Saturday 2 March 2013

ಸೀತೆಯ ಸ್ವಗತ


ಇದು ೫೦ನೆಯ ಪೋಸ್ಟ್ , ಕಳೆದ ಎರಡೂವರೆ ವರ್ಷಗಳಿಂದ ಈ ಬ್ಲಾಗನ್ನು ಇಷ್ಟಪಟ್ಟು, ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು.


ಪೀಠಿಕೆ : ನಾವು ಯೋಚಿಸುವ ಎಲ್ಲ ಮಾತುಗಳನ್ನು ನಾವು ಹೇಳುವುದಿಲ್ಲ, ಹೇಳಲೂಬಾರದು ಬಿಡಿ. ಕೆಲವೊಂದು ಮಾತುಗಳು ನಮ್ಮಲ್ಲಿಯೇ ಉಳಿದು ಹೋಗುತ್ತವೆ, ಯಾವುದಾದರೂ ಕಾರಣದಿಂದಕೆಲವೊಮ್ಮೆ ಧೈರ್ಯದ ಕೊರತೆಯಿಂದ, ಕೆಲವೊಮ್ಮೆ ಧರ್ಮದ ಹೆದರಿಕೆಯಿಂದ, ಕೆಲವೊಮ್ಮೆ ಹೇಳಬಾರದೆಂದು ತೀರ್ಮಾನಿಸಿದ್ದರಿಂದ. ಎಲ್ಲರಲ್ಲಿಯೂ ಈ ಮಾತುಗಳಿರುತ್ತವೆ. ಸೀತೆಯಲ್ಲಿಯೂ ಇಂತಹ ಮಾತುಗಳು ಒಂದಿಷ್ಟು ಉಳಿದಿದ್ದವೇ? ಗೊತ್ತಿಲ್ಲ. ಅದನ್ನು ನೋಡುವ ಪ್ರಯತ್ನವಷ್ಟೇ ಇದು. ಶ್ರೀರಾಮಚಂದ್ರನ ಎಂದರೆ ಧರ್ಮಸ್ವರೂಪಿ ಆತ. ಯಾವುದು ಧರ್ಮ ಎಂಬುದರ ಬಗೆಗಿನ ವಿವೇಚನೆಯಲ್ಲಿ ಆತನನ್ನು ಮೀರಿಸಿದವರಿಲ್ಲ. ಆದರೆ ಸಂಸಾರ ಎಂದರೆ ಧರ್ಮ ಒಂದೇ ಅಲ್ಲ ಅಲ್ಲವೇ? ಆಧುನಿಕ ಜಗತ್ತಿನ ಮೌಲ್ಯಗಳ ಭೂತಗನ್ನಡಿಯಲ್ಲಿ ಶ್ರೀರಾಮಚಂದ್ರನನ್ನು ನೋಡುವ ತಪ್ಪುಪ್ರಯತ್ನವೇ ಇದು? ನೀವೇ ನಿರ್ಣಾಯಕರು.

ಕೇಳಿದನೇ ರಾಮದೇವ ನನ್ನ ಇಚ್ಛೆಯ, ನನ್ನದೇ ಸ್ವಯಂವರದಲ್ಲಿ
ಗಣಿಸಿದನೇ ಸತಿಯನ್ನು, ಪಿತೃವಾಕ್ಯ ಪರಿಪಾಲನೆಯ ಸಡಗರದಲ್ಲಿ
ಬೆಲೆಯಿತ್ತೇ ನನ್ನ ಮಾತಿಗೆ, ಅಳುವಿಗೆ, ಸಂದೇಹದ ಅಗ್ನಿಪರೀಕ್ಷೆಯಲ್ಲಿ
ಏನಾಯ್ತು ಪತಿಧರ್ಮ, ನನ್ನ ಅಪಹರಣದಿಂದ ಬಿಡಿಸಿ ಮತ್ತೆ ಕಾಡಿಗೆ ಅಟ್ಟಿದಲ್ಲಿ

ಎತ್ತಲಾಗದ ಬಿಲ್ಲ ದಾಶರಥಿ ಮುರಿದಾಗ ಜಾನಕಿಯ ಮನವ ಗೆದ್ದನೇ
ಅರ್ಥವಾಗದ ಧರ್ಮಕ್ಕೆ ವನವಾಸಕ್ಕೆ ಹೋಗೆಂದರೆ ಯಾಕೆಂದು ಕೇಳಿದೆನೇ
ಪತಿವ್ರತೆ ಏಕಪತ್ನೀವೃತಸ್ಥರಾದ ಮಾತ್ರಕ್ಕೆ ಅದು ಆದರ್ಶ ಜೋಡಿಯೇ
ಎಲ್ಲಿತ್ತು ದಾಂಪತ್ಯ ದಂಡಕ, ಅಶೋಕವನ, ವಾಲ್ಮಿಕಿ ಅಶ್ರಮಗಳ ಮಧ್ಯೆ

ಅಬಲೆಯೆಂದರು, ಆದರ್ಶ ಸ್ತ್ರೀಯೆಂದರು, ನನ್ನ ಬಯಕೆಗಳೇ ಅವು
ನನಗೆ ಬೇಕಿದ್ದುದು ಒಂದಿಷ್ಟು ನೆಮ್ಮದಿ, ಅಲ್ಲೇ ಒಂದು ಪ್ರೀತಿಯ ತಾವು
ಈ ಪಾತಿವ್ರತ್ಯ, ಈ ಅನುಮಾನ, ಈ ಜಂಜಾಟ ಸಾಕಾಗಿ ಹೋಗಿತ್ತು
ಅನುಮಾನಿಸದೇ ಕೈಚಾಚಿದ ತಾಯಿ ಭೂಮಿಯ ಮಡಿಲಲ್ಲಿ ಜಾಗವಿತ್ತು


ವಿ. ಸೂ. : ಇದು ಕೇವಲ ನನ್ನ ಭಾವನೆಗಳು, ಕೇವಲ ನನ್ನೊಬ್ಬನ ವಿಚಾರಗಳು. ಯಾರದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಉದ್ದೇಶ ನನ್ನಲ್ಲಿಲ್ಲ. ಹಾಗೇನಾದರೂ ಅನಿಸಿದರೆ ಈ ಮೂಢನನ್ನು ಕ್ಷಮಿಸಿಬಿಡಿ ಒಮ್ಮೆ.