Wednesday 15 June 2011

ಒಂದಿಷ್ಟು ಮೌಲ್ಯಗಳೂ-ಒಬ್ಬ ಹೆಚ್. ಓ. ಡಿ. ಯ ರಾಜಿನಾಮೆಯೂ


ಆಗಷ್ಟೇ ಥಿಯರಿ ಪರೀಕ್ಷೆಗಳು ಮುಗಿದು ಪ್ರಾಯೋಗಿಕ ಪರೀಕ್ಷೆಗಳು ಪ್ರಾರಂಭವಾಗಿದ್ದವು.ನೋಡನೋಡುತ್ತಿದ್ದಂತೆಯೇ ಅದೂ ಮುಗಿದುಹೋಗುವುದರೊಳಗಿತ್ತು.  ಎಲ್ಲರೂ ತಲೆಯ ಮೇಲೆ ಹತ್ತಿ ಕುಳಿತಿದ್ದ ಪರೀಕ್ಷಾಭೂತವನ್ನು ಕೆಳಗಿಳಿಸಿಕೊಂಡು ಹಗುರಾಗುವುದರೊಳಗಿದ್ದರು. ಆಗ ಬಂದಿತ್ತು ಆಘಾತ, PESEC ಬ್ರಾಂಚ್ ಕಂಡ ಒಬ್ಬ ಅತ್ಯುತ್ತಮ HOD ರಾಜೀನಾಮೆ ಕೊಟ್ಟಿದ್ದರು. ವಿದ್ಯಾರ್ಥಿವೃಂದಕ್ಕೆ ಏನೂ ತೋಚದೇ ಗರಬಡಿದಂತಾಗಿತ್ತು. ಮೊನ್ನೆ ಮೊನ್ನೆ GATEನ ಸಾಧನೆಗೆ ಅಭಿನಂದಿಸಿ ಖುಷಿ ಪಟ್ಟು, ಮುಂದಿನ ಸಲ ಅದಕ್ಕಿಂತ ಚೆನ್ನಾಗಿ ಮಾಡುವಿರಂತೆ ಎಂದು ಪ್ರೋತ್ಸಾಹಿಸಿ ಕಳಿಸಿಕೊಟ್ಟಿದ್ದ ಅದೇ HOD , ಈ ವರ್ಷವೂ ಬೇಸಿಗೆ ರಜೆಯಲ್ಲಿ ಉಚಿತ GATE  ಕ್ಲಾಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದ ಅದೇ HOD, ಹೀಗೆ ತುರ್ತಾಗಿ ರಾಜಿನಾಮೆ ಕೊಡುತ್ತಿದ್ದಾರೆ ಎಂಬ ಅಂಶವನ್ನು ಜೀರ್ಣಿಸಿಕೊಳ್ಳಲೇ ಸ್ವಲ್ಪ ಹೊತ್ತು ಬೇಕಾಯಿತು. ಹಾಗೆ ಗೊತ್ತಾದ ಮರುದಿನವೇ HODಯ ಕೋಣೆಯ ಎದುರು ಅವರ ವಿಧ್ಯಾರ್ಥಿಗಳ ಗುಂಪೇ ನೆರೆದಿತ್ತು. ಆ ಗುಂಪಿಗೆ(ನಾನೂ ಆ ಗುಂಪಿನಲ್ಲಿದ್ದೆ ಎಂಬುದನ್ನು ದಾಖಲಿಸುವುದು ಅನವಶ್ಯಕವಾದರೂ ದಾಖಲಿಸುತ್ತಿದ್ದೇನೆ.) ಅವರು ಕೊಟ್ಟ ಉತ್ತರದ ಬಗ್ಗೆ ಬರೆಯುವ ಮೊದಲು ಅದರ ಹಿಂದಿನ ದಿನ ನಡೆದ ಇದಕ್ಕೆ ಸಂಬಂಧವೇ ಇಲ್ಲ ಎಂದು ಮೇಲ್ನೋಟಕ್ಕೆ ಕಂಡರೂ ನಿಜವಾಗಿ ಸಂಬಂಧ ಪಟ್ಟಿರುವ  ಘಟನೆಯ ಬಗ್ಗೆ ಒಂದಿಷ್ಟು ಹೇಳುವುದು ಉಚಿತ.

