಗೆ ಆ ಹೆಸರು ಬಂದಿದ್ದರ ಹಿಂದೆ ಒಂದು ಕಥೆಯಿದೆ. ಈಗಿನ ಸಿದ್ದಾಪುರ ಪ್ರಾಂತ್ಯವನ್ನು ಬಿಳಗಿ ರಾಜರು ಆಳುತ್ತಿದ್ದ ಕಾಲ. ರಾಜರು ಎಂದಮೇಲೆ ಸೈನ್ಯ ಬೇಕಲ್ಲ. ಹಾಗೆ ಸೈನಿಕರನ್ನು ಸೇರಿಸಿಕೊಳ್ಳಲು, ಸೇರಿದ ಸೈನಿಕರಿಗೆ ತರಬೇತಿ ಕೊಡಲು ಕೋಲಸಿರ್ಸಿಯ ಪ್ರದೇಶವನ್ನು ಆಯ್ದುಕೊಂಡಿದ್ದರಂತೆ. ಹೀಗೆ ಸೈನಿಕರ ತರಬೇತಿ ಸ್ಥಳಕ್ಕಿದ್ದ ’ಕಲಿಗಳನ್ನು ಸೇರಿಸಿ’ ಎಂಬ ಹೆಸರು ಕಾಲಕ್ರಮೇಣ ಬಾಯಿಂದ ಬಾಯಿಗೆ ಹೋಗಿ ಕೋಲಸಿರ್ಸಿ ಆಯ್ತು. ಪಕ್ಕದಲ್ಲಿಯೇ ಇರುವ ಕುಣಜಿ ಎಂಬ ಊರಿನ ಹೆಸರಿಗೂ ಇದೇ ಕಾರಣ. ಅದೇ ಊರಿನಲ್ಲಿ ಹುಟ್ಟಿ ಬೆಳೆದ, ನಾಗರಾಜ್ ಮಾಷ್ಟ್ರು ಡ್ರಾವಿಂಗ್ ಕ್ಲಾಸಿನಲ್ಲಿ ಈ ಕಥೆಯನ್ನೆಲ್ಲ ಹೇಳುತ್ತಿದ್ದಾಗ ಮೈಯ್ಯಲ್ಲಿ ರೋಮಾಂಚನ, ಹೆಮ್ಮೆಯ ಭಾವ ಮೂಡಿದ್ದು ಇಂದಿಗೂ ಹಾಗೆಯೇ ನೆನಪಿದೆ.

ವರ್ತಮಾನಕ್ಕೆ ಬಂದರೆ ಕೋಲಸಿರ್ಸಿ ಎಂಬುದು ೭೦೦/೮೦೦ ಜನರಿರುವ ಒಂದು ಹಳ್ಳಿ. ಉಳಿದ ಕಡೆಗೆ ಹೋಲಿಸಿದರೆ ಇದು ಹಳ್ಳಿಯೇ ಆದರೂ, ೪-೫ ಮನೆಗಳಿರುವ ಹಳ್ಳಿಗಳೇ ಹೆಚ್ಚಿರುವ ಸಿದ್ದಾಪುರದಲ್ಲಿ ಕೋಲಸಿರ್ಸಿ ಒಂದು ದೊಡ್ಡ ಊರೇ ಸರಿ. ಒಂದು ಪದವಿಪೂರ್ವ ಕಾಲೇಜು, ಹೊಸದಾಗಿ ಆಗಿರುವ ಆಸ್ಪತ್ರೆ, ಭಾಗಶಃ ನಾಪತ್ತೆಯಾಗಿರುವ ಕಾಡು ಈ ಮಾತಿಗೆ ಪುಷ್ಠಿಕೊಡುತ್ತದೆ. ಹೆಚ್ಚಿನ ಹಳ್ಳಿಗಳಂತೆ ಕೋಲಸಿರ್ಸಿಯಲ್ಲಿಯೂ ಕೃಷಿಯೇ ಮುಖ್ಯವಾದರೂ, ಅಡಿಕೆಯ ವ್ಯಾಪಾರವೂ ಒಂದು ಮುಖ್ಯ ಉದ್ಯೋಗ ಮತ್ತು ನೂರಾರು ಜನ ಕೆಲಸ ಹುಡುಕಿಕೊಂಡು ಬೆಂಗಳೂರಿನ ಹೊಟೆಲ್ ಬಾರುಗಳನ್ನು ಸೇರಿಕೊಂಡಿದ್ದಾರೆ, ಯಶಸ್ವಿಯಾಗಿದ್ದಾರೆ, ಪಕ್ಕಾ ಉಡುಪಿ ಕಡೆಯ ಶೆಟ್ಟರ ತರಹ. ರಸ್ತೆಯಗುಂಟ ಇರುವ ಅಂಗಡಿಕೇರಿಯಲ್ಲಿ ಘಟ್ಟದ ಕೆಳಗಿನಿಂದ ಬಂದು ನೆಲೆಸಿದ ವ್ಯಾಪಾರಸ್ಥರ ಮನೆಗಳಿದ್ದರೆ, ಊರೊಳಗೆ ಘಟ್ಟದ ಮೇಲಿನ ಕೃಷಿಕರ ಮನೆಗಳಿವೆ. ನಾಲ್ಕೈದು ಗೌಡರು, ಸೊನೆಗಾರ ಶೆಟ್ಟರ ಮನೆಗಳನ್ನು ಬಿಟ್ಟರೆ ಇರುವುದೆಲ್ಲವೂ ನಾಮಧಾರಿ ನಾಯ್ಕರ ಮನೆಗಳೇ. ಮಾತಾಡುವ ಭಾಷೆಯಂತೂ ಅಚ್ಚಕನ್ನಡ. ಈಗೀಗ ಮನೆಗೆ ಹೋದರೆ ಊರಿನವರೊಂದಿಗೆ ವ್ಯವಹರಿಸುವಾಗ ಇಂಗ್ಲೀಷ್ ಪದಬಳಸದೇ ಅಚ್ಚಕನ್ನಡದಲ್ಲಿ ಮಾತನಾಡುವ ಅವರನ್ನು ಕಂಡು ಹೆಮ್ಮೆಯಾಗಲು ಸುರುವಾಗಿದೆ. ಆರಿದ್ರೆ ಮಳೆಯ ಕಾಲದಲ್ಲಿ ಆಗುವ ಹಬ್ಬ, ದೀಪಾವಳಿಯಂದು ನಡೆಯುವ ಎತ್ತುಗಳ ಓಟ, ಎಂಟು ವರ್ಷಕ್ಕೊಮ್ಮೆ ಆಗುವ ಊರದೇವಿ ಮಾರಿಕಾಂಬೆಯ ಜಾತ್ರೆ ಸಾಂಸ್ಕೃತಿಕವಾಗಿ ವಿಶಿಷ್ಟ ಆಚರಣೆಗಳು.

ನಾವು ಎಂದರೆ ನಮ್ಮ ಕುಟುಂಬ ಕೋಲಸಿರ್ಸಿಗೆ ಬಂದಿದ್ದು ೧೯೯೫-೯೬ರಲ್ಲಿ, ಅಮ್ಮನಿಗೆ ಇಲ್ಲಿಗೆ ವರ್ಗವಾದಾಗ ಕೋಲಸಿರ್ಸಿಯ ಬಗ್ಗೆ ಎಚ್ಚರಿಸಿದವರೇ ಜಾಸ್ತಿ,  ಅಲ್ಲಿ ಆ ಸಮಯದಲ್ಲಿ ಬಹಳಷ್ಟು ಕಳ್ಳತನ, ದರೋಡೆಗಳಾಗಿದ್ದವಂತೆ. ನಾನು ಮೊದಲನೆಯ ತರಗತಿಗೆ ಎಂದು ಸೇರಿದ್ದು ಇದೇ ಕೋಲಸಿರ್ಸಿಯ ಸ.ಹಿ.