Saturday 15 December 2012

ನಮ್ಮ ಚಿತ್ರರಂಗ ಎತ್ತ ಸಾಗುತ್ತಿದೆ?



"ನಮ್ಮ ಚಿತ್ರರಂಗ ಎತ್ತ ಸಾಗುತ್ತಿದೆ? " ಇತ್ತೀಚೆಗೆ ಪ್ರತೀ ಬಾರಿ ನಾನು ಒಂದು ಚಿತ್ರವನ್ನು ನೋಡಿ ಬಂದ ಮೇಲೂ ಈ ಪ್ರಶ್ನೆಯನ್ನು ನನ್ನಲ್ಲೇ ಕೇಳಿಕೊಳ್ಳುತ್ತೇನೆ. ಎಷ್ಟು ಗಾಢವಾಗಿ  ಕೇಳಿಕೊಳ್ಳುತ್ತೇನೆ ಎಂಬುದು ಆ ಚಿತ್ರ ಮೂಡಿಸಿದ ನಿರಾಶೆಯ ಮೇಲೆ ಅವಲಂಬಿಸಿರುತ್ತದೆ, ಅಷ್ಟೇ. ಕೆಲವೊಂದು ಚಲನಚಿತ್ರಗಳಿಂದ ಅರ್ಧಗಂಟೆಯ ಒಳಗೇ ಎದ್ದು ಬಂದಿದ್ದೇನೆ, ಈ ನಿರ್ದೇಶಕ ಮತ್ತು ನಿರ್ಮಾಪಕರನ್ನು ಆಜೀವಪರ್ಯಂತ ಚಿತ್ರಗಳನ್ನು ಮಾಡದಂತೆ ನಿಷೇಧಿಸಿ, ಪ್ರ‍ೇಕ್ಷಕರಿಗೆ ಮಾನಸಿಕ ಕಿರುಕಳ ನೀಡಿದ ಅಪರಾಧದ ಮೇಲೆ ಜೈಲಿಗೆ ಹಾಕಬೇಕುಉ ಎಂದು ಶಾಪ ಹಾಕಿಕೊಂಡು. ಇತ್ತೀಚೆಗೆ ಸುಮಾರು ನಾಲ್ಕೈದು ವರ್ಷಗಳಿಂದ ನೋಡಬೇಕೆನಿಸಿದ ಪ್ರತಿ ಚಲನಚಿತ್ರವನ್ನೂ ನೋಡಿದ್ದೇನೆ, ಆದರೆ ನೋಡಿದ ಮೇಲೂ ನೋಡಲೇಬೇಕಿತ್ತು ಈ ಚಿತ್ರವನ್ನು ಎನ್ನಿಸಿದ್ದು ಬಹಳ ಕಡಿಮೆ ಸಲ. ಯಾಕೆ ಹೀಗೆ? ನಮ್ಮಲ್ಲಿ ಕಲಾವಿದರ ಕೊರತೆಯಿದೆಯೇ? ನಿರ್ದೇಶಕರ ಕಲ್ಪನೆಗೆ ಬರವೇ? ಕಥೆಗಳೇ ಇಲ್ಲವೇ? ಯಾರೂ ಇಷ್ಟಪಟ್ಟು ಫಿಲಂ ಮಾಡುತ್ತಿಲ್ಲವೇ? ಸ್ಯಾಂಡಲ್ ವುಡ್ ಎಂಬುದೇ ಕಾಟಾಚಾರದ ವ್ಯವಹಾರವೇ? ಅಥವಾ ಇದು ಕಪ್ಪುಹಣವನ್ನು ಬಿಳಿಯದನ್ನಾಗಿ ಮಾಡುವ ವ್ಯವಸ್ಥಿತಜಾಲ ಮಾತ್ರವಾಗಿ ಉಳಿದು ಹೋಗಿದೆಯೇ? ಇವೆಲ್ಲವೂ ಕೇಳಿಕೊಳ್ಳಲೇಬೇಕಾದ ಪ್ರಶ್ನೆಗಳೇ!

ಚಿತ್ರಕೃಪೆ : ಅಂತರ್ಜಾಲ 
ಏಕೆ ಹೀಗಾಗುತ್ತಿದೆ? ನನಗನಿಸುವ ಮಟ್ಟಿಗೆ ಮೊದಲನೆಯ ಕಾರಣ ಯಾರೂ ಇಷ್ಟಪಟ್ಟು ಚಲನಚಿತ್ರಗಳನ್ನು ಮಾಡುತ್ತಿಲ್ಲ. ಯಾವುದೋ ಒಬ್ಬ ಪುಣ್ಯಾತ್ಮ ರಿಯಲ್ ಎಸ್ಟೇಟ್ ದಂಧೆಯಲ್ಲೋ, ರಾಜಕಾರಣದಲ್ಲೋ, ಮತ್ತಾವ ವ್ಯವಹಾರದಲ್ಲೋ ಮಾಡಿದ ದುಡ್ಡು ಕಪ್ಪುಹಣದ ರೂಪದಲ್ಲಿದ್ದು ಅದನ್ನು legal ದುಡ್ಡನ್ನಾಗಿ ಮಾಡುವ ಹಂಬಲದಿಂದ ಮೂವಿ ಮಾಡುವವರಿದ್ದಾರೆ. ಒಂದಿಷ್ಟೂ ಪ್ರಚಾರವಿಲ್ಲದೇ ಬರುವ ಹೆಸರೇ ಕೇಳಿರದ, ಕಥೆಯೆಮ್ಬ ಗಂಧಗಾಳಿಯೇ ಇರದ ಸಾವಿರಾರು ಮೂವಿಗಳಿವೆಯಲ್ಲಾ ಇವುಗಳೆಲ್ಲಾ ಮೂವಿ ಮಾಡಬೇಕೆಂದಿರುವವನ ಪ್ರಾಮಾಣಿಕ ಪ್ರಯತ್ನ ಎಂದು ಹೇಗೆ ನಂಬಬಹುದು? ನಾನು ಒಂದು ಬ್ಲಾಗು ಬರೆದರೇ ಅದಕ್ಕೆ ಸಾಕಷ್ಟು ಪ್ರಚಾರ ಕೊಟ್ಟುಕೊಳ್ಳುತ್ತೇನೆ, ಜನಕ್ಕೆ ಗೊತ್ತಾಗಲಿ ಬರೆದಿರುವುದು ಎಂದು. ಹಾಗಿರುವಾಗ  ಈ ಮೂವಿಗಳು ಪ್ರಚಾರದ ಗೋಜಿಗೇ ಹೋಗದೇ ಯಾವುದೋ ಒಂದಿಷ್ಟು ಥಿಯೇಟರ್ ಗಳಲ್ಲಿ ಯಾವುದೇ ಸುದ್ದಿಯಿಲ್ಲದೇ ರಿಲೀಸ್ ಆಗುತ್ತವೆ, ಕೇವಲ ನಾಮಕಾವಸ್ಥೆಗೆ ಎಂಬಂತೆ. ನಿರ್ಮಾಪಕರಿಗಾಗಲೀ ನಿರ್ದೇಶಕರಿಗಾಗಲೀ ಜನ ತಮ್ಮ ಚಿತ್ರವನ್ನು ನೋಡಬೇಕೆಂದೇನಿರುವುದಿಲ್ಲ, ಕಪ್ಪುಹಣದ ವಿಲೇವಾರಿಯೇ ಉದ್ದೇಶವಾಗಿರುವಾಗ. 
ಇನ್ನು ಕೆಲವರಿದ್ದಾರೆ, ಕೆಲವು ನಿರ್ದೇಶಕರು/ನಿರ್ಮಾಪಕರು/ನಟರು.  ಎದೆಯೆತ್ತರಕ್ಕೆ ಬೆಳೆದ ಮಗನಿ(ಳಿ)ಗೆ ಇನ್ನೂ ಕೆಲಸ/ಅವಕಾಶ ಸಿಗದಿದ್ದುದರಿಂದ ಅವನಿ(ಳಿ)ಗೆ ಒಂದು ಅವಕಾಶ ಕೊಡುವ ಒಂದೇ ಕಾರಣದ ಸಲುವಾಗಿ ಮೂವಿ ಮಾಡುತ್ತಾರೆ. ಅವರ ಮಗನೊಬ್ಬ ಹೀರೋ ಆದ ಎಂಬಲ್ಲಿಗೆ ಆ ಮೂವಿ ಸಾರ್ಥಕ್ಯ ಕಾಣುತ್ತದೆ. ಶಾಲೆಯಲ್ಲಿ ಫಿಸಿಕಲ್ ಎಜುಕೇಶನ್ ಟೀಚರ್ ಮಗ ಶಾಲೆಯ ಸ್ಪೋರ್ಟ್ಸ್ ಟೀಮಿನ ನಾಯಕನನ್ನಾಗಿ ಮಾಡಿದಂತೆ. ಜಗ್ಗೇಶ್ , ಎಸ್ ನಾರಾಯಣ್ ಎಂಬುವು ಕೇವಲ ಒಂದೆರಡು ಹೆಸರುಗಳು ಈ ಲಿಸ್ಟಿನಲ್ಲಿ. ಆ ಮೂವಿಗಳು ತೋಪೆದ್ದು ಹೋದವು ಎಂದು ಬಿಡಿಸಿ ಹೇಳಬೇಕಿಲ್ಲವಷ್ಟೇ. 
ಚಿತ್ರಕೃಪೆ : ಅಂತರ್ಜಾಲ 
ಇನ್ನು ಮತ್ತೆ ಕೆಲವರಿಗೆ ಮೆಲುಕು ಹಾಕುವ ಚಟ, ಅತ್ಯುತ್ತಮ ಉದಾಹರಣೆ ನಮ್ಮ ಶಿವರಾಜ್ ಕುಮಾರ್, ರವಿಚಂದ್ರನ್ ರಂತಹವರು. ಒಂದು ಕಾಲದಲ್ಲಿ ತಾನೂ ಮೂವಿ ಮಾಡುತ್ತಿದ್ದೆ ಮತ್ತು ಜನರು ಇಷ್ಟಪಟ್ಟು ನೋಡುತ್ತಿದ್ದರು ಎಂಬ ಕನವರಿಕೆಯಿಂದಲೋ, ಈಗಲೂ ಆ ವರ್ಚಸ್ಸು, ಕ್ರಿಯೇಟಿವಿಟಿ ನಮ್ಮಲ್ಲಿ ಉಳಿದಿದೆ ಎಂಬ ಸುಳ್ಳು ನಂಬಿಕೆಯನ್ನು ಅತಿಯಾಗಿ ನಂಬಿಕೊಂಡು ಈಗಲೂ ಮೂವಿ ಮಾಡುತ್ತಾರೆ. ವಯಸ್ಸಿನ ಜೊತೆಗೆ ಬರಬೇಕಾದ ಪ್ರೌಢಿಮೆ ಬರದೇ, ಈಗಲೂ ಹರೆಯದ ಯುವಕನ ಪಾತ್ರ ಮಾಡಲು ಹೋಗುವ ಇಂತಹವರು, ಕಮಲ್ ಹಾಸನ್, ಅಮಿತಾಭ್, ಮುಮ್ಮೂಟಿಯಂತಹವರಿಂದ ಕಲಿಯುವುದು ಬೇಕಾದಷ್ಟಿದೆ. ಅಥವಾ ಶಾಹ್ ರುಖ್, ಅಮೀರ್ ಖಾನ್ ನಂತಹವರು ಈಗಲೂ ಕಾಲೇಜ್ ಹುಡುಗನ ಪಾತ್ರ ಮಾಡುತ್ತಾರೆ ಎಂಬುದು ನಿಜವಾದರೂ ಅವರು ಹರೆಯದ ಹುಡುಗನ ಹಾಗೆಯೇ ಕಾಣಿಸಿಕೊಳ್ಳುತ್ತಾರೆ, ಕೊನೆಪಕ್ಷ ಆ ಸಿನಿಮಾದ ಮಟ್ಟಿಗೆ.
ಯಾರಿಗೂ ತಿಳಿಯದಂತೆ ರಿಮೇಕ್ ಮಾಡುವ ಕಲೆ ತನಗೆ ಸಿದ್ಧಿಸಿದೆ ಎಂಬ ಹುಂಬತನವೊಂದಿದೆ, ಅದೂ ಹಾಲಿವುಡ್ ಮೂವಿಗಳಿಂದಲೋ, ಹಳೆಯ ಮೂವಿಗಳಿಂದಲೋ ಭಟ್ಟಿ ಇಳಿಸುವವರಲ್ಲಿ ಇದು ಹೆಚ್ಚು. ಹಾಗೆಂದು ನಾನು ರಿಮೇಕ್ ಮಾಡುವುದರ ವಿರುದ್ಧ ಎಂದೇನೂ ಅಲ್ಲ. ರಿಮೇಕ್ ಆದ ಮೂವಿ ಬದಲಾಗಿ ಫ್ರೇಮ್ ಟು ಫ್ರೇಮ್ ಒರಿಜಿನಲ್ ಹಾಗೇ ಇರುತ್ತದೆ ಎಂದಾದರೆ ಯಾಕೆ ರಿಮೇಕ್ ಮಾಡಬೇಕಿತ್ತು, ಡಬ್ಬಿಂಗ್ ಮಾಡಿದ್ದರೆ ಸಾಕಾಗುತ್ತಿರಲಿಲ್ಲವೇ? ಅದೂ ಹೋಗಲಿ, ಹೀಗೆ ಮಕ್ಕಿ ಕಾ ಮಕ್ಕಿ ಕಾಪಿ ಮಾಡಿದ ಮೇಲೂ 'ಇಂತಹ ಮೂವಿಯನ್ನು ರಿಮೇಕ್ ಮಾಡುತ್ತಿದ್ದೇವೆ' ಎಂದು ಕ್ರೆಡಿಟ್ ಸಹ ಕೊಟ್ಟುಕೊಳ್ಳುವುದಿಲ್ಲ ಈ ಭೂಪರು. ಸುದೀಪ್ ನಂತಹವರು ಕೇವಲ ರಿಮೇಕ್ ಮೂವಿಗಳಿಗೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡುಬಿಟ್ಟಿದ್ದಾರೆ. ಮೂಲ ಚಿತ್ರದಿಂದ ಸ್ವಲ್ಪವೂ ಬದಲಾವಣೆ ಮಾಡದೇ ಹಾಗೇ ತೆರೆಗೆ ಬರುವ ಈ ಮೂವಿಗಳನ್ನು ನೋಡುವುದೆಂದರೆ ಸಮಯವ್ಯರ್ಥವೇ, ಅದೂ ಮೂಲಚಲನಚಿತ್ರವನ್ನು ನೀವು ನೋಡಿದ್ದರೆ. 
ತಾನು ಕಥೆಯಿಲ್ಲದೇ ಮೂವಿ ಮಾಡಿದರೂ ಜನರು ನೋಡುತ್ತಾರೆ, ನೋಡದೇ ಏನು ಮಾಡುತ್ತಾರೆ ಎಂಬ ಉಡಾಫೆಯಿಂದ ಮೂವಿ ಮಾಡುವ ನಿರ್ದೇಶಕರು ಕೆಲವರಿದ್ದಾರೆ. ಕೊನೆಯ ಬಾರಿಗೆ ಯೋಗರಾಜ್ ಭಟ್ಟರ ಮೂವಿಯಲ್ಲಿ ಕಥೆಯ ಎಳೆಯೊಂದಿದ್ದುದು ನನಗೆ ನೆನಪಿಲ್ಲ. ಹೌದು, ಅವರು ಅತಿ ಪ್ರತಿಭಾವಂತ ಡಯಲಾಗ್ ರೈಟರ್, ಆದರೆ ಮೂವಿಯೊಂದನ್ನು ಎರಡೂವರೆ ತಾಸು ಕುಳಿತು ನೋಡಲು ಕೇವಲ ಡಯಲಾಗ್ ಗಳು ಸಾಕಾಗುವುದಿಲ್ಲವಷ್ಟೇ . ಇದು ಯಾವ ಮಟ್ಟಕ್ಕೆ ಹೋಗಿತ್ತೆಂದರೆ ಭಟ್ಟರೇ ಸ್ವತಃ 'ತಮ್ಮ ಡ್ರಾಮಾ ಮೂವಿಯಲ್ಲಿ ಕಥೆಯಿದೆ' ಎಂದು ಹೇಳಿಕೆ ಕೊಟ್ಟಿದ್ದರು. ಇನ್ನು ಭಟ್ಟರು ಬರೆದು ಹರಿಕೃಷ್ಣರು ಸಂಗೀತ ಕೊಟ್ಟ ಕೆಲವು ಹಾಡುಗಳೋ ದೇವರಿಗೇ ಪ್ರೀತಿ. ಅಲ್ಲಿಯೂ ಪ್ರೇಕ್ಷಕರ ಬಗೆಗಿನ ಉಡಾಫೆಯನ್ನು ಧಾರಾಳವಾಗಿ ನೋಡಬಹುದು.
ಇಷ್ಟೆಲ್ಲಾ ಆದ ಮೇಲೆ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡುವ ಬಗ್ಗೆ ನಮ್ಮವರದ್ದು ಕಡುವಿರೋಧ. ಎಲ್ಲಿ ಡಬ್ ಮಾಡಲು ಬಿಟ್ಟರೆ ತಮಗೆ ರಿಮೇಕ್ ಮಾಡುವ ಅವಕಾಶ ತಪ್ಪಿ ಹೋಗುತ್ತದೆಯೆನೋ ಎಂಬ ಹೆದರಿಕೆಯೋ, ಅಥವಾ ತಮಗೆ ಅವರ ಚಿತ್ರಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದರ ಅಪರೋಕ್ಷ ಒಪ್ಪಿಗೆಯೋ ಒಟ್ಟಾರೆಯಾಗಿ ನಮ್ಮವರಿಗೆ ಡಬ್ಬಿಂಗ್ ಎಂದರೆ ಸುತಾರಾಂ ಇಷ್ಟವಿಲ್ಲ, ಕೆಲವರಂತೂ ಇದನ್ನು ಕನ್ನಡದ ಅಳಿವಿನ ಬಗ್ಗೆ ಸಮೀಕರಿಸಿಬಿಟ್ಟರು. 'ಸತ್ಯಮೇವ ಜಯತೇ' ಯಂತಹ ಕಾರ್ಯಕ್ರಮಗಳು ಮತ್ತೆಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಪ್ರಸಾರವಾದರೂ ಕನ್ನಡದವರು ಹಿಂದಿಯಲ್ಲಿಯೇ ನೋಡಿ ಖುಷಿ ಪಡಬೇಕಾಯಿತು.
ಇಷ್ಟೆಲ್ಲಾ ಕಾರಣಗಳಿವೆ, ಪರಿಹಾರ?? ಆ ದೇವರಿಗೇ ಗೊತ್ತು. 

ಒಂದು ಹಂಬಲಿಕೆ:

ಚಿತ್ರಕೃಪೆ : ಅಂತರ್ಜಾಲ 
ಕೆಲವೊಮ್ಮೆ ಯಾಕೋ ಮನಸ್ಸು ಅಣ್ಣಾವ್ರನ್ನು ನೆನೆಯುತ್ತದೆ. ೨೦೦ ಚಿತ್ರಗಳನ್ನು ಮಾಡಿದರೂ ಎಲ್ಲಿಯೂ ಏಕತಾನತೆಗೆ ಅವಕಾಶ ಮಾಡಿಕೊಡದಿದ್ದ, ೫೦ ವರ್ಷಗಳಷ್ಟು ದೀರ್ಘಕಾಲ ಚಿತ್ರರಂಗದಲ್ಲಿದ್ದರೂ ಕನ್ನಡ ಬಿಟ್ಟು ಬೇರೆ ಚಿತ್ರರಂಗದ ಕಡೆ ಮುಖಮಾಡದ ಮೇರು ಕಲಾವಿದ ಆತ. ಮನಸ್ಸು ಯಾಕೋ ಆತ ಈಗ ಬದುಕಿರಬೇಕಿತ್ತು ಎಂದು ಹಂಬಲಿಸುತ್ತದೆ.

Thursday 6 December 2012

ನಾಲ್ಕು ಮಿನಿ ಕಥೆಗಳು




ರೋಮಾಂಚನ
          ಒಂದು ಸಂಜೆ ಬಿ. ಎಮ್. ಟಿ. ಸಿ. ಬಸ್ಸಿನಲ್ಲಿ ಅಫೀಸಿನಿಂದ ಮನೆಗೆ ಬರುತ್ತಿದ್ದೆ. ಕಿಟಕಿಯ ಪಕ್ಕದ ಸೀಟಿನಲ್ಲಿ ಕೂತಿದ್ದೆ. ಕಿವಿಗೆ ಹಾಕಿಕೊಂಡಿದ್ದ ಎಫ಼್. ಎಮ್. ನಲ್ಲಿ ಅಣ್ಣಾವ್ರು ಹಾಡಿದ್ದ ’ಓಂ’ ಚಿತ್ರದ ’ಬ್ರಹ್ಮಾನಂದ ಸಾಕಾರ ಹಾಡು ಬಂತು. ಮೈ ತುಂಬ ಅಕ್ಷರಶಃ ರೋಮಾಂಚನ, ಪುಳಕ. ಕಾರಣ ಕಿಟಕಿಯಿಂದ ಬರುತ್ತಿದ್ದ ಗಾಳಿಯೋ? ಅಣ್ಣಾವ್ರ ಕಂಚಿನ ಕಂಠವೋ? ಗೊತ್ತಾಗಲಿಲ್ಲ.
...
ನಂಬಿಕೆ
          ಎರಡನೇ ಕ್ಲಾಸಿಗೆ ಹೊಸ ಟೀಚರ್ ಬಂದಿದ್ದರು. ಇತ್ತೀಚೆಗೆ ನಗರದಲ್ಲಿ ಹೆಚ್ಚುತ್ತಿರುವ ಚಿಕ್ಕಮಕ್ಕಳ ಅಪಹರಣದ ಬಗ್ಗೆ ಮಕ್ಕಳಿಗೆ ತಿಳಿಹೇಳುವಂತೆ ಬಂದ ನೋಟಿಸಿನ ಆದೇಶದಂತೆ, "ಜಾಣ ಹುಡುಗರೇ, ಯಾರಾದರೂ ಅಪರಿಚಿತರು ನಿಮ್ಮನ್ನು ಪುಸಲಾಯಿಸಿದರೆ ಒಪ್ಪಿಕೊಳ್ಳಬೇಡಿ. ಯಾರೇ ಆಗಲಿ ಅಪರಿಚಿತರನ್ನು ನಂಬಬೇಡಿ. ...!" ಎಂದು ಹೇಳಿ ಮುಗಿಸಿರಲಿಲ್ಲ, ಕೊನೆಯ ಬೆಂಚಿನಿಂದ ಗುಂಡ ಕೂಗಿದ್ದ, "ನಿಮ್ಮನ್ನು ಹೇಗೆ ನಂಬುವುದು?"
...
ಏಕಿಷ್ಟು ನಿಧಾನ?
          ದಿನವೂ ಅವನು ಅವಳನ್ನು ಮನೆಯಿಂದ ಆಫೀಸಿಗೆ, ಅಫೀಸಿನಿಂದ ಮನೆಗೆ ಡ್ರಾಪ್ ಮಾಡುತ್ತಿದ್ದ. ರಸ್ತೆಯಲ್ಲಿ ಇವನು ಬೈಕನ್ನು ಬಿಟ್ಟುಕೊಂಡು ಹೋದರೆ ಸೈಕಲ್ಲುಗಳನ್ನು ಬಿಟ್ಟು ಮತ್ತೆಲ್ಲ ಚಲಿಸುವ ವಾಹನಗಳೂ ಇವನನ್ನು ಓವರ್ ಟೇಕ್ ಮಾಡುತ್ತಿದ್ದವು. ಒಂದು ದಿನ ತಡೆಯಲಾರದೇ ಕೇಳಿಬಿಟ್ಟಳು, "ಗೆಳೆಯಾ, ಏಕೆ ನೀನು ಇಷ್ಟು ನಿಧಾನ? ಬೆಂಗಳೂರಿನ ಟ್ರಾಫಿಕ್ಕಿನ ಬಗ್ಗೆ ಇಷ್ಟೆಲ್ಲ ಹೆದರಿಕೆಯೇ? ಅಥವಾ ಗಾಡಿಯ ಸಾಮರ್ಥ್ಯವೇ ಇಷ್ಟೇ?" ಮುಗ್ಧವಾಗಿರುವಂತೆ ಕೇಳಿದರೂ ವ್ಯಂಗ್ಯ ಧ್ವನಿಸುತ್ತಿತ್ತು. "ಹಾ ಹೌದು, ಎರಡೂ ನಿಜ ಎಂದೇ ತಿಳಿದುಕೋ" ಎಂದು ಹೊರಗೆ ಹೇಳಿ, ಮನಸ್ಸಿನಲ್ಲೇ "ತಾನು ನಿಧಾನವಾಗಿ ಹೋದರೆ ಅವಳ ಸಾನ್ನಿಧ್ಯ ಹೆಚ್ಚು ಹೊತ್ತು ಸಿಗುತ್ತದೆ" ಎಂಬ ನಿಜದ ಕಾರಣವನ್ನು ಮೆಲುಕು ಹಾಕಿದವನ ಧ್ವನಿ ತೋರಿಸದೇ ಮುಚ್ಚಿಟ್ಟುಕೊಂಡಿದ್ದ ಪ್ರೀತಿಯನ್ನು ಸ್ಫುರಿಸುತ್ತಿತ್ತು.
...
ಆ ಜಾಗ ನನಗೆ ಬೇಡ:
          ಅದು ಜನ ಕಿಕ್ಕಿರಿದು ತುಂಬಿದ್ದ ಬಸ್ಸು. ಹಿರಿಯ ನಾಗರೀಕರೊಬ್ಬರು ನಿಂತಿದ್ದರು. ಅವರು ನಿಂತಿದ್ದ ಜಾಗಕ್ಕೆ ಪಕ್ಕದಲ್ಲಿದ್ದ ಸೀಟಿನಿಂದ ಒಬ್ಬ ಇಳಿದಿದ್ದರಿಂದ ಆ ಸೀಟು ಖಾಲಿ ಆಯ್ತು. ಎಲ್ಲಿದ್ದನೋ ಒಬ್ಬ ನವಯುವಕ ಅರೆಕ್ಷಣದಲ್ಲಿ ಬಂದು ಕುಳಿತುಬಿಟ್ಟಿದ್ದ. ಕುಳಿತಮೇಲೆ ಹೆಮ್ಮೆಯಿಂದ ತನ್ನ ಚುರುಕುತನಕ್ಕೆ ತನ್ನನ್ನೇ ಪ್ರಶಂಸಿಸಿಕೊಳ್ಳಲೇನೋ ಎಂಬಂತೆ ಸುತ್ತಮುತ್ತ ನೋಡಿ ಜಗದ್ವಿಜಯದ ನಗೆನಕ್ಕ. ಪಕ್ಕದಲ್ಲಿ ನಿಂತಿದ್ದ ಹಣ್ಣು ಹಣ್ಣು ಮುದುಕರನ್ನು ನೋಡಿ ಅದೇನೆನ್ನಿಸಿತೋ ಸೀಟನ್ನು ಬಿಟ್ಟುಕೊಡಲು ತಯಾರಾದ, ಆ ಹಿರಿಯ ನಾಗರೀಕರೋ ಅಲ್ಲಿ ಕೂರಲು ಒಪ್ಪದೇ, " ಇದು ವಿಕಲಚೇತನರಿಗೆ ಕಾದಿರಿಸಿದ ಜಾಗ, ನನಗೆ ದೇವರು ಎರಡು ಎರಡು ಕೈ, ಕಾಲು ಹಾಗೂ ಎಲ್ಲ ಭಾಗಗಳನ್ನು ಸರಿಯಾಗಿ ಕೊಟ್ಟಿದ್ದಾನೆ" ಎಂದರು ಎಂಬಲ್ಲಿಗೆ ಆ ಜನತುಂಬಿದ ಬಸ್ಸಿನಲ್ಲಿ ಒಬ್ಬ ಹೀರೋ ಹುಟ್ಟಿದ್ದರು. 
...


Sunday 25 November 2012

ಅಕ್ಕ



          ಅದೊಂದು ಅನಿರ್ಬಂಧಿತ ಪ್ರೀತಿ, ಬಹುಶಃ ತಾಯಿಯ ಪ್ರೀತಿಯೊಂದನ್ನು ಬಿಟ್ಟರೆ ಅತಿ ಶುದ್ಧವಾದದ್ದು. ಈ ಪ್ರೀತಿಗೆ ಆಕರ್ಷಣೆಯ ಅವಶ್ಯಕತೆಯಿಲ್ಲ, ಕಾರಣಗಳ ಹುಡುಕಾಟವಿಲ್ಲ, ಬಯಕೆ, ನಿರೀಕ್ಷೆಗಳೆಂಬ ಲೋಭದ ಹಿನ್ನೆಲೆಯಿಲ್ಲ, ಹುಡುಗ ಈ ಪ್ರೀತಿಗೆ ಅಂಗಲಾಚಬೇಕಿಲ್ಲ, ಹುಡುಗಿಗಾದರೂ ಯಾವುದೇ ಅಭದ್ರತೆಯ ಭಾವನೆ ಬರಲು ಕಾರಣವಿಲ್ಲ. ಅವರಿಬ್ಬರು ಹುಟ್ಟಿನಿಂದಲೇ 'made for each other'. ಹುಟ್ಟೇ ಈ ಪ್ರೀತಿಗೆ ಕಾರಣವಾಗಿರಬೇಕಾದರೆ ಬೇರಾವ ಬಂಧ ಇದಕ್ಕಿಂತ ಗಟ್ಟಿಯಾಗಿರಲು ಸಾಧ್ಯ. ಹೌದು, ನಾನು ಸಹೋದರ-ಸಹೋದರಿಯರ ಪ್ರೀತಿಯ ಬಗ್ಗೆ ಮಾತನಾಡುತ್ತಿರುವುದು, ಅದರಲ್ಲಿಯೂ ಅಕ್ಕ ತಮ್ಮಂದಿರ ಮಧ್ಯದ ಪ್ರೀತಿಯ ಬಗ್ಗೆ. ಎಲ್ಲ ಒಡಹುಟ್ಟಿದವರ ಮಧ್ಯೆಯೂ ಇದೇ ರೀತಿಯಾದ ಒಂದು ಪ್ರೀತಿ ಇರುತ್ತದೆಯೇನೋ, ಬಹುಶಃ. ಆದರೆ ನಾನು ಕಂಡ ಮಟ್ಟಿಗೆ, ಈ ಎಲ್ಲವುಗಳಲ್ಲಿ ಹಿರಿಯ ಸಹೋದರಿಯ ಪ್ರೀತಿ ಇದೆಯಲ್ಲಾ, ಅದು ಅಕ್ಷರಶಃ ಬೆಲೆ ಕಟ್ಟಲಾರದಂತದ್ದು. ಅದೂ ಸ್ವಲ್ಪ ಹೆಚ್ಚು ವರ್ಷಗಳ ವ್ಯತ್ಯಾಸ ಇತ್ತೆಂದರೆ ಮುಗಿಯಿತು, ಅಕ್ಕ ಆಕ್ಷರಶಃ ಎರಡನೇ ಅಮ್ಮನೇ. ಎಷ್ಟೋ ಸಲ ಅಮ್ಮನಿಗಿಂತಲೂ ಹತ್ತಿರ ಎನ್ನಿಸುತ್ತಾಳೆ. ಬೇಕಿದ್ದರೆ ನೀವೇ ನೋಡಿ, ನೀವು ನಿಮ್ಮ ಅಕ್ಕನ ಬಳಿ ಹೇಳಿಕೊಳ್ಳುವ ವಿಷಯಗಳನ್ನು ಕೆಲವೊಮ್ಮೆ ಅಮ್ಮನ ಬಳಿ ಪ್ರಸ್ತಾಪವೂ ಮಾಡಲಾಗುವುದಿಲ್ಲ, ಕೆಲವೊಮ್ಮೆ ಆ ವಿಷಯಗಳನ್ನು ನಿಮ್ಮ ಅತ್ಯಾಪ್ತ ಗೆಳೆಯನ ಬಳಿಯೂ ಹೇಳಿಕೊಳ್ಳಲಾಗುವುದಿಲ್ಲ.

            ಆಕೆ ತನ್ನ ತಮ್ಮನ ಮಟ್ಟಿಗೆ ಮೊದಲ ಮತ್ತು ಅತಿ ಹತ್ತಿರದ ಗೆಳತಿ, ಎರಡನೆಯ ಅಮ್ಮ, ಆತನನ್ನು ಆತನಿಗಿಂತ ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲ ಆತ್ಮಬಂಧು, ಚಿಕ್ಕಂದಿನಲ್ಲಿ ಎಲ್ಲದಕ್ಕೂ ಜಗಳವಾಡಿದ ಪರಮಸ್ಪರ್ಧಿ, ಸ್ವಲ್ಪ ದೊಡ್ಡವಳಾದ ಮೇಲೆ ತನ್ನ ಚಿಕ್ಕ ತಮ್ಮನಿಗೋಸ್ಕರ ಏನನ್ನು ಬೇಕಾದರೂ ತ್ಯಾಗ ಮಾಡಲು ಸಿದ್ಧವಾಗುವ ಸರ್ವತ್ಯಾಗಿ, ಯಾವುದೇ ಹಂಬಲವಿಲ್ಲದೆಯೇ ಪ್ರೀತಿಸುತ್ತಲೇ ಇರಬಲ್ಲ ಅಮೃತಮಯಿ, ಇನ್ನೂ ಏನೇನೋ. ತಂದೆ-ತಾಯಿಯರ ಪ್ರೀತಿಯಲ್ಲಿಯಾದರೂ ಮುಂದೆ ಮಕ್ಕಳು ತಮ್ಮನ್ನು ಚೆನ್ನಾಗಿ ನೋಡಿಕೊಳ್ಳಲಿ ಎಂಬ ಸ್ವಾರ್ಥವಲ್ಲದ ಸ್ವಾರ್ಥವನ್ನು ಹುಡುಕಬಹುದೇನೋ, ಆದರೆ ಅಕ್ಕನ ಪ್ರೀತಿಯಲ್ಲಿ ಅಂತಹುದೊಂದರ ಕುರುಹೂ ಕಾಣಲಾರದು. ಕೆಲವೊಮ್ಮೆ ಹೆದರಿಕೆ ಹುಟ್ಟಿಸುತ್ತದೆ ಈ ಪ್ರೀತಿ, ಇಷ್ಟನ್ನು ನಾವು ತಿರುಗಿ ಕೊಡಲಾಗುತ್ತದೆಯೇ ಎಂದು, ಅದು ಹೋಗಲಿ, ಇಷ್ಟು ಪ್ರೀತಿಯನ್ನು ನಮಗೇ ಜೀರ್ಣಿಸಿಕೊಳ್ಳಲಿಕ್ಕಾಗುತ್ತದೆಯೇ ಎಂದು.

          ವೈಯಕ್ತಿಕವಾಗಿ ಬಂದರೆ ನನ್ನಕ್ಕ ಭವಾನಿಗೂ ನನಗೂ ಐದು ವರ್ಷಗಳ ವ್ಯತ್ಯಾಸ, ಅಂದ ಮಟ್ಟಿಗೆ ನಾನು ಚಿಕ್ಕವನಾಗಿದ್ದಾಗ ನನ್ನ ಮಟ್ಟಿಗೆ ಇವಳೇ ದಾದಿ, ಸಹಪಾಠಿ, ಎಲ್ಲವೂ. ಅಪ್ಪ ಅಮ್ಮ ನಮ್ಮಿಬ್ಬರನ್ನು ಮನೆಯಲ್ಲಿ ಬಿಟ್ಟು ಶಾಲೆಗೆ(ನನ್ನ ಅಪ್ಪ ಅಮ್ಮ ಇಬ್ಬರೂ ಶಿಕ್ಷಕರು) ಹೋದರೆ ಅವರು ಬರುವವರೆಗೆ ನನ್ನ ಜವಾಬ್ದಾರಿ ಅಕ್ಕನದ್ದು. ನನ್ನ ಹಠಗಳಿಗೆ ಪಕ್ಕಾಗುವುದಕ್ಕೂ, ನನ್ನ ಆಟಗಳಿಗೆ ಜೊತೆಯಾಗುವುದಕ್ಕೂ ಅವಳು ತಯಾರಿರಬೇಕಿತ್ತು.  ನನ್ನ ಮೊದಮೊದಲು ಕ್ರಿಕೆಟ್ ಆಡಿದ್ದೂ ಅಕ್ಕನೊಂದಿಗೇ, ಜಗಳವಾಡಿದ್ದೂ ಅಕ್ಕನೊಂದಿಗೇ, ಇದಕ್ಕೆ ನಾನು ಚಿಕ್ಕವನಾಗಿದ್ದಾಗ ನನ್ನ ವಯಸ್ಸಿನ ಹುಡುಗರು ಆಸುಪಾಸಿನಲ್ಲಿ ಯಾರೂ ಇರಲಿಲ್ಲವೆಂಬುದು ಹೌದಾದರೂ, ನನ್ನ ಚಿಕ್ಕಂದಿನ ಎಲ್ಲ ನೆನಪುಗಳಲ್ಲಿಯೂ ಅವಳದ್ದೊಂದು ಪಾಲಿದೆ ಎಂಬುದಂತೂ ಸತ್ಯ.

          ನಾನು ಐದು ವರ್ಷದವನಿರುವಾಗ ಅವಳು ನವೋದಯ ಶಾಲೆಗೆ ಹೋದಳು, ಅದಾದ ನಂತರ ನಮ್ಮ ಭೇಟಿಯೆಲ್ಲಾ ವಾರದ ಮೂರನೇ ಭಾನುವಾರವೇ, ಅದೂ ಅಪ್ಪ ಅಮ್ಮ ನನ್ನನ್ನು ಅವರ ಜೊತೆಗೆ ಕರೆದುಕೊಂಡು ಹೋದರೆ. ಕೆಲವೊಮ್ಮೆ ತಿಂಗಳುಗಟ್ಟಲೇ ಸಿಗದೇ ಹೋಗಿದ್ದುಂಟು. ಬೇಸಿಗೆ ರಜೆಯಲ್ಲಿ ಬಂದಾಗ ಮಾತ್ರ ಸರಿಯಾಗಿ ಸಿಗುತ್ತಿದ್ದಳಾಗಿ, ಅವಳ ರಜೆಗೆ ಅವಳಿಗಿಂತ ಹೆಚ್ಚಾಗಿ ನಾವು ಕಾಯುತ್ತಿದ್ದೆವು. ಈ ಸಮಯದಲ್ಲಿಯೇ ಒಂದು ದಿನ ನಾನು ಆಟವಾಡುವಾಗ ಅದು ಹೇಗೋ ತಲೆಯನ್ನು ಎಲ್ಲಿಯೋ ಹೊಡೆಸಿಕೊಂಡು ಹುಬ್ಬಿನ ಬಳಿ ಒಂದಿಂಚಿನಷ್ಟು ಗಾಯ ಮಾಡಿಕೊಂಡು ಮನೆಗೆ ಓಡಿ ಬಂದಿದ್ದೆ, ಉಳಿದವರೆಲ್ಲ ಹೇಗಾಯ್ತು ಎಂದು ಕೇಳುವುದರಲ್ಲಿಯೋ, ಮತ್ತೆಲ್ಲೋ ಬಿದ್ದ ಎಂದುಕೊಂಡು ಬಯ್ದುಕೊಳ್ಳುವುದರಲ್ಲಿಯೋ, ವ್ಯಸ್ತವಾಗಿದ್ದರೆ, ಅಕ್ಕ ನನ್ನ ಹಣೆಯಿಂದ ಬರುತ್ತಿದ್ದ ರಕ್ತವನ್ನು ತನ್ನ ಅಂಗಿಯಲ್ಲಿ ಒರೆಸಿದ್ದಳು. ಮತ್ತೆ ಅದೆಷ್ಟು ವರ್ಷಗಳ ಮೇಲೆ ಆ ಅಂಗಿಯನ್ನು ನೋಡಿದರೂ ಅದೇ ನೆನಪುಗಳು ಬರುತ್ತಿತ್ತು. ಇದು ಒಂದು ಘಟನೆಯಷ್ಟೇ, ಇಂತದ್ದೇ ಅದೆಷ್ಟೋ ಘಟನೆಗಳಿವೆ.

          ಅವಳು ಒಂದು ರೀತಿಯಲ್ಲಿ ನನಗೆ ಗುರು, ಮಾರ್ಗದರ್ಶಿ. ಇಲ್ಲಿಯವರೆಗಿನ ನನ್ನ ಜೀವನದ ಎಲ್ಲ ಹಂತಗಳ ನಿರ್ಧಾರಗಳಲ್ಲಿಯೂ ಅವಳದ್ದೊಂದು ಪಾಲಿದೆ. ಪ್ರವೇಶ ಪರೀಕ್ಷೆಯಲ್ಲಿ ಪಾಸಾದರೂ ನವೋದಯ ಶಾಲೆಗೆ ಹೋಗದಿದ್ದುದರಿಂದ ಹಿಡಿದು, ಪಿ. ಯು. ದಲ್ಲಿ ಬಯಾಲಜಿ ತೆಗೆದುಕೊಳ್ಳದೇ ಇದ್ದುದರವರೆಗೆ, ಎಡಗಡೆಗೆ ಕ್ರಾಪು ತೆಗೆಯುವುದರಿಂದ ಹಿಡಿದು ಇಂಜಿಯರಿಂಗಿನಲ್ಲಿ ಎಲೆಕ್ಟ್ರಾನಿಕ್ಸ್ ತೆಗೆದುಕೊಳ್ಳುವವರೆಗೆ ಅವಳ ಕೈವಾಡವಿದೆ. (ಕೆಲವೊಮ್ಮೆ ಅವಲ ಜೀವನದಲ್ಲಿ ಮಾಡಿದ ತಪ್ಪುಗಳನ್ನು ತಮ್ಮ ಪುನರಾವರ್ತಿಸದಿರಲಿ ಎಂಬುದು ಅವಳ ಉದ್ದೇಶವೂ ಇರಬಹುದು. ಉದಾ: ಪಿ. ಯು. ದಲ್ಲಿ ಬಯಾಲಜಿ ತೆಗೆದುಕೊಂಡಿದ್ದು)  ಪ್ರತಿ ಬಾರಿ ಅವಳ ಮಾತನ್ನು ಕೇಳಿದಾಗಲೂ ಒಳ್ಳೆಯದೇ ಆಗಿದೆ( at least ಇಲ್ಲಿಯವರೆಗೆ ಹಾಗೆನಿಸಿದೆ  :P). ಕೇಳದೇ ಹೋದಾಗ ಅದೃಷ್ಟ, ಬದುಕು ಎರಡೂ ಮುಗ್ಗರಿಸಿ ಬಿದ್ದಿದೆ ಎಂದೇನೂ ಅಲ್ಲ ಬಿಡಿ.  ನನ್ನ ಜೀವನದ ಬಹುತೇಕ ಎಲ್ಲ ವಿಷಯಗಳು ಅವಳಿಗೆ ಗೊತ್ತು, ಎಲ್ಲ ಗುಟ್ಟುಗಳೂ ಸಹ. ಹಲವನ್ನು ನಾನೇ ಹೇಳಿಕೊಂಡಿದ್ದೇನೆ, ಕೆಲವು ಅವಳೇ ಅರ್ಥಮಾಡಿಕೊಂಡಿದ್ದಾಳೆ. ಎಷ್ಟೋ ವಿಷಯಗಳನ್ನು ನಾನು ಮಾತನಾಡದೇ ಅವಳಿಗೆ ಅರ್ಥವಾಗುತ್ತದೆ, ನನಗೂ ಅವಳು ಮಾತನಾಡದೇ ಅರ್ಥವಾಗುತ್ತದೆ. ಅಥವಾ ಕೆಲವೊಂದು ಅರ್ಧ ಮಾತನಾಡಿದಾಗಲೇ ಅರ್ಥವಾಗುತ್ತದೆ, ಪರಸ್ಪರರಿಗೆ. ಮಜವಾಗುವುದೆಂದರೆ, ಕೆಲವೊಮ್ಮೆ ನಾಲ್ಕೈದು ಜನ ಮಾತನಾಡುತ್ತಿರುವಾಗ, ಇವಳೇನೋ ಅಂದಿರುವುದು ನನಗೆ ಮಾತ್ರ ಅರ್ಥವಾಗಿರುತ್ತದೆ, ಉಳಿದವರಿಗೆ ಕೇವಲ ಕೇಳಿರುತ್ತದೆ. ಬಹುಶಃ, ಇಷ್ಟು ವರ್ಷಗಳ ಒಡನಾಟದ ಪರಿಣಾಮವೂ ಇರಬಹುದು, ಈ ಪರಸ್ಪರ ಹೊಂದಾಣಿಕೆ. ಇಷ್ಟಕ್ಕೂ ಮೇಲಾಗಿ, ನಮಗಿಬ್ಬರಿಗೂ ಕಾಮನ್ ಆದ ಒಂದೇ ಒಂದು ಅಭಿರುಚಿಯಿಲ್ಲ, ನನಗೆ ಸಿಹಿ, ಉಪ್ಪು ಇಷ್ಟವಾದರೆ ಅವಳಿಗೆ ಖಾರ ಇಷ್ಟನಾನು ಆಜನ್ಮ ಫ಼ೆಡರರ್ ಭಕ್ತನಾದರೆ ಅವಳಿಗೆ ನಡಾಲ್ ಖುಷಿ, ನಾನು ಆರ್. ಸಿ. ಬಿ.ಯನ್ನು ಬೆಂಬಲಿಸಿದರೆ ಅವಳು ರಾಜಸ್ತಾನ್ ರಾಯಲ್ಸ್ ಅಭಿಮಾನಿ, ಹೀಗೇ ಪ್ರತಿಯೊಂದರಲ್ಲೂ ನಾವು ತದ್ವಿರುದ್ಧ. 

          ಈಗ ಅವಳು ಒಂದು ಮಗುವಿನ ತಾಯಿ, ಆದರೆ ಇಂದಿಗೂ ಅವಳು ಒಂದು ಮಗುವಿನ ಹಾಗೆಯೇ. ಕೆಲವೊಮ್ಮೆ ತಾಯಿಯ ಹಾಗೆ ಕಾಣುವ ಮತ್ತೆ ಕೆಲವು ಸಲ ಮಗುವಿನ ತರಹ ಆಡುವ ಈ ರೀತಿ ಕೇವಲ ಅವಳಿಗೆ ಮಾತ್ರ ಸಾಧ್ಯವೇನೋ. ಸಂತೋಷದಲ್ಲಿ ಕಳೆದ ಆ ಬಾಲ್ಯದ ಕ್ಷಣಗಳ ನೆನಪುಗಳೆಲ್ಲ ಇಂದು ನಿನ್ನೆಯದೇನೋ ಎನ್ನಿಸುತ್ತದೆ. ಅಂದಹಾಗೆ ಇಂದು ಅವಳ ಜನುಮದಿನ, ಮತ್ತೊಂದು ವರ್ಷ ಹೆಚ್ಚಾಯಿತು ಎಂದು ನೆನಪು ಮಾಡಿಕೊಡುವ ದಿನ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು’ ಎಂದು ಇಲ್ಲೊಮ್ಮೆ ಹೇಳಿ ಒಮ್ದು ಪೂರ್ಣವಿರಾಮವನ್ನು ಇಡುತ್ತೇನೆ.

Saturday 3 November 2012

ಮತ್ತಿನ್ನೇನು ಬೇಕು



ನಿನ್ನೊಲವಿನ ಸಾಗರದಿ ನಾ ಮುಳುಗುವಂತಿದ್ದರೆ  
ನೀನರಿಯದೆ ಹೋದರೂ ನಾನಲ್ಲಿಯೇ ಇದ್ದರೆ 
ಮತ್ತಿನ್ನೇನು ಬೇಕು
ಜೀವಕೆ ಈ ಜೀವನಕಷ್ಟು ಸಾಕು ||ಪ||

ನಿನ್ನದೇ ನೆನಪಿನಲಿ ನಾ ಬವಳಿ ಬೆಂಡಾಗಿರೆ
ಕನಸಾಗಿಯಾದರೂ ನೀನೊಮ್ಮೆ ಸೋಕಿದರೆ
ಸಾವಿರದ ಗುಂಪಿನಲ್ಲೂ ಎದ್ದು ಕಾಣುವ ನೀ
ಎದ್ದು ನಿತ್ತರೂ ಕಾಣದ ನನ್ನೊಮ್ಮೆ ಗುರುತಿಸಿದರೆ
ಮತ್ತಿನ್ನೇನು ಬೇಕು
ಜೀವಕೆ ಜೀವನಕಷ್ಟು ಸಾಕು ||1||

ಹಾಡಲ್ಲದ ನನ್ನ ಹಾಡಿಗೆ ನೀ ಕಿವಿಯಾದರೆ
ನಗುಬಾರದ ಜೋಕಿಗೆ ನೀನೊಮ್ಮೆ ನಕ್ಕರೆ
ನಿನ್ನ ಘಮದ ನಡುವೆ ನಾ ಕಳೆದುಹೋದರೆ
ಅಲ್ಲಿ ನನ ಸುಳಿವನ್ನು ನೀನೇ ಪತ್ತೆಹಚ್ಚಿದರೆ
ಮತ್ತಿನ್ನೇನು ಬೇಕು
ಜೀವಕೆ ಜೀವನಕಷ್ಟು ಸಾಕು ||2||

ನಿನ್ನ ಯೋಚನೆಗಳಲಿ ನಾನೊಮ್ಮೆ ಬಂದರೆ
ಅದರಿಂದ ಮುಗುಳುನಗೆಯೊಂದು ಮೂಡಿದರೆ
ನಿನಗೆ ನನ್ನ ಮೇಲೊಂದು ಭಾವ ಮಡುಗಟ್ಟಿದರೆ
ನನ ಜೊತೆಗಿರುವ ಆಲೋಚನೆ ಹುಟ್ಟಿದರೆ
ಜೀವಕೆ ಮತ್ತಿನ್ನೇನು ಬೇಕು
ಈ ಜೀವನವೇ ಸಾಕು ||3||

Saturday 8 September 2012

ಕರಿಗೌಡರ ಕಿರಿಮಗಳು


ಒಂದು ಭಾವಗೀತೆಯಂತಹ ಕವಿತೆ ,ಹಿಂದಿಲ್ಲ ಮುಂದಿಲ್ಲ , ಸುಮ್ಮನೆ ಓದಿಕೊಳ್ಳಿ .

ಯಾರಿಗೂ ಹೇಳದಿರಿ ಕಿರಿಮಗಳು ಬಂದಿಹಳೆಂದು
ಊರಿನ ಹಿರಿಯ ಕರಿಗಿರಿಗೌಡರ ಮನೆಗಿಂದು
ಕನಸು ತಾ ನಿಜವಾದರೆ ಅವಳ ಹಾಗಿರಬಹುದು
ಕದ್ದು ನೋಡಲು ಯುವಕರು ಕೆಲಸ ಬಿಡಬಹುದು
ಸರತಿಯ ಸಾಲಾಗಬಹುದು ಗೌಡರ ಮನೆಯ ಮುಂದೆ
ಹರೆಯವೇ ನಾಚುವ ಪ್ರಾಯದ ಕನ್ನಿಕೆಯ ಹಿಂದೆ||||

ಯಾರು ಅಡಗಿಸಿದರೇನು, ಯಾರು ಹೇಳದಿದ್ದರೇನು
ದೇವತೆಯ ಆಗಮನ ಭಕ್ತರಿಗೆ ತಿಳಿಯದೇನು 
ಕುವರಿ ತಾನೆ ನೀರಿಗೆ ಬಂದಿರೆ, ಊರಿನ ಬಾವಿಗೆ.
ನಡೆದಲಿ ಮುತ್ತನು ಸುರಿಸಿ, ಹಿಡಿದಾ ಬಿಂದಿಗೆ,
ಜೇನನು ಚೆಲ್ಲಿ ನೀರನು ಒಯ್ಯಲು ಬಂದರೆ ಆಕೆ,
ಊರಿಗೂರೇ ಬಾಯ್ಬಿಟ್ಟು ಮೂಕವಾಗಿಬೇಕೆ.||||

ಚಿತ್ರಕ್ರಪೆ : ಅಂತರ್ಜಾಲ 
ಬಾವಿಯ ಬಳಿಯ ಶೆಟ್ಟರ ಅಂಗಡಿ ತುಂಬಿತ್ತು
ನೋಟವ ಕದಿವವರ ಕೊರಳದು ಆಚೆ ನೀಕಿತ್ತು.
ನೋಡಿದಳು ಓರೆಗಣ್ಣಲ್ಲಿ ಅಭಿಮಾನಿ ಬಳಗವ
ತಡೆದಳು ಉಕ್ಕಿ ಬರುತಿದ್ದ ಮುಗುಳುನಗುವ
ಕೊಡದಾ ಭಾರಕೆ ಬಳುಕಿದ ಸೊಂಟದ ಬಗ್ಗೆ,
ಕನಿಕರದಿಂದ ಕಳಿಸಿದ ವರುಣ ಮಳೆಯ ಬುಗ್ಗೆ.||||

ಓಡಿದಳಾಕೆ ಮನೆಯ ಕಡೆಗೆ ನೆನೆಯದ ಹಾಗೆ
ದಾವಣಿಯ ಮೇಲೆತ್ತಿ ಕೆಸರು ರಾಚದ ಹಾಗೆ
ತುಂಬಿದ ಬಿಂದಿಗೆಯ ನೀರನು ಅಲ್ಲಿಯೇ ಚೆಲ್ಲಿ
ನೀರಿನ ಸುರಿಮಳೆಗಂಜಿ ಓಡಿದಳು ವಲ್ಲಿ
ಹಿಂದೆಯೇ ಮೆಲ್ಲನೆ ಬಂದಿರೆ ಹಿಂಬಾಲಕರು
ಜಾರಿತು, ಬಿದ್ದಳು, ಅಗ್ರಹಾರದ ಎದುರು ||||

ಕೈಯೊಳಗಿದ್ದ ಕೊಡವು ಬಿದ್ದಿತ್ತು ಮಗುಚಿ
ಊರೇ ಓಡಿಬಂದಿತ್ತು ನೆರವಿನ ಕೈಚಾಚಿ
ಹಿಡಿದೆತ್ತುವ ನೆಪದಿ ಸುತ್ತುವರಿದ ಜನಕೆ
ಕನ್ನೆಯ ಮೈಸೋಕುವ ಧನ್ಯತೆಯ ಹವಣಿಕೆ
ನಾಚಿಬಿಟ್ಟಳು ಕುವರಿ ಮೈಯ್ಯೆಲ್ಲ ಕೆಂಪು
ಮಾತು ಮರೆತ ಆಕೆಯ ಮೌನವೂ ಇಂಪು||||

ಎದ್ದು ಕೂತಳು ಕುವರಿ ಬಿದ್ದು ಅಳುತ್ತ
ಉದುರುತಿದ್ದವು ಕಣ್ಣೀರ ಹನಿಯ ಮುತ್ತ
ಸಮಯವಾದರೂ ಬರದ ಮಗಳ ಅರಸಿ
ಕೊಡೆಹಿಡಿದು ಬಂದರು ತಂದೆ ಮಳೆಗೆ ಶಪಿಸಿ
ಗೌಡರು ಕರೆದೊಯ್ದರು ಮಗಳ ಸಾವರಿಸಿ
ಸುಮ್ಮನೇ ನಿಂತಿದ್ದ ಜನರ ಗದರಿಸಿ||||


Saturday 4 August 2012

ನಿರಾಧಾರ-ನಿರ್ಧಾರ (ಕಥೆ)


ನೃಪತುಂಗ:
ಅವಳು ಸುಂದರಿ,ಸೌಂದರ್ಯವೇ ಮೂರ್ತಿವೆತ್ತಂತೆ ದೇವರು ಬಹಳ ಸಾವಧಾನದಿಂದ ಕುಳಿತು ಕಡೆದ ಶಿಲ್ಪದಂತವಳು. ಹಾಗೆಂದು ನಾನೇನು ಕುರೂಪಿಯಲ್ಲ, ಇತ್ತ ಸುಂದರನೂ ಅಲ್ಲ, ಆರಕ್ಕೇರದ ಮೂರಕ್ಕಿಳಿಯದ ಎಡಬಿಡಂಗಿ. ಅವಳು ಅಕ್ಷರಶಃ ಬಹುರ್ಮುಖಿ, ಯಾರಾದರೂ ಜೊತೆಯಲ್ಲಿ ಇದ್ದರೆ ಮಾತನಾಡುತ್ತಿರಬೇಕು, ಯಾರೂ ಇಲ್ಲವಾದರೆ ಹಾಡೊಂದು ಮೂಡಬೇಕು, ಧ್ವನಿ ಬೇಜಾರೆನಿಸಿದರೆ ಅಲ್ಲಿಯೇ ಒಂದು ಲೇಖನ ಹುಟ್ಟಬೇಕು, ಅವಳು ಸುಮ್ಮನೇ ಹದಿನೈದು ನಿಮಿಷ ಕುಳಿತಿದ್ದನ್ನು ಸ್ವತಃ ಅವಳೇ ನೋಡಿಲ್ಲವಂತೆ. ನಾನು ಭಾಗಶಃ ಅಂತರ್ಮುಖಿ, ಅದಕ್ಕಿಂತ ಮೂಡಿ ಎಂದರೆ ಸೂಕ್ತವೇನೋ. ಮಾತು ಕಡಿಮೆ, ಆಗಾಗ ಗೆಳೆಯರ ಜೊತೆಗೆ ಹರಟೆಹೊಡೆಯುತ್ತ ಕುಳಿತುಬಿಡುತ್ತೇನಾದರೂ ಯಾವಾಗಲೂ ಉಳಿದವರಿಂದ ಒಂದಿಷ್ಟು ಅಂತರ ಕಾಯ್ದುಕೊಳ್ಳುವುದರ ಜಾತಿ. ಜನ-ಜಾತ್ರೆಯಿಂದ ಆದಷ್ಟು ದೂರ. ಅವಳೋ ಕನಿಷ್ಟ ನಾಲ್ಕು ನಿಮಿಷಕ್ಕೊಂದು ಬಾರಿ  ಹರೇ ಕೃಷ್ಣ ಎಂದು ತನ್ನಷ್ಟಕ್ಕೆ ತಾನೇ ಆದರೂ ಹೇಳಿಕೊಳ್ಳುವಷ್ಟು ಭಕ್ತೆ, ನಾನೋ ನೆನಪಾದರೆ ದೇವರಿಗೆ ಕೈ ಮುಗಿಯುವಷ್ಟರ ಮಟ್ಟಿಗೆ ಆಸ್ತಿಕ. ಅವಳು ಅಭ್ಯಾಸದಲ್ಲಿ ಓದಿನಲ್ಲಿ ಅಷ್ಟಕ್ಕಷ್ಟೇ, ನಾನು ಜೀನಿಯಸ್ ಅಂತಾರಲ್ಲಾ ಹಾಗೆ ವಿದ್ಯಾಭ್ಯಾಸದಲ್ಲಿ. ಒಂದೇ ವಾಕ್ಯದಲ್ಲಿ ಹೇಳುವುದಾದರೆ ನಾನು (ನೃಪತುಂಗ) ಮತ್ತು ವೈದೇಹಿ ಪರಸ್ಪರ ವಿರುದ್ಧ ಧೃವಗಳು.

ಆದರೆ ವಿಚಿತ್ರ ನೋಡಿ, ನಾನು ಅದಾವ ಮಾಯದಲ್ಲೋ ಇವಳೊಡನೆ ಪ್ರೀತಿಯಲ್ಲಿ ಬಿದ್ದೆ. ನಮ್ಮಿಬ್ಬರ ಪರಿಚಯವಾಗಿ, ಅದು ಸ್ನೇಹವಾಗಿ,  ಅದು ಯಾವುದೋ ಮಾಯದಲ್ಲಿ ಆಕರ್ಷಣೆಯಾಗಿ, ಅದು ಯಾವಾಗ ಪ್ರೇಮವಾಗಿ ಬದಲಾಯಿತೋ ನಾ ಕಾಣೆ. ಕ್ಲಾಸಿನಲ್ಲಿ ರೌಡಿಯ ತರಹ ಇದ್ದ ವಿನಯಕುಮಾರ್ ಶುಕ್ಲಾನಿಗೂ ಅವಳ ಮೇಲೆ ಇಷ್ಟವಿತ್ತು ಎಂಬ ವಿಷಯ ಗೊತ್ತಿದ್ದರೂ, ಪ್ರೀತಿ ಎಂದರೆ ಏನೆಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪ್ರೀತಿಸಲಾರಂಭಿಸಿದೆ. ಅಷ್ಟಕ್ಕೂ ನಮ್ಮಿಬ್ಬರ ಮಧ್ಯೆ ಇದ್ದದ್ದು ಕಾರಿಡಾರಿನಲ್ಲಿ ಸಿಕ್ಕಿದರೆ ’ಹಾಯ್’ ಹೇಳುವಷ್ಟು ಪರಿಚಯ. ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ. ಎಲ್ಲ ಬಿಟ್ಟು ನಾನೇಕೆ ಅವಳನ್ನೇ ಪ್ರೀತಿಸಿದೆ? crushಗೆ, ಆಕರ್ಷಣೆಗೆ ಕಾರಣಗಳಿಬಹುದಾದರೂ, ಪ್ರೀತಿಗೆ ಕಾರಣಗಳನ್ನು ಹುಡುಕುವುದು ಕಷ್ಟ. ಹಾಗೆಂದು ನನ್ನದು ಮೊದಲ ನೋಟದ ಪ್ರೇಮವೇನೂ ಅಲ್ಲ, ಅದನ್ನು ನಂಬುವಷ್ಟು ಮೂರ್ಖನೇನೂ ನಾನಲ್ಲ. ಪ್ರೀತಿಯನ್ನು ವ್ಯಕ್ತಪಡಿಸಿದರೆ ಎಲ್ಲಿ ಈಗ ಸಿಗುವ ನಗೆಮಲ್ಲಿಗೆಯೂ ಮಾಯವಾಗಿಬಿಡುತ್ತದೆಯೇನೋ ಎಂಬ ಹೆದರಿಕೆ. ನನ್ನ ಪರಿಸ್ಥಿತಿ ಕೆಲವೊಮ್ಮೆ ನನಗೇ ವಿಚಿತ್ರವಾಗಿ ಕಾಣುತ್ತಿತ್ತು. ಕೊನೆಕೊನೆಗೆ ಅತ್ತ ವಿದ್ಯಾಭ್ಯಾಸದ ಕಡೆಗೂ ಗಮನ ಕೊಡಲೂ ಆಗದೇ ಇತ್ತ ಪ್ರೀತಿಯನ್ನೂ ವ್ಯಕ್ತಪಡಿಸಲಾರದೇ ಬದುಕೇ ನಿತ್ತು ಹೋದ ಭಾವನೆಯಲ್ಲಿ ಬದುಕುತ್ತಿದ್ದೆ. ಇನ್ನು ಭಾವನೆಗಳನ್ನು ಹತ್ತಿಕ್ಕಲಾಗದು ಎಂಬ ಭಾವನೆ ಬಂದಾಗ ಧೈರ್ಯ ತೆಗೆದುಕೊಂಡು ಪ್ರಪೋಸ್ ಮಾಡಿಯೇ ಬಿಟ್ಟೆ.ಅವಳು ಒಪ್ಪಿಕೊಳ್ಳಲಿಲ್ಲ, ತನಗೆ ಆ ತರಹದ ಭಾವನೆಯೇನೂ ಇಲ್ಲವೆಂದೂ ಹಾಗೂ ಪ್ರೀತಿ ಪ್ರೇಮ ಎಂಬ ’ಮರುಳಿ’ಗೆ ಬೀಳಲು ತನಗಾವ ಇಷ್ಟವೂ ಇಲ್ಲವೆಂದೂ, ಹೀಗೇ ಗೆಳೆಯರಾಗಿ ಇದ್ದುಬಿಡೋಣವೆಂದೂ ಅವಳು ಹೇಳಿದಳಾದರೂ ಅದು ಸತ್ಯವೆಂದು ಪ್ರೀತಿಯ ಗುಂಗಿನಲ್ಲಿದ್ದ ನನಗೆ ಅನಿಸಲಿಲ್ಲ. ಮನಸ್ಸು ಇನ್ನೂ ಧನಾತ್ಮಕವಾಗಿಯೇ ಇತ್ತು.
*****

ವೈದೇಹಿ:
ಇದಾಗಿ ಮೂರು ತಿಂಗಳು ಮಾತ್ರವಾಗಿತ್ತು, ಅದೊಂದು ದಿನ ನಾನು ಕಾಲೇಜಿನಿಂದ ಮನೆಗೆ ಬರುವ ದಾರಿಯಲ್ಲಿದ್ದ ಒಂದು ಓಣಿಯಲ್ಲಿ ಅಡ್ಡ ಬಂದ ಮುಸುಕುಧಾರಿಯೊಬ್ಬ ನನ್ನ ಮುಖಕ್ಕೆ ಅಸಿಡ್ ಹಾಕಿ ಹೋಗಿದ್ದ. ನನಗೆ ಜಗತ್ತೆಲ್ಲ ಕಪ್ಪಾಗಿ ಹೋಗಿತ್ತು ಆ ಕ್ಷಣದಲ್ಲಿ. ಮುಂದೆ ಪ್ರಜ್ಞೆ ಬಂದ ಮೇಲೆ ನನ್ನ ಮುಖವನ್ನು ನೋಡಲು ನನಗೇ ಭಯವಾಗುವಷ್ಟು ನನ್ನ ಮುಖ ಕುರೂಪವಾಗಿತ್ತು. ರಾಜ್ಯದಲ್ಲೆಲ್ಲಾ ದೊಡ್ಡ ವಿಷಯವಾಗಿಹೋಗಿತ್ತು ಈ ಆಸಿಡ್ ಪ್ರಕರಣ. ಚರ್ಚೆ, ಪ್ರತಿಭಟನೆಗಳೆಲ್ಲ ಎರಡು ವಾರಗಳವರೆಗೆ ನಡೆದು ನಂತರ ತಣ್ಣಗಾಗಿತ್ತು. ಯಾರಿಗೂ ಯಾರು ಮಾಡಿದ್ದು, ಏನು ಕಥೆ ಎಂದು ಗೊತ್ತಾಗಿರಲಿಲ್ಲ. ನೃಪತುಂಗನ ಇಮೇಜ್ ಅಷ್ಟು ಒಳ್ಳೆಯದಿದ್ದುದರಿಂದ ಯಾರೂ ಅವನ ಕಡೆ ಕೈ ತೋರಿಸಲಿಲ್ಲವಾದರೂ, ಎಲ್ಲರ ಒಂದು ಕಣ್ಣು ಅವನ ಮೇಲೇ ಇತ್ತು. ನನಗೂ ಯಾರು ತನ್ನ ಮೇಲೆ ಅಸಿಡ್ ಹಾಕಿದ್ದು ಎಂಬುದರ ಬಗ್ಗೆ ಖಚಿತತೆಯಿಲ್ಲವಾಗಿತ್ತಾದರೂ ನೃಪತುಂಗನ ಬಗ್ಗೆ ಒಂದು ಸಂಶಯವಿದ್ದಿದ್ದು ಹೌದು, ಪೋಲೀಸರು ವಿಚಾರಣೆ ಮಾಡಿದಾಗ ಹೇಳಿಬಿಡೋಣ ಎಂದೆನಿಸಿತ್ತಾದರೂ ನನ್ನ ಜೊತೆ ಸರಿಯಾಗಿ ಮಾತನಾಡಲೂ ತಡವರಿಸುವ, ಇರುವೆಗೂ ನೋವು ಮಾಡಲು ಹಿಂಜರಿಯುವ ಈತ ಇಂತಹ ಪಾತಕಕ್ಕೆ ಕೈ ಹಾಕಲಾರ ಎಂಬ ವಿಶ್ವಾಸವಿತ್ತು. ಮೇಲಾಗಿ ನನಗೂ ಅವನ ಬಗ್ಗೆ ಸ್ವಲ್ಪ ಭಾವನೆಗಳಿದ್ದವಲ್ಲಾ! ಪ್ರೀತಿ ಎಂದು ಸ್ಪಷ್ಟವಾಗಿ ಹೇಳಲು ತಿಳಿಯದಾದರೂ ಆ ಭಾವನೆಗಳು  ಅವನಲ್ಲಿ ಅಂತಹ ಯಾವುದೇ ಕೆಟ್ಟ ಅಂಶವನ್ನು ನೋಡದಂತೆ ಕಟ್ಟಿಹಾಕಿದ್ದವು. ಆಸ್ಪತ್ರೆಯಲ್ಲಿದ್ದಾಗ ಪ್ರತೀ ದಿನವೂ ಎರಡು ಬಾರಿ ನನ್ನನ್ನು ನೋಡಲು ಬರುತ್ತಿದ್ದ, ಮಾತನಾಡಿಸಿಕೊಂಡು ಹೋಗುತ್ತಿದ್ದ. ನಾನು ಮಲಗಿದ್ದರೆ ಅಮ್ಮನ ಬಳಿ ನನ್ನ ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದ.

ನೃಪತುಂಗ ಹೊರಗಿನ ಜಗತ್ತಿನ ಗುಸುಗುಸು ಗುಮಾನಿಗಳಿಗೂ ತನಗೂ ಯಾವ ಸಂಬಂಧವೂ ಇಲ್ಲದವನಂತೆ ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೂರನೇ ದಿನಕ್ಕೇ ನಮ್ಮ ಮನೆಗೆ ಬಂದು ಭೇಟಿಯಾಗಿದ್ದ. ಮತ್ತೊಮ್ಮೆ ಪ್ರೇಮನಿವೇದನೆ ಮಾಡಿಕೊಂಡುಬಿಟ್ಟ. "ನೀನಿಲ್ಲದೇ ಇರಲು ನಾನು ಬಹಳ ಪ್ರಯತ್ನ ಪಟ್ಟೆನಾದರೂ ಅದು ನನಗೆ ಸಾಧ್ಯವಾಗಿಲ್ಲ, ದಯವಿಟ್ಟು ನನ್ನ ಮೇಲೆ ಕರುಣೆ ತೋರು, ನಿನ್ನನ್ನು ಮದುವೆಯಾಗಿ ನಾನು ಯಾವುದೋ ಆದರ್ಶ ಪಾಲಿಸುತ್ತೇನೆ ಎಂಬಷ್ಟು ಆದರ್ಶವಾದಿ ನಾನಲ್ಲ, ನನ್ನದು ಕೇವಲ ಪ್ರೀತಿಯ ಸ್ವಾರ್ಥ ಅಷ್ಟೇ!" ಇನ್ನಿಲ್ಲದಂತೆ ಬೇಡಿಕೊಂಡ. ಪ್ರೀತಿ ಎಂದರೇ ಹೀಗೇನೋ?  ಆ ಕ್ಷಣದಲ್ಲಿ ಏನೆನ್ನಿಸಿತೋ, ಆ ಒಂದು ದುರ್ಬಲ ಕ್ಷಣದಲ್ಲಿ ಕರಗಿಹೋದೆನೆನಿಸಿದರೂ, ಮನಸ್ಸಿನಲ್ಲಿದದನ್ನು ಪ್ರಾಮಾಣಿಕವಾಗಿಯೇ ಹೇಳಿದೆ, "ಮೊದಲಿನಿಂದಲೂ ನಿನ್ನನ್ನು ನಾನು ಪ್ರೀತಿಸುತ್ತಿದ್ದೆ ಎಂದರೆ ಸುಳ್ಳಾಗಬಹುದೇನೋ, ಆದರೆ ಆ ದಿನ ನೀನು ಪ್ರಪೋಸ್ ಮಾಡಿದಾಗ ಹೇಳಿದಂತೆ ನನಗೆ ನಿನ್ನ ಬಗ್ಗೆ ಒಂದು ಚಿಕ್ಕ ಭಾವನೆಯೂ ಇರಲಿಲ್ಲ ಎಂಬುದೂ ಸುಳ್ಳೇ. ನಾನು ಪ್ರೀತಿ ಪ್ರೇಮದ ಬಗ್ಗೆ ಒಂದು ತಿರಸ್ಕಾರಭರಿತ ನಿರಾಸಕ್ತಿ ತೋರಿಸುತ್ತಿದ್ದುದು ಎಷ್ಟು ಸತ್ಯವೋ, ಅದಕ್ಕೆ ವಿರುದ್ಧವಾದ ಒಂದು ಮೃದುಭಾವನೆ ನನ್ನಲ್ಲಿ ಬೆಳೆಯಲಾರಂಭಿಸಿತ್ತು ಎಂಬುದೂ ಅಷ್ಟೇ ಸತ್ಯ. ಆದರೆ ನೂರು ಪ್ರತಿಶತ ನನ್ನ ಬಗ್ಗೆ ನನಗೇ ನಂಬಿಕೆಯಿಲ್ಲದೇ ಒಪ್ಪಿಕೊಳ್ಳಲು ಇಷ್ಟವಿರದಿದ್ದುದರಿಂದಾಗಿ ತಡೆಹಿಡಿದುಕೊಂಡೆ. ಆದರೆ ಈಗ ನೋಡಿದರೆ ಆಗ ನಾನು ಮಾಡಿದ್ದು ತಪ್ಪಾಯ್ತು ಎನ್ನಿಸುತ್ತದೆ. ಈಗ ನಾನು ನಿನ್ನನ್ನು ಒಪ್ಪಿಕೊಂಡರೆ ಮುಖ ಕುರೂಪವಾದ ಮೇಲೆ ನಾನು ಒಪ್ಪಿಕೊಂಡೆ ಎಂಬ ಅಪವಾದ ಬರುತ್ತದೆ. ಹಾಗೆಂದು ಈಗಲೂ ನಾನು ತಿರಸ್ಕರಿಸಿ ಮುಂದೆ  ಜೀವನಪೂರ್ತಿ ಪಶ್ಚಾತ್ತಾಪ ಪಡಲಾರೆ, ನನಗೇನು ಮಾಡಬೇಕೆಂದು ತಿಳಿಯುತ್ತಿಲ್ಲ.ನಿಜವಾಗಿ ಪ್ರೀತಿಸಿದರೂ ಹೇಳಿಕೊಳ್ಳಲಾಗದ ಸ್ಥಿತಿಗೆ ನೂಕಿದ ವಿಧಿಯನ್ನು ಹಳಿಯುವುದನ್ನು ಬಿಟ್ಟು ಬೇರೇನನ್ನೂ ಮಾಡಲಾರೆನೇನೋ ಈಗ" ಹೇಳಿ ಮುಗಿಸಿರಲಿಲ್ಲ ನಾನು, ನೃಪತುಂಗನಿಗೆ ಸ್ವರ್ಗ ಭೂಮಿಯ ಮೇಲೆಯೇ ಕಂಡಿತ್ತು. ಖುಷಿಯಿಂದ ನಮ್ಮ ಮನೆಯ ಮಹಡಿಯ ಮೇಲೆಯೇ ಚಿಕ್ಕ ಮಕ್ಕಳಂತೆ ಗುಪ್ಪಳಿಸಿ ಹಾರಿದ್ದ.
*****

ವೈದೇಹಿ:
ಅದಾಗಿ ಆರು ವರ್ಷಗಳಾದವು, ನಮ್ಮಿಬ್ಬರ ಮದುವೆಯಾಗಿತ್ತು. ನಾವಿಬ್ಬರೂ ಪ್ರತಿಷ್ಟಿತ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಅವನು ಏನೇ ಎಂದುಕೊಂಡಿರಲಿ, ನೃಪತುಂಗ ನನ್ನ ಬಗ್ಗೆ ಹೀರೋ ಆಗಿದ್ದ. ಆ ಕುರೂಪಿ ಮುಖ ನನಗೇ ಅಸಹ್ಯ ಬರಿಸುತ್ತಿತ್ತು. ಹಾಗಿರುವಾಗ ನನ್ನನ್ನು ಇನ್ನೂ ಪ್ರೀತಿಸುವ ಇವನು ನನಗೆ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಎಷ್ಟೋಸಲ ಭಾವಿಸಿದ್ದೇನೆ, ಇಂದಿಗೂ ಹಾಗೇ ಭಾವಿಸುತ್ತೇನೆ. ಆ ವಿರೂಪವಾದ ಖವನ್ನು ಅವನಿಗೆ ಜೀವನಪೂರ್ತಿ ತೋರಿಸಿಕೊಂಡು ಇರಲು ನನಗೇ ಸಾಧ್ಯವಿರಲಿಲ್ಲವೆನಿಸಿ ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಂತರವೇ ಮದುವೆಯಾಗಲು ಒಪ್ಪಿಕೊಂಡೆ. ಆಸಿಡ್ ಎರಚಿದ ಇಡೀ ಪ್ರಕರಣವನ್ನು ಒಂದು ಕಹಿ ನೆನಪೆಂದು ನಾನು ಮರೆತಿದ್ದೇನೆ, ಮರೆಯಲು ಪ್ರಯತ್ನಿಸುತ್ತಿದ್ದೇನೆ, ಆ ಘಟನೆಯ ಬಗ್ಗೆ  ನನ್ನಷ್ಟೇ ಅವನೂ ನೊಂದುಕೊಂಡಿದ್ದಾನೆ, ನೊಂದುಕೊಳ್ಳುತ್ತಾನೆ. ಆ ವಿಚಾರ ಬಂದಾಗಲೆಲ್ಲ ನನ್ನಷ್ಟೇ ಅವನೂ ಆ ವಿಷಯವನ್ನು ಬದಲಾಯಿಸುತ್ತೇವೆ.

ಹಾಗೇ ಒಂದು ಭಾನುವಾರದ ದಿನ ಬೆಳಿಗ್ಗೆ ಪೇಪರ್ ಓದುತ್ತಿದ್ದಾಗ, ನನ್ನ ನೆಚ್ಚಿನ ಮೂರನೇ ಪುಟದಲ್ಲಿದ್ದ ಒಂದು ಚಿಕ್ಕ ಸುದ್ದಿ ಗಮನ ಸೆಳೆದಿತ್ತು . ಪ್ರಖ್ಯಾತ ಇಂಜಿನಿಯರಿಂಗ್ ಕಾಲೇಜಿನ ವಿಧ್ಯಾರ್ಥಿಯೊಬ್ಬ ಅವನು ಪ್ರೀತಿಸಿದ್ದ(?)  ಹುಡುಗಿ ಅವನ ಪ್ರೀತಿಯನ್ನು ಒಪ್ಪದಾದಾಗ ತನ್ನದೇ ಒಂದಿಷ್ಟು ಜನ ಗೆಳೆಯರಿಂದ ಅವಳನ್ನು ಬಲಾತ್ಕರಿಸಿ ನಂತರ ದೊಡ್ಡ ಹೀರೋನ ತರಹ ಅವಳನ್ನು ಉದ್ಧಾರ ಮಾಡಿದವರ ರೀತಿ ಮದುವೆಯಾಗಿದ್ದನಂತೆ, "ಏನು ಕಾಲ ಬಂತಪ್ಪಾ, ಜನ ಪ್ರೀತಿ ಪ್ರ‍ೇಮವನ್ನು ಎಷ್ಟು ಸಾಧ್ಯವೋ ಅಷ್ಟು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಈ ದಿನಗಳಲ್ಲಿ" ಎಂದು ಸ್ವಗತಿಸಿ ನೃಪತುಂಗನನ್ನು ಎಬ್ಬಿಸಲು ಹೋದೆ. ರಜೆಯ ದಿನದಂದು ಇವನನ್ನು ಎಬ್ಬಿಸುವುದೆಂದರೆ ತಲೆಬಿಸಿಯೇ! ಮಧ್ಯಾಹ್ನದ ಲಂಚಿಗೆ ಸೇರೋಣ ಎಂದು ಹೇಳಿದ್ದ ಇಂಜಿನಿಯರಿಂಗ್ ಗೆಳೆಯರ ಕರೆಯನ್ನು ನೆನಪಿಸಿ ಆ ಹೆಳೆಯಲ್ಲಿಯೇ ಎಬ್ಬಿಸಿದರೆ ಹತ್ತು ನಿಮಿಷದಲ್ಲಿ ಏಳುತ್ತೇನೆ ಎಂಬ ಉತ್ತರ. ಹಾಗೇ ತನ್ನ ಹಾಸಿಗೆ ಹೊದಿಕೆಗಳನ್ನು ಮಡಿಚಿಟ್ಟು ಬರುತ್ತಿರಬೇಕಾದರೆ ಮತ್ತೊಮ್ಮೆ ಅದೇ ಸುದ್ದಿ ಕಣ್ಣಿಗೆ ಬಿದ್ದು ಘಕ್ಕನೆ ನಿಂತು ಬಿಟ್ಟೆ. ಯಾವುದೋ ಒಂದು ಘಳಿಗೆಯಲ್ಲಿ ತನ್ನ ಜೀವನದಲ್ಲಿ ಆಗಿದ್ದೂ ಇದೇನಾ ಎನ್ನಿಸಿತು. ಆದರೆ ಮಲಗಿದ್ದ ನೃಪತುಂಗನ ಮುಖವನ್ನು ಒಮ್ಮೆ ನೋಡಿದ ತಕ್ಷಣ ಆ ಎಲ್ಲಾ ಸಂದೇಹಗಳೂ ನಿಮಿಷಾರ್ಧದಲ್ಲಿ ಮರೆಯಾದವು. ಹಾಗೊಂದು ಮುಗ್ಧವಾದ ಮುಖ ಇರಬೇಕೆಂದರೆ ನಿಜವಾಗಿಯೂ ಅಮಾಯಕನಾಗಿರಬೇಕು; ಇಲ್ಲವೆಂದರೆ ಜೀವನವೆಲ್ಲಕ್ಕೂ ಸಾಕಾಗುವಷ್ಟು ನಾಟಕ ಮಾಡಲು ತಯಾರಾಗಿರಬೇಕು. ಆದರೆ ದಾಂಪತ್ಯದ ಈ ನಾಲ್ಕು ವರ್ಷಗಳಲ್ಲಿ ಒಮ್ಮೆಯೂ ಈತನು ನಾಟಕ ಮಾಡುತ್ತಿದ್ದಾನೆ ಎಂದು ನನಗೆ ಎನಿಸಿಲ್ಲ, ಹೋಗಲಿ ನಾಟಕ ಆಡಬಲ್ಲ ಎಂದೇ ಎನಿಸಿಲ್ಲ.

ಈ ಆರು ವರ್ಷಗಳಲ್ಲಿ ಒಂದು ಬಾರಿಯೂ ನೃಪತುಂಗ ನನ್ನ ಪ್ಲಾಸ್ಟಿಕ್ ಸರ್ಜರಿ ಆದರೂ ಸಂಪೂರ್ಣವಾಗಿ ಮೊದಲಿನಂತಾಗಿರದ ಮುಖದ ಬಗ್ಗೆ ಮಾತನಾಡಿಲ್ಲ. ಮದುವೆಯ ಮೊದಲು ನಡೆದ ಘಟನೆಗಳ ಬಗ್ಗೆ ತಪ್ಪಿಯೂ ಮಾತೆತ್ತಿಲ್ಲ, ನನ್ನಲ್ಲಿ  ಸ್ವಲ್ಪವೂ ಕೀಳರಿಮೆ ಬರುವಂತೆ ನಡೆದುಕೊಂಡಿಲ್ಲ. ನಾನು ಸಂಪೂರ್ಣವಾಗಿ ಸರಿಯಾಗಿದ್ದರೆ ನನ್ನನ್ನು ಹೇಗೆ ನಡೆಸಿಕೊಳ್ಳುತ್ತಿದ್ದನೋ ಹಾಗೆಯೇ ನಡೆಸಿಕೊಂಡಿದ್ದಾನೆ. ನನಗೂ ಆ ಘಟನೆಗಳೇನೂ ಸವಿನೆನಪಿನದ್ದಾಗದೇ
ಇದ್ದಿದ್ದರಿಂದ ನಾನೂ ಅದನ್ನು ಬಹುತೇಕ ಮರೆತಂತೆಯೇ ಬದುಕಿದ್ದೆ, ದಿನವೂ ಅದರ ಗುರುತುಗಳನ್ನು ನನ್ನ ಮುಖದ ಮೇಲೆಯೇ ನೋಡುತ್ತ ಇದ್ದರೂ. ನನಗೆ ನಿಜವಾಗಿಯೂ ಹೆಮ್ಮೆಯಿದೆ ಇವನು ನಡೆದುಕೊಂಡಿರುವ ರೀತಿಯ ಬಗ್ಗೆ, ನನ್ನನ್ನು ನಡೆಸಿಕೊಂಡಿರುವ ರೀತಿಯ ಬಗ್ಗೆ. ಆದರೆ ನನಗೇನು ಗೊತ್ತಿತ್ತು ಅದೇ ದಿನ ನನ್ನ ನಂಬಿಕೆಯ ಸೌಧವೇ ಬುಡಮೇಲಾಗುತ್ತದೆ ಎಂದು.
*****

ವೈದೇಹಿ:
ಅಂದು ಮಧ್ಯಾಹ್ನದ ಊಟಕ್ಕೆ ಮುಂಚೆ ಲಾಲ್ ಬಾಗಿನಲ್ಲಿ ಭೇಟಿಯಾಗುವುದು, ಮುಂದೆ ಹಾಗೆಯೇ ಎಲ್ಲಾದರೂ ಜಯನಗರದಲ್ಲಿ ಊಟ ಮಾಡುವುದೆಂಬ ಪ್ಲಾನಿತ್ತು. ಪ್ಲಾನು ನಮ್ಮ ಕ್ಲಾಸಿನ ಮತ್ತೊಂದು ಜೋಡಿಯಾದ ವೈಷ್ಣವಿ ಮತ್ತು ಪ್ರದ್ಯುಮ್ನರದ್ದು.ಇಂಜಿನಿಯರಿಂಗಿನಲ್ಲಿಯೂ ಅದು ಮುಗಿದ ನಂತರವೂ ನಮ್ಮ ಕ್ಲಾಸಿನವರ ಯಾವುದೇ ಚಟುವಟಿಕೆಯಾದರೂ ಆಗುವುದು ಅವರಿಬ್ಬರ ಮುಂದಾಳತ್ವದಲ್ಲಿಯೇ. ನಾವಿಬ್ಬರೂ ಸಮಯಕ್ಕಿಂತ ಮೊದಲೇ ಹೋಗಿ ಮುಟ್ಟಿದ್ದೆವು. ಗಾಜಿನ ಮನೆಯ ಪಕ್ಕದ ಉದ್ಯಾನವನದ ಒಂದು ವಿಶಾಲ ಮರದ ಕೆಳಗೆ ಕುಳಿತು ಉಳಿದವರ ಆಗಮನವನ್ನು ಕಾಯುತ್ತಿದ್ದ ನಮ್ಮಿಬ್ಬರ ಮನಸ್ಸಿನಲ್ಲಿಯೂ ಹಳೆಯ ನೆನಪುಗಳ ಕುಣಿತ, ಕೆಲವು ಸಿಹಿನೆನಪುಗಳ, ಹಲವು ಕಹಿನೆನಪುಗಳ ತಕಧಿಮಿತ. ಅದೇ ಗುಂಗಿನಲ್ಲಿ ನಾನು ಸ್ವಲ್ಪ ಆ ಭಾವುಕನಾಗಿ ಮೈಮರೆತುಬಿಟ್ಟೆನೆಂದು ಕಾಣುತ್ತದೆ. ನಾನು ಈ ಜಗತ್ತಿಗೆ ವಾಪಸ್ ಬಂದಾಗ ನನ್ನ ಸುತ್ತಲೂ ಮಿತ್ರರು ಸುತ್ತುವರೆದಿದ್ದರು. ಹಸನ್ಮುಖಿ ಚಾರುಲತೆ "ನೀನಿನ್ನೂ ಸ್ವಲ್ಪಾನೂ ಬದಲಾಗಿಲ್ಲ ಕಣೇ, ಅದೇ ರೀತಿ ಹಾಡುಹಗಲಲ್ಲೇ ಮೈಮರೆಯುತ್ತೀಯಾ, ಆಗೇನೂ ನೃಪತುಂಗನ ಧ್ಯಾನದಲ್ಲಿ ಇರುತ್ತಿದ್ದಿ ಎಂದು ಭಾವಿಸಿದರೆ ಈಗ ಏನು ಕಥೆ" ಎಂದು ಕಣ್ಣು ಮಿಟುಕಿಸಿ ನಗುತ್ತಿದ್ದಳು."ಮದುವೆಯಾದ ಮೇಲೆ ಗಂಡನ ಧ್ಯಾನದಲ್ಲಿ ಇರಬಾರದೆಂದೇನೂ ಇಲ್ಲವಲ್ಲ" ಎಂದೇನೋ ಹೇಳಿದೆನಾದರೂ ನೃಪತುಂಗ ಅಲ್ಲಿ ಇಲ್ಲದುದನ್ನು ಗಮನಿಸಿದ್ದೆ. ಹೀಗೆಯೇ ಮತ್ತೆ ಹದಿನೈದು ನಿಮಿಷಗಳು ಕಳೆಯುವಷ್ಟರಲ್ಲಿ ಬರಬೇಕಿದ್ದ ಎಲ್ಲರೂ ಬಂದಾಗಿತ್ತು. ಮತ್ತೆ ಕಾಲು ಗಂಟೆಯಾದರೂ ನೃಪತುಂಗನ ಪತ್ತೆಯಿಲ್ಲ. ನಾನು ಆ ಮಂಪರಿನಲ್ಲಿರುವಾಗ ಇವನೆಲ್ಲಿಗೆ ಹೋದ ಎಂದು ವಿಚಾರಿಸಿದರೆ ವಿನಯಕುಮಾರ್ ಶುಕ್ಲಾ ಜೊತೆಗೆ ಇವನೆಲ್ಲೋ ಗಾಜಿನ ಮನೆಯ ಹಿಂಭಾಗಕ್ಕೆ ಮಾತನಾಡುತ್ತಾ ಹೋದ ಎಂದು ವೈಷ್ಣವಿ ಹೇಳಿದಳು. ನನಗೋ ಈ ವಿನಯಕುಮಾರ್ ಶುಕ್ಲಾನ ಬಗ್ಗೆ ಸ್ವಲ್ಪವೂ ಒಳ್ಳೆಯ ಅಭಿಪ್ರಾಯವಿಲ್ಲ, ದೊಡ್ಡ ಫ಼್ಲರ್ಟು, ಕ್ಲಾಸಿನಲ್ಲಿಯೂ ಗೂಂಡಾ ತರ, ಕಂಡ ಕಂಡ ಹುಡುಗಿಯರ ಹಿಂದೆ ಬಿದ್ದಿರುತ್ತಿದ್ದ. ಅದರಲ್ಲೂ ನಾನೆಂದರೆ ಸ್ವಲ್ಪ ಹೆಚ್ಚೇ ಹುಚ್ಚು. ಒಮ್ಮೆ ಪ್ರಪೋಸ್ ಕೂಡ ಮಾಡಿಬಿಟ್ಟಿದ್ದ. ನಾನು ನಿಯತ್ತಾಗಿ ತಳ್ಳಿಹಾಕಿದ್ದೆ. ಆದರೂ ಪದೇ ಪದೇ ಹಿಂದೆ ಬೀಳುತ್ತಿದ್ದ. ನೃಪತುಂಗನಂತೆಯೇ ಅನಿಸಿದರೂ ನೃಪತುಂಗನ ಕಣ್ಣುಗಳಲ್ಲಿದ್ದ ಪ್ರಾಮಣಿಕತೆಗೂ, ಇವನ ಕಣ್ಣುಗಳಲ್ಲಿದ್ದ ವಾಂಛೆಗೂ ವ್ಯತ್ಯಾಸ ಸ್ಪಷ್ಟವಿತ್ತು. ಆದರೂ ನೃಪತುಂಗನನ್ನು ನಾನು ತಿರಸ್ಕರಿಸಿದರೂ ತಿರುಗಿ ಮದುವೆಯಾದೆ ಎಂಬುದು ಈಗ ಇತಿಹಾಸ. ಅದೆಲ್ಲಾ ಇರಲಿ, ನಾನು ನೃಪತುಂಗನನ್ನು ಮದುವೆಯಾಗಿದ್ದನ್ನು ತಿಳಿದರೆ ಇವನಿಗೇನಾದರೂ ಮಾಡಲೂ ಹೇಸುವವನಲ್ಲ ಆತ ಎನಿಸಿತ್ತು (ಈ ಭಾವನೆ ನನ್ನ ಮನಸ್ಸಿನಲ್ಲಿ ವಿನಯನ ಬಗ್ಗೆ ಇದ್ದ ಭಯದ ಉತ್ಪ್ರೇಕ್ಷೆಯ ಫಲ ಎಂದು ಈಗ ಅನಿಸುವುದಾದರೂ ಆ ಕ್ಷಣದಲ್ಲಿ ಹಾಗೆ ಎನಿಸಿರಲಿಲ್ಲ.) ದಿಗಿಲಾಗಿ ವೈಷ್ಣವಿ ತೋರಿದ ಕಡೆ ಓಡಿದೆ.

