Thursday 6 December 2012

ನಾಲ್ಕು ಮಿನಿ ಕಥೆಗಳು




ರೋಮಾಂಚನ
          ಒಂದು ಸಂಜೆ ಬಿ. ಎಮ್. ಟಿ. ಸಿ. ಬಸ್ಸಿನಲ್ಲಿ ಅಫೀಸಿನಿಂದ ಮನೆಗೆ ಬರುತ್ತಿದ್ದೆ. ಕಿಟಕಿಯ ಪಕ್ಕದ ಸೀಟಿನಲ್ಲಿ ಕೂತಿದ್ದೆ. ಕಿವಿಗೆ ಹಾಕಿಕೊಂಡಿದ್ದ ಎಫ಼್. ಎಮ್. ನಲ್ಲಿ ಅಣ್ಣಾವ್ರು ಹಾಡಿದ್ದ ’ಓಂ’ ಚಿತ್ರದ ’ಬ್ರಹ್ಮಾನಂದ ಸಾಕಾರ ಹಾಡು ಬಂತು. ಮೈ ತುಂಬ ಅಕ್ಷರಶಃ ರೋಮಾಂಚನ, ಪುಳಕ. ಕಾರಣ ಕಿಟಕಿಯಿಂದ ಬರುತ್ತಿದ್ದ ಗಾಳಿಯೋ? ಅಣ್ಣಾವ್ರ ಕಂಚಿನ ಕಂಠವೋ? ಗೊತ್ತಾಗಲಿಲ್ಲ.
...
ನಂಬಿಕೆ
          ಎರಡನೇ ಕ್ಲಾಸಿಗೆ ಹೊಸ ಟೀಚರ್ ಬಂದಿದ್ದರು. ಇತ್ತೀಚೆಗೆ ನಗರದಲ್ಲಿ ಹೆಚ್ಚುತ್ತಿರುವ ಚಿಕ್ಕಮಕ್ಕಳ ಅಪಹರಣದ ಬಗ್ಗೆ ಮಕ್ಕಳಿಗೆ ತಿಳಿಹೇಳುವಂತೆ ಬಂದ ನೋಟಿಸಿನ ಆದೇಶದಂತೆ, "ಜಾಣ ಹುಡುಗರೇ, ಯಾರಾದರೂ ಅಪರಿಚಿತರು ನಿಮ್ಮನ್ನು ಪುಸಲಾಯಿಸಿದರೆ ಒಪ್ಪಿಕೊಳ್ಳಬೇಡಿ. ಯಾರೇ ಆಗಲಿ ಅಪರಿಚಿತರನ್ನು ನಂಬಬೇಡಿ. ...!" ಎಂದು ಹೇಳಿ ಮುಗಿಸಿರಲಿಲ್ಲ, ಕೊನೆಯ ಬೆಂಚಿನಿಂದ ಗುಂಡ ಕೂಗಿದ್ದ, "ನಿಮ್ಮನ್ನು ಹೇಗೆ ನಂಬುವುದು?"
...
ಏಕಿಷ್ಟು ನಿಧಾನ?
          ದಿನವೂ ಅವನು ಅವಳನ್ನು ಮನೆಯಿಂದ ಆಫೀಸಿಗೆ, ಅಫೀಸಿನಿಂದ ಮನೆಗೆ ಡ್ರಾಪ್ ಮಾಡುತ್ತಿದ್ದ. ರಸ್ತೆಯಲ್ಲಿ ಇವನು ಬೈಕನ್ನು ಬಿಟ್ಟುಕೊಂಡು ಹೋದರೆ ಸೈಕಲ್ಲುಗಳನ್ನು ಬಿಟ್ಟು ಮತ್ತೆಲ್ಲ ಚಲಿಸುವ ವಾಹನಗಳೂ ಇವನನ್ನು ಓವರ್ ಟೇಕ್ ಮಾಡುತ್ತಿದ್ದವು. ಒಂದು ದಿನ ತಡೆಯಲಾರದೇ ಕೇಳಿಬಿಟ್ಟಳು, "ಗೆಳೆಯಾ, ಏಕೆ ನೀನು ಇಷ್ಟು ನಿಧಾನ? ಬೆಂಗಳೂರಿನ ಟ್ರಾಫಿಕ್ಕಿನ ಬಗ್ಗೆ ಇಷ್ಟೆಲ್ಲ ಹೆದರಿಕೆಯೇ? ಅಥವಾ ಗಾಡಿಯ ಸಾಮರ್ಥ್ಯವೇ ಇಷ್ಟೇ?" ಮುಗ್ಧವಾಗಿರುವಂತೆ ಕೇಳಿದರೂ ವ್ಯಂಗ್ಯ ಧ್ವನಿಸುತ್ತಿತ್ತು. "ಹಾ ಹೌದು, ಎರಡೂ ನಿಜ ಎಂದೇ ತಿಳಿದುಕೋ" ಎಂದು ಹೊರಗೆ ಹೇಳಿ, ಮನಸ್ಸಿನಲ್ಲೇ "ತಾನು ನಿಧಾನವಾಗಿ ಹೋದರೆ ಅವಳ ಸಾನ್ನಿಧ್ಯ ಹೆಚ್ಚು ಹೊತ್ತು ಸಿಗುತ್ತದೆ" ಎಂಬ ನಿಜದ ಕಾರಣವನ್ನು ಮೆಲುಕು ಹಾಕಿದವನ ಧ್ವನಿ ತೋರಿಸದೇ ಮುಚ್ಚಿಟ್ಟುಕೊಂಡಿದ್ದ ಪ್ರೀತಿಯನ್ನು ಸ್ಫುರಿಸುತ್ತಿತ್ತು.
