Sunday 24 July 2011

ನಾವೇಕೆ ದೇವರನ್ನು ನಂಬಬೇಕು?



ದೇವರು ನಿಜವಾಗಲೂ ಇದ್ದಾನೆಯೇ?
ಈ ಪ್ರಶ್ನೆ ಇಂದು ನಿನ್ನೆಯದಲ್ಲ, ನನಗೆ ಬುದ್ಧಿ ಬಂತು ಎಂದು ನಾನು ತಿಳಿದುಕೊಂಡಾಗಿನಿಂದ ಎಷ್ಟು ಸಹಸ್ರ ಕೋಟಿ ಸಲ ನನಗೆ ನಾನೇ ಇದನ್ನು ಕೇಳಿಕೊಂಡಿದ್ದೇನೋ? ಅಷ್ಟೂ ಸಲವೂ ಒಂದೊಂದು ಉತ್ತರ ಸಿಕ್ಕಿದೆಯಾದರೂ ಪ್ರತೀ ಸಲ ಅದು ಹಿಂದಿನ ಸಲಕ್ಕಿಂತ ವಿಭಿನ್ನವಾಗಿ ಬಂದಿದ್ದು ಒಂದು ತಮಾಷೆಯ ವಿಷಯ.ಮೊನ್ನೆ ಮತ್ತೊಂದು ಬಾರಿ ಹಳೆಯ ಪ್ರಶ್ನೆ ಹೊಸ ರೂಪದಲ್ಲಿ ಹೆಡೆಯೆತ್ತಿ ಎದ್ದು ನಿಂತಾಗ, ನಾನು ಆಸ್ತಿಕನೇ ನಾಸ್ತಿಕನೇ ಎಂಬ ಪ್ರಶ್ನೆ ಮತ್ತಿಷ್ಟು ದಟ್ಟವಾಯಿತು. ಆಸ್ತಿಕನೊಬ್ಬನು ದೇವರನ್ನು ತಾನೇ ಕಂಡಿರುವ ಹಾಗೆ ಮಾತನಾಡುವಾಗ ಹುಟ್ಟು ನಾಸ್ತಿಕನಂತಾಡುವ ನಾನೇ, ಚಾರ್ವಾಕನ ದತ್ತು ಮಕ್ಕಳ ತರಹ ಮಾತನಾಡುವವರ ಜೊತೆಗೆ ಪಕ್ಕ ದೈವಭಕ್ತನ ತರಹ ಆಡುತ್ತೇನೆ.ಅದಿರಲಿ ಬಿಡಿ, ನನ್ನ ಬರಹವನ್ನು ಕೇವಲ ತಲೆಬರಹದ ವ್ಯಾಪ್ತಿಗಷ್ಟೇ ಮಿತಿಗೊಳಿಸಿ, ದೇವರು ಇರುತ್ತಾನೆ ಎಂದೇ ಭಾವಿಸಿ/ನಂಬಿಕೊಂಡು, ನಾವು ಶ್ರೀಸಾಮಾನ್ಯರೆನಿಸಿಕೊಂಡವರು ಏಕಾದರೂ ದೇವರನ್ನು ನಂಬಬೇಕು ಎಂಬುದಷ್ಟಕ್ಕೇ ಪ್ರಸ್ತುತದ ಪ್ರಶ್ನೆಯನ್ನು ಸೀಮಿತಗೊಳಿಸಿಕೊಂಡು ಮುಂದುವರಿಯುತ್ತಿದ್ದೇನೆ.
’ನಾವೇಕೆ ದೇವರನ್ನು ನಂಬಬೇಕು?’