ಹಾಗೆಯೇ ಗಾಜಿನ ಮನೆಯ ಹಿಂದಕ್ಕೆ ಹೋದರೆ ವಿನಯ್ ಮತ್ತು ನೃಪತುಂಗ ಇಬ್ಬರೂ ನಾನು ಬರುತ್ತಿದ್ದ ದಿಕ್ಕಿಗೆ ಬೆನ್ನು ತಿರುಗಿಸಿಕೊಂಡು ಏನನ್ನೋ ಮಾತನಾಡುತ್ತಿದ್ದರು. ನೃಪತುಂಗ ಯಾವಾಗಲೂ ನನ್ನ ಬಳಿ ವಿನಯನ ಬಗ್ಗೆ ಶತ್ರುವಿನಂತೆ ಮಾತನಾಡುತ್ತಿದ್ದನಾದ್ದರಿಂದ, ಇವರುಬ್ಬರು ಹೀಗೆ ಮಾತನಾಡುವುದು ನನಗೂ ಆಶ್ಚರ್ಯವಾದಂತಾಗಿ ಏನು ಮಾತನಾಡುತ್ತಿರಬಹುದೆಂಬ ಕೆಟ್ಟ ಕುತೂಹಲದಲ್ಲಿ ಅವರಿಗೆ ತಿಳಿಯದಂತೆ ಹಿಂದೆ ಹೋಗಿ ನಿಂತೆ. ಇಬ್ಬರೂ  ಏನೂ ಹಿತವಾಗಿ ಮಾತನಾಡುತ್ತಿರಲಿಲ್ಲವಾದರೂ ಅವರಿಬ್ಬರೂ ಜಗಳವಾಡುತ್ತಿರಲಿಲ್ಲ ಎಂಬುದು ದೂರದಿಂದಲೇ ವಿಹಿತವಾಗುತ್ತಿತ್ತು. ದೂರದಿಂದ ನೋಡಿದರೆ ನೃಪತುಂಗ ಏನನ್ನೋ ಬೇಡಿಕೊಳ್ಳುತ್ತಿದ್ದಂತೆ ಕಾಣುತ್ತಿತ್ತು. ಅಲ್ಲಿಯೇ ಮುಂದೆ ಗೋಡೆಯ ಮರೆಯಲ್ಲಿ ನಿಂತರೆ ನೃಪತುಂಗನ ಮಾತುಗಳು ಸ್ಪಷ್ಟವಾಗೇ ಕೇಳುತ್ತಿತ್ತು,

ನೃಪತುಂಗ "ಇದಕ್ಕೆ ಕೊನೆಯೆಲ್ಲಿ ವಿನಯ್?  ಹೀಗೇ ಎಷ್ಟು ಸಲವಾಯ್ತು? ಪ್ರತೀ ಸಲ ನೀನು ಬಂದಾಗಲೂ ನಿನ್ನ ಕೈತುಂಬ ದುಡ್ಡು ಕೊಟ್ಟು ಕಳುಹಿಸಿದ್ದೇನೆ, ಮತ್ತೆ ನೀನು ಬರುತ್ತೀಯಾ ನನ್ನ ಕರಾಳ ಮುಖವನ್ನು ನನಗೇ ನೆನಪಿಸುತ್ತಾ. ಇದೇ ಒಂದು ಬ್ಲ್ಯಾಕ್ ಮೇಲಿಂದ ಎಷ್ಟು ಬಾರಿ ನನ್ನ ಜೀವವನ್ನು ಹಿಂಡಿದ್ದೀಯಾ? ನಿನಗೆ ಎಷ್ಟು ಸಲ ಹೇಳಿಲ್ಲ ನಾನು, ಏನು ಬೇಕಾದರೂ ಕೇಳು ಕೊಟ್ಟು ಬಿಡುತ್ತೇನೆ, ಒಂದೇ ಸಲಕ್ಕೆ, ನನ್ನ ಸಂಪೂರ್ಣ ಆಸ್ತಿಯನ್ನು ಬೇಕಾದರೂ ಎಂದು. ಪದೇ ಪದೇ ಹೀಗೆ ಬಂದು ಅರೆಮಾಗಿದ ಗಾಯಗಳನ್ನು ಮತ್ತೆ ಕೆದಕುವುದೇಕೆ? ಅಂದಿನ ಆ ಆಸಿಡ್ ಪ್ರಕರಣಕ್ಕೆ ನಾನು ಎಷ್ಟು ಪಶ್ಚಾತ್ತಾಪ ಪಟ್ಟಿರುವೆನೋ ನನಗೇ ಗೊತ್ತು. ಅದಕ್ಕೋಸ್ಕರ ಯಾವುದೇ ಶಿಕ್ಷೆಯನ್ನು ಅನುಭವಿಸಲು ನಾನು ಸಿದ್ಧ, ಅವಳನ್ನು ಕಳೆದುಕೊಳ್ಳುವುದೊಂದನ್ನು ಬಿಟ್ಟು. ನೀನಂದು ನೋಡಿದ್ದರೂ ನೋಡಿರದಿದ್ದರೂ ಅದು ನನ್ನ ಮನವನ್ನು ಖಂಡಿತವಾಗಿಯೂ ಕೊರೆಯುತ್ತಿತ್ತು, ಕೊರೆಯುತ್ತಿದೆ. ಆದರೆ ಕಾಲಕ್ರಮೇಣ ಮರೆಯುತ್ತಿದ್ದೆನೇನೋ, ಆದರೆ ನೀನು ಅದಕ್ಕೆ ಅವಕಾಶ ಕೊಟ್ಟೇ ಇಲ್ಲ. ಈ ಆರು ವರ್ಷಗಳಲ್ಲಿ ನನಗೆ ಎಷ್ಟು ಹಿಂಸೆ ಕೊಟ್ಟಿದ್ದೀಯಾ ಎಂಬ ಅಂದಾಜೂ ನಿನಗೆ ಇರಲಿಕ್ಕಿಲ್ಲ." ಎಂದ.

ವಿನಯ್ ಸಿನಿಮಾಗಳಲ್ಲಿ ತೋರಿಸುವ ರೌಡಿಗಳ ಅಟ್ಟಹಾಸದ ನಗೆಯನ್ನು ಒಮ್ಮೆ ನಕ್ಕು"ನಾನು ಬಯಸಿದ್ದೂ ಅದನ್ನೇ, ನಾನೂಒ ಅವಳನ್ನು ಪ್ರೀತಿಸಿದ್ದೆ ಎಂಬುದು ಇಷ್ಟು ಬೇಗ ನಿನಗೆ ಮರೆತು ಹೋಯಿತೇ? ನೀನಿಲ್ಲದಿದ್ದರೆ ಎಂದಿಗಾದರೂ ಅವಳು ನನ್ನನ್ನು ಒಪ್ಪುತ್ತಿದ್ದಳು. ಅಂದು ಕಾಲೇಜು ಬಿಟ್ಟು ಮನೆಗೆ ಹೋಗುವಾಗ ನೀನು ಅವಳನ್ನು ಹಿಂಬಾಲಿಸಿ ಹೋದೆ, ನಾನು ನಿನ್ನನ್ನು ಹಿಂಬಾಲಿಸಿ ಬಂದೆ, ಆ ನಿರ್ಜನ ನೇಕಾರರ ಓಣಿಯಲ್ಲಿ ನೀನು ಅವಳಿಗೆ ಪರಿಚಯ ಹತ್ತದಂತೆ ಅವಳ ಮುಖಕ್ಕೆ ಆಸಿಡ್ ಹಾಕಿದೆ. ನಿನ್ನನ್ನು ಕೊಂದುಬಿಡೋಣ ಎನ್ನಿಸಿತ್ತು. ಆದರೂ ನಿನ್ನ ಕೈಯ್ಯಲ್ಲಿ ಆಯುಧ ಇದ್ದಿದ್ದರಿಂದ ಸುಮ್ಮನಾದೆ ಆ ದಿನ. ನೀನು ಅವಳನ್ನು ಮದುವೆಯಾಗುತ್ತೀನಿ ಎಂದಾಗ ಎಲ್ಲರ ಕಣ್ಣಿನಲ್ಲೂ ನೀನು ಮತ್ತೊಂದಿಷ್ಟು ಮೇಲಕ್ಕೇರಿದೆ. ನಿಜವೆಂದರೆ ಆ ಸಮಯದಲ್ಲಿ ನಿನ್ನ ಬಗ್ಗೆ ವಿಪರೀತ ಹೇಸಿಕೆ ದ್ವೇಷ ಹುಟ್ಟಿತ್ತು. ಆದರೂ ನನಗೆ ಗೊತ್ತಿತ್ತು, ನೀನು ನಿನ್ನೊಳಗೆ ಎಷ್ಟು ಕೊರಗುತ್ತಿ ಎಂದು,ಆ ದಿನ ಮಾಡಿದ ಕಾರ್ಯಕ್ಕೆಪರಿತಪಿಸುತ್ತೀ ಎಂದು. ನನಗೆ ನಿನ್ನ ಮೇಲೆ ಸೇಡು ತೀರಿಸಿಕೊಳ್ಳಲು ಇದ್ದ ಅವಕಾಶವೂ ಅದೊಂದೇ. ನಿನ್ನ ಆ ಕೃತ್ಯಕ್ಕೆ ಇಡೀ ಜಗತ್ತಿನಲ್ಲಿ ಇದಕ್ಕೆ ನಾನೊಬ್ಬನೇ ಸಾಕ್ಷಿ. ನೀನು ಹೀಗೇ ಈ ನೋವಿನಲ್ಲಿ ತೊಳಲಾಡಬೇಕು, ಇರುವ ಯಾವುದೇ ಸುಖವನ್ನು ಅನುಭವಿಸಲು ಶಕ್ಯವಾಗಬಾರದು ಅದನ್ನು ನೋಡಿ ನಾನು ಖುಷಿಪಡಬೇಕು" ಎಂದು ವಿಜಯದ ನಗೆಯನ್ನುಮತ್ತೊಮ್ಮೆ ಬೀರಿದ.

ನೃಪತುಂಗ ಮತ್ತೂ ಸೋತ ದನಿಯಲ್ಲಿ "ನಾನು ಆಯ್ದುಕೊಂಡ ಮಾರ್ಗ ಕೆಟ್ಟದ್ದಿರಬಹುದು, ಅದು ಅವಳಿಗೆ ನೋವನ್ನು ಕೊಟ್ಟಿರಬಹುದು, ಅವಳ ಸೌಂದರ್ಯವನ್ನು ಕಿತ್ತುಕೊಂಡಿರಬಹುದು, ಆದರೆ ಅವಳ ಬಗೆಗಿನ ನನ್ನ ಎಲ್ಲಾ ಭಾವನೆಗಳೂ ಸತ್ಯವೇ. ನಾನಂತೂ ಅವಳಿಗಾಗಿ ಏನನ್ನು ಬೇಕಾದರೂ ಮಾಡಲು ತಯಾರಿದ್ದೆ. ಪ್ರೀತಿಯ ಹುಚ್ಚು ಎನ್ನುವಿಯೋ ಅಥವಾ ಮತ್ತೇನೋ ನಾನು ವೈದೇಹಿಯ ಮೇಲೆಯೇ ಆಸಿಡ್ ಹಾಕಲೂ ತಯಾರಾದೆ. ಆದರೆ ಅಂದು ನಾನು ಮಾಡಿದ ಕಾರ್ಯದ ಬಗ್ಗೆ ನನಗೆ ಇಂದಿಗೂ ನೋವಿದೆ, ಪಶ್ಚಾತ್ತಾಪವಿದೆ, ಹೊಡೆದುಕೊಳ್ಳುವಷ್ಟು ಸಿಟ್ಟು ಇದೆ. ಆದರೆ ಅದರಿಂದ ನಾನು ಮಾಡಿರುವ ಘೋರ ಸರಿಯಾಗುವುದಿಲ್ಲವಾದ್ದರಿಂದ ಅದನ್ನು ಮರೆಯಹೋಗುತ್ತೇನೆ. ಅಂದಿನಿಂದ ಇಂದಿನವರೆಗೆ ನೋವಿನ  ಎಳೆಯೂ ತಾಕದಂತೆ ಅವಳನ್ನು ನೋಡಿಕೊಂಡಿದ್ದೇನೆ, ಅವಳಿಗೆ ಆ ನೆನಪುಗಳು ಸ್ವಲ್ಪವೂ ತಾಕದಂತೆ ಕಂಡುಕೊಂಡಿದ್ದೇನೆ." ಇನ್ನೂ ಏನೇನೋ ಹೇಳುತ್ತಿದ್ದ, ನನಗೆ ಭೂಮಿ ಬಾಯ್ತೆರೆಯಬಾರದೇ ಎನ್ನಿಸಿತು! ಮನುಷ್ಯರು ಇಷ್ಟೆಲ್ಲ ಕೆಟ್ಟವರಾಗಿರುತ್ತಾರಾ ಎಂದು, ಅದೂ ನನ್ನ ನೃಪತುಂಗನಂತಹವರೂ. ಹೇಗೋ ಸಾವರಿಸಿಕೊಂಡು ಉಳಿದ ಗೆಳೆಯರಿದ್ದ ಕಡೆಗೆ ಬಂದೆನಾದರೂ ಮನಸ್ಸು ಕಳೆದು ಹೋಗಿತ್ತು, ನನ್ನ ಎಲ್ಲಾ ಕಟ್ಟುಪಾಡುಗಳನ್ನು ಮರೆತು ಶೋಕಃತಪ್ತವಾಗಿತ್ತು. ಅದನ್ನು ಮುಚ್ಚಿಡುವ ನನ್ನೆಲ್ಲ ಪ್ರಯತ್ನಗಳೂ ವಿಫಲವಾಗಿದ್ದವು.
*****

ವೈದೇಹಿ:
ಚಿತ್ರಕೃಪೆ: ಅಂತರ್ಜಾಲ
ಅದಾಗಿ ಎರಡು ವಾರಗಳಾಗಿವೆ. ಮತ್ತೊಂದು ಭಾನುವಾರ ಬಂದಿದೆ. ನನ್ನ ಮನಸ್ಸು ನನಗೇ ಗೊತ್ತಿಲ್ಲದಷ್ಟು ಗೊಂದಲಗಳ ಗೂಡಾಗಿದೆ. ಯಾರದ್ದು ಸರಿ ಯಾರದ್ದು ತಪ್ಪು ಎಂಬ ವಿವೇಚನೆಯಲ್ಲಿ ಕಳೆದು ಹೋಗಿದ್ದೇನೆ. ಅದಕ್ಕಿಂತ ಹೆಚ್ಚಾಗಿ ಯಾರದ್ದು ಕಡಿಮೆ ತಪ್ಪು,ಯಾರದ್ದು ಹೆಚ್ಚು ಎಂಬುದರ ಬಗ್ಗೆ. ನಾನು ಒಪ್ಪಿಕೊಳ್ಳಲಿಲ್ಲ ಎಂಬ ಒಂದೇ ಕಾರಣಕ್ಕೆ ಆಸಿಡ್ ಹಾಕುವಷ್ಟು ಹೀನತೆಗೆ ಅವನು ಕೈಹಾಕಿದನೇ? ಹಾಗೆ ಮಾಡಿದರೆ ನಾನು ದುರ್ಬಲಳಾಗಿ ಅವನ ’ಹೊಂಚಿ’ಗೆ ಬೀಳಬಹುದೆಂಬ ಲೆಕ್ಕಾಚಾರವನ್ನು ನಾನು ನಿಜ ಮಾಡಿದೆನೇ? ಹಾಗೆ ನಾನು ಯೋಚಿಸಬಹುದೆಂಬಷ್ಟು ಕೀಳಾಗಿ ನನ್ನನ್ನು ಭಾವಿಸಿದನೇ? ಪ್ರೀತಿ ಎಂದರೆ ಇದೇನಾ? ಯಾವುದೇ ಬೆಲೆಗಾದರೂ ಪ್ರೀತಿ ಬೇಕು ಎನ್ನಿಸುತ್ತದೆಯೇ? ಅದಕ್ಕಾಗಿ ಪ್ರೀತಿಸಿದವಳಿಗೇ ಜೀವನಪರ್ಯಂತ ಶಿಕ್ಷೆಯಾದರೂ ಸರಿಯೇ? ಪ್ರೀತಿ ಎಂದರೆ ಪ್ರಾಮಣಿಕತೆ, ಸತ್ಯ, ನಿಯತ್ತುಗಳಿಗೆಲ್ಲ ಮೀರಿದ್ದೇ? ಹಾಗೇ ಎಂದುಕೊಂಡರೂ ಕೊನೆಪಕ್ಷ ಪ್ರೀತಿಸಿದವಳ ಬಳಿಯಾದರೂ ಪ್ರಾಮಾಣಿಕವಾಗಿರಬೇಕಲ್ಲವೇ? ಇದೇ ಪ್ರೀತಿಯ ಹೆಸರಿನಲ್ಲಿ ಏನನ್ನಾದರೂ ಕ್ಷಮಿಸಬಹುದೇ? ತನಗೆ ಬೇಕೆನಿಸಿದ್ದನ್ನು ದಕ್ಕಿಸಿಕೊಳ್ಳಲು ಏನನ್ನು ಬೇಕಾದರೂ ಮಾಡುವುದು ಬಾಲಿಶವಾಗಿ, ’ಜಂಗಲ್ ರಾಜ್’ ನ ನ್ಯಾಯವಾಗಿ ಕಾಣುವುದಿಲ್ಲವೇ? ಕ್ರಿಶ್ಚಿಯನ್ನರು ಹೇಳುವ ಹಾಗೆ ಎಲ್ಲಾ ತಪ್ಪುಗಳಿಗೂ ಪಶ್ಚಾತ್ತಾಪದಿಂದ ಕ್ಷಮೆ ಸಿಗುತ್ತದೆಯೇ? ಅದೊಂದನ್ನು ಕ್ಷಮಿಸಿಬಿಟ್ಟರೆ ಮತ್ತಿಡೀ ಜೀವನ ಪ್ರೀತಿಸಲು ಸಾಕಾಗುವಷ್ಟು ಕಾರಣಗಳನ್ನು ಅವನು ಈ ಆರು ವರ್ಷಗಳಲ್ಲಿ ಕೊಟ್ಟಿಲ್ಲವೇ? ಅದು ಹಾಗೆ ಕ್ಷಮಿಸಲಾಗದ ತಪ್ಪೇ? ನಾನೆಂದೂ ಯಾವುದೇ ತಪ್ಪನ್ನು ಮಾಡಿಲ್ಲವೇ? ಒಂದು ಬಾರಿಯಾದರೂ ನನಗಿಂತ ಅದೃಷ್ಟವಂತಳು ಯಾರಾದರೂ ಇರಬಹುದೆಂಬ ಯೋಚನೆಯನ್ನಾದರೂ ನನಗೆ ಬರಲು ನೃಪತುಂಗ ಬಿಟ್ಟಿದ್ದಾನೆಯೇ? ಅವನು ಮಾಡಿದ್ದು ತಪ್ಪು ಎಂಬುದು ವಿದಿತವಾದರೂ ಅದಕ್ಕೆ ಯಾವ ಶಿಕ್ಷೆ ನ್ಯಾಯವಾದದ್ದು ಎಂಬುದರ ಬಗ್ಗೆ ತಲೆ ಹರಿಯಲಾರದಾಯಿತು. ಅಕ್ಷಮ್ಯವಾದ ತಪ್ಪೇ ಅವನು ಮಾಡಿದ್ದು, ಅಥವಾ ಕ್ಷಮೆ ಎಂಬ ದೊಡ್ಡ ಶಬ್ದವನ್ನು ನಾನು ಸುಮ್ಮನೇ ಈ ವಿಷಯಕ್ಕೆ ಗಂಟು ಹಾಕುತ್ತಿದ್ದೇನೆಯೇ? ಯೋಚಿಸಿದಷ್ಟೂ ಕಗ್ಗಂಟಾಗುತ್ತ ಹೋಯಿತು ವಿಚಾರಧಾರೆ. ಆದರೂ ಅದು ಎಂತಹ ಅನಿವಾರ್ಯವಾದ ಪ್ರೀತಿಯೇ ಆದರೂ ಅವನು ಆಯ್ದುಕೊಂಡ ಮಾರ್ಗ ಹೀನವೇ, ನಾನೇ ಅದರಿಂದ ತೊಂದರೆಯನ್ನು ಅನುಭವಿಸಿದೆನೆಂಬುದನ್ನು ಕಡೆಗಣಿಸಿದರೂ ಅವನು ಮಾಡಿದ್ದನ್ನು ಪ್ರೀತಿಯ ಭಾಗ ಎಂದು ಪರಿಗಣಿಸಲು ನನ್ನಿಂದ ಸಾಧ್ಯವಿಲ್ಲವಾಯಿತು. ಕೆಲವೊಮ್ಮೆ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳ ಬಗ್ಗೆ ನಾವು ಹಿಂತಿರುಗಿ ನೋಡಿದರೆ ನಮ್ಮ ಜೀವನದಲ್ಲಿ ನಡೆದ ಎಷ್ಟೋ ಘಟನೆಗಳಲ್ಲಿ ನಾವು ಸುಮ್ಮನೇ ಮೋಸಹೋದೆವು ಎಂದು ಎನ್ನಿಸುತ್ತಹೋಗುತ್ತದೆ. ಆಂತಹದೇ  ಭಾವನೆ ಮನದಲ್ಲಿ ಮೂಡಿನಿಂತು ಡೈವೋರ್ಸೇ ಸರಿ ಎನ್ನಿಸಿ ನಿರ್ಧಾರವೊಂದನ್ನು ಮನದಲ್ಲಿ ಮೂಡಿಸಿಕೊಂಡು ಕುಳಿತೆ.
*****

ವೈದೇಹಿ:
ಅದಾಗಿ ಮತ್ತಾರು ವರ್ಷಗಳು ಕಳೆದಿವೆ, ಅದು ಮತ್ತೊಂದು ಭಾನುವಾರ. ನಾನು ಅಂದೂ ಪೇಪರನ್ನು ಓದುತ್ತಿದ್ದೆ, ನೃಪತುಂಗ ಇನ್ನೂ ಮಲಗಿದ್ದ, ನಾನು ಎದ್ದು ಪೇಪರ್ ಓದುತ್ತಿದ್ದೆ, ಆರು ವರ್ಷದ ಕೆಳಗಿನ ಆ ಭಾನುವಾರದ ದಿನದ ಹಾಗೆಯೇ, ಒಂದು ಬದಲಾವಣೆಯನ್ನು ಹೊರತುಪಡಿಸಿ. ಇಂದು ಅಲ್ಲಿ ಬೆಡ್ರೂಮಿನಲ್ಲಿ ಮಲಗಿರುವ ನೃಪತುಂಗನ ಪಕ್ಕದಲ್ಲಿ ನಮ್ಮ ಚಿನ್ನದ ಬೊಂಬೆಯೊಂದು ಮಲಗಿದೆ, ಜಾಹ್ನವಿ ಎಂಬ ಹೆಸರಿನೊಂದಿಗೆ. ಆಶ್ಚರ್ಯವಾಗಬಹುದಲ್ಲಾ, ಹೇಗೆ ಇದು ಸಾಧ್ಯ ಎಂದು. ಅದನ್ನು ತಿಳಿಯಲು, ಡೈವೋರ್ಸ್ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೆನಲ್ಲಾ, ಆ ದಿನಕ್ಕೆ ಹೋಗೋಣ,ಒಮ್ಮೆ.

ಅಂದು ಮಧ್ಯಾಹ್ನ ಊಟಕ್ಕೆ ಕೂತಿದ್ದೆವು, ಊಟ ಸುರು ಮಾಡುತ್ತಿದ್ದಂತೆಯೇ ನೃಪತುಂಗ ಸುರುಮಾಡಿದ, "ವೈದೇಹಿ, ಮದುವೆಯಾಗಿ ನಾಳೆಗೆ ಆರು ವರ್ಷಗಳಾಗುತ್ತವೆ.ಎಷ್ಟು ಬೇಗ ಕಳೆದು ಹೋದವು ಅಲ್ಲಾ ಈ ದಿನಗಳು. ಆದರೆ ಅಂದಿನಿಂದ ಇಂದಿನವರೆಗೂ ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ವಿಚಾರಗಳಿವೆ. ಇವುಗಳನ್ನು ನನ್ನೊಳಗೇ ಇಟ್ಟುಕೊಂಡು ನಾನು ನೆಮ್ಮದಿಯಿಂದ ಇರಬಲ್ಲೆ ಎಂದು ತಿಳಿದಿದ್ದೆ, ಹಾಗೆಯೇ ಬಯಸಿದ್ದೆ ಕೂಡಾ. ಆದರೆ ಈಗೀಗ ಅದು ನನ್ನಿಂದ ಸಾಧ್ಯವಿಲ್ಲವೇನೋ ಎನ್ನಿಸುತ್ತಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಪಾಪಪ್ರಜ್ಞೆ ಎಂಬುದು ಮನೆಯ ಒಳಹೊಕ್ಕ ಕಾಳ್ಗಿಚ್ಚಿನಂತೆ ಸುಡುತ್ತಿದೆ" ಎಷ್ಟು ಪ್ರಯತ್ನಪಟ್ಟರೂ ಪೀಠಿಕೆಯಿಂದ ಮುಂದಕ್ಕೆ ಹೋಗಲೇ ಸಾಧ್ಯವಾಗಲಿಲ್ಲ ಅವನಿಗೆ. ನಾನೇ "ಅದೇನು ಹೇಳಿ, ಇಷ್ಟೆಲ್ಲಾ ಪ್ರಸ್ತಾವನೆಯ ಅಗತ್ಯವಿಲ್ಲ. ಏನೆಂದು ಬೇಗ ವಿಷಯಕ್ಕೆ ಬನ್ನಿ." ಆಗಿದ್ದ ನನ್ನ ಮನಸ್ಥಿತಿಯಲ್ಲಿ ಸ್ವಲ್ಪ ಖಾರವಾಗಿಯೇ ಮಾತನಾಡಿದೆ. ಗತ್ಯಂತರವಿಲ್ಲದೇ ಅವನು ವಿಷಯಕ್ಕೆ ಬಂದ, ಕಾಲೇಜಿನಲ್ಲಿದ್ದಾಗ ಉಂಟಾದ ಪ್ರೇಮದಿಂದ ಹಿಡಿದು ಮೊನ್ನೆ ಮೊನ್ನೆಯವರೆಗಿನ ವಿನಯನ ಭೇಟಿಯವರೆಗೂ ಎಲ್ಲವನ್ನೂ ಮುಚ್ಚುಮರೆಯಿಲ್ಲದೇ ಹೇಳಿದ. ಯಾವಾಗಿನ ಹಾಗೆಯೇ ಅದೇ ಅತಿ ಪ್ರಾಮಾಣಿಕವಾದ ಸ್ವರ, ನನಗೆ ನಂಬಲೇ ಬೇಡವೇ ಎಂಬ ದ್ವಂದ್ವ. ಪ್ರತೀ ಸಲವೂ ಇವನು ಹೀಗೆಯೇ ಮಾತನಾಡುತ್ತಿದ್ದನಲ್ಲವೇ, ಪ್ರತೀಸಲವೂ ನಾನು ನಂಬುತ್ತಿದ್ದೆನಲ್ಲವೇ, ಇಲ್ಲಿಯವರೆಗೂ ನಾನು ಹೀಗೆಯೇ ಇವನ ಪ್ರಾಮಾಣಿಕತೆಯ ಬಗ್ಗೆ ಎಳ್ಳಷ್ಟೂ ಸಂದೇಹ ಪಟ್ಟಿರಲಿಲ್ಲ. ಹಾಗೆಂದು ಅವನು ಸುಳ್ಳನ್ನು ಹೇಳಿ ನನ್ನನ್ನು ಭ್ರಮೆಯ ಕೂಪದಲ್ಲಿ ತಳ್ಳಿ ಹಾಕಿದ್ದನೆಂದಲ್ಲ, ಆದರೆ ಸತ್ಯವನ್ನು ಹೇಳದೇ ಹಾಗೆ ಮಾಡಿದ್ದ. ಅರ್ಧಸತ್ಯಕ್ಕೂ ಸಹ ಸುಳ್ಳಿನಷ್ಟೇ ದೋಷವಲ್ಲವೇ? ಹಾಗೆಂದು ಈಗ ಇವನ ಮುಖ ನೋಡಿದರೆ, ಎಷ್ಟೋ ದಿನ  ಇವನು ತನ್ನೊಳಗಿನ ಯಾವುದೋ ಹೋರಾಟವನ್ನು ಸುಮ್ಮನಾಗಿಸುವಂತೆ ಕಾರಣವನ್ನೂ ಹೇಳದೇಸುಮ್ಮನೇ ಡಲ್ ಆಗಿ ಕೂರುತ್ತಿದ್ದುದನ್ನು ನೆನಪಿಸಿಕೊಂಡರೆ ಇವನು ಹೇಳುತ್ತಿರುವುದು, ಅವನ ಈಗಿನ ಭಾವನೆಗಳು ಸತ್ಯವೇ ಇರಬಹುದೆನ್ನಿಸುತ್ತದೆ. ಆದರೆ, ಯಾವುದೋ ಒಂದು ಹಠದಂತಹ ಶಕ್ತಿಯು ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವನನ್ನು ಸಂತೈಸುವ ನನ್ನ ಒಳತೋಟಿಯನ್ನು ಹತ್ತಿಕ್ಕಿ ಸುಮ್ಮನಾಗಿಸಿತು. ಆದರೂ ನಾನೇನೂ ಆ ವಿಷಯವನ್ನು ಎತ್ತದೇ ಈ ವಿಷಯಗಳ ಬಗ್ಗೆ ಅವನೇ ಸ್ವಯಂಪ್ರೇರಿತವಾಗಿ ಮಾತನಾಡಿದ್ದರಿಂದ ಒಂದು ಸಮಾಧಾನವಾಗಿತ್ತು,  ಹೇಗಿದ್ದರೂ ಒಂದಲ್ಲಾ ಒಂದು ದಿನ ಅವನೇ ಪ್ರಸ್ತಾಪಿಸಿ ತನ್ನ ತಪ್ಪನ್ನು ಹೇಳಿಕೊಳ್ಳುತ್ತಿದ್ದ ಎಂದು. ಅದಕ್ಕಿಂತ ಹೆಚ್ಚಾಗಿ ಅವನು ಮಾಡಿದ್ದಕ್ಕೆ ಹೃತ್ಪೂರ್ವಕವಾಗಿ ಪಶ್ಚಾತ್ತಾಪ ಪಟ್ಟಿದ್ದ ಎಂದು. ಏನೋ ಒಂದು, ಒಂದು ತರಹ ನಿರಾಳವಾಯಿತಾದರೂ ಅದನ್ನು ತೋರಿಸಿಕೊಳ್ಳಲು ಇಷ್ಟವಾಗಲಿಲ್ಲ. ಸುಮ್ಮನೇ ಉಳಿದೆ ಸ್ವಲ್ಪ ಹೊತ್ತು, ಅವನು ನಾನೇನಾದರೂ ಮಾತನಾಡುತ್ತೇನೆಂದು ನಿರೀಕ್ಷಿಸಿದ್ದನೇನೋ, ಕೊನೆಪಕ್ಷ ನನ್ನ ಪ್ರಕೃತಿಗೆ ವಿರುದ್ಧವಾಗಿ ಕಿರುಚಾಡಿಬಿಡುತ್ತೇನೆ ಎಂದಾದರೂ ಆಶಿಸಿದ್ದ. ಆದರೆ ನಾನು ಹಾಗೇ ಸುಮ್ಮನೇ ಮೌನವಾಗಿ ಕುಳಿತಿದ್ದುದನ್ನು ಅವನಿಗೆ ಸಹಿಸಲಾಗಲಿಲ್ಲ. ನನಗೆ ಮಾತುಗಳಿಂದ ಸಂತೈಸಲಾಗದಷ್ಟು ಆಘಾತ ಆಗಿರಬೇಕೆಂದು ಭಾವಿಸಿ ಅವನೂ ಸುಮಾರು ಹೊತ್ತು ಸುಮ್ಮನೇ ಕುಳಿತು ನಂತರ ಎದ್ದು ಹೋದ.

ಮನೆಯಲ್ಲಿ ನಾನೇ ನಿರ್ಮಿಸಿದ್ದ ಉಸಿರುಗಟ್ಟಿಸುವಿಕೆಯಿಂದ ಹೊರಬರಲು ಇತ್ತೆಚೆಗೆ ರೂಢಿಸಿಕೊಂಡಿದ್ದ ಅಭ್ಯಾಸದಂತೆ ಆ ಸಂಜೆಯೂ ವಾಯುವಿಹಾರಕ್ಕೆ ಹೋಗಿದ್ದೆ.  ಸ್ವಲ್ಪ ದಿನಗಳಿಂದ ಇದ್ದ ನಿಶ್ಶಕ್ತಿ ಮತ್ತೊಂದಿಷ್ಟು ಜೋರಾದಂತಾಗಿ ತಲೆ ಬವಳಿಬಂದಂತಾಯಿತು. ಅಲ್ಲಿಯೇ ಕೆರೆಯ ದಂಡೆಯ ಮೇಲೆ ಕುಳಿತುಕೊಂಡೆನಾದರೂ ಸುಮಾರು ಹೊತ್ತಿನ ತನಕ ಬವಳಿಕೆ ಹಾಗೇ ಇತ್ತು. ಅಲ್ಲಿಯೇ ಕುಳಿತಿದ್ದೆ. ಹಾಗೆಯೇ ಮನಸ್ಸು ತನ್ನದೇ ಆನಿಕೆಯಲ್ಲಿ ಹಳೆಯ ನೆನಪುಗಳನ್ನೆಲ್ಲಾ ಮೆಲಕುಹಾಕುತ್ತಿತ್ತು. ನನಗೆ ನೃಪತುಂಗನ ಪರಿಚಯವಾದದ್ದು, ಪರಿಚಯ ಗೆಳೆತನಕ್ಕಿಂತ ಮೀರಿ ಬೆಳೆದಿದ್ದು, ಅದನ್ನು ಅವನು ವ್ಯಕ್ತಪಡಿಸಿದರೂ ತಾನೇ ಹಿಂಜರಿದಿದ್ದು, ಮತ್ತೆ ಪರಿಸ್ಥಿತಿಯ ಕೈಗೊಂಬೆಯಾಗಿಯೋ ಅಥವಾ ತನ್ನಿಷ್ಟದಂತೆಯೋ ಏನೋ ಒಂದಾಗಿ ಅವನನ್ನೇ ಮದುವೆಯಾಗಿದ್ದು, ಮೊನ್ನೆಯವರೆಗೂ ಅವನ ಬಗ್ಗೆ ನನ್ನ ಅದಮ್ಯ ಕೃತಜ್ಞತಾಭಾವ, ಅದು ಒಮ್ಮೆಲೇ ಕರಗಿ ತಿರಸ್ಕಾರಕ್ಕೆ ಸಮೀಪದ ಭಾವವಾಗಿ ಬದಲಾಗಿದ್ದು, ಹೀಗೆಯೇ ಎಷ್ಟೋ ವಿಷಯಗಳು ತಲೆಯಲ್ಲಿ ಸುಳಿದು ಹೋಗುತ್ತಿದ್ದವು. ಲಂಗುಲಗಾಮಿಲ್ಲದೇ ಮನಸ್ಸು ತನಗೆ ತೋಚಿದೆಡೆ ಹರಿಯುತ್ತಿತ್ತು. ಯಾಕೋ ಮನಸ್ಸು ತಳಮಳದಲ್ಲಿಯೇ ಸುಖ ಕಾಣುವಂತೆ ಅನಿಸಿ ಅದರಲ್ಲಿಯೂ ವಿರಕ್ತಿ ಮೂಡಿತು, ಅದೂ ಕೆಲವೇ ನಿಮಿಷಗಳ ಮಟ್ಟಿಗೆ ಮಾತ್ರ. ಮತ್ತದೇ ಅಸಹ್ಯದ ಭಾವನೆ ಆ ಆಸಿಡ್ ಘಟನೆಯ ಬಗ್ಗೆ ಮನದಲ್ಲಿ ಮೂಡಿ ಹೊಟ್ಟೆಯ ಆಳದಿಂದ ವಾಕರಿಕೆ ಹೊರನುಗ್ಗಿಬಂತು. ನೋಡಿದರೆ ನಿಜವಾಗಿಯೂ ವಾಂತಿ ಮಾಡಿದ್ದೆ, ಅದೇ ಆ ಪಾರ್ಕಿನ ಕಲ್ಲುಹಾಸಿನ ಪಕ್ಕದಲ್ಲೇ. ಅದಾದ ಮೇಲೆ ಸ್ವಲ್ಪ ಸಮಾಧಾನ ಆದಂತಾಗಿದ್ದು ಸತ್ಯ. ಬಹುಶಃ ಆ ಯೋಚನೆಯೇ ನನ್ನ ದೇಹದಲ್ಲಿ ಇಂತಹ ಪರಿಣಾಮವನ್ನು ಬೀರುತ್ತಿದೆಯೇ ಎನ್ನಿಸಿತು,ಈ ಸಲದ ಮುಟ್ಟೂ ಸರಿಯಾಗಿ ಆಗಿರಲಿಲ್ಲವಾದರೂ ಅದೇನೂ ನನಗೆ ಹೊಸ ವಿಷಯವಲ್ಲವಾಗಿದ್ದರಿಂದ ನಾನು ಅಷ್ಟು ಮಹತ್ವ ಕೊಡಲಿಲ್ಲ.  ಆದರೆ ಮನಸ್ಸಿನಲ್ಲಿ ಯಾಕೋ ಸಂದೇಹ, ಏನಕ್ಕಾದರೂ ಇರಲಿ ಎಂದು ಗರ್ಭಪರೀಕ್ಷೆಯ ಕಿಟ್ ನಿಂದ ಪರೀಕ್ಷಿಸಿ ನೋಡಿದರೆ ಗರ್ಭಿಣಿ ಹೌದೆಂಬ ಉತ್ತರ. ತಾಯಿತನದ ಬಗ್ಗೆ ಇರುವ ಗೌರವಮಿಶ್ರಿತ ಸಡಗರ ಒಂದೇ ಸಲಕ್ಕೆ ಮನಸ್ಸನ್ನು ತುಂಬಿಕೊಂಡಿತ್ತು. ಮೊದಲ ಮೂರು ವರ್ಷ ಮಗು ಬೇಡ ಎಂದು ತಡೆದು, ಮತ್ತೆ ಮೂರು ವರ್ಷಗಳಲ್ಲಿ ಪ್ರಯತ್ನಿಸಿದರೂ ಮಕ್ಕಳಾಗದೇ ಹೋಗಿ ಹತಾಶೆಯಲ್ಲಿ ಮುಳುಗಿದ್ದೆ.  "ಪ್ರಕೃತಿಯ ವಿರುದ್ಧವಾಗಿ ಹೋಗಿದ್ದಕ್ಕೆ ಇದು ಶಿಕ್ಷೆ" ಎಂದು ನೃಪತುಂಗನ ಅಜ್ಜಿ ಪಿಸುಮಾತಿನಲ್ಲಿ ಹೇಳುವುದನ್ನು ಕೇಳಿದ ಮೇಲಂತೂ ನನಗೆ ಅದೇ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸುತ್ತಿದ್ದವು.ನನ್ನ ಭಾವನೆಗಳು ಆನಂದದ ಮಿತಿಯನ್ನು ಮೀರಿ ಬೇರೊಂದು ಮಟ್ಟಕ್ಕೆ ಬೆಳೆದಿತ್ತು. ಅದರ ಮಧ್ಯದಲ್ಲಿ ಉಳಿದ ಭಾವಗಳೆಲ್ಲ ನಶಿಸಿಹೋಗಿ ತಾಯ್ತನದ ಸಡಗರ ಮಾತ್ರ ಉಳಿದಿತ್ತು. ಮನಸ್ಸು ಆಗಲೇ ನೃಪತುಂಗನ ಜೊತೆಗೆ ರಾಜಿಗೆ ಒಪ್ಪಿತ್ತು, ಮಗುವಿನ ಕನಸ್ಸಿನಲ್ಲಿ. ಈ ವಿಷಯ ತಿಳಿಯುವ ಮೊದಲೇ ಒಂದು ಹಂತಕ್ಕೆ ನೃಪತುಂಗನದ್ದು ಕ್ಷಮಿಸಲಾರದ ತಪ್ಪೇನಲ್ಲ ಎಂದು ಒಪ್ಪಿಕೊಂಡಿದ್ದ ಮನಸ್ಸು ಈಗಂತೂ ಎಲ್ಲವನ್ನೂ ಮರೆತಿತ್ತು. ರಾಜಿಗೆ ಅಡ್ಡ ಬರುತ್ತಿದ್ದ ಅಹಂ ಎಲ್ಲೋ ಮರೆತು ಹೋದಂತಾಗಿ ನೃಪತುಂಗನಿಗೆ ವಿಷಯ ಹೇಳಲು ಸಂತೊಷದ ಕುಣಿದಾಟದ ಹೆಜ್ಜೆಯಲ್ಲಿ ನಡೆದೆ.

Tuesday 24 July 2012

ನೀ ಬರಲೇಬೇಕೆ ನಾ ಕರೆದರೆ...

ಕರೆದೆನೆಂದರೆ ಬರಲೇಬೇಕೆ ಓಡೋಡಿ 
ನೀನೇನು ನನ್ನ ಅಮ್ಮನೇ 
ಸತಾಯಿಸು ಒಂದಿಷ್ಟು ಮನವ ಕಾಡಿ 
ಹಾಗೆ ಬರಿದೇ ಸುಮ್ಮನೇ 


ಕಣ್ಮುಚ್ಚಿದರೆ ಕಾಡಲೇ ಬೇಕೇ ಕನಸಾಗಿ
ಪ್ರತೀ ಬಾರಿಯೂ ಮರೆಯದಂತೆ 
ಬರಬಾರದೇ ಒಮ್ಮೆ ನನಸಾಗಿ  
ವಿರಹವಾದರೂ ಅತಿಯಾಗದಂತೆ


ಹೃದಯ ಮರ್ಕಟವಾಗಿ ಕುಣಿದಿದೆ 
ಮನದ ಮರದಲಿ ಹುಚ್ಚಾಗಿ
ಮಾತುಗಳೆಲ್ಲ ಉಕ್ಕಿ ಹರಿದಿದೆ
ನಿನ್ನಯ ಧ್ಯಾನವೇ ಹೆಚ್ಚಾಗಿ


ನಿನ್ನ ನೆನಪಿನಲಿ ತೊಳಲಾಡುತಿರುವೆ 
ಪುರಾವೆಯೇನನು ಕೊಡಲಿ
ಬಿನ್ನಹದಲ್ಲಿಯೇ ನೀ ಆಳುತಲಿರುವೆ
ಹೇಗೆ ನಾ ಅಂಕುಶವಿಡಲಿ 

Sunday 13 May 2012

ಅಮ್ಮ



ಚಿತ್ರಕೃಪೆ: ಅಂತರ್ಜಾಲ
ಅದು ಪ್ರೀತಿ ಎಂದರೆ, ಅದಕ್ಕೆ ಯಾವ ಬಗೆಯ ಆಕಾಂಕ್ಷೆಗಳಿಲ್ಲ, ನಿರೀಕ್ಷೆಗಳಿಲ್ಲ, ಹೀಗೇ ಇರಬೇಕೆಂಬ ಬಂಧಗಳಿಲ್ಲ, ಸ್ವಾರ್ಥ ಎಂಬುದು ಮೊದಲೇ ಇಲ್ಲ. ಅದೊಂದು ದಿವ್ಯ ಪ್ರೀತಿ. ಯಾವ ಬೇಡಿಕೆಯ ಹುನ್ನಾರವಿಲ್ಲದೇ, ಪ್ರತಿಫ಼ಲದ ಹಂಬಲವಿಲ್ಲದೇ ಇರುವ ಸುಂದರ ಮಧುರ ಮಮತೆ. ನೀವು ಅವಳನ್ನು ಒಲಿಸಬೇಕಿಲ್ಲ, ಪೂಸಿ ಹೊಡೆದು ಮಾತನಾಡಬೇಕಿಲ್ಲ, ಹೋಗಲಿ ಅವಳ ಜನುಮದಿನ ಬಗ್ಗೆ ಶುಭಾಶಯವನ್ನೂ ಹೇಳಲೇಬೇಕೆಂದೇನಿಲ್ಲ,(ಒಂದೇ ಇನ್ವೆಸ್ಟ್ ಮೆಂಟಿನ LICಯ ಜಾಹೀರಾತಿನಂತೆ) ಒಂದು ಸಲ ಸುರುವಾದ ಮೇಲೆ ಅದಕ್ಕೆ ಕೊನೆ ಮೊದಲಿಲ್ಲ. ಅದೇ ತಾಯಿಯ ಪ್ರೀತಿ. ನೀವು ಅವಳಿಗೆ ಮಗನಾ(ಳಾ)ದರೆ ಸಾಕು, ಕೆಲವೊಮ್ಮೆ ಆಗದಿದ್ದರೂ ಪರವಾಗಿಲ್ಲ. ಸುಮ್ಮನೇ ಪ್ರೀತಿಸುವ ಶಕ್ತಿ, ಸಾಮರ್ಥ್ಯ ಆ ತಾಯಿಯದ್ದು. ಅಮ್ಮ , ಆ ಶಬ್ದವೇ ಸಾಕು ಏನೋ ಮಮತೆ, ಏನೋ ಒಂದು secured feeling , ಇನ್ನೂ ಅವಳ ಕೈಗೂಸಾಗಿದ್ದ ಭಾವನೆ . ಒಟ್ಟಾರೆಯಾಗಿ ಆಕೆ ಒಂದು ಅದ್ಬುತ. " ತಾನು ಎಲ್ಲೆಡೆ ಇರಲಾಗದು ಎಂದು ದೇವರು ಅಮ್ಮನನ್ನು ಸೃಷ್ಟಿಸಿದನಂತೆ" ಎಷ್ಟು ಸತ್ಯ ಮಾತು.

ಈ ಮಮತೆ ಇಂದು ನಿನ್ನೆಯದಲ್ಲ. ಮಾನವ ಪ್ರಾಣಿ ಚರಾಚರಗಳೆಲ್ಲ ಸುರುವಾಗುವ ಕಾಲದಿಂದಲೂ ಇದು ಹೀಗೇನೇ. ತನ್ನ ಮಕ್ಕಳೆಂದರೆ ಎಲ್ಲಾ ಸ್ತ್ರೀಕುಲಕ್ಕೂ ಅದೊಂದು ವಿಶೇಷ ಪ್ರೀತಿ.  ಅದೇನೋ ಒಂದು 'protective instinct'. ಮಗ ಬೆಳೆದು ದೊಡ್ಡವನಾದರೂ ತಾಯಿಗೆ ಅವನಿನ್ನೂ ಚಿಕ್ಕವನೇ! ಎಲ್ಲಾದರೂ ಏನಾದರೂ ಚಿಕ್ಕದಾಗಿ ಹೆಚ್ಚು ಕಡಿಮೆಯಾದರೂ ಅವನಿಗಿಂತ ಹೆಚ್ಚು ಅವಳಿಗೇ ಗಾಬರಿ. ನಾವು ಉಂಡರೆ ಅವಳ ಹೊಟ್ಟೆ ತುಂಬೀತು ,ನಾವು ಎಡವಿದರೆ ಅವಳಿಗೆ ಗಾಯ, ನಮಗೆ ನೆಗಡಿ ಆದರೆ ಅವಳಿಗೆ ಕೆಮ್ಮು. ಅಡಿಗೆ ಕಡಿಮೆ ಆದ್ರೆ ಅವಳಿಗೆ ಹಸಿವಿಲ್ಲ ,ನಾವು ಉಂಡು ಒಳ್ಳೆ ಇದೆ ಎಂದರೆ ಅಷ್ಟಕ್ಕೇ ಆಕೆ ಧನ್ಯೆ ,ಇದೆಲ್ಲಾ ಒಬ್ಬ ಅಮ್ಮನನ್ನು ಬಿಟ್ಟು ಮತ್ತಾರಿಂದ ಸಾಧ್ಯ ಇದೆ. ಎಲ್ಲಿ ಮಗ ನೊಂದಾನು ಎಂದು ತನ್ನ ನೋವನ್ನು ತನ್ನಲ್ಲೇ ನುಂಗುವಂತೆ , ಅವನಿಗೂ ಹೇಳದೆ ಉಳಿಯುವಂತೆ ಮತ್ತಾರ ಮಮತೆ ಮಾಡಬಲ್ಲದು.

ಹಾಗೆಂದು ಅವಳಿಗೆ ಯಾವುದೇ ಅಪೇಕ್ಷೆ ಇಲ್ಲವೆಂದಲ್ಲ. ಕೆಲವು ಇವೆ. ತನ್ನ ಮಕ್ಕಳು ಯಾವಾಗಲೂ ಒಳ್ಳೆಯವರಾಗಿರಬೇಕು, ಎಲ್ಲರ ಕೈಯ್ಯಲ್ಲೂ ಹೊಗಳಿಸಿಕೊಳ್ಳಬೇಕು, ನೀತಿವಂತರಾಗಬೇಕು, ಇತ್ಯಾದಿ. ಚಿಕ್ಕಂದಿನಿಂದಲೂ ಸುರುವಾಗುತ್ತದೆ ಅದಕ್ಕೆ ತಯಾರಿ, ರಾಮಾಯಣ, ಮಹಾಭಾರತದ ಅರ್ಜುನ, ರಾಮಚಂದ್ರ, ಶ್ರವಣ, ಕರ್ಣರಿಂದ ಹಿಡಿದು ಮೊನ್ನೆ ಮೊನ್ನೆಯ ಶಾಸ್ತ್ರಿ, ಭಗತ್ ಸಿಂಗ್, ಗಾಂಧಿಯವರೆಗೂ ಎಲ್ಲಾ ಪುಣ್ಯಾತ್ಮರ ನಾಮಸ್ಮರಣೆ ಮಕ್ಕಳ ಮುಂದೆ ಮಾಡುತ್ತಾಳೆ. ಯಾರಾದರೂ ಒಬ್ಬರ ಹಾಗಾದರೂ ಆಗುತ್ತಾನೇನೋ ಎಂದು. ಇಷ್ಟೆಲ್ಲಾ ನೀತಿಕಥೆ ಹೇಳಿಕೊಡುವ ಇದೇ ಅಮ್ಮ ಮಗನಿಗೆ ಯಾವುದಾದರೂ ನೀತಿಯಿಂದ ಶಿಕ್ಷೆಯಾಗುವುದಾದರೆ ಅದಕ್ಕೇ ಸೆಡ್ಡು ಹೊಡೆಯಲು ಹಿಂಜರಿಯಳು. ಬಹುಶಃ ಅದಕ್ಕೇ ಹೇಳುವುದು ಪ್ರೀತಿ ಕುರುಡು ಎಂದು.

ಅಮ್ಮಾ,  ಎಷ್ಟು ಬಾರಿ ಹೇಳಿದರೂ ನಿನ್ನ ಹಿರಿಮೆ ಹೆಚ್ಚೇ , ಗೊತ್ತು. ಆದರೂ ಏನೋ ಒಂದು ಚಿಕ್ಕ ನಮನ ಅಷ್ಟೇ , ಅದಕ್ಕಿಂತ ಹೆಚ್ಚು ಕೊಡಲು ನಮ್ಮಲ್ಲಿ ಏನಾದರೂ ಇದೆ, ಈ ಬದುಕನ್ನೇ ಕೊಟ್ಟವಳಿಗೆ.

Saturday 17 March 2012

ಅಪ್ಪನ ನಿವೃತ್ತಿಯ ನಂತರ


ಚಿತ್ರಕೃಪೆ: ಅಂತರ್ಜಾಲ
ಮೊನ್ನೆ ಯಾವಗಲೋ ಮನೆಗೆ ಫೋನ್ ಮಾಡಿದ್ದೆ. ಅಮ್ಮ ಮಾತಿನ ಮಧ್ಯದಲ್ಲಿ "ಅಪ್ಪ ರಿಟೈರ್ಡ್ ಆಗುತ್ತಿದ್ದರಲ್ಲಾ ಈ ತಿಂಗಳ ಕೊನೆಗೆ, ಮೊನ್ನೆ ತಾಲೂಕು ಮಟ್ಟದ ಶಿಕ್ಷಕರ ಮೀಟಿಂಗ್ ನಲ್ಲಿ ಎಲ್ಲರೂ ಇವರನ್ನು ಹೊಗಳಿದ್ದೇ ಹೊಗಳಿದ್ದು" ಎಂದಾಗ ನನಗೆ ಇವಳು ಗಂಡನನ್ನು ಹೋಗಳಿದರೆಂಬ ಖುಷಿಯಲ್ಲಿದ್ದಳಾ ಅಥವಾ ಗಂಡ ನಿವೃತ್ತಿಯ ಬಳಿಕ ಏನು ಮಾಡಬಹುದು ಎಂಬ ಆತಂಕದಲ್ಲಿದ್ದಳಾ ಎಂದು ತಿಳಿಯಲಿಲ್ಲ. ಹಾಗೆ ಎಲ್ಲರೂ ಹೊಗಳಿದಾಗಲೂ  ನನ್ನ ಅಪ್ಪನ ಉತ್ತರವೇನೂ ಔಪಚಾರಿಕ ಧನ್ಯವಾದಪೂರ್ವಕ ನಗೆಯಾಗಿರಲಿಲ್ಲ. ಇವರು ಆ ಸಭೆಯಲ್ಲಿ "ನನ್ನ ಬಗ್ಗೆ ಹಿಂದಿನಿಂದ ಯಾರು ಏನೆಂದು ಆಡಿಕೊಂಡಿದ್ದಾರೋ ತಿಳಿಯದು,  ಆದರೆ ನನ್ನ ಮುಂದಂತೂ ಎಲ್ಲರೂ ನನಗೆ  ಗೌರವ ಸಲ್ಲಿಸಿದ್ದಾರೆ. ಅದಕ್ಕಾಗಿ ನಾನು ಕೃತಜ್ಞ" ಅಪ್ಪ ಇರೋದೇ ಹಾಗೆ, ಮಾತು ನೇರ, ಮಾತಿಗಿಂತ ಕೃತಿ ಮತ್ತೂ ನೇರಾನೇರ. ಅದಕ್ಕೇ ಅವರಿಗೆ ಅಷ್ಟು ಸ್ಪಷ್ಟವಾಗಿ ಗೊತ್ತಿರುವುದು, ಇಂದು ಹೀಗೆ ಹೊಗಳುತ್ತಿರುವವರೆಲ್ಲ ಅದನ್ನು ಮನಃಸ್ಪೂರ್ವಕವಾಗಿ ಹೇಳುತ್ತಿಲ್ಲ ಎಂದು. ಅದನ್ನವರು ಆಶಿಸಿದವರೂ ಅಲ್ಲ ಬಿಡಿ.


ಅಮ್ಮ ಹೇಳಿದ ಇವರು ಕೊಟ್ಟ ಉತ್ತರವಲ್ಲ ನನಗೆ ಅಚ್ಚರಿಯೆನಿಸಿದ್ದು, ಹಾಗೆ ಅವರು ಹೇಳದೇ ಹೋಗಿದ್ದರೇ ಆಶ್ಚರ್ಯವಾಗುತ್ತಿತ್ತೇನೋ. ಈ ೨೨ ವರ್ಷಗಳಲ್ಲಿ ಮನೆ ಎಂದರೆ ಹೀಗೆ ಇತ್ತು, ಅಪ್ಪ ಅಮ್ಮ ಬೆಳಿಗ್ಗೆಯೆಲ್ಲ ಶಾಲೆಯಲ್ಲಿ ಇರುವುದು, ಸಂಜೆಯಾಗುವ ಮುಂಚೆ ಅಮ್ಮ ಬಂದು ತಿಂಡಿ ಏನಾದರೂ ಕೊಡುವುದು, ಅದು ತಿಂದು ಜೀರ್ಣವಾಗುವ ಹೊತ್ತಿಗೆ ಸೂಅರ್ಯ ಮುಳುಗುವ ಸಮಯದಲ್ಲಿ ಅಪ್ಪ ಮನೆಗೆ ಬರುವುದು, ಅಲ್ಲಿಯವೆರೆಗಿದ್ದ ಸ್ವೇಚ್ಚೆ ಬರೀ ಸ್ವಾತಂತ್ರ್ಯಕ್ಕೆ ಮಿತಿಯಾಗುವುದು,ಪ್ರತೀ ಬುಧವಾರ ಅವರು ಶಾಲೆಯಿಂದ ಬರುವಾಗ ಸಂತೆಗೆ ಹೋಗಿ ಚೀಲದ ತುಂಬಾ ತರಕಾರಿ ತರುವುದು,ಚಿಕ್ಕವನಾಗಿದ್ದಾಗ ಚೀಲದ ತುಂಬ ತರಕಾರಿ ತರದಿದ್ದರೆ ನಾನು ಮಾಡುತ್ತಿದ್ದ ಗಲಾಟೆಯನ್ನು ನೆನಪಿಸುವುದು,  ವೀಕೆಂಡ್ ಬಂತೆಂದರೆ ಅಪ್ಪ ಊರಿಗೆ(ಕರ್ಕಿಗೆ, ನಮ್ಮ ನಿಜವಾದ ನೇಟಿವ್) ಹೋಗುವುದು, ಬರುವಾಗ ಏನಾದರೂ ತಿಂಡಿಯನ್ನು ತರುವುದು.ಅದಕ್ಕಾಗಿ ಕಾತರದಿಂದ ಕಾಯುವುದು.  ಇವೆಲ್ಲಾ ಮುಗಿದು ಹೋಗುತ್ತದೆಯೇ ಇನ್ನು? ಮತ್ತೆ ಸಿಗಲಾರೆವೇ ಈ ರೊಟೀನ್ ಬೋರಿಂಗ್ ಕ್ಷಣಗಳು?


ಅಪ್ಪನ ಗುರುತಿರುವುದೇ ಹಾಗೆ, ರಾಮ ಮಾಸ್ತರು ಎಂದು, ಆರ್. ಜಿ. ಹೆಗ್ಡೆ ಮೇಷ್ಟ್ರು ಎಂದು. ಶಿಕ್ಷಕರಲ್ಲದ ಬರೀ 'ರಾಮ ಹೆಗಡೆ'ಯವರನ್ನು ಎಷ್ಟು ಜನ ಬಲ್ಲರೋ ನಾನು ತಿಳಿಯೆ. ನಾಲ್ಕು ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ  ಬಿದ್ದಂತೆ ಆಗಿದ್ದ  ಕುಟುಂಬದ ಅಪ್ಪ ಮುಂದೆ ಶಿಕ್ಷಕರಾಗಿ ಮಕ್ಕಳಿಬ್ಬರನ್ನೂ ಇಂಜಿನಿಯರಿಂಗ್ ಓದಿಸಿಬಿಡುತ್ತಾರೆ ಎಂದರೆ ಉಳಿದಿವರಿಗಿರಲಿ ಸ್ವತಃ ಅವರ ತಾಯಿಗೆ ನಂಬಲಾಗುತ್ತಿರಲಿಲ್ಲವೇನೋ, ಆಗ. ಆದರೆ ಅವರಿಗೆ ಒಂದು ಗುರಿಯಿತ್ತು, ಸಾಧಿಸೋ ಛಲವಿತ್ತು, ಸಾಧಿಸಲೇಬೇಕಾದ ಅವಶ್ಯಕತೆಯಿತ್ತು, ಹೊರಲೇಬೇಕಾದ ಹಿರಿಮಗನ ಜವಾಬ್ದಾರಿಯಿತ್ತು, ಎಲ್ಲಕ್ಕಿಂತ ಮಿಗಿಲಾಗಿ ಆ ಪ್ರತಿಭೆಯಿತ್ತು. ಕೈಯ್ಯಲ್ಲಿ ನಯಾಪೈಸೆ ದುಡ್ಡಿರಲಿಲ್ಲ, ಅಕ್ಷರಶಃ. ಬದುಕಿಗೆ ಆಧಾರವಾಗಿ, ಮನೆಯಲ್ಲಿ ಒಂದು ಎಮ್ಮೆಯಿತ್ತು. ಹಾಲು ಕರೆದು ಮಾರುವ ಕೆಲಸವನ್ನು ಮಾಡಿದರು, ಅಡಿಗೆಯನ್ನು ಕಲಿತು ಜನಮೆಚ್ಚುವ ಹಾಗೆ ಮಾಡಿದರು. (ಈಗಲೂ ಸುತ್ತಮುತ್ತಲ ಪ್ರದೇಶದಲ್ಲಿ ಅನ್ನದ ಕೇಸರೀಬಾತಿಗೆ ಹದ ಹಾಕಲು ರಾಮ ಮಾಸ್ತರೇ ಬೇಕು.) ಬೀದಿದೀಪದಲ್ಲಿ ಓದುವುದೊಂದನ್ನು ತಪ್ಪಿಸಿಕೊಂಡರು, ಕೇರಿಯಲ್ಲೆಲ್ಲೂ ಬೀದಿದೀಪವೇ ಇರದೇ ಹೋದರೆ ಅವರಾದರೂ ಹೇಗೆ ಬೀದಿದೀಪದಲ್ಲಿ ಓದಿಯಾರು. ಏನೆ ಇರಲಿ, ನಿಜವಾಗಿಯೂ ಬಹಳವೆಂದರೆ ಬಹಳವೇ ಕಷ್ಟಪಟ್ಟಿದ್ದರು ಅಪ್ಪ ಆಗ. ರಾಮಣ್ಣನ ಮಗ ಎಂಬ ಒಂದೇ ಕಾರಣಕ್ಕೆ ಏನನ್ನಾದರೂ ಮಾಡಬಲ್ಲ ಈತ ಎಂದು ಕರ್ಕಿಯಲ್ಲಿ ನನ್ನ ಹಿಂದೆಯೇ ಜನ ಮಾತನಾಡುವುದನ್ನು ನಾನು ಕೇಳಿದ್ದೇನೆ


ಅದೆಲ್ಲ ಬಿಡಿ, ಅಪ್ಪ ಇನ್ನು ಶಾಲೆಗೆ ಹೋಗುವುದಿಲ್ಲ ಎಂಬ ಸರಳಸತ್ಯವನ್ನು ನನ್ನಿಂದ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಇನ್ನು ಏನು ಮಾಡಬಹುದು, ಎಂದೂ ಟಿ. ವಿ. ನೋಡಿದವರಲ್ಲ(ವಾರ್ತೆಗಳನ್ನು ಬಿಟ್ಟರೆ), ಸುಮ್ಮನೇ ಕುಳಿತು ಪಟ್ಟಂಗ ಹೊಡೆದವರಲ್ಲ, ಸಮಯ ಕೊಲ್ಲಲು ಕಾಫಿ, ಟೀಯನ್ನೋ ಎಲೆ ಅಡಿಕೆಯನ್ನೋ ತಿಂದವರಲ್ಲ, ಆಚೀಚೆ ಮನೆಯವರ ಬಳಿಯೂ ಅವಶ್ಯಕತೆಗಿಂತ ಹೆಚ್ಚು ಮಾತನಾಡಿದವರಲ್ಲ, ಕಥೆ ಕಾದಂಬರಿಯನ್ನು ಓದಿದ ಅಭ್ಯಾಸವಿಲ್ಲ. ಹೇಗೆ ಸಮಯ ಹೋಗುತ್ತಿತ್ತು ಅವರಿಗೆ? ಕೆಲಸ, ಕೆಲಸ, ಕೆಲಸ. ಒಂದಲ್ಲ ಒಂದು ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡು ಬಿಸಿಯಾಗಿದ್ದ ಜೀವವದು. ಶಾಲೆಯಿಂದ ಬರುವುದೇ ತಡವಾಗಿ, ಬಂದ ಮೇಲೂ ಸುಮ್ಮನೇ ಕೂತವರಲ್ಲ. ಪ್ರತೀ ಸಂಜೆಯಿಡೀ ಮಾಡುವಂತಹ ಏನಾದರೂ ಕೆಲಸವನ್ನು ದಿನವೂ ತಲೆಯಲ್ಲಿ ಇಟ್ಟುಕೊಂಡೇ ಇರುತ್ತಿದ್ದರು. ಆದರೆ ಇನ್ನು ಮುಂದೆ? ಏನೋ ಗೊತ್ತಿಲ್ಲ. ಜೀವನದಲ್ಲಿ ಏನೇನನ್ನೋ ಕಂಡಿರುವವರಿಗೆ ನಿವೃತ್ತ ಜೀವನಕ್ಕೆ ಹೊಂದಿಕೊಳ್ಳುವುದೇನೂ ದೊಡ್ಡ ವಿಷಯವಾಗದಿರಬಹುದು, ಆದರೆ ಮನೆಯಲ್ಲಿ ನಮಗೆ ಅದು ಒಂಥರಾ ಕಲ್ಪನೆಗೆ ದಕ್ಕದ್ದು, ಸದ್ಯದ ಮಟ್ಟಿಗೆ.

ಏನೇ ಆಗಲೀ, ಅಪ್ಪ ನಿವೃತ್ತರಾಗುವುದಂತೂ ನಿಜ. ಈಗ ನಮ್ಮ ಬಳಿಯಿರುವ ಒಂದೇ ಆಯ್ಕೆ ಅದಕ್ಕೆ ಹೊಂದಿಕೊಳ್ಳುವುದು. ಇಲ್ಲಿಯವರೆಗಂತೂ ಅವರದ್ದೇ ಎಲ್ಲಾ ಜವಾಬ್ದಾರಿಯಿತ್ತು, ಇನ್ನು ಮುಂದೆ ಸ್ವಲ್ಪವಾದರೂ ತೆಗೆದುಕೊಳ್ಳಬೇಕೆಂದು ನಿರ್ಧರಿಸುತ್ತಾ ಈ ಅಂಕಣವನ್ನು ಮುಗಿಸುತ್ತಿದ್ದೇನೆ.

Monday 5 March 2012

ಪ್ರಣವ ಪ್ರೇಮ ಪುರಾಣ(ಭಾಗ ೨ )

ಹಿಂದಿನ ಭಾಗದಲ್ಲಿ ...
             ಮೊದಲ ನೋಟದ ಪ್ರೇಮವೋ ಏನೋ ಪ್ರಣವನಂತೂ  ಸುವಿಧಾಳನ್ನು ಪ್ರೀತಿಸುತ್ತಾನೆ. ಪ್ರೀತಿಯನ್ನು ಒಪ್ಪದ ಹುಡುಗಿ ಅವನ ಪ್ರೀತಿಯನ್ನು ಪರೀಕ್ಷಿಸಬಯಸುತ್ತಾಳೆ ಅದರಲ್ಲಿ ಅವನಷ್ಟರ ಮಟ್ಟಿಗೆ ಅವನು ಯಶಸ್ವಿಯೇ ಆಗುತ್ತಾನೆ. ಆದre ವಿಧಿಯ ಲೆಕ್ಕಾಚಾರವೇ ಬೇರಿತ್ತು ಎಂಬುದು ಪ್ರಣವನಿಗೆ ಹೊಳೆದು ಹತಾಶನಾಗುತ್ತಾನೆ. ಈ ಸನ್ನಿವೇಶದಿಂದ ಮುಂದಕ್ಕೆ   ಸುವಿಧಾ ತನ್ನ ಕತೆಯನ್ನು ವಿವರಿಸುತ್ತಾಳೆ. ಹಿಂದಿನ ಭಾಗವನ್ನು ಒಮ್ಮೆ ಓದಿ ನೋಡಿ
http://subrahmanyahegde.blogspot.in/2012/02/blog-post_25.html


ಸುವಿಧಾ ಹೇಳಿದಂತೆ:
ನನ್ನ ಕಥೆಯೇನೂ ಬಹಳ ವಿಭಿನ್ನವಾಗಿರಲಿಲ್ಲ. ಅಲ್ಲಿ ಹಾಗೆ ಅವನ ಮುಖಕ್ಕೆ ಹೊಡೆದ ಹಾಗೆ ಹೇಳಬೇಕೆಂದು ಮೊದಲೇ ನಿರ್ಧರಿಸಿಕೊಂಡಿದ್ದರಿಂದಲೇ ಅಷ್ಟು ಹೇಳಬಲ್ಲವಳಾಗಿದ್ದೆ. ಆದರೆ ತಾನು ಹೇಳಿದ್ದೆಲ್ಲಾ ಸತ್ಯವೇ? ಹೇಳುವಷ್ಟು ಪ್ರೌಢಿಮೆ, ಅದಕ್ಕಿಂತ ಹೆಚ್ಚಾಗಿ ಅವಶ್ಯಕತೆ ನಿಜವಾಗಿಯೂ ತನಗೆ ಇತ್ತೇ? ಉಳಿದ ಕಾರಣಗಳೆಲ್ಲಾ ಸುಳು ಸುಳ್ಳೇ ಒಂದು ಮುಖ್ಯ ಕಾರಣದ ಸುತ್ತ ತಾನೇ ಕೊಟ್ಟುಕೊಂಡ ಸಮರ್ಥನೆಗಳಷ್ಟೇ ಅಲ್ಲವೇ? ಆದರೆ ತನಗೇಕೆ ಅವನ ಎದುರಲ್ಲಿ ಹಾಗೆ ಎಲ್ಲೂ ಇಲ್ಲದ ಉದ್ವೇಗ ಬರುವುದು? ಯಾಕೆ ಹಾಗೆ ಬುದ್ಧಿಯ ಕಟ್ಟಪ್ಪಣೆಯನ್ನು ಮೀರಿ ಅವನ ಜೊತೆಗೆ ಮಾತನಾಡುವ ಬಯಕೆ ಮನಸ್ಸಿನಲ್ಲಿ ಹುಟ್ಟುವುದು? ಎಷ್ಟು ಅವಿತಿಟ್ಟುಕೊಳ್ಳಲು ನೋಡಿದರೂ ಆ ಕಿರುನಗೆ ಏಕೆ ಹೊರಗಿಣುಕುವುದು? ಯಾಕದು ಆ ಅಸ್ವಾಭಾವಿಕ ಪ್ರಸನ್ನತೆ ಮೂಡುವುದು? ಆದರೆ ಅಕ್ಕ? ಅವಳು ಹಾಗೆ ನಿದ್ದೆಮಾತ್ರೆಗಳನ್ನು ಲೆಕ್ಕವಿಡದೆ ನುಂಗಿ ಕೋಮಾಕ್ಕೆ ಹೋಗಿ ಕುಳಿತಾಗ, ಕೋಮಾದಿಂದ ಹೊರಬಂದಾದ ಮೇಲೂ ಬುದ್ಧಿಸ್ಥಿಮಿತದಲ್ಲಿಲ್ಲದೇ ಒಂದು ವರ್ಷ ಒದ್ದಾಡಿದಾಗ, ದಿನಂಪ್ರತಿ ಕೇಶವಚಂದ್ರ ಜೋಷಿಯ ವಂಶಕ್ಕೆಲ್ಲಾ ಶಾಪ ಹಾಕಿರಲಿಲ್ಲವೇ? ಅವಳಿಗೆ ಚಿಕಿತ್ಸೆ ಮಾಡಲು ಬರುತ್ತಿದ್ದ ಶ್ರೀಧರ್ ಡಾಕ್ಟರ್ರೇ ಪ್ರೀತಿ ಪ್ರೀತಿ ಎಂದು ಕನವರಿಸುತ್ತಿದ್ದ ಇವಳನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ ಮದುವೆಯಾಗಿದ್ದರಿಂದ ಇಂದು ಅವಳು ಮನುಷ್ಯರ ತರಹ ಬದುಕಿದ್ದಾಳೆ, ಅಷ್ಟೇ! ಅಕ್ಕ ಹಾಗಾಗಿ ಒಂದಿಡೀ ವರ್ಷ ಆ ನೋವಿನಲ್ಲಿ ನಲುಗಲು ಅವನ ಕಸಿನ್ ಕಾರಣ ಎಂಬ ವಿಷಯ ನನ್ನಲ್ಲಿ ಪ್ರ‍ೇಮ ಎಂಬುದರ ಬಗ್ಗೆಯೇ ವಾಕರಿಕೆ ಹುಟ್ಟು ಹಾಕಿತ್ತು.  ಪ್ರಣವನ ಪರಿಚಯವಾಗಿ, ಯಾಕೋ ಇವನು ಗೆಳೆಯನಾಗಷ್ಟೇ ಉಳಿಯಲಾರ ಎನಿಸಿದ ನಂತರ ಒಂದು ದಿನ ಅವನ ಬಗ್ಗೆ ವಿಚಾರಿಸುತ್ತಿರುವಾಗ ಆಕಸ್ಮಿಕವಾಗಿ ಸಿಕ್ಕ ಆ ಮಾಹಿತಿ, ಇವನ ಬಗ್ಗೆ ಒಂದು ತಿರಸ್ಕಾರಭರಿತ ಉಪೇಕ್ಷೆಗೆ ದಾರಿ ಮಾಡಿಕೊಟ್ಟಿತ್ತು. ಅದಾದ ಮೇಲೆ ಅದೆಷ್ಟು ಬಾರಿಯೋ ಹತ್ತಿಕ್ಕಿಕೊಂಡ ಹೃದಯದ ಭಾವನೆಗಳು ಅವಕಾಶ ಸಿಕ್ಕಿದಾಗಲೆಲ್ಲ ಭುಗಿಲೆದ್ದು ಮನಸ್ಸಿನ ಆದೇಶದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದವು. ಎಷ್ಟೋ ಸಲ ರೋಸಿ ಹೋಗಿ ಇದೆಲ್ಲ ಒಪ್ಪಿಕೊಂಡುಬಿಡಲಾ ಎನಿಸಿದ್ದೂ ಹೌದು. ಆದರೆ ಒಂದು ಸಲಕ್ಕೆ ಅಕ್ಕನ ನೆನಪಾದಾಗ ಇದೆಲ್ಲಾ ವ್ಯಭಿಚಾರ ಎನಿಸುತ್ತಿತ್ತು. ಯಾವುದು ಸರಿ ಯಾವುದು ತಪ್ಪು ಎನ್ನುವ ಗೊಂದಲದಲ್ಲಿ ಎಷ್ಟೋ ರಾತ್ರಿಗಳು ಹೇಳಹೆಸರಿಲ್ಲದಂತೆ ಕಳೆದುಹೋದವು.
ಹೀಗೇ ದಿನಗಳು ಉರುಳುತ್ತಿದ್ದವು. ನಾಲ್ಕು ತಿಂಗಳಾಗಿದ್ದವೆಂದು ಕ್ಯಾಲೆಂಡರ್ ಹೇಳುತ್ತಿತ್ತು. ಅದೊಂದು ಭಾನುವಾರ ಅಕ್ಕನ ಮನೆಗೆ ಹೀಗೇ ಹೋಗಿದ್ದೆ. ಅವರ ಮನೆಯಲ್ಲಿ ಯಾರೋ ಅತಿಥಿಗಳಿದ್ದರು ಎಂದು ಮನೆಯ ಬಾಗಿಲಿನಲ್ಲಿದ್ದ ಶೂಗಳೇ ಹೇಳುತ್ತಿದ್ದವು. ನಾನು ಒಳಹೊಕ್ಕೊಡನೆಯೇ ಭಾವ, " ಇವಳು ಶಾರ್ವರಿಯ ತಂಗಿ, ಸುವಿಧಾ ಎಂದು PESITನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ, ಇವರು ಕೇಶವಚಂದ್ರ ಶಾಸ್ತ್ರಿ  ಎಂದು ಸುವಿಧಾಳ ಕ್ಲಾಸ್ ಮೇಟು. ಯು. ಎಸ್. ನಲ್ಲಿ ಇರುತ್ತಾರಂತೆ. ... " ಇನ್ನೂ ಏನೋ ಹೇಳಲು ಹೋಗುತ್ತಿದ್ದರು. ಆಗ ಕೇಶವಚಂದ್ರ ರವರೇ, " ಓ, PESIT ತಾನೇ, ನಮ್ಮ ಪ್ರಣವ್ ಗೊತ್ತಿರಬೇಕಲ್ಲಾ, ನನಗೆ ಕಸಿನ್ ಆಗಬೇಕು ಅವನು. ನಮ್ಮ ಮನೆಯಲ್ಲಿಯೇ ಆಡಿಕೊಂಡಿದ್ದವನು..." ಇನ್ನೂ ಏನೇನೋ ಹೇಳುತ್ತಿದ್ದರು. ನನಗೆ ಕೇಳುತ್ತಿರಲಿಲ್ಲ. ಇವರು ಇಲ್ಲಿಗೆ ಮನೆಗೆ ಬಂದೂ, ಅಕ್ಕ ನಗುನಗುತ್ತಿದ್ದಾಳೆ ಎಂದರೆ ಅಕ್ಕನಿಗೆ ಮೋಸ ಮಾಡಿದಾತ ಈತನಲ್ಲ. ಹಾಗಾದರೆ ಏನೋ ಒಂದು ಗಜಿಬಿಜಿಯಾಗಿದೆ ನನ್ನ ಲೆಕ್ಕಾಚಾರದಲ್ಲಿ ಎಂದುಕೊಂಡಳು. ತಕ್ಷಣ "ಇವತ್ತು ನನ್ನ ಪ್ರಾಜೆಕ್ಟ್ ಗ್ರುಪಿನ ಮೀಟಿಂಗ್ ಇದೆ ಭಾವ, ನಾನು ಮರೆತು ಬಿಟ್ಟಿದ್ದೆ" ಎಂದವಳೇ ಮನೆಯತ್ತ ಸ್ಕೂಟಿಯನ್ನು ತಿರುಗಿಸಿದ್ದಳು. ಮನೆಗೆ ಬಂದು ಅಕ್ಕ ತವರಿನಲ್ಲೇ ಬಿಟ್ಟು ಹೋಗಿದ್ದ ಒಂದಿಷ್ಟು ಡೈರಿಗಳನ್ನು ತೆಗೆದು ನೋಡಿದರೆ ಅದರಲ್ಲಿ ಎಲ್ಲ ಕಡೆ ಇದ್ದಿದು ಬರೀ ಕೇಶವಚಂದ್ರ ಎಂದು ಮಾತ್ರ. ಹಾಗಾದರೆ ಈ ಪ್ರಣವ್ ನ ಕಸಿನ್ ಯಾರು ? ಮತ್ತೊಂದು ಗೊಂದಲ ತಲೆಯಲ್ಲಿ ಸೇರಿ ಮಾರನೆಯ ಸೋಮವಾರದ ಬೆಳುಗನ್ನೇ ಕಾಯುತ್ತಾ ಕುಳಿತಳು.
ಬೆಳಿಗ್ಗೆಯ ತಿಂಡಿಯನ್ನೂ ತಿನ್ನದೇ ಕಾಲೇಜಿಗೆ ಓಡಿದವಳಿಗೆ,ಕಾಲೇಜು ಮುಟ್ಟಿದ ಮೇಲೆಯೇ, ಕಾಲೇಜು ಆಫೀಸು ತೆಗೆಯುವುದು ೯ ಗಂಟೆಗೆ ಎಂಬ ನೆನಪಾಗಿದ್ದು. ಗಡಿಯಾರ ನೋಡಿದರೆ ೭.೪೫. ಹತ್ತಿರದಲ್ಲೇ ಇದ್ದ ಅಕ್ಕನ ಮನೆಗೆ ಹೋದರಾಯಿತೆಂದು ಸ್ಕೂಟಿ ತಿರುಗಿಸುವುದರೊಳಗೆ ಪ್ರಣವನನ್ನು ಗೇಟಿನಲ್ಲಿ ಕಂಡಂತಾಯಿತು.  ಇವಳ ಮುಖದಲ್ಲಿ ಕಿರುನಗೆ ಯಾವುದೇ ಅಡೆತಡೆಯಿಲ್ಲದೇ ಹೃತ್ಪೂರ್ವಕವಾಗಿ ಬಂದಿತ್ತು. ಯಾಕೋ ಅವನು ನಗೆಯನ್ನು ಹೊರತರಿಸಲು ಅನುಮಾನ ಪಟ್ಟನೇ? ಎದುರು ಬರುತ್ತಿದ್ದಾತ ಬೇಕೆಂದೇ ಪಕ್ಕಕ್ಕೆ ಸರಿದು ಹೋದಂತಾಗಿ, ’ಹಗ್ಗ ಹರಿಯುತ್ತಿದೆಯೇ ಪ್ರಭುವೇ?’ ಎನ್ನಿಸಿತು. ಏನೇ ಇರಲಿ, ಎಂದು ಅಕ್ಕನ ಹೊಸಕೆರೆಹಳ್ಳಿಯ ಮನೆಯ ಕಡೆ ಸ್ಕೂಟಿಯನ್ನು ತಿರುಗಿಸಿದೆ. ಅಲ್ಲಿ ಹೋದರೆ ಮತ್ತೆ ಅದೇ ಕೇಶವಚಂದ್ರ ಶಾಸ್ತ್ರಿ ನ ದರ್ಶನ. ಆತ ನನ್ನದೇ ವಿಳಾಸ ಹುಡುಕಿಕೊಂಡು ಬಂದಿದ್ದರಂತೆ. ನಾನು ಸಿಕ್ಕಿದಾಗ ಬಹಳವೇ ಖುಷಿಯಾಗಿದ್ದು ಮುಖದಲ್ಲಿಯೇ ತಿಳಿಯುತ್ತಿತ್ತು.
ನನ್ನನ್ನು ಮನೆಯಿಂದ ಸ್ವಲ್ಪ ಹೊರಕ್ಕೆ ಕರೆದುಕೊಂಡು ಹೋಗಿ ಅವರು ಕೇಳಿದ್ದಿಷ್ಟೇ, " ನಿನಗೆ ನಮ್ಮ ಪ್ರಣವ್ ಗೊತ್ತೇ? ಅವನು ನಿಮ್ಮದೇ ಡಿಪಾರ್ಟ್ ಮೆಂಟ್, ನಿನಗೆ ಒಂದು ವರ್ಷಕ್ಕೆ ಸೀನಿಯರ್.ಆಗಬೇಕು"
ನಾನು, " ಗೊತ್ತಿರುವುದೇನು, ನಾನೂ ಮತ್ತೂ ಅವನು ವರ್ಷವಿಡೀ ಡ್ಯಾನ್ಸ್ ಪಾರ್ಟ್ನರ್ಸ್ ಆಗಿದ್ವಿ, ಚನ್ನಾಗಿಯೇ ಗೊತ್ತಿದೆ. ಇತ್ತೀಚೆಗೆ ಎಲ್ಲಿಯೂ ಸಿಕ್ಕುತ್ತಿಲ್ಲ,  ಅವನು ಕ್ಲಾಸಿಗೆ ಸಹ ಸರಿಯಾಗಿ ಬರುತ್ತಿಲ್ಲ ಎಂದು ಯಾರೋ ಹೇಳುತ್ತಿದ್ದ ನೆನಪು" ಹೇಳಬೇಕಿದ್ದರೆ ಮನದಲ್ಲಿದ್ದ ಬೇಸರವನ್ನು, ಕಾತರಿಕೆಯನ್ನು ಮಾತಿನಲ್ಲಿ ತೋರಿಸಬಾರದೆಂದು ಬಹಳೇ ಪ್ರಯತ್ನಪಟ್ಟೆ. "ಅವನೇನಾದರೂ ಸರಿಯಾಗಿರದೇ ಇದ್ದರೆ ಅದಕ್ಕೆ ನಾನೇ ಕಾರಣ" ಎಂದು ಬಾಯ್ತುದಿಯವರೆಗೆ ಬಂದ ಮಾತನ್ನು ಅಲ್ಲಿಯೇ ತಡೆದು ನಿಲ್ಲಿಸಿದೆ. ಆದರೂ ಹೀಗೆ ನನ್ನನ್ನೇಕೆ ವಿಚಾರಿಸುತ್ತಿದ್ದಾರೆ ಎಂದು ಖಚಿತವಾಗಿ ತಿಳಿಯದೇ ಪ್ರಣವನೇನಾದರೂ ಎಲ್ಲವನ್ನೂ ಹೇಳಿಬಿಟ್ಟಿರುವನೇ ಎಂಬ ಅನುಮಾನ ಬಂತು. ಸ್ವಾಭಿಮಾನಿ ಪ್ರಣವ್ ಹೀಗೆ ತನ್ನ ರಾಯಭಾರ್ಯಕ್ಕೆ ಇನ್ನೊಬ್ಬರನ್ನು ಕಳಿಸುವುದು ಸಾಧ್ಯವಿಲ್ಲವೆನಿಸಿತು.
"ಹೌದಮ್ಮಾ, ಈಗೀಗ ಏನೂ ಸರಿಯಾಗಿ ಮಾಡುತ್ತಿಲ್ಲ ಅವನು, ಆ ತರಹದ ಆಗರ್ಭ ಶ್ರೀಮಂತನಾಗಿ ಯಾವುದೋ ಒಂದು ರೂಮು ಮಾಡಿಕೊಂಡಿರುತ್ತೇನೆ ಎಂದ, ಏನೋ ಅವನ ಇಷ್ಟ ಎಂದು ಬಿಟ್ಟಾಯ್ತು. ಈಗ ನೋಡಿದರೆ ಪಕ್ಕಾ ದೇವದಾಸ್ ತರಹ ಆಗಿಹೋಗಿದ್ದಾನೆ. ಯಾವುದರಲ್ಲಿಯೂ ಆಸಕ್ತಿ ಇಲ್ಲದವರ ತರಹ. ಆ ಗಡ್ಡ ನೋಡಿದರೇ ತಿಳಿಯುತ್ತದೆ ಏನೋ ಸರಿಯಿಲ್ಲ ಎಂದು. ಅವನೇನಾದರೂ ಪ್ರೀತಿ ಗೀತಿಯಲ್ಲಿ ಬಿದ್ದಿದ್ದಾನೆಯೇ? ಕಾಲೇಜಿನಲ್ಲೇನು ಸುದ್ದಿಯಿದೆಯೇ? ಗೊತ್ತಿದ್ದರೆ ಹೇಳಮ್ಮಾ! ಅವನು ಏನು ಬೇಕೆಂದರೆ ಅಪ್ಪ ಅಮ್ಮ ತಲೆಯ ಮೇಲೆ ಹೊತ್ತು ಮಾಡುತ್ತಾರೆ, ಆದರೆ ಕೇಳುವ ಅಭ್ಯಾಸವಲ್ಲ ಅವಂದು. ಮಗನ ಸ್ಥಿತಿಯನ್ನು ನೋಡಲಾರದೇ ನೋಯುತ್ತಿದ್ದಾರೆ. ನಾನು ನಿನ್ನನ್ನು ನಿನ್ನೆ ಭೇಟಿಯಾಗಿದ್ದರಿಂದ ನಿನಗೇನಾದರೂ ಗೊತ್ತಿರಬಹುದು ಎಂದು ನಿನ್ನನ್ನರಸುತ್ತಿದ್ದೆ"
ನನಗೆ ಏನೋ ಒಂದು ರಿಲೀಫ಼್ ಸಿಕ್ಕಂತಾಯ್ತಾದರೂ, ನನ್ನ ಮೂಲಭೂತ ಸಂದೇಹ ಇನ್ನೂ ಬಗೆಹರಿದಿರಲಿಲ್ಲ, ಅದಕ್ಕಾಗಿಯೇ"ಆಯ್ತು ಅದರ ಚಿಂತೆ ನನಗೆ ಬಿಡಿ, ನಾನು ಅದನ್ನೆಲ್ಲ ವಿಚಾರಿಸಿಕೊಳ್ಳುತ್ತೇನೆ. ಆದರೆ ಒಂದು ವಿಚಾರ ನಿಮ್ಮ ಕ್ಲಾಸಿನಲ್ಲಿ ಕೇಶವಚಂದ್ರ ಜೋಷಿ ಎಂದು ಒಬ್ಬನಿದ್ದನೇ? "ಎಂದು ಕೇಳಬೇಕಿದ್ದರೆ ನನ್ನ ಎದೆಬಡಿತ ನನಗೇ ಕೇಳುತ್ತಿತ್ತು. ಅವರು ಹೌದೆನ್ನಲಿ ಎಂದು ಮನಸ್ಸು ಎಂದೂ ನಂಬದ ದೇವರನ್ನು ಬೇಡುತ್ತಿತ್ತು.
ಆ ಹೆಸರು ಕೇಳಿದೊಡನೆಯೇ ಅವರ ಮುಖದ ಭಾವನೆಗಳು ಗಮನೀಯ ಎನ್ನುವ ಮಟ್ಟಿಗೆ ಬದಲಾದವು. " ಹೌದು, ಆ ಹೆಸರಿನ ಒಬ್ಬ ಲೋಫ಼ರ್ ಇದ್ದ. ಅವನೇ ನಿಮ್ಮಕ್ಕನಿಗೆ ಮೋಸ ಮಾಡಿದ್ದು. ಈಗ ಅದಕ್ಕಾಗಿ ಅನುಭವಿಸುತ್ತಿದ್ದಾನೆ, ಅವನಿಗೆ ಬ್ಲಡ್ ಕ್ಯಾನ್ಸರ್ ಇದೆಯಂತೆ" ನನಗೆ ಮತ್ತೇನೂ ಕೇಳಿರಲಿಲ್ಲ, ಕೇಳಬೇಕಾಗೂ ಇರಲಿಲ್ಲ, ಕೇಳಬೇಕೆಂದೆನಿಸಿರಲೂ ಇಲ್ಲ. ನಾನು ಒಂದು ಖುಷಿಯ ಸಿಳ್ಳೆ ಹಾಕಿಕೊಂಡು ಕಾಲೇಜಿನತ್ತ ಪ್ರಣವ್ ನನ್ನು ಭೇಟಿಯಾಗಲು ಹೊರಟೆ.

Saturday 25 February 2012

ಪ್ರಣವ ಪ್ರೇಮ ಪುರಾಣ(ಭಾಗ ೧)


ಒಂದು ದೊಡ್ಡ ಕಥೆ, ಎರಡು ಸಿಕ್ಕ ಭಾಗಗಳಾಗಿ ಪ್ರಕಟಿಸುತ್ತಿದ್ದೇನೆ. ಪ್ರತಿಕ್ರೀಯೆಗಳಿಗೆ ಸ್ವಾಗತ.


ಪ್ರಣವ್ ಕಂಡಂತೆ:
ಎರಡು ವರ್ಷದ ಕೆಳಗೆ, ಎರಡೇ ಎರಡು ವರ್ಷದ ಕೆಳಗೆ ಯಾರಾದರೂ ನನ್ನನ್ನು ನೀನು ಹೀಗೆ ಬನಶಂಕರಿಯ ಈ ಒಂಟಿರೂಮಿನಲ್ಲಿ ಎರಡು ವರ್ಷದ ನಂತರ ಇರುತ್ತೀಯಾ, ಕಷ್ಟಪಟ್ಟು ಮಾತನಾಡುತ್ತಿದ್ದ ಕನ್ನಡವನ್ನು ಹೀಗೆ ಅಷ್ಟು ಪ್ರೀತಿಯಿಂದ ಕಲಿಯುತ್ತೀಯಾ ಎಂದು ಹೇಳಿದ್ದರೆ ಸ್ವತಃ ನಾನೇ ನಂಬುತ್ತಿರಲಿಲ್ಲವೇನೋ, ಆದರೆ ಒಬ್ಬ ಹುಡುಗಿ ಜೀವನದಲ್ಲಿ ಏನೆಲ್ಲಾ ಬದಲಾಯಿಸಬಹುದು ನೋಡಿ! ಮೂರನೇ ಸೆಮೆಸ್ಟರ್ ನ ಪ್ರಾರಂಭದಲ್ಲಿ  ಒಂದಿನ ಎಂದಿನಂತೆ ಲೇಟಾಗಿ ಕಾಲೇಜಿಗೆ ಬೈಕಿನಲ್ಲಿ ಬರುತ್ತಿದ್ದಾಗ ತಾನಾಗೇ ಬಂದು ಡ್ರಾಪ್ ಕೇಳಿ, ಹೋಗುವಾಗ ಒಂದು ಥ್ಯಾಂಕ್ಸ್ ಹೇಳಿ ನಗುವನ್ನೂ ಬೀರದೇ, ಎಷ್ಟು ಬಾರಿ ಅರ್ಥ ಮಾಡಿಕೊಂಡೆ ಎಂದು ತಿಳಿದುಕೊಂಡರೂ ಮತ್ತೂ ಅಪರಿಚಿತವಾಗಿಯೇ ಉಳಿದ ಸುವಿಧಾ ಎಂಬ ಒಂದು ಉದ್ದ ಜಡೆಯ ಒಡತಿ, ಇಷ್ಟೆಲ್ಲಾ ಬದಲಾವಣೆಯನ್ನು ನನ್ನ ಜೀವನದಲ್ಲಿ ತಂದಳು ಎಂಬುದು ಎಷ್ಟು ವಿಚಿತ್ರವೋ ಅಷ್ಟೇ ನಂಬಲಸಾಧ್ಯ ಕೂಡ.
ಆ ದಿನ ಹಾಗೆ ಅವಳು ತನ್ನ ಪಟ್ಟೆಪಟ್ಟೆಯ ಸಲ್ವಾರ್ ನ ನೆರಿಗೆಗಳನ್ನು ಸರಿಪಡಿಸಿಕೊಳ್ಳುತ್ತಾ, ಹಿಂದಕ್ಕೆ ತಿರುಗದಂತೆ ಹೋಗುತ್ತಿದ್ದರೆ ಈ ನನ್ನ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ. ಅಲ್ಲಿಯವರೆಗೆ ಪ್ರಥಮ ನೋಟದ ಪ್ರೇಮವನ್ನು ಎಷ್ಟರ ಮಟ್ಟಿಗೆ ನಾನು ಅಸಹ್ಯಿಸಿಕೊಳ್ಳುತ್ತಿದ್ದೆನೋ, ಅಷ್ಟೇ ಪ್ರಮಾಣದಲ್ಲಿ ನಂಬಲು ಪ್ರಾರಂಭಿಸಿದೆ. ಜೀವನದಲ್ಲಿ ನಾನೆಂದಾದರೂ ಪ್ರೀತಿಸುವುದಾದರೆ ಇವಳನ್ನೇ ಎಂದು ಅಲ್ಲೇ ನಿರ್ಧರಿಸಿದ್ದು ಎಷ್ಟು ಅವಿವೇಕಿತನವೋ, ಅಷ್ಟೇ ಪ್ರಾಮಾಣಿಕತನದಿಂದ ಆ ಮಾತನ್ನು ಕಾಪಾಡಿಕೊಂಡು ಬಂದಿದ್ದೆ. ಕಾಲೇಜಿನಲ್ಲಿ ಮಾಡಲು ಕೆಲಸವಿಲ್ಲದೇ ಸುಮ್ಮನೇ ಗೆಳೆಯರ ಗುಂಪಿನೊಂದಿಗೆ ಅಲೆಯುತ್ತಿದ್ದ ನನಗೆ, ಒಂದು ಗುರಿಯು ಅಲ್ಲಿಯೇ ಗೋಚರವಾಗಿತ್ತು. ಜೀವನದಲ್ಲಿ ಗಂಭೀರತೆ ಎಂಬುದು ಇರಲೇಬಾರದು ಎಂದು ಪ್ರತಿಪಾದಿಸುತ್ತಿದ್ದವನು, ಒಂದೇ ಸಲಕ್ಕೆ ಸೀರಿಯಸ್ ಆಗಿ ಯೋಚನೆ ಮಾಡತೊಡಗಿದ್ದೆ. ಹೆಸರು ತಿಳಿಯುತ್ತದೆ ಎಂಬ ಒಂದೇ ಕಾರಣಕ್ಕೋಸ್ಕರ ಅವಳು ಇರುತ್ತಿದ್ದ ಮೊದಲ ವರ್ಷದ ತರಗತಿಗಳಿಗೆ ಹೋಗಿ ಕುಳಿತುಕೊಂಡು ಬಂದೆ. ಎಂದಿಗಾದರೂ ಬೇಕಾಗಬಹುದು ಎಂದು, ತನ್ನ ಸ್ವಭಾವಕ್ಕೆ ವಿರುದ್ಧವಾಗಿ ಅವಳ ಕ್ಲಾಸಿನ ಮೂರು ನಾಲ್ಕು ಹುಡೂಗರ ಜೊತೆ ಮೇಲೆ ಬಿದ್ದು ಗೆಳೆತನ ಬೆಳೆಸಿಕೊಂಡೆ. ಎಲ್ಲಿ ಗೆಳೆಯರ ಬಳಿ ಹೇಳಿಕೊಂಡರೆ ಆಡಿಕೊಂಡುಬಿಡುತ್ತಾರೆನೋ ಎಂದುಕೊಂಡು ಸುಮ್ಮನೇ ಮನಸ್ಸಿನೊಳಗಿಟ್ಟುಕೊಂಡು ಕುಳಿತೆ. ಇಂಟರ್ನೆಟ್ ಎಂಬ ಇಂಟರ್ನೆಟ್ಟನ್ನು ಒಂದು ವಾರದ ಒಳಗೆ ಜಾಲಾಡಿಬಿಟ್ಟಾಗುತ್ತಿತ್ತು. ಅಷ್ಟೇನೂ ಇಷ್ಟವಿಲ್ಲದಿದ್ದರೂ, ಅವಳು ಕಾಲೇಜು ಡ್ಯಾನ್ಸ್ ಗ್ರುಪಿನಲ್ಲಿದ್ದಳು ಎಂಬ ಒಂದೇ ಕಾರಣಕ್ಕೆ, ಹುಟ್ಟು ನರ್ತಕನೇನೋ ಎಂಬಂತೆ ಸೇರಿಕೊಂಡೆ ಎಂಬ ಅಂಶಕ್ಕೆ ಇಂದಿಗೂ ನನಗೆ ಕಿರುನಗೆ ಮೂಡುತ್ತದೆ. ಕಂಡೂ ಕಾಣದಂತೆ, ಗುರುತಿಸಿಯೂ ಗುರುತಿಸದಂತೆ ಕಳೆದುಹೋಗುತ್ತಿದ್ದ ಘಳಿಗೆಗಳ ಮಧ್ಯೆ ನಾನು ಅವಕಾಶಗಳಿಗೆ ಕಾಯುತ್ತ ಕುಳಿತಿದ್ದೆ, ಥೇಟು ಚಾತಕಪಕ್ಷಿಯಂತೆ.
ಅಂತೂ ದೇವರು ಅಸ್ತು ಎಂದನೋ, ಸಂಭವನೀಯತೆಯ ನಿಯಮಗಳ ಅನುಗ್ರಹವೋ ಅಥವಾ ಕೇವಲ ನಮ್ಮಿಬ್ಬರ ಎತ್ತರದಲ್ಲಿದ್ದ ಸಾಮ್ಯತೆಯ ಫಲವೋ, ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಕೊಡಬೇಕಿದ್ದ ನೃತ್ಯಕ್ಕೆ ಕೇಶವ್ ಸರ್ ನಮ್ಮಿಬ್ಬರನ್ನು ಮುಂಭಾಗದ ಜೋಡಿಯಾಗಿ ಆರಿಸಿದ್ದರು. ಅದರಿಂದ ಅಧೀಕೃತವಾಗಿ ಸ್ವಲ್ಪ ಮಾತನಾಡಿ ಗೆಳೆತನ ಬೆಳೆಸಿಕೊಳ್ಳಬಹುದೆಂದು ನಾನು ಹೊಂಚು ಹಾಕಿಕೊಂಡಿದ್ದರೆ, ಅದು ಘನಘೋರವಾಗಿ ವಿಫಲವಾಗಿದ್ದು ದೈವವಿದಿತ ಕ್ರೂರಸತ್ಯ. ನಾನು ಕಂಡಷ್ಟೂ ಸಲವೂ ಬಿಗುಮಾನ ಮೀರಿ ಪರಿಚಯದ ನಗೆ ಬೀರಿ ಒಂದು ತಿರುನಗೆಯ ನಿರೀಕ್ಷೆಯಲ್ಲಿ ಕುಳಿತರೆ, ಅವಳು ಆ ನಗೆಗೂ ತನಗೂ ಸಂಬಂಧವೇ ಇಲ್ಲವೆಂಬಂತೆ ಸುಮ್ಮನಿದ್ದುಬಿಡುತ್ತಿದ್ದಳು. ಅವಳು ಒಂದು ದಿನ ಕಾಲೇಜಿಗೆ ಬರದಂತಾಗಿ, ಆ ದಿನದ ಪಾಠವನ್ನು ಹೇಳಿಕೊಡುವಂತೆ ನನ್ನನ್ನು ಕೇಳಿದಾಗಲೇ, ಅವಳಿಗೂ ನನ್ನ ಅಸ್ತಿತ್ವದ ಅರಿವಿದೆ ಎಂಬುದು ನನ್ನ ಗಮನಕ್ಕೆ ಬಂದಿದ್ದು. ಆ ಸಂತೋಷದಲ್ಲಿಯೇ ಮುಳುಗಿ, ನಾನು ಮಾತನಾಡಲು ವಿಪರೀತ ತಡವರಿಸಿ ಅವಳೇ ’ಸ್ವಲ್ಪ ಕೂಲ್ ಡೌನ್’ ಎಂದು ಹೇಳಿದಳು ಎಂಬಲ್ಲಿಗೆ ಹುಡುಗಿ ಮೊದಲ ಬಾರಿಗೆ ನಕ್ಕಂತಾಯ್ತು. ನಗೆಮಲ್ಲಿಗೆ ಬಿರಿದಿತ್ತು ಅವಳ ಮುಖದಲ್ಲಿ, ಪ್ರೇಮಬೀಜ ಚಿಗಿದಿತ್ತು ನನ್ನ ಎದೆಯಲ್ಲಿ. ಅವಳಿಗೆ ಇಷ್ಟ ಎಂದು ದಿನವೂ ಮಧ್ಯಾಹ್ನದ ಬ್ರೇಕಿನಲ್ಲಿ ಕಾಲೇಜು ಗೇಟಿನ ಹೊರಗೆ ಹಾಕಿರುತ್ತಿದ್ದ ಟೆಂಟ್ ಗೆ ಊಟ ಮಾಡಲು ಹೋಗಲು ಪ್ರಾರಂಭಿಸಿದೆ. ಅಷ್ಟೇ ಆಗಿದ್ದರೆ ಉಳಿಯುತ್ತಿದ್ದನೇನೋ, ಆದರೆ ಒಂದು ಸಲ ಮಾತಿನ ಓಘದಲ್ಲಿ ’ಒಂದು ವರ್ಷದಿಂದ ಇಲ್ಲಿಯೇ ಊಟಕ್ಕೆ ಬರುತ್ತಿದ್ದೆ’ ಎಂದು ನಾನು ಹೇಳಿಕೊಂಡು, ಅವಳು ’ಇದು ಪ್ರಾರಂಭವಾಗಿದ್ದು  ಕೇವಲ ಒಂದು ತಿಂಗಳ ಹಿಂದೆ’ ಎಂದು ನಗುವನ್ನು ಪ್ರಯತ್ನಪೂರ್ವಕವಾಗಿ ತಡೆದುಕೊಂಡು ಹೇಳಿದಾಗ ನನ್ನ ಮುಖ ನನಗೇ ಗೊತ್ತಗುವಷ್ಟು ಇಂಗು ತಿಂದ ಮಂಗನಂತಾಗಿತ್ತು. ಹೀಗೆಯೇ ಹಾಗೋ ಹೀಗೋ ಎಂದುಕೊಂಡು ಸಿಕ್ಕ ಚಿಕ್ಕ ಚಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು ಹೀಗೆ ನಾನು ಒದ್ದಾಡುತ್ತಿರುವ ಸಮಯದಲ್ಲಿಯೇ ಕಾಲೇಜಿನಲ್ಲಿ ಒಂದು ರೇಸಿಂಗ್ ಕಾರು ನಿರ್ಮಾಣ ಮಾಡುವ ಪ್ರೊಜೆಕ್ಟ್ ’ಚೇತಕ್’ ಎಂಬ ಹೆಸರಿನಲ್ಲಿ ಪ್ರಾರಂಭವಾಯ್ತು. ನಾನು ಮತ್ತು ನನ್ನ ಗೆಳೆಯರೇ ಮುಂಚೂಣಿಯನ್ನು ತೆಗೆದುಕೊಂಡು ಕೆಲಸ ಪ್ರಾರಂಬಿಸಿದ್ದೆವು. ಯಾವ ಲೆಕ್ಚರರ್ ಹೇಳಿಕೊಟ್ಟಿದ್ದರ ಬಗ್ಗೆಗೂ ಎಂದಿಗೂ ತಲೆ ಕೆಡಿಸಿಕೊಳ್ಳದಿದ್ದ ನಾವು ಭಯಂಕರವಾಗಿ ಈ ಕೆಲಸದಲ್ಲಿ ಮುಳುಗಿಹೋದೆವು. ಇದರ ಮಧ್ಯೆ ಡ್ಯಾನ್ಸ್ ಕ್ಲಾಸೂ,ಅಲ್ಲಿ ಮಾತನಾಡಲು ಹೋಗಿ ಗೋಲ್ ಆಗದೇ ಹೋದ ಎಷ್ಟೋ ಪೆನಾಲ್ಟಿ ಕಿಕ್ ಗಳೂ, ದಿನಂಪ್ರತಿ ಸಿಕ್ಕಿದಾಗಲೂ ಇಬ್ಬರೂ ’ಹಾಯ್, ಬೈ’ ಹೇಳುವುದೂ( ಅವಳು ಯಾರಿಗೂ ಹಾಗೆ ವಿಶ್ ಮಾಡದವಳಲ್ಲವಾದ್ದರಿಂದ ತನ್ನನ್ನು ಅವಳು ಏನೋ ವಿಶೇಷವಾಗಿ ಗಣಿಸುತ್ತಾಳೆ, ಎಂದು ನಾನು ಭಾವಿಸತೊಡಗಿದ್ದು ತಪ್ಪಾದರೂ ಹರೆಯದ ಹುಡುಗರಿಗೆ ಅದು ಸಾಮಾನ್ಯವೇ!) ಇವೆಲ್ಲವೂ ದೈನಂದಿನ ಭಾಗವಾಗಿಹೋದವು.
ಸ್ವಾತಂತ್ರ್ಯ ದಿನದ ಕಾರ್ಯಕ್ರಮ ಸಾಂಗವಾಗಿ ನಡೆದು, ಎಂದರೆ ನಾನು ಎಲ್ಲೂ ತಪ್ಪು ಹೆಜ್ಜೆ ಹಾಕದೇ, ಸುವಿಧಾ ಅಮೋಘವಾಗಿ ನರ್ತಿಸಿದಳು ಎಂಬಲ್ಲಿಗೆ (ನನ್ನ ಕುಂದುಕೊರತೆಗಳನ್ನೂ ಮುಚ್ಚಿಹಾಕುವಂತೆ) ನಮ್ಮಿಬ್ಬರದ್ದು ಒಂದು ಸೆಟ್ ಆದ ನೃತ್ಯ ಜೋಡಿಯಾಯಿತು. ನಾನು ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದೆನಾದರೂ ಸುವಿಧಾಳ ಮಟ್ಟಕ್ಕೆ ಹೋಗುವುದು ಮನುಷ್ಯಮಾತ್ರದವರಿಗೆ  ಅಸಾಧ್ಯವೇ ಆಗಿತ್ತು. ಅವಳು ಡ್ಯಾನ್ಸ್ ಮಾಡುತ್ತಿದ್ದರೆ ಸುಲಲಿತ ಸರಳವಾಗಿ, ವಿ. ವಿ. ಎಸ್. ಲಕ್ಷ್ಮಣ್ ಬ್ಯಾಟಿಂಗ್ ನಂತೆ ಕಾಣುತ್ತಿತ್ತು, ಶಾಸ್ತ್ರೀಯ ನೃತ್ಯವನ್ನು ಅಭ್ಯಾಸಮಾಡಿಕೊಂದಿದ್ದಳಾದರೂ,  ಉಳಿದ ಪ್ರಕಾರಗಳಲ್ಲಿ ಅವಳೇನೂ ಹಿಂದೆ ಬಿದ್ದಿರಲಿಲ್ಲ. ಇದಾದ ಮೇಲೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ  ಇಂಜಿನಿಯರಿಂಗ್ ಕಾಲೇಜುಗಳ ಸ್ಪರ್ಧೆಗೆ ಈ ಸಲ ಇವರ ಕಾಲೇಜು ಆತಿಥ್ಯ ವಹಿಸಿಕೊಂಡಿತ್ತಾದ್ದರಿಂದ ಈ ಸಲದ ನೃತ್ಯಸ್ಪರ್ಧೆಯನ್ನು ಗೆಲ್ಲುವುದು ಕಾಲೇಜಿಗೆ ಪ್ರತಿಷ್ಠೆಯ ವಿಷಯವಾಗಿ ಹೋಗಿ, ನಾಡಿನ ಪ್ರಸಿದ್ಧ ಕೋರಿಯೋಗ್ರಾಫರ್ ನಾರಾಯಣಮೂರ್ತಿ ಅವರನ್ನು ಕರೆಸಿದ್ದರು, ಅವರೋ ಬಹುತೇಕ ಕನ್ನಡದಲ್ಲೇ ಅತಿವೇಗವಾಗಿ ಮಾತನಾಡುತ್ತಿದ್ದರಾಗಿ ನನಗೆ ಅರ್ಧಕ್ಕರ್ಧ ಅರ್ಥವಾಗುತ್ತಿರಲಿಲ್ಲವಾದ್ದರಿಂದ, ಅದೆಲ್ಲವನ್ನು ಕನ್ನಡತಜ್ಞೆ ಸುವಿಧಾಳೇ ಇಂಗ್ಲೀಷಿಗೆ ಭಾಷಾಂತರಿಸಿ ವಿವರಿಸಬೇಕಾಗುತ್ತಿತ್ತು. ಹೀಗೇ ಎಲ್ಲವೂ ಸುಸೂತ್ರವಾಗಿ ಹೋಗುತ್ತಿರಬೇಕಾದ ಸಮಯದಲ್ಲಿಯೇ ನಾನು ಒಂದು ಹುಚ್ಚುತನಕ್ಕೆ ಕೈ ಹಾಕಿದ್ದು, ಕೈ ಸುಟ್ಟುಕೊಂಡಿದ್ದು; ಪೂರ್ತಿಯಾಗೇನೂ ಅಲ್ಲದಿದ್ದರೂ. ಇದು ಆಗಿದ್ದು ಹೀಗೆ.
ನಾನು ಪ್ರತೀ ಬಾರಿ ಅವಳನ್ನು ನೋಡಿದಾಗಲೂ ಇವನ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಅನುಭವ. ನಿಜವಾಗಿಯೂ ಹೃದಯಮಂಡಲದಲ್ಲಿ ಏನೋ ಒಂದು ಚಲನೆ ಉಂಟಾಗಿ ಎಲ್ಲ ರಕ್ತನಾಳಗಳೂ ಸ್ಥಾನಪಲ್ಲಟವಾದ ಹಾಗೆ. ಎಲ್ಲರೂ ಹೇಳುವ ಹಾಗೆ, ಸಿನಿಮಾಗಳಲ್ಲಿ ತೋರಿಸುವ ಹಾಗೆ, ಮೊದಲ ಬಾರಿಯ ಪ್ರೀತಿಯ ಪುಳಕ. ಪ್ರತೀ ಬಾರಿ ಅವಳು ಮಾತನಾಡುವಾಗಲೂ ಉಳಿದ ಜಗತ್ತೆಲ್ಲ ಶೂನ್ಯಕ್ಕೆ ಹೋದ ಹಾಗೆ, ಗಾಳೀ ಉಸಿರಾಡುವುದನ್ನೂ ಮರೆತು ಅವಳನ್ನು ನೋಡುತ್ತಾ ಕಳೆದು ಹೋದ ಹಾಗೆ ಎನಿಸುತ್ತಿತ್ತು. ಅವಳ ಬಗ್ಗೆ ಯೋಚನೆ ಮಾಡುವಾಗಲೆಲ್ಲ ತಲೆಗಿಂತ ಹೃದಯವೇ ಹೆಚ್ಚು ಕೆಲಸ ಮಾಡುತ್ತಿತ್ತು. ಪ್ರಪಂಚವೇ ಹಗುರಾದಂತೆ, ತನ್ನ ಎದೆ ಮಾತ್ರ ಭಾರವಾದಂತೆ, ಎಲ್ಲ ಕಳೆದುಕೊಂಡೂ ಅತಿಖುಷಿಯಲ್ಲಿದ್ದಂತ ಅನುಭೂತಿ. ಜಗತ್ತೆಲ್ಲ ತನ್ನದೇ ಎಂದು ಅರಳು ಹುರಿದಂತೆ ಮಾತನಾಡುವ ನಾನು ಅವಳ ಸನ್ನಿಧಾನದಲ್ಲಿ ಪ್ರತಿ ಶಬ್ದಕ್ಕೂ ತಡವರಿಸುತ್ತಿದ್ದೆ. ಅದಕ್ಕೆ ಸರಿಯಾಗಿ, ಯಾರಿಗೂ ಪರಿಚಯದ ನಗೆಯನ್ನೂ ಆಡದ ಸುವಿಧಾ ನನ್ನನ್ನು ನೋಡಿದ ತಕ್ಷಣ ಏನೋ ಖುಷಿಗೊಂಡವಳಂತೆ ಕೈ ಬೀಸಿ ಹಾಯ್ ಎನ್ನುತ್ತಿದ್ದಳು. ಮಾತನಾಡುವಾಗಲೂ ಮತ್ತಾರ ಬಳಿಯೂ ತೋರಿಸದಂತ ತಾದಾತ್ಮ್ಯವನ್ನು ನನ್ನ ಬಳಿ ತೋರಿಸುತ್ತಿದ್ದಳು ( ಅವಳು ನಿಜವಾಗಿಯೂ ಹಾಗೆ ಮಾಡುತ್ತಿದ್ದಳೋ ಇಲ್ಲವೋ, ನನಗಂತೂ ಹಾಗನ್ನಿಸುತ್ತಿದ್ದುದು ನಿಜ). ಆದರೆ ಕೆಲವೊಮ್ಮೆ ಅವಳು ಅವಳ ಗೆಳತಿಯರ ಜೊತೆಗಿದ್ದಾಗ ವಿಚಿತ್ರವಾಗಿ ಪರಿಚಯವೇ ಇಲ್ಲದವರ ಹಾಗೆ ಆಡುತ್ತಿದ್ದುದನ್ನು ನಾನು ಗಮನಿಸಿದ್ದೆ. ಹುಡುಗಿಯರಿಗೆ ಸಹಜವಾಗಿಯೇ ಇರುವ ನಾಚಿಕೆ ಎಂದೇ ತಿಳಿದುಕೊಳ್ಳೋಣ ಎಂದರೆ ಸುವಿಧಾ ಹಾಗೆ ನಾಚಿಕೆಯ ಹೆಣ್ಣಲ್ಲ, ಮೇಲಾಗಿ ಕೆಲವೊಮ್ಮೆ ಬಹಳ ಹತ್ತಿರದವಳಂತೆ ಮಾತನಾಡುತ್ತಾ, ಮತ್ತೆ ಕೆಲವೊಂದು ಸಲ ಎಲ್ಲೋ ಒಮ್ಮೆ ನೋಡಿದವರ ಹಾಗೆ ಮಾಡಿಬಿಡುತ್ತಿದ್ದಳು. ಇದೆಲ್ಲಕ್ಕಿಂತ ಹೆಚ್ಚಾಗಿ, ಇದ್ದುದ್ದನ್ನು ಇಲ್ಲದ್ದನ್ನು ಎಲ್ಲಾ ಚಿಂತಿಸಿ ನನ್ನ ತಲೆ ಚಿಟ್ಟು ಹಿಡಿಯಲಾರಂಭಿಸಿ, ಇದಕ್ಕೊಂದು ಉತ್ತರ ಬೇಕು ಎಂದು ನನ್ನಷ್ಟಕ್ಕೆ ನಾನೇ ನಿರ್ಧರಿಸಿಕೊಂಡೆ. ಇರುವ ಅನಿಶ್ಚಿತತೆಗಿಂತ ಇಲ್ಲದ ಸೌಭಾಗ್ಯವೇ ಉತ್ತಮ ಎಂಬ ಹಂತಕ್ಕೆ ಬಂದು, ಯಾವುದೋ ಒಂದು ನಿರ್ಧಾರವಾಗಿಯೇ ಹೋಗಲಿ ಎಂದು ಪ್ರಪೋಸ್ ಮಾಡಬಿಡಲು ನಿರ್ಧರಿಸಿದೆ.
ಅಂದು ನವೆಂಬರ್ ಹದಿನೆಂಟು, ಮೊದಲೇ ನಿರ್ಧರಿಸಿದ್ದಂತೆ ಏನೋ ಅತಿ ಮುಖ್ಯವಾದದ್ದೇನನ್ನೋ ಮಾತನಾಡಬೇಕೆಂದು ಹೇಳಿ, ಕಾಲೇಜಿಗೆ ಬಂಕ್ ಹಾಕಿ ಅವಳ ಕೈಯ್ಯಲ್ಲೂ ಹೇಗೋ ಕಷ್ಟ ಪಟ್ಟು ಬಂಕ್ ಮಾಡಿಸಿ ಪ್ರಸಿದ್ಧ ದ್ವಾರಕಾ ಡೀಲಕ್ಸ್ ಗೆ ಕರೆದುಕೊಂಡು ಹೋಗುವುದರೊಳಗೆ ನನ್ನ ಅರ್ಧಭಾಗ ಬುದ್ಧಿ ಖರ್ಚಾಗಿತ್ತು. ಕುಳಿತು ಎಷ್ಟು ಹೊತ್ತಾದರೂ, ತಂದಿಟ್ಟ ತಿನಿಸುಗಳೆಲ್ಲ ಖರ್ಚಾಗುತ್ತ ಬಂದರೂ ಇಬ್ಬರೂ ತುಟಿಪಿಟಿಕ್ಕೆನ್ನಲಿಲ್ಲ. (ಆಗ ಸಿನಿಮಾಗಳಲ್ಲಿ ತೋರಿಸುವ ಹಾಗೇ ಸುವಿಧಾಳೇ, "ಏನೋ ಮಾತನಾಡಬೇಕೆಂದು ಕರೆದುಕೊಂಡು ಬಂದು ಹೀಗೆ ಸುಮ್ಮನೆ ಕುಳಿತರೆ ಹೇಗೆ?" ಎಂದು ಕೇಳುತ್ತಾಳೆ, ಆಗ ತಾನು ನಾಚಿದಂತೆ ಮಾಡಿ, ಏನೂ ಇಲ್ಲ ಎಂದು ಒಂದೆರಡು ಬಾರಿ ಹೇಳಿ ನಂತರ ಹೇಗೋ ಸ್ವಲ್ಪ ಒತ್ತಯಿಸಿಕೊಂಡು, ನಂತರ ಹೇಳಿದರಾಯಿತೆಂದು ನಾನು ಬಗೆದಿದ್ದರೆ ಅಲ್ಲಿ ನಡೆದಿದ್ದೇ ಬೇರೆ.) ಅವಳೇ ಮಾತನಾಡಿದ್ದೇನೋ ನಿಜ, ಆದರೆ ವಿಷಯವಂತೂ ಶಾಕ್ ಆಗುವಷ್ಟು ಫ್ರಾಂಕ್ ಆಗಿತ್ತು. " ಒಬ್ಬ ಪರಿಚಯದ ಹುಡುಗ, ಯಾವತ್ತೂ ಇಲ್ಲದಂತೇ ಅಲಂಕಾರ ಮಾಡಿಕೊಂಡು, ಅತಿವಿಶೇಷವಾಗಿ ಒಂದು ದಿನ ಒಂದು ಹೋಟೆಲ್ಲಿಗೆ ಕರೆದಾಗಲೇ ಏನಕ್ಕಿರಬಹುದೆಂಬ ಅಂದಾಜು ಯಾವ ಹುಡುಗಿಗಾದರೂ ಸಿಗುತ್ತದೆ. ಇದನ್ನು ತಿಳಿಯಲು ಯಾವ ಮನಶ್ಶಾಸ್ತ್ರದ ಅಧ್ಯಯನದ ಅವಶ್ಯಕತೆಯಾಗಲೀ, ಅತೀಂದ್ರಿಯ ಶಕ್ತಿಯ ಅನುಗ್ರಹವಾಗಲೀ ಬೇಕಾಗಿಲ್ಲ. ನಿನ್ನ ಇಲ್ಲಿಯವರೆಗಿನ ಪ್ರತಿ ನಡೆನುಡಿಯು ನೀನು ಇವತ್ತೇನನ್ನು ಹೇಳಬೇಕೆಂದುಕೊಂಡಿದ್ದೆಯೋ ಅದನ್ನು ಹೇಳುತ್ತಿತ್ತು. ಆದರೆ ನಾನೇ ಅದನ್ನು ನಿರ್ಲಕ್ಷಿಸುತ್ತಿದ್ದೆ. ಕಾರಣಗಳು, ಒಂದು, ನಾನು ಪ್ರೀತಿ ಎಂಬ ವಿಚಾರವನ್ನೇ ನಂಬಲಾರೆ, ಅದೂ ನನ್ನ ಅಕ್ಕನಿಗಾದ ಅನ್ಯಾಯವನ್ನು ನೋಡಿದ ಮೇಲೆ, ನಿನಗೆ ಗೊತ್ತಿಲ್ಲದಿದ್ದರೆ ಅದಕ್ಕೆ ಕಾರಣವಾದವನು ನಿನ್ನ ದೊಡ್ಡಮಾವನ ಮೈದುನನ ಮಗನೇ. ಎರಡು, ನಿನಗೇ ಆಗಲೀ, ನಿನ್ನಂತ ಮತ್ತಾವ ಆಗರ್ಭ ಶ್ರೀಮಂತರ ಮಗನಿಗೆ ಆಗಲೀ, ಹುಟ್ಟುವುದು crush ಅಥವಾ infatuation ಇರಬಹುದಷ್ಟೇ. ಸ್ವಂತವಾಗಿ ನಯಾಪೈಸೆ ದುಡಿಯದೇ ಹೋದರೂ, ಹಾಲು ಬಿಸಿ ಮಾಡಿ ಕಾಫಿ ಮಾಡಲು ಬರದೇ ಹೋದರೂ,ಅಪ್ಪ ಕೊಡಿಸಿದ ಹೈ ಫೈ ಬೈಕ್ ನ ಹಿಂದೆ ಕೂತು ಹೋಗುವ ಗರ್ಲ್ ಫ಼್ರೆಂಡ್ ನನಗೂ ಬೇಕು ಎಂದೆನಿಸುವ ಒಂದು ಬಯಕೆ. ಅದನ್ನೇ ಪ್ರೇಮ ಎಂದುಕೊಂಡು ಇನ್ನೊಬ್ಬರ ಬದುಕನ್ನು ಬಲಿ ಕೊಡುವ ಹುಂಬತನ. ಸ್ವಂತ ಮಾತೃಭಾಷೆಯನ್ನೇ ತಿಳಿಯದ ನೀನು,ಹೆತ್ತು ಹೊತ್ತು ಸಾಕಿದ ಅಪ್ಪ ಅಮ್ಮನಿಗೇ ಸರಿಯಾದ ಗೌರವವನ್ನು ತೋರಲು ತಿಳೀಯದ ನೀನು ಇಂದು ನನ್ನನ್ನು ಪ್ರೀತಿಸುತ್ತೆನೆಂದರೆ ನಾನಾದರೂ ಹೇಗೆ ಒಪ್ಪಲಿ, ಒಪ್ಪುವುದನ್ನು ಬಿಡು, ಹೇಗೆ ನಂಬಲಿ? ನಾನು ನಿನ್ನ ’ಪ್ರೀತಿ’ಯನ್ನು ಸಂದೇಹಿಸುವುದಕ್ಕಿಂತ ಹೆಚ್ಚಾಗಿ ನಿಮ್ಮಂತಹ ಹುಡುಗರ ಮನಸ್ಥಿತಿಯನ್ನು ಸಂದೇಹಿಸುತ್ತೇನೆ." ಹೀಗೆ ಒಂದೇ ಉಸಿರಿನಲ್ಲಿ ಹೇಳಿದಂತೆ ಹೇಳಿ ಮುಗಿಸಿ, ತಾನು ಯಾವತ್ತಿನಂತೆಯೇ ಭಾವರಹಿತವಾಗಿ ಉಳಿದು ನನ್ನ ಮುಖಭಾವ ಬದಲಾವಣೆಯನ್ನೇ ಗುರುತಿಸುವವಳಂತೆ ದಿಟ್ಟಿಸುತ್ತಾ ಕುಳಿತಳು. ನನಗೆ ಆಗ ನಿಜಕ್ಕೂ ಮಾತು ಮರೆತುಹೋಗಿ, ಸುಮ್ಮನೇ ಗುರಿಯಿಲ್ಲದ ದೃಷ್ಟಿಯನ್ನು ಖಾಲಿಯಾದ ಪ್ಲೇಟಿನ ಮೇಲೆ ಬೀರುತ್ತ ಕುಳಿತೆ. ಈಗ ನಾನು ಹಾಗೆ ಹೇಳುತ್ತಿರಲಿಲ್ಲವೇ ಇಲ್ಲ ಎಂಬ ಹುಂಬುಗಾರಿಕೆಯಾಗಲೀ, ಅಥವಾ ಹೌದು ಪ್ರಪೋಸ್ ಮಾಡಬೇಕೆಂದೇ ಇದ್ದೆ ಎಂಬ ಎದೆಗಾರಿಕೆಯಾಗಲೀ ನನಗಿಲ್ಲದೇ, ಏನೆಂದು ಮಾಡಬೇಕೆಂದು ತಿಳಿಯದೇ, ದೊಡ್ಡದೊಂದು ಗೊಂದಲದಲ್ಲಿ ಬಿದ್ದೆ. ಅವಳು ಹೇಳಿದ್ದೆಲ್ಲಾ ಅಕ್ಷರಶಃ ಸತ್ಯವೇ, ಕೆಲವೊಂದು ತನಗೇ ಗೊತ್ತಿಲ್ಲದ ತನ್ನ ಬಗೆಗಿನ ವಿಷಯಗಳು ಅವಳಿಗೆ ಗೊತ್ತು ಎಂಬುದು ಅವಳ ಮಾತಿನ ಶೈಲಿಯಿಂದಲೇ ತಿಳಿಯುತ್ತಿತ್ತು, ನಿನ್ನ ಬಳಿ ನನಗೆ ತಿಳಿಯದ್ದೇನೂ ಇಲ್ಲ ಎಂಬ ಆತ್ಮವಿಶ್ವಾಸ ಪ್ರತೀ ವಾಕ್ಯದಲ್ಲಿ ತುಳುಕುತ್ತಿತ್ತು. ಎರಡು ನಿರ್ಧಾರಗಳಂತೂ ಅಲ್ಲೇ ಹುಟ್ಟಿದ್ದವು. ಒಂದು, ಮನೆಯ ಬಾಯಿಗೇ ಚಮಚ ತಂದು ಇಡುವ ಆಳುಗಳ ಕೈಯ್ಯಿಂದ ತಪ್ಪಿಸಿಕೊಂಡು ಸ್ವಂತದ್ದೊಂದು ಚಿಕ್ಕದಾದ ರೂಮನ್ನಾದರೂ ಮಾಡಿಕೊಂಡು ಸ್ವಲ್ಪವಾಗಿಯಾದರೂ ದೈಹಿಕವಾಗಿಯಾದರೂ ಸ್ವಾವಲಂಬಿಯಾಗಿರಬೇಕು.ಎರಡು, ಅವಳ ಮುಖಕ್ಕೆ ಹೊಡೆದಂತೆ ಆಡುವ ಮಟ್ಟಿಗೆ ಕನ್ನಡವನ್ನು ಕಲಿಯಬೇಕು.
ಹಾಗೆ ನಿರ್ಧಾರ ತೆಗೆದುಕೊಂಡರೆ ಮುಗಿಯಿತು, ಅದು ಆಗಿಯೇ ತೀರಬೇಕು. ಕನ್ನಡ ಸ್ಪುಟವಾಗಿ ಬರದಿದ್ದುದು ನನ್ನ ತಪ್ಪೇ? ಮಾತೃಭಾಷೆಯು ಕನ್ನಡವೇ ಆಗಿದ್ದರೂ ಮೊದಲಿನಿಂದಲೂ ಮನೆಯಲ್ಲಿ ತಂದೆತಾಯಿ ಆಂಗ್ಲ ಭಾಷೆಯಲ್ಲಿಯೇ ಮಾತನಾಡಿದ್ದರಿಂದ ಕನ್ನಡದಲ್ಲಿ ತಡವರಿಸುತ್ತಿದ್ದುದು ಹೌದು. ಕಾರಣಗಳ ಬಗ್ಗೆ ಚಿಂತಿಸಲು ಇದು ಸಮಯವಲ್ಲ. ಆದರೂ ಕನ್ನಡವೆಂಬುದು ರಕ್ತದಲ್ಲಿ ಇದ್ದೇ ಇತ್ತಲ್ಲ. ಯಾವುದನ್ನು ಎರಡು ತಿಂಗಳಲ್ಲಿ ಕಲಿಯಬೇಕೆಂದು ಮಾಡಿದ್ದೆನೋ ಅದನ್ನು ಕೇವಲ ಮೂರು ವಾರದೊಳಗೆ ಕಲಿತು ಮುಗಿಸಿದ್ದೆ. ಅರಳು ಹುರಿದಂತೆ, ಇಂಗ್ಲೀಷಿನಲ್ಲಿ ಹೇಗೆ ಮಾತನಾಡುತ್ತಿದ್ದನೋ ಅದೇ ತರ ಕನ್ನಡದಲ್ಲೂ ಮಾತನಾಡಬಲ್ಲವನಾಗಿದ್ದೆ., ಆದರೆ ಅಷ್ಟಕ್ಕೆ ಸುಮ್ಮನಾಗುವ ಜಾಯಮಾನ ನನ್ನದಲ್ಲ, ಯಾವುದನ್ನು ಮಾಡಿದರೂ ಪ್ರಣವ ಮಾಡಿದ ಹಾಗಿರಬೇಕು ಎಂದು ಜನ ಆಡಿಕೊಳ್ಳಬೇಕೆ ವ್ಯಾಕರಣ, ಹಳೆಗನ್ನಡ, ಛಂದಸ್ಸಿಗೆ ಜಿಗಿದಿದ್ದೆ. ಕಲಿಯಬೇಕೆಂಬ ವಿದ್ಯಾರಾಕ್ಷಸ ಹೊಕ್ಕಿಕುಳಿತ ಮನುಷ್ಯನ ಜ್ಞಾನದಾಹವನ್ನು ತಣಿಸುವುದು ಅಂತಿಂತ ಕೆಲಸವಲ್ಲಾ ಎಂಬುದು ಅವನ ಎಲ್ಲಾ ಕನ್ನಡ ಬಲ್ಲ ಗೆಳೆಯರಿಗೂ, ನನಗೆ ಕನ್ನಡ ಪಾಠ ಹೇಳಿಕೊಡಲು ಬರುತ್ತಿದ್ದ ಗುರುಗಳಿಗೂ ಮನವರಿಕೆಯಾಗಿತ್ತು. ನನ್ನ ವೇಗವು ಎಲ್ಲರಿಗೂ ಎಷ್ಟು ಆಶ್ಚರ್ಯವನ್ನು ಹುಟ್ಟುಹಾಕಿತ್ತೋ ಅಷ್ಟೇ ಹೆದರಿಕೆಯನ್ನು ಉಂಟುಮಾಡಿತ್ತು. ಏನೇ ಇರಲಿ ಎರಡು ತಿಂಗಳೊಳಗೆ ಅವನ ಕನ್ನಡ ಯಾರಿಗೂ ಕಡಿಮೆಯಿಲ್ಲದಂತೆ ಬೆಳೆದಿತ್ತು. ಅದಕ್ಕೆ ಸಾಕ್ಷಿಯಾಗಿ ಅವನು ಬರೆದಿದ್ದ ಕವನವೊಂದು ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಹಾಗೆ ನೋಡಿದರೆ ಬೇರೊಂದು ರೂಮನ್ನು ಮಾಡುವುದೇ ದೊಡ್ಡ ತಲೆನೋವಾಗಿತ್ತು, ಮತ್ತೆ ಆ ಚೇತಕ್ ಪ್ರಾಜೆಕ್ಟ್ ಗೆ ದಿನವೂ ೮ ಗಂಟೆಯವರೆಗೆ ಉಳಿಯಬೇಕಾಗುತ್ತದೆಂದೂ, ಮನೆಯಿಂದ ಬಹಳ ದೂರವಾಗುತ್ತದೆಯೆಂದೂ, ಕಾರಿನಲ್ಲಾದರೂ ದಿನವೂ ಅಷ್ಟು ದೂರ ತಿರುಗಾಡುವುದು ತನ್ನ ಬೆನ್ನಿಗೆ ಒಳ್ಳೆಯದಲ್ಲವೆಂದೂ ಸುಳ್ಳು ಸುಳ್ಳೇ ಡಾಕ್ಟರ್ ಅಂಕಲ್ ಬಳಿ ಬರೆಸಿಕೊಂಡು ಹೋಗಿ ಕೊಟ್ಟ ಮೇಲೆಯೇ ಮನೆಯವರು ವಾರಕ್ಕೊಮ್ಮೆ ಮನೆಗೆ ಬರಲೇಬೇಕೆಂಬ ನಿಬಂಧನೆಯ ಮೇಲೆ ಬೇರೆ ರೂಮನ್ನು ಮಾಡಲು ಒಪ್ಪಿಗೆ ಕೊಟ್ಟಿದ್ದು. ಅದೂ ಅಡಿಗೆ ಮಾಡಲು, ರೂಮನ್ನು ನೋಡಿಕೊಳ್ಳಲು ಒಬ್ಬರು ಭಟ್ಟರನ್ನು ನೇಮಿಸಿದ ಮೇಲೆಯೇ. ಆದರೆ ಆ ಭಟ್ಟರನ್ನು ಒಪ್ಪಿಸಿ ಮನೆಯವರಿಗೆ ತಿಳಿಯದಂತೆ ಓಡಿಸುವುದೇನೂ ನನಗೆ ದೊಡ್ಡ ವಿಷಯವಾಗಿರಲಿಲ್ಲ ಬಿಡಿ. ಹಾಗೆ ದಿನವೂ ತನ್ನ ಅಡಿಗೆಯನ್ನು ತಾನೇ ಮಾಡಿಕೊಳ್ಳಲಾರಂಭಿಸಿದ ಎಂಬಲ್ಲಿಗೆ ಅವಳು ಹೇಳಿದ್ದ ಎಲ್ಲಾ ಪಾಯಿಂಟುಗಳಿಗೂ ಉತ್ತರ ಕೊಡಲು ಸಿದ್ಧನಾಗಿದ.
ನಾನು ಹಾಗೆ ಅವಳು ಅಂದು ಹೇಳಿದ ಮೇಲೆ ಅವಳನ್ನು ಕಂಡರೂ ಕಾಣದಂತೆ ಇರುತ್ತಿದ್ದೆ, ಅವಳೂ ಒಂದು ಸಲ ಒಂದು ನೋಟವನ್ನು ಬೀರಿ, ನನ್ನ ಮುಖದಲ್ಲಿ ಯಾವ ಭಾವವಿರಬಹುದು ಎಂದು ನೋಡಿರಬಹುದು ಎಂದು ಲೆಕ್ಕ ಹಾಕಿದ್ದೆ. ಇತ್ತೀಚೆಗೆ ಕಾಲೇಜಿನ ನೃತ್ಯದ ಟೀಮಿಗೂ ಹೋಗದೇ ಇರುತ್ತಿದ್ದುದರಿಂದ ಮಾತನಾಡುವ ಅವಶ್ಯಕತೆಯೂ ಬೀಳುತ್ತಿರಲಿಲ್ಲ. ನನ್ನ ಕನ್ನಡದ ಬಗ್ಗೆ ನನಗೆ ಆತ್ಮವಿಶ್ವಾಸ ಬಂದ ಮೇಲೆಯೇ ಅವಳ ಬಳಿ ನಾನು ಮಾತನಾಡಬೇಕೆಂದುಕೊಂಡು ಮೊದಲೇ ನಿರ್ಧರಿಸಿದ್ದೆ. ಎರಡು ತಿಂಗಳಾದ ಮೇಲೆ ಒಂದು ದಿನ ಸಿಕ್ಕಾಗ ಮಾತನಾಡಿಸಿದೆ, ಸ್ಪಟಿಕದಷ್ಟು ಸ್ಪಷ್ಟವಾಗಿ ಕಸ್ತೂರಿ ಕನ್ನಡದಲ್ಲಿ, " ಇಷ್ಟು ದಿನ ನಾನು ನಿಮ್ಮ .ಮುಖ ತಪ್ಪಿಸಿಕೊಂಡು ಹೋಗಿದ್ದನ್ನು ನೀವೇ ಡಿಫ಼ೈನ್ ಮಾಡಿರುವ ಸಿರಿವಂತರ ಮಕ್ಕಳ ಬೇಜವಾಬ್ದಾರಿಯ ಒಂದು ಭಾಗ ಎಂದು ತಿಳಿದುಕೊಂಡಿದ್ದೀರೆಂಬುದನ್ನೂ ನಾನು ಬಲ್ಲೆ. ನಾನು ಈ ಎರಡು ತಿಂಗಳಲ್ಲಿ ಏನು ಮಾಡಿದೆ ಎಂಬುದಾಗಲೀ,ಈ ಎರಡು ತಿಂಗಳಲ್ಲಿ ಯಾಕೆ ಹಾಗೆ ಮುಖ ತಪ್ಪಿಸಿ ಹೋಗುತ್ತಿದ್ದೆನೆಂಬುದಾಗಲೀ ಅವು ಈಗ ಅಪ್ರಸ್ತುತ. ನೀವು ಹೇಳಿದ ಹಾಗೆ ಇದ್ದ ಮೇಲೂ ನಾನು ನಿಮ್ಮನ್ನು ಪ್ರೀತಿಸುತ್ತೇನೆ. ಈ ಎರಡು ತಿಂಗಳಲ್ಲಿ ನಾನು ನಿಮ್ಮನ್ನು ನೆನೆಸಿಕೊಳ್ಳದ ಕ್ಷಣವಿಲ್ಲ ಎಂದು ಹೇಳಿದರೆ ಅದು ಬಹುಶಃ ನಾಟಕೀಯವಾಗಿ ಕಾಣಬಹುದಾದರೂ, ಆದರೆ ಅದು ಸತ್ಯ. ನನ್ನ ಪ್ರೀತಿಯ ತೀವ್ರತೆಯಾಗಲೀ, ಅದರ ಆಳವಾಗಲೀ ಇನಿತೂ ಕಡಿಮೆಯಾಗಿಲ್ಲ, ಆಗಲಾರದು ಎಂಬುದರ ಬಗ್ಗೆ ನನಗೆ ಅತಿ ಭರವಸೆಯಿದೆ, ಈಗಲಾದರೂ ನೀವು ಒಪ್ಪಿಕೊಂಡರೆ ನಾನು ಧನ್ಯ ಎಂದುಕೊಳ್ಳುತ್ತೇನೆ." ಅವಳದ್ದು ಮತ್ತದೇ ಭಾವರಹಿತ ತಾರ್ಕಿಕ ಮುಖಭಾವ. ಉತ್ತರವೂ ನಿರ್ಭಾವುಕವಾಗೇ ಇತ್ತು. "ನಾನು ಹಾಗೆ ತಿಳಿದುಕೊಂಡಿರಬಹುದು ಎಂದು ನೀವು ನೀವೇ ನಿರ್ಧರಿಸಿಕೊಂಡಿದ್ದಕ್ಕೆ ನಾನು ಜವಾಬ್ದಾರಳಲ್ಲ. ನೀವು ಕನ್ನಡದಲ್ಲಿ ಸಾಧಿಸಿದ ಪ್ರತೀ ಸಾಧನೆಯೂ ನನಗೆ ತಿಳಿದಿದೆ, ಅದಕ್ಕಾಗಿ ನನ್ನ ಅಭಿನಂದನೆಗಳು. ಸ್ವತಂತ್ರವಾಗಿ ಬೇರೊಂದು ಮನೆಯಲ್ಲಿ ಇದ್ದೀರಾ ಎಂದೂ ಕೇಳಿದೆ, ಅದಕ್ಕಾಗಿಯೂ ಅಭಿನಂದನೆಗಳು. ಆದರೆ ಜೀವನ ಎಂಬುದು ಒಂದು ಭಾಷೆಯನ್ನು ಕಲಿಯುವುದಷ್ಟಕ್ಕೇ ಆಗಲೀ, ಹಿಂದೆ ಮುಂದೆ ನೋಡದೇ ಅಪ್ಪ ಅಮ್ಮನ ಕೈಲಿ ಜಗಳ ಮಾಡಿಕೊಂಡು ಬೇರೆ ರೂಮನ್ನು ಮಾಡುವುದಷ್ಟಕ್ಕಾಗಲೀ ಸೀಮಿತವಲ್ಲ. ನಾನು ಅಂದು ಕೊಟ್ಟಿದ್ದು ಎರಡು ಉದಾಹರಣೆಗಳಷ್ಟೇ. ನೀವು ಅವೆರಡು ಉದಾಹರಣೆಗಳನ್ನು ಜೀವನವೆಂದುಕೊಂಡಿರೇ? ನನಗೆ ಅರ್ಥವಾಗಲಾರದು. ಆದರೆ ಅದಕ್ಕಿಂತ ಹೆಚ್ಚಿನ ಜೀವನವನ್ನು ನಾನು, ನನ್ನ ಕುಟುಂಬ ನೋಡಿದೆ. ನಿಮಗೆ ಅವಕಾಶ ಸಿಕ್ಕಿಲ್ಲ ಬಿಡಿ.ಅದು ಹೋಗಲಿ ಬಿಡಿ, ನೀವು ಈಗಲೂ ಪ್ರೀತಿಸುತ್ತೇನೆ ಎಂಬ ಭಾವವನ್ನಲ್ಲದೇ ನನ್ನನ್ನೇ ಪ್ರೀತಿಸುತ್ತೇನೆಂದು ಹೇಗೆ ಸಾಧಿಸಬಲ್ಲಿರಿ? ಕವಿಯ ಹಾಗೆ ಎರಡು ಸಾಲನ್ನು ಉದ್ಧರಿಸುವುದು ನಿಮ್ಮ ಕಾವ್ಯಪ್ರಜ್ಞೆಯನ್ನು ತೋರಿಸಬಲ್ಲುದಾಗಲೀ ಮತ್ತೇನನ್ನೂ ಅದು ಸ್ಪಷ್ಟಪಡಿಸಲಾರದು. ಎರಡು ತಿಂಗಳು ನಿಮ್ಮ ಪ್ರೀತಿ ಬದುಕಿದೆ ಎಂದು ಸಂತಸ ಪಟ್ಟಿರಲ್ಲವೇ, ನೋಡೋಣ, ಇನ್ನೂ ಆರು ತಿಂಗಳು ಹೋಗಲಿ, ಆಗಲೂ ಈ ಭಾವನೆ ಉಳಿದಿದ್ದರೆ ಆಗ ಮಾತನಾಡೋಣ. ಅದಾದ ಮೇಲೂ ನನ್ನಕ್ಕನಿಗೆ ಮೋಸ ಮಾಡಿದ ಕುಟುಂಬದ ನಿಮ್ಮನ್ನು ನಾನು ಪ್ರೀತಿಸಬಲ್ಲೆನೇ? ಕಾಲವೇ ಹೇಳಬೇಕು." ಪೂರ್ತಿಮಾಡುವ ಮೊದಲೇ ಅವನು ಪ್ರಾರಂಬಿಸಿದ್ದ "ಇರಬಹುದು, ನಾನು ನಿಮ್ಮನ್ನು ತಪ್ಪಾಗಿಯೇ ಊಹಿಸಿರಬಹುದು, ಅಥವಾ ಈಗ ಒಪ್ಪಿಕೊಳ್ಳಲು ನಿಮ್ಮ ಇಗೋ ಅಡ್ಡ ಬಂದಿರಲೂಬಹುದು. ಏನೇ ಆಗಿರಲಿ ನಿಮ್ಮೊಂದಿಗೆ ವಾದ ಮಾಡಲು ಮನಸ್ಸು ಏಕೋ ಒಪ್ಪಲಾರದು.ನಿಮಗೆ ಹೇಗೆ ಸರಿಕಾಣುತ್ತದೋ ಹಾಗೆ ಮಾಡಿ, ಸಾಧ್ಯವಾದರೆ ನಿಮ್ಮ ನೆನಪಿನಲ್ಲೇ ಒಬ್ಬಇದ್ದಾನೆ ಎಂಬುದನ್ನು ನೆನಪಿಡಿ." ಎಂದಷ್ಟೇ ಹೇಳಿ ಸುಮ್ಮನಾದ. " ಆದರೆ ಒಂದು ವಿಷಯ ನೆನಪಿರಲಿ, ನಿಮ್ಮ ಅಕ್ಕ ಶಾರ್ವರಿಯವರಿಗೆ ಮೋಸವಾಗಿದ್ದು ಕೇಶವಚಂದ್ರ ಜೋಷಿ ಯಿಂದ, ಅವನು ನನಗೆ ಯಾವ ರೀತಿಯಿಂದಲೂ ಸಂಬಂಧಿಕನಲ್ಲ, ನನ್ನ ಅಡ್ಡಹೆಸರು ಜೋಷಿ ಹೌದಾದರೂ, ನನ್ನ ಮಾವನ ಮೈದುನನವರ ಮನೆಯ ಅಡ್ಡಹೆಸರು ಶಾಸ್ತ್ರಿ ಎಂದು, ಜೋಷಿ ಎಂದಲ್ಲ, ಯಾರ ಮೇಲಾದರೂ ಆರೋಪ ಹೊರಿಸುವ ಮೊದಲು ಸರಿಯಾಗಿ ಯೋಚಿಸಿ, ನಿರ್ಧರಿಸಿ. ಕಣ್ಣಾರೆ ಕಂಡಿದ್ದನ್ನೂ ಪರಾಂಬರಿಸಿ ನೋಡಿ ಎನ್ನುತ್ತಾರೆ. ಅಂತಹುದರಲ್ಲಿ.... " ಇನ್ನೂ ಏನೇನೋ ಹೇಳಬೇಕೆಂದುಕೊಂಡಿದ್ದ, ಅದೆಲ್ಲಾ ಮನದಲ್ಲೇ ಉಳಿದುಕೊಂಡಿತು.
ಇದಕ್ಕೆ ಮೊದಲು ಶಾರ್ವರಿಯವರ ಕಥೆಯನ್ನು ಹೇಳಿಕೊಳ್ಳದೇ ಹೋದರೆ ಈ ಕಥೆ ಅಪೂರ್ಣವಾವುದಷ್ಟೇ ಅಲ್ಲದೇ ಅರ್ಥಹೀನವಾಗುತ್ತದೆ. ಶಾರ್ವರಿ ಎಂದರೆ ಸುವಿಧಾಳ ಅಕ್ಕ. ಅದೇ ಕಾಲೇಜು, ಅದೇ ಬ್ರಾಂಚು. ೫ ವರ್ಷಕ್ಕೆ ದೊಡ್ಡವಳು. ಈ ಕೇಶವಚಂದ್ರ ಜೋಷಿ ಎಂಬಾತನನ್ನು  ಪ್ರೀತಿಯೆಂದರೆ ಹೀಗೂ ಇರುತ್ತಾ ಎನ್ನುವ ತರಹ ಪ್ರೀತಿಸಿದ್ದಳು, ಅವನೂ ಹಾಗೇ ಇದ್ದ, ಪ್ರೀತಿಯೆಂಬುದನ್ನು ನೀಡಲೇ ಅವತರಿಸಿ ಬಂದ ಹಾಗೆ. ಆದರೆ ಕೊನೆಯ ವರ್ಷದ ಅಂತ್ಯಕ್ಕೆ ಬಂದಂತೆ ಇಲ್ಲಿಯವರೆಗೂ ಆಡಿಕೊಂಡ ಮಾತುಗಳೆಲ್ಲ ಬರೀ ಸುಳ್ಳೆಂಬಂತೆ ಮನೆಯಲ್ಲಿ ಮಾರ್ವಾಡಿಗಳ ಮನೆಯ ಹುಡುಗಿಯನ್ನು ಒಪ್ಪಲಾರರು ಎಂಬಂತಹ ಸುಳ್ಳು ಸುಳ್ಳೇ ಕಾರಣಗಳನ್ನು ಕೊಡಲಾರಂಭಿಸಿ ಪಲಾಯನದ ದಾರಿ ಹುಡುಕಲಾರಂಭಿಸಿದ. ಅಕ್ಷರಶಃ ಪ್ರೀತಿಯೆಂಬ ಹುಚ್ಚುಹೊಳೆಯಲ್ಲಿ ಬಿದ್ದಿದ್ದ ಅವಳಿಗೆ ನಿಜವಾದ ಹುಚ್ಚು ಹಿಡಿದು, ಸರಿಪಡಿಸಬೇಕಾದರೆ ಮತ್ತೊಂದು ವರ್ಷ ಹಾಗೂ ಬೆಂಗಳೂರಿನ ಪ್ರಖ್ಯಾತ ಮನಶ್ಶಾಸ್ತ್ರಜ್ಞರ ಸಹಾಯವೇ ಬೇಕಾಯ್ತು. ಅದೇ ಕ್ಲಾಸಿನಲ್ಲಿ ಕೇಶವಚಂದ್ರ ಶಾಸ್ತ್ರಿ  ಎಂಬ ಪ್ರಣವ್ ನ ಕಸಿನ್ ಇದ್ದುದು ಗೊತ್ತಿದ್ದು, ಪ್ರಣವ್ ನ ಅಡ್ಡಹೆಸರೂ ಜೋಷಿ ಎಂದಿದ್ದುದರಿಂದ ಸುವಿಧಾ ಗೊಂದಲ ಮಾಡಿಕೊಂಡು ತಪ್ಪಾಗಿ ಆರೋಪ ಹೊರೆಸಿದ್ದು ಪ್ರಣವ್ ನಿಗಂತೂ ತಪ್ಪಾಗಿ ಕಂಡುಬರಲಿಲ್ಲ. ಆದರೆ ಅದನ್ನೇ ಹೇಳಬೇಕೆಂದುಕೊಂಡನಾದರೂ ಅವಳಿದ್ದ ಆವೇಶದ ಆವೇಗದಲ್ಲಿ ಅವಳು ಒಪ್ಪಲಾರಳು ಎಣಿಸಿ ವಾಪಸಾಗಿದ್ದ.

ಸುವಿಧಾ ಹೇಳಿದಂತೆ: 
                                                                         ಕಾದು ನೋಡಿ...