ಅಂದು DC ಪ್ರಯೋಗಿಕ ಪರೀಕ್ಷೆ. ಓದಿದ್ದು ಕಡಿಮೆಯಾಗಿತ್ತೋ, ಅಥವಾ ಅಕಾರಣವಾಗಿ ಆಗಾಗ ಹುಟ್ಟುವ ತಾತ್ಕಾಲಿಕ ಜ್ಞಾನಶೂನ್ಯತೆಯೋ? ಏನೋ, ಸುಲಭದ ಪ್ರಯೋಗ ಬಂದಿದ್ದರೂ ಆ ಕ್ಷಣದಲ್ಲಿ ಏನೂ ತೋಚದಂತಾಗಿಹೋಯ್ತು. ಏನೋ ಕಷ್ಟ ಪಟ್ಟುಕೊಂಡು ಲಿಖಿತ ಭಾಗವನ್ನು ಪೂರ್ತಿಗೊಳಿಸಿದೆನಾದರೂ ಎಷ್ಟು ಒದ್ದಾಡಿಕೊಂಡರೂ ಪ್ರಯೋಗದ ಔಟ್ ಪುಟ್ ಬರಲಿಲ್ಲ. ತಲೆಹರಿದ ಮಟ್ಟಿಗೆ ಕ್ರಮಯೋಜನೆ-ವಿಕಲ್ಪಗಳನ್ನು ಅನ್ವಯಿಸಿದೆನಾದರೂ ಬಯಸಿದ ಉತ್ತರ ಬಾರದೇ ಹೋಯಿತು. ಯಾವತ್ತಿನ ಹಾಗೆ ಮತ್ತೊಂದಿಷ್ಟು ಯೋಚಿಸುವ ಕಷ್ಟಸಾಧ್ಯದ ದಾರಿಯನ್ನು ಬಿಟ್ಟು, ಗೆಳೆಯ ಶಿವದರ್ಶನ್ ನ್ನು ಕೇಳುವ ಅಡ್ದದಾರಿಯನ್ನು ಹಿಡಿದೆ. ಹಿಂದೊಮ್ಮೆ ಏಳನೇ ತರಗತಿಯಲ್ಲಿ ಹೀಗೇ ಕಾಪಿಮಾಡಿಕೊಂಡು ಅದಕ್ಕೆ ಪ್ರಾಯಶ್ಚಿತ್ತ ಪಟ್ಟುಕೊಂಡು ಬಿಟ್ಟಿದ್ದ ಚಾಳಿ ಮತ್ತೆ ಮರುಕಳಿಸಿತ್ತು ಎಂಬಲ್ಲಿಗೆ ಒಂದು ನೈತಿಕ ಅಧಃಪತನಕ್ಕೆ ದಾರಿ ಸುಗಮವಾಗಿತ್ತು. ೮ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದ ಮೌಲ್ಯಗಳನ್ನು ಒಂದು ಕ್ಷುಲ್ಲಕ ಕ್ಷಣದಲ್ಲಿ ಬಲಿಕೊಟ್ಟ ನನ್ನನ್ನು ಅಣಕಿಸುವಂತೆ ನನ್ನ ಎಲ್ಲಾ ಪ್ರಯತ್ನಗಳ ನಂತರವೂ ಔಟ್ ಪುಟ್ ಬರಲಿಲ್ಲ. ಅನಿಸಿತ್ತು ಆಗಲೇ, ನಾವು ನಂಬಿರುವ ಮೌಲ್ಯಗಳನ್ನು ಬಿಟ್ಟರೆ ಎಂದಿಗೂ ಸುಖವಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಂಬಿ ಕೆಟ್ಟವರಿಲ್ಲವೋ, ನಂಬದೇ ಉದ್ಧಾರ ಆದವರಿಲ್ಲವೋ! ( ಏನನ್ನು ಬೇಕಾದರೂ ಆಗಬಹುದು,ಯಾವ ಒಳ್ಳೆಯ ಅಂಶವನ್ನು ಬೇಕಾದರೂ ಆಗಿರಬಹುದು.) ನಾವು ನಂಬಿರುವುದನ್ನು ನಾವೇ ಪಾಲಿಸದೇ ಹೋದರೆ, ಆ ದೇವರೂ ( ಅವನು ಇದ್ದರೆ ?? ) ಮೆಚ್ಚಲಾರ ಎಂಬಲ್ಲಿಗೆ ಈ ಲೇಖನದ ಮೊದಲ ಭಾಗ ಮುಗಿಯುತ್ತದೆ.

ಮತ್ತೆ HODಯ ಉತ್ತರದ ಬಗ್ಗೆ ಬರೋಣ, ಅಂದು HOD ಯಾವ ಸ್ಥಿತಪ್ರಜ್ಞ ಯೋಗಿಗೂ ಕಮ್ಮಿಯಿಲ್ಲದ ಶಾಂತತೆಯಲ್ಲಿ ಕೂತಿದ್ದರೂ, ಮುಖದ ಮೇಲೆ ಇದ್ದ ನಗು ಬಲವಂತದಿಂದ ತರಿಸಿಕೊಂಡಿದ್ದು ಎಂದು ಸ್ಪಷ್ಟವಾಗಿ ತೋರುತ್ತಿತ್ತು. ದುಃಖಿತರಾಗೇನೂ ಕಾಣದಿದ್ದರೂ ಮಾಮೂಲಿಯಾಗೇನೂ ಇರಲಿಲ್ಲ, ಹಾಗೆ ಮಾಮೂಲಾಗಿ ಇರುಲೆಂದು ಬಯಸುವುದೂ ಕಟುಕತನವಾಗಬಹುದು. ಇರಲಿ, "ಕೊನೆಪಕ್ಷ ನಮ್ಮ, ಎಂದರೆ ನಿಮ್ಮ ವಿಧ್ಯಾರ್ಥಿಗಳ ಸಲುವಾಗಿಯಾದರೂ ನಿಮ್ಮ ನಿರ್ಧಾರವನ್ನು ಪುನರ‍್ ವಿಮರ್ಶಿಸಿ" ಎಂದು ನಾವು ಕೊನೆಯ ಅಸ್ತ್ರವೆಂಬಂತೆ ಕೇಳಿದ್ದೆವು. ಯಾರ ಮೇಲೂ ಆಪಾದನೆ ಹೊರಿಸದಂತೆ HOD ಮಾತುಗಳನ್ನು ಆರಿಸಿ ಹೇಳಿದ್ದರು**, " ನಾನು ನನ್ನ ಜೀವನದಲ್ಲಿ ಕೆಲವು ಮೌಲ್ಯಗಳನ್ನು ಪಾಲಿಸಿಕೊಂಡು ಬಂದಿದ್ದೇನೆ. ಈ ಕಾಲೇಜೂ ಇದರದ್ದೇ ಆದ ನೀತಿಗಳನ್ನು ಅಳವಡಿಸಿಕೊಂಡು ಬೆಳೆದುಕೊಂಡು ಬಂದಿದೆ.ಯಾವಾಗ ಇಬ್ಬರ ಮೌಲ್ಯಗಳಲ್ಲಿ ಹೊಂದಿಕೆಯಾಗುವುದಿಲ್ಲವೋ ಆಗ ಒಬ್ಬರು ಹೊಂದಿಕೊಳ್ಳಬೇಕಾಗುತ್ತದೆ. ಹಾಗೆ ಹೊಂದಿಕೊಳ್ಳಲಾರದೇ ಹೋದರೆ ಒಬ್ಬರು ಆ ವ್ಯವಸ್ಥೆಯಿಂದ ಹೊರಬರಬೇಕಾಗುತ್ತದೆ. ಇದೇ ಆಡಳಿತ ಕಟ್ಟಿದ ಕಾಲೇಜಿನಿಂದ ಅವರೇ ಹೊರಬರುವುದು ಸಾಧ್ಯವಿಲ್ಲವಾದ್ದರಿಂದ ನಾನು ಹೊರಹೋಗುತ್ತಿದ್ದೇನೆ.ಸಂಸಾರದಲ್ಲಿಯೂ ಅಷ್ಟೇ. ಇಬ್ಬರೂ ಒಂದಿಲ್ಲೊಂದು ವಿಷಯದಲ್ಲಿ ಹೊಂದಿಕೊಳ್ಳಬೇಕಾಗುತ್ತದೆ. ಎಲ್ಲ ಸಲವೂ ಒಬ್ಬರೇ ಹೊಂದಿಕೊಳ್ಳಬೇಕೆಂದರೆ ಬಿರುಕು ಹುಟ್ಟುವುದು ಸಹಜ. ಅಲ್ಲಿ ವಿಚ್ಛೇದನ ಆಗಬಹುದು. ಯಾರದ್ದೇನೂ ತಪ್ಪು ಇರಬೇಕೆಂದೇನೂ ಇಲ್ಲ. ಅವರಿಬ್ಬರಲ್ಲಿ ಹೊಂದಾಣಿಕೆ ಇಲ್ಲ ಅಷ್ಟೆ. ಇಲ್ಲೂ ಒಬ್ಬರ ವಿಚಾರಗಳನ್ನು ಮತ್ತೊಬ್ಬರ ಮೇಲೆ ಹೇರಲು ಹೋದರೆ ಘರ್ಷಣೆ ಮಾಮೂಲೇ. ಪ್ರತಿಯೊಂದು ಸಲವೂ ಒಬ್ಬರೇ ರಾಜಿ ಮಾಡಿಕೊಳ್ಳಬೇಕೆಂಬುದೂ ನ್ಯಾಯವಲ್ಲವಷ್ಟೇ. ನೀವು ನಂಬಿಕೊಂಡು ಬಂದ ಮೌಲ್ಯಗಳನ್ನು ಎಂದಿಗೂ ಬಿಡಬೇಡಿ. ಅವುಗಳನ್ನು ಬಿಟ್ಟ ಮೇಲೆ ನೀವೆಂದಿಗೂ ಯಶಸ್ವಿಯಾಗಲಾರಿರಿ. ಅಷ್ಟಕ್ಕೂ ನಾನು ಬರುವ ಮೊದಲೂ ಈ ಕಾಲೇಜು ಅಗ್ರಶ್ರೇಣಿಯಲ್ಲೇ ಇತ್ತು, ಇಂದಿಗೂ ಇದೆ. ನೀವರೂ ನಾನು ಈ ಕಾಲೇಜಿನಲ್ಲಿ ಇರುವೆನೆಂದು ಈ ಕಾಲೇಜನ್ನು ತೆಗೆದುಕೊಂಡವರಲ್ಲ, ಅಲ್ಲವೇ? ಇಲ್ಲಿಗೆ ಬಂದ ಮೇಲೆ ನನ್ನನ್ನು ಮೆಚ್ಚಿರಬಹುದು. ಇಷ್ಟು ಚಿಕ್ಕ ಸಮಯದಲ್ಲಿ ಹೀಗೆ ಒಂದು ಕಾಲೇಜನ್ನು ನಾಡಿನ ಅತ್ಯುತ್ತಮ ಕಾಲೇಜುಗಳಲ್ಲಿ ಒಂದಾಗಿ ಮಾಡಿದ್ದಾರೆ ಎಂದರೆ ಅದೇನೂ ಕಡಿಮೆ ಸಾಧನೆಯಲ್ಲ. ಯಾರಿಗೆ ಗೊತ್ತು, ನನಗಿಂತ ಬಹಳ ಉತ್ತಮ HODಯನ್ನು ಕರೆತರಬಹುದು. ಈಗ ನಾವು ಪರಸ್ಪರರಿಗೆ ಶುಭ ಹಾರೈಸಿ ಬೇರಾಗುವುದಷ್ಟೇ ಉಳಿದಿರುವುದು." ಎಂದು ಹೇಳಿ ಕೊನೆಯಲ್ಲಿ PESITನ ಹುಡುಗರನ್ನೊಂದಿಷ್ಟು ಹೊಗಳಿ ಇವತ್ತಿಗೆ ಇಷ್ಟು ಮಾತು ಸಾಕು
ಎಂಬಂತೆ ಬೀಳ್ಕೊಡುಗೆಯ ನಗೆ ನಕ್ಕರು ಎಂಬಲ್ಲಿಗೆ ಎರಡನೆಯ ಭಾಗವೂ ಮುಗಿಯುತ್ತದೆ.

ಆಗಿದ್ದು ಇಷ್ಟೇ, ಆಗಬೇಕಾದ ಆಲೋಚನೆಗಳು ಬಹಳಷ್ಟಿವೆ. ಹಾಗೆ HOD ಮೌಲ್ಯ ಮತ್ತು ನೀತಿಗಳ ಬಗ್ಗೆ ಹೇಳುತ್ತಿದ್ದರೆ ನನಗೆ ಹಿಂದಿನ ದಿನ ನಾನು ಮಾಡಿದ್ದ ಕೃತ್ಯದ ನೆನಪಾಗಿ ನಾಚಿಕೆಯೆನ್ನಿಸುತ್ತಿತ್ತು. ಸರಿಯಾದ ಸಮಯದಲ್ಲಿ ಇವರಂತೆ ಎಚ್ಚೆತ್ತುಕೊಳ್ಳದೇ ಹೋಗಿದ್ದರಿಂದ , ನನ್ನ ಮೌಲ್ಯಗಳನ್ನು ಬಿಡಬಾರದು ಎಂಬ ಪ್ರಜ್ಞೆ ಮೂಡದೇ ಇದ್ದುದರಿಂದಲೇ ತಾನೆ, ಮತ್ತೆ ಹಾಗೆ ಪ್ರಾಯಶ್ಚಿತ್ತ ಪಡುವ ಹಾಗೆ ಆಗಿದ್ದು. ಆ ಪ್ರಾಯಶ್ಚಿತ್ತದಿಂದ ಹುಟ್ಟಿದ ಅಪರಾಧಿ ಪ್ರಜ್ಞೆ, ತಪ್ಪು ಮಾಡಬಾರದು ಎಂಬ ಸಾಮಾನ್ಯ ಜ್ಞಾನ ಮುಂದೆಂದೂ ಇಂತಹ ಘಟನೆ ಮರುಕಳಿಸದಂತೆ ತಡೆಯುತ್ತದೆ ಎಂದು ನಂಬುತ್ತ ಈ ಲೇಖನಕ್ಕೆ ಅಂತ್ಯ ಹೇಳುತ್ತಿದ್ದೇನೆ.

** - ಇಲ್ಲಿ ಭಾಷಾಂತರದಲ್ಲಿ ತಪ್ಪಾಗಿರುವ ಸಾಧ್ಯತೆಯಿರುವುದರಿಂದ ಎಲ್ಲ ತಪ್ಪುಗಳಿಗೆ ಸಂಪೂರ್ಣವಾಗಿ ನಾನೇ ಹೊಣೆ.
subrahmanyahegde.wordpress.com 

4 comments:

  1. Hmmmmm.....Thoughtful!

    ReplyDelete
  2. @Subbu
    Adbhuta :) (ur writing style) :P
    Naanoo same principle follow madta eddi... copy madaD bittu sikkapatte varsha aTu... (After my primary school)
    and ur HOD's words are 100% true...

    ReplyDelete
  3. Uttama ankana :)
    Honesty mechchabeku :)

    ReplyDelete
  4. hey please fill the name of yours while commenting so that i come to know who told what. no offence. :)

    ReplyDelete