...
ಆ ಜಾಗ ನನಗೆ ಬೇಡ:
          ಅದು ಜನ ಕಿಕ್ಕಿರಿದು ತುಂಬಿದ್ದ ಬಸ್ಸು. ಹಿರಿಯ ನಾಗರೀಕರೊಬ್ಬರು ನಿಂತಿದ್ದರು. ಅವರು ನಿಂತಿದ್ದ ಜಾಗಕ್ಕೆ ಪಕ್ಕದಲ್ಲಿದ್ದ ಸೀಟಿನಿಂದ ಒಬ್ಬ ಇಳಿದಿದ್ದರಿಂದ ಆ ಸೀಟು ಖಾಲಿ ಆಯ್ತು. ಎಲ್ಲಿದ್ದನೋ ಒಬ್ಬ ನವಯುವಕ ಅರೆಕ್ಷಣದಲ್ಲಿ ಬಂದು ಕುಳಿತುಬಿಟ್ಟಿದ್ದ. ಕುಳಿತಮೇಲೆ ಹೆಮ್ಮೆಯಿಂದ ತನ್ನ ಚುರುಕುತನಕ್ಕೆ ತನ್ನನ್ನೇ ಪ್ರಶಂಸಿಸಿಕೊಳ್ಳಲೇನೋ ಎಂಬಂತೆ ಸುತ್ತಮುತ್ತ ನೋಡಿ ಜಗದ್ವಿಜಯದ ನಗೆನಕ್ಕ. ಪಕ್ಕದಲ್ಲಿ ನಿಂತಿದ್ದ ಹಣ್ಣು ಹಣ್ಣು ಮುದುಕರನ್ನು ನೋಡಿ ಅದೇನೆನ್ನಿಸಿತೋ ಸೀಟನ್ನು ಬಿಟ್ಟುಕೊಡಲು ತಯಾರಾದ, ಆ ಹಿರಿಯ ನಾಗರೀಕರೋ ಅಲ್ಲಿ ಕೂರಲು ಒಪ್ಪದೇ, " ಇದು ವಿಕಲಚೇತನರಿಗೆ ಕಾದಿರಿಸಿದ ಜಾಗ, ನನಗೆ ದೇವರು ಎರಡು ಎರಡು ಕೈ, ಕಾಲು ಹಾಗೂ ಎಲ್ಲ ಭಾಗಗಳನ್ನು ಸರಿಯಾಗಿ ಕೊಟ್ಟಿದ್ದಾನೆ" ಎಂದರು ಎಂಬಲ್ಲಿಗೆ ಆ ಜನತುಂಬಿದ ಬಸ್ಸಿನಲ್ಲಿ ಒಬ್ಬ ಹೀರೋ ಹುಟ್ಟಿದ್ದರು. 
...


7 comments:

  1. ಸುಮ್ನೆ ಒಂದಿಷ್ಟೂ ಟೈಟಲ್ಲು.....
    ೧)"ಆಕಸ್ಮಿಕ"
    ೨)ಗುರುವನ್ನು ಮೀರಿಸಿದ ಶಿಷ್ಯರು
    ೩)ಕಥೆಯಲ್ಲ ವಾಸ್ತವ!!!!
    ೪)ದೇವರ ಕೃಪೆ..


    ಚೆನಾಗಿದೆ ಸಾರ್....
    ಬರೆಯುತ್ತಿರಿ :)

    ReplyDelete
    Replies
    1. ಧನ್ಯವಾದಗಳು ಚಿನ್ಮಯ್. ಸಕ್ರಿಯವಾಗಿ ಓದಿ ಶೀರ್ಷಿಕೆಯನ್ನೂ ಸೂಚಿಸಿದ್ದಕ್ಕೆ.

      Delete
  2. Chennagide.Eradaneyadu ista vaytu...bareyutiri hige :-)

    ReplyDelete
    Replies
    1. vaishali avare,
      dhanyavaadagalu :) khushi aaytu nimma reply nodi :)

      Delete