ಪ್ರಾ. ಶಾಲೆಗೆ. ಎಷ್ಟೆಲ್ಲ ಸಿಹಿನೆನಪುಗಳನ್ನು, ಬದುಕಿನ ಪಾಠಗಳನ್ನು ನೀಡಿದೆ ಈ ಕೋಲಸಿರ್ಸಿ ನನಗೆ. ಶಾಲೆಯ ಮೊದಲದಿನ ಸ್ವಂತ ಅಪ್ಪನ ಬಳಿಯೇ ಪೆಟ್ಟು ತಿಂದದ್ದು, ಶಾಲೆಯ ಅಂಗಳ ಸಾರಿಸಲು ಸಗಣಿ ತರಲು ಹೋದ ಹಾಗೆ ಮಾಡಿ ಕವಳಿ ಮಟ್ಟಿಗೆ ಲಗ್ಗೆ ಹಾಕುತ್ತಿದ್ದುದು(ತದಕಾರಣ ಹುಡುಗಿಯರದ್ದು ಸಾರಿಸಿ ಮುಗಿದರೂ ನಾವು ಸಗಣಿ ತರಹೋದವರು ಬರದೇ ಒಂದು ದಿನ ಸಿಕ್ಕಿಬಿದ್ದು ಸಾಲಾಗಿ ಕೈ ಮೇಲೆತ್ತಿ ನಿಲ್ಲುವ ಶಿಕ್ಷೆ ಅನುಭವಿಸಿದ್ದು) , ಕಬ್ಬನ್ನು ಅತಿವಿಚಿತ್ರವಾಗಿ ತಿನ್ನುತ್ತಿದ್ದ ಗೆಳೆಯನೊಬ್ಬನನ್ನು ವಿಪರೀತವಾಗಿ ಆಡಿಕೊಂಡಿದ್ದು, ಇಡೀ ಏಳು ವರ್ಷಗಳಲ್ಲಿ ಒಮ್ಮೆ ಮಾತ್ರ ಆದ ಗ್ಯಾದರಿಂಗ್ ನಲ್ಲಿ ಆಡಿದ ನಾಟಕದಲ್ಲಿ ಗಾಂಪರ ಗುಂಪಿನ ನಾಣಿಯಾಗಿದ್ದು, ಸರ್ ಕ್ಲಾಸಿನಲ್ಲಿ ನಿದ್ದೆ ಮಾಡುತ್ತಿದ್ದದ್ದನ್ನು ನೋಡಿ ಬರುತ್ತಿದ್ದ ನಗುವನ್ನು ತಡೆಹಿಡಿಯಲು ಹೋಗಿ ತಡೆಯಲಾರದೇ ಗೋಳ್ ಎಂದು ನಕ್ಕು ಅವರನ್ನೂ ಎಚ್ಚರಿಸಿ ಆದಕ್ಕಾಗಿ ಒಂದಿಷ್ಟು ಪರೋಕ್ಷವಾಗಿ ಬೈಸಿಕೊಂಡಿದ್ದು, ಪ್ರಿಪರೇಟರಿ ಪರೀಕ್ಷೆಗೆಂದು ಓದಲು ಬಿಟ್ಟಾಗ ಶಾಲೆಯ ಮೇಲೆ ಹರಡಿದ್ದ ಮರದ ಮೇಲೆ ಹತ್ತಿ ಕುಳಿತು ಕದ್ದು ತಂದ ಮಾವಿನಕಾಯಿಗಳ ಉಪ್ಪಿನಕಾಯಿ ಮಾಡಿದ್ದು, ಇನ್ ಸ್ಪೆಕ್ಟರ್ ಬಂದಾಗ scissorನ್ನು ಸ್ಕಿಸರ್ ಎಂದು ಉಚ್ಛರಿಸಿದ ಹುಡುಗಿಗೆ ಚಾಳಿಸಿ (ನನಗೂ ಸರಿಯಾದ ಉಚ್ಛಾರ ಗೊತ್ತಿರಲಿಲ್ಲ ಎಂಬುದು ಬೇರೆ ವಿಷಯ) ಅಳಿಸಿ ಕ್ಷಮೆಕೇಳುವಾಗ ನನ್ನ ಕಣ್ಣ ತುದಿಯೂ ತೇವವಾಗಿದ್ದಕ್ಕೆ ಕಾರಣ ಹುಡುಕಿದ್ದು, ಯಾವುದೋ ಜಗಳಕ್ಕೆ ಬಿದ್ದು ಬಾಲ್ಯದ ಬೆಸ್ಟ್ ಫ್ರೆಂಡ್ ಬಳಿ ಒಂದು ವರ್ಷ ಮಾತು ಬಿಟ್ಟು, ನೀನೇ ಮೊದಲು ಮಾತನಾಡಿಸಬೇಕೆಂದು ಹಠಕ್ಕೆ ಸುಳ್ಳು ಸುಳ್ಳೇ ಹಠ ಮಾಡಿಕೊಂಡು ಕೂತಿದ್ದು, ೭ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಬಿಡು ಬೀಸಾಗಿ ಕಾಪಿ ಹೊಡೆದು ಫಲಿತಾಂಶ ಚೆನ್ನಾಗಿ ಬರದಿದ್ದಾಗ ಮತ್ತೆ ಕಾಪಿ ಹೊಡೆಯುವುದಿಲ್ಲ ಅಂದುಕೊಂಡಿದ್ದು, ಸಂಕ್ರಾಂತಿ ಕಾಳನ್ನು ಶಾಲೆಯಲ್ಲಿ ಹಂಚುತ್ತಾ ಒಂದು ಹೊತ್ತಿಡೀ ಕ್ಲಾಸಿಂದ ಕ್ಲಾಸಿಗೆ ತಿರುಗುತ್ತಲೇ ಇದ್ದದ್ದು, ೭ನೇ ತರಗತಿಯಲ್ಲಿ ಶಲಾಕ ಎಂಬ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮಕ್ಕಳೊಂದಿಗೆ ಸ್ಪರ್ಧಿಸಿ ತಾಲೂಕಿಗೆ ೩ನೇ ಬಂದಿದ್ದು(ನನ್ನನ್ನು ತನ್ನ ಮಕ್ಕಳಿಗೆ ತೋರಿಸಿ ಹೀಗಾಗಬೇಕು ಎಂದ ನಾರಾಯಣಗೌಡ್ರು ಎಂಬ ಬಿ. ಇ. ಓ ಆ ಮೂಲಕ ನನ್ನ ಬಾಲ್ಯದ ಅತಿದೊಡ್ಡ ಬಹುಮಾನವನ್ನು ಕೊಟ್ಟಿದ್ದರು), ನನ್ನದೇ ಶಾಲೆಯಲ್ಲಿ ಇರುತ್ತಿದ್ದ ಅಪ್ಪ ಅಮ್ಮನ ಕಣ್ಣು ತಪ್ಪಿಸಿ ಕ್ರಿಕೆಟ್ ಆಡುತ್ತಿದ್ದುದು, ಸೋಲೆಂದರಿಯದಂತೆ ಏಳನೇ ಕ್ಲಾಸಿನವರೆಗೆ ಬಂದು ಸೋಲಿನ ಎದುರೇ ಮುಖಾಮುಖಿ ಮಾತನಾಡಿದ್ದು, ಒಂದೇ ಎರಡೇ ನೆನಪುಗಳ ಮಾತು ಮಧುರ.  ಅವುಗಳಿಂದ ಕಲಿತ ಪಾಠ ಕ್ಲಾಸಿನ ಪಠ್ಯಕ್ಕಿಂತ ನೇರ, ನಿಷ್ಠುರ, ಪ್ರಯೋಜನಕರ.



ಕೋಲಸಿರ್ಸಿಯ ನೇತಾಜಿ ಸರಕಾರಿ ಪ್ರೌಢಶಾಲೆ
ಪ್ರೌಢಶಾಲೆಯ ವಿಷಯಕ್ಕೆ ಬಂದರೆ ನೆನಪಿರುವುದೆಲ್ಲ ಖುಷಿಯ ವಿಷಯಗಳೇ. ನಾವು ಕನ್ನಡ ಶಾಲೆ ಎಂದು ಕರೆಯುತ್ತಿದ್ದ ಪ್ರಾಥಮಿಕ ಶಾಲೆಯ ನಂತರ ಪೇಟೆಗೆ ಹೋಗುವುದೋ ಅಥವಾ ಊರಿನ ಪ್ರೌಢಶಾಲೆಗೇ ಹೋಗುವುದೋ ಎಂಬ ಬಗ್ಗೆ ಬಹಳಷ್ಟು ಸಂದೇಹ ಗೊಂದಲಗಳಿದ್ದವು. ಆದರೆ ಕೋಲಸಿರ್ಸಿಯ ನೇತಾಜಿ ಪ್ರೌಢಶಾಲೆ ಎಲ್ಲ ಸಂದೇಹಗಳನ್ನು ಕೇವಲ ತಿಂಗಳು ಮಾತ್ರದಲ್ಲಿ ಪರಿಹರಿಸಿ ನಮ್ಮ ಆಯ್ಕೆ ಸರಿಯೆಂದು ಸಾರಿಹೇಳಿಬಿಟ್ಟಿತ್ತು. ಕನ್ನಡಶಾಲೆಯಿಂದ ಗೊತ್ತಿದ್ದ ಅದೇ ಗೆಳೆಯರ ಗುಂಪು, ಯಾವ ಪುಣ್ಯದಿಂದಲೋ ಸಿಕ್ಕಿದ್ದ ಅತ್ಯುತ್ತಮ ಶಿಕ್ಷಕಗಣ, ಪ್ರತೀ ಸಲ ಕ್ರಿಕೆಟ್ ಆಡಬೇಕಾದರೂ ಅಪ್ಪ ಮತ್ತು ಅಮ್ಮನ ಕಣ್ಣು ತಪ್ಪಿಸಿ ಆಡಬೇಕೆಂಬ ಅನಿವಾರ್ಯ ಇಲ್ಲದಿದ್ದುದು, ಊರಾಚಿನ ಸ್ಮಶಾನದ ಮೇಲೆ ಕಟ್ಟಿದ ಶಾಲೆಯಲ್ಲಿನ ಶಾಂತಮೌನ ಎಲ್ಲವೂ ಖುಷಿಯಾಗಿಬಿಟ್ಟಿತ್ತು, ಇಂದಿಗೂ ಇಷ್ಟವಾಗಿಯೇ ಉಳಿದಿದೆ. ಶಾಲೆಯ ಪ್ರವಾಸಮಂತ್ರಿಯಾಗಿ ಏರ್ಪಡಿಸಿದ್ದ ಪ್ರವಾಸಕ್ಕೆ ಹೋಗಲಾಗದೇ ಇದ್ದಂತಹ ವೈರುಧ್ಯಕ್ಕೂ, ಪರೀಕ್ಷೆಗೆ ವಾರವೊಂದು ಬಾಕಿ ಇರುವಾಗ ಆರೋಗ್ಯ ತಪಾಸಣೆಗೆಂದು ಶಾಲೆಗೆ ಬಂದ ವೈದ್ಯರು ಹೃದಯದಲ್ಲೇನೋ ತೊಂದರೆ ಇದೆ ಎಂದಾಗ ಉಂಟಾಗುವ ಆಘಾತಕ್ಕೂ, ಪರೀಕ್ಷೆ ಮುಗಿದ ಮೇಲೆ ದಿನವಿಡೀ ಆಡಬಹುದೆಂಬ ಲಂಚದಾಸೆಗೆ  ಶ್ರಮದಾನ ಮಾಡುತ್ತಿದ್ದ ಉತ್ಸಾಹಕ್ಕೂ, ಮೊದಲ ಬಾರಿಗೆ ಬರೆದ ಕವನ ಓದಿ ಕನ್ನಡ ಪಂಡಿತೆ ರೇಣುಕಾ ಮೇಡಂ ಪ್ರಶಂಸಿಸಿದಾಗ ಇದ್ದ ಧನ್ಯತಾಭಾವಕ್ಕೂ, ಶಾಲೆಯ ಒಂದು ಹೌಸಿನ ಲೀಡರ್ ಆಗುವ ಅವಕಾಶವನ್ನು ತಿರಸ್ಕರಿಸಿ ಮತ್ತೆ ವರ್ಷವಿಡೀ ಅನುಭವಿಸಿದ ಪಶ್ಚಾತ್ತಾಪಕ್ಕೂ, ಕೋಲಸಿರ್ಸಿ ಎಂಬ ಮೂಲೆಶಾಲೆಯ ಹುಡುಗ ರಾಜ್ಯಮಟ್ಟದ ಪ್ರತಿಭಾನ್ವೇಷಣ ಪರೀಕ್ಷೆಯಲ್ಲಿ ರಾಜ್ಯಕ್ಕೆ ಹದಿಮೂರನೇ ಸ್ಥಾನ ಬಂದನೆಂಬ ಸಂಭ್ರಮಕ್ಕೂ, ಕ್ಲಾಸನ್ನೇ ಜಂಬೆಹಣ್ಣು, ಸಂಪೆಹಣ್ಣು, ಮುಳ್ಳುಹಣ್ಣು ಇತ್ಯಾದಿಗಳ ಮಂಡಿಯಾಗಿಸಿಕೊಂಡು ವ್ಯವಹರಿಸುತ್ತಿದ್ದ ಹುಡುಗಾಟಿಕೆಗೂ, ಗೆಳೆಯನೊಬ್ಬನ ಜೊತೆ ಕಟ್ಟಿದ ಪಂದ್ಯಕ್ಕಾಗಿ ವಾರ್ಷಿಕೋತ್ಸವ ನಿಮಿತ್ತದ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಕಧ್ವನಿಯಲ್ಲಿ ಹಾಡಿದ ಹುಚ್ಚಾಟಕ್ಕೂ ಸಾಕ್ಷಿಯಾಗಿದ್ದು ಕೋಲಸಿರ್ಸಿಯ ಇದೇ ಪ್ರೌಢಶಾಲೆ.

ಪ್ರೌಢಶಾಲೆಯ ನಂತರ ಬೇರೆ ಕಡೆ ಹೋದ ನನಗೆ ಕೋಲಸಿರ್ಸಿಯ ಪರಿಚಯ ಉಳಿದದ್ದು ಅಪ್ಪ-ಅಮ್ಮನ ಮುಖಾಂತರ, ರಜೆಯಲ್ಲಿ ಹೋದಾಗ ಕಳೆಯುತ್ತಿದ್ದ ದಿನಗಳ ಮೂಲಕ ಮಾತ್ರ. ಹೊಸ ಆಫೀಸುಗಳು, ಆಸ್ಪತ್ರೆ, ಕಾಲೇಜು ಎಲ್ಲ ಆಗುತ್ತಾ  ಅಭಿವ್ರದ್ಧಿಯ ನಾಗಾಲೋಟದಲ್ಲಿ ಪಾಲು ತೆಗೆದುಕೊಂಡಿತ್ತು. ಸುತ್ತೆಲ್ಲೂ ಕಂಡುಕೇಳದಷ್ಟು ವೇಗವಾಗಿ ಬೆಳೆಯುತ್ತಿತ್ತು. ಈ ಬೆಳವಣಿಗೆಯ ಮಧ್ಯದಲ್ಲೇ ಎಲ್ಲೋ ತನ್ನ ಹಳ್ಳಿತನವನ್ನು ಕಳೇದುಕೊಂಡಿತೇ ಎಂಬುದು ನನ್ನ ಆತಂಕದ ಸಂಶಯ. ಅಷ್ಟೆಲ್ಲ ನನ್ನದಾಗೇ ಇದ್ದ ಊರು ಹಂತಹಂತವಾಗಿ ದೂರವಾಗುತ್ತ ಬಂದಿತ್ತು. ಈಗ ಅಮ್ಮನ ನಿವೃತ್ತಿಯ ನಂತರ ನಮ್ಮ ಮನೆಯೂ ಖಾಲಿಯಾಗಲಿದೆ. ಅಲ್ಲಿಗೆ ಕೋಲಸಿರ್ಸಿಯೊಂದಿಗಿನ ನನ್ನ ಸಂಬಂಧಕ್ಕೆ ಒಂದು ದೊಡ್ಡ ಅಲ್ಪವಿರಾಮ ಬೀಳಲಿದೆ. ಬಾಲ್ಯದ ಜೊತೆಗಿನ ಒಂದು ಕೊಂಡಿ ಕಳಚಲಿದೆ. ಹಾಗೆ ಎಣಿಸಿಕೊಳ್ಳುವುದರಲ್ಲಿಯೇ ಏನೋ ಒಂದು ನೋವಿದೆ.