ಮೊದಲನೆಯದಾಗಿ ಮತ್ತೇನೂ ಅಲ್ಲದೇ ಹೋದರೂ ಒಂದು ’ನಂಬಿಕೆ’ಯ ಕಾರಣಕ್ಕಾಗಿಯಾದರೂ ದೇವರು ಎಂಬ ಒಬ್ಬ ವ್ಯಕ್ತಿ ಅಥವಾ ಒಂದು ವಿಚಾರ ಬೇಕು. ಹೌದು, ನಂಬಿಕೆ ಏನನ್ನಾದರೂ ಮಾಡಬಲ್ಲುದು. ಮೂಕನನ್ನು ವಾಚಾಳಿಯಾಗಿಸಬಲ್ಲದು, ಕುರುಡನು ಗಿರಿಯನ್ನು ಹತ್ತುವಂತೆ ಮಾಡಬಲ್ಲುದು, ಕೊರಡ ಕೊನರಿಸಬಲ್ಲುದು, ಶಿಲೆಯನ್ನು ಅಹಲ್ಯೆಯಾಗಿಸಬಲ್ಲುದು.  ನಂಬಿಕೆ ಎಂಬುದೇ ಒಂದು ಶಕ್ತಿ, ಜೀವನದಲ್ಲಿ ನಾವು ಮಾಡಿರುವ ಒಳ್ಳೆಯದು ಕೆಟ್ಟದ್ದನ್ನೆಲ್ಲ ಲೆಕ್ಕ ಇಟ್ಟು ದೇವರು ಫಲ ಕೊಡುತ್ತಾನೆ ಎಂಬುದು ಒಂದು ನಂಬಿಕೆ. ನನ್ನ ಯಾವ ಗೆಳೆಯರೂ ನನ್ನನ್ನು ಅರ್ಥ ಮಾಡಿಕೊಳ್ಳಲಾರರು ಎಂದುಕೊಳ್ಳುವಾಗ ದೇವರಿಗೆ ಸಿಗುವ ವಿನಾಯತಿ ಅದೇ ನಂಬಿಕೆಯ ಮತ್ತೊಂದು ರೂಪ, ಅದು ದೇವರಾಗಿರಬಹುದು, ದೈವವಾಗಿರಬಹುದು. ಒಂದು ಅಮೂರ್ತ ಶಕ್ತಿಯನ್ನು ನಮ್ಮ ಇಂದ್ರಿಯಗಳ ಮಟ್ಟಿಗೆ ಸಾಕ್ಷಾತ್ಕರಿಸಿಕೊಡಲು ಒಂದು ಮೂರ್ತ ಸ್ವರೂಪದ ಅವಶ್ಯಕತೆಯಾಗಿ ದೇವರು ಇದ್ದಾನೆ. ಪರಿಸ್ಥಿತಿ ಕೈ ಮೀರಿ ಹೋದಾಗ, ಈ ಜಗತ್ತಿನ ಯಾವ ಭೌತ ಶಕ್ತಿಯೂ ಇನ್ನು ಸಹಾಯ ಮಾಡಲಾರದು ಎಂದಾಗ ಈ ’ನಂಬಿಕೆ’ ಎಂಬ ಮಾಯಾಶಬ್ದ ನಿಜವಾಗಿಯೂ ಚಮತ್ಕಾರವನ್ನು ಮಾಡಬಲ್ಲುದು. ’ನಾವು ಅತಿಕಷ್ಟದಲ್ಲಿರುವಾಗಲೂ ಯಾವುದೋ ಒಂದು ಶಕ್ತಿ ನಮಗೆ ಸಹಾಯ ಮಾಡಬಲ್ಲುದು’ ಎಂಬ ನಂಬಿಕೆಯಿದೆಯಲ್ಲಾ, ಅದು ನಮ್ಮ ಮಾನಸಿಕ ಸ್ಥೈರ್ಯ ಬಿದ್ದುಹೋಗದಂತೆ ಕಾಪಾಡಿ, ಸದ್ಯದ ತೊಂದರೆಯಿಂದ ಹೊರಬರುವ ಶಕ್ತಿಯನ್ನು ನಮಗೆ ಕೊಡುತ್ತದೆ. ದೇವರನ್ನು ನಂಬಲೇ ಬಾರದೆಂದು ಹಠ ತೊಟ್ಟವರು ಅಥವಾ ನಿಜವಾಗಿಯೂ ಆ ಮಾನಸಿಕ ಸ್ಥೈರ್ಯ ಇರುವವರು ಇದನ್ನು ಅಲ್ಲಗಳೆಯಬಹುದಷ್ಟೇ!
ನನಗೆ ಕಾಣುವ ಎರಡನೆಯ ಕಾರಣ ’ಹೆದರಿಕೆ’. ’ದುಷ್ಟ ಶಿಕ್ಷಕ, ಶಿಷ್ಟ ರಕ್ಷಕ’ ಎಂಬ ದೇವರ image ಇದೆಯಲ್ಲಾ, ಅದು ಚಿಕ್ಕ ಮಕ್ಕಳು ಹಠ ಮಾಡುವುದರಿಂದ ಹಿಡಿದು ದೊಡ್ಡವರು ಕಳ್ಳತನ ಮಾಡುವುದರವರೆಗೆ ಬಹಳ ಅನಪೇಕ್ಷಿತ ಕಾರ್ಯಗಳನ್ನು ನಿಲ್ಲಿಸಬಲ್ಲುದು. ನಮಗೇ, ಆರಕ್ಷಕ ವ್ಯವಸ್ಥೆಯ ಹೆದರಿಕೆಯಿಲ್ಲದೇ ಇದ್ದಿದ್ದರೆ ನಾವಿಷ್ಟು ನಾಗರೀಕರ ಹಾಗೆ ಬದುಕುತ್ತಿದ್ದೆವೋ? ನಾವು ಜನಸಾಮಾನ್ಯರು ಶಿಕ್ಷೆಯ ಹೆದರಿಕೆಯಿಲ್ಲದೇ ಹೋದರೆ ತಪ್ಪು ಎನಿಸಿದರೂ ಅದನ್ನು ಮಾಡದೇ ಹೋಗಲಾರೆವು, ಅಲ್ಲವೇ? ಹಾಗೆಯೇ ದೇವರು ಈ ತಪ್ಪು ಮಾಡದಂತೆ ತಡೆಯುವ ