ಅಂತೂ ಮುದದ ಪ್ರೀತಿಯ ಏಕತಾನತೆಗೆ ಒಂದು ವಿರಾಮ ಸಿಕ್ಕಿದೆ, ಅಲ್ಪವಿರಾಮವೇ ಇರಬಹುದು. ಅಲ್ಲ ಇದು ಅಲ್ಪವಿರಾಮವೇ. ಏನೇ ಇರಲಿ, ಈ ಕವನ ಇರುವುದು, ಕಳೆದು ಹೋಗುವ ಗೆಳೆಯನ ಬಗ್ಗೆ, ಮಸುಕಾಗಬಹುದಾದ ಗೆಳೆತನದ ಬಗ್ಗೆ. ಯಾರೂ ವೈಯಕ್ತಿಕ ಎಂದುಕೊಳ್ಳಬಾರದು.
ತಿರುಗಿ ಸುರುಮಾಡೆ ನಾನೆಂಬ ಹಠವದೇಕೆ, ಅದೇನು ಹಗೆ
ಪದಗಳಿಗೆ ತಡಕಾಡದೇ ಕೊರಗುವ ಶಬ್ದಮರೆತ ಕವಿಯ ಹಾಗೆ||ಪ||
ಮಾಯದ ಗಾಯಕೆ ಮುಲಾಮು ಹಚ್ಚಿ ಕೆದಕುವ ಮನಸಾಗಿದೆ
ರಾಜಿ ಮಾತಾಡದೇ ಭೇದಕೆ ರಾಜೀನಾಮೆ ಕೊಟ್ಟ ಕನಸಾಗಿದೆ
ಇಷ್ಟು ಹತ್ತಿರ ಬಂದು ದೂರವೇ ಉಳಿದಿದ್ದಕ್ಕೆ ಮುನಿಸಾಗಿದೆ
ನಸುನಗುವಿಗೆ ದಾರಿಯಾಗಲೆಂದು ಜಗಳವೊಂದ ಕರೆಸಾಗಿದೆ||೧||
ಖಾಲಿ ಸಂದೇಶಗಳಲ್ಲಿ ಮಾತು ತುಂಬಿದ್ದವು ಅಲ್ಲವೇ ಗೆಳೆಯ
ಬಿಗುಮಾನದ ಮೌನದಲಿ ಮರೆತು ಹೋಯಿತೆ ಪರಿಚಯ
ಮುನಿದ ಮನಕೆ ಮಾತಾಡಲು, ಆಡದಿರಲು ಬೇಕೆ ಪ್ರಮೇಯ
ಹೇಗೆ ಹುಟ್ಟಿಸಿ ಹೇಳಲಿ ಮಿತ್ರಾ, ಇನ್ನೂ ಹುಟ್ಟೇ ಇಲ್ಲದ ವಿಷಯ||೨||
ಜಗಳವಾದರೆ ಆಗಲಿ ಮೌನ ಹಿತವೆ, ಕಳೆವುದೇ ಅಲವರಿಕೆ
ಮಾತಿಗೆಲ್ಲ ಅಕಾಲಿಕ ಮರಣವಾಗಿ ಶೂನ್ಯ ಕಾಡಿತ್ತು ಯಾಕೆ
ಹಮ್ಮಿನಾವೇಶದ ನಡುವೆ ಕೇಳದೇ, ಈ ಸ್ನೇಹದ ಕನವರಿಕೆ
ಜ್ಞಾನದನ್ವೇಷಣೆಯ ಮಧ್ಯೆ ಆಗಲಿಲ್ಲವೇ ಸಮಯ ಭಾವಗ್ರಾಹಕೆ||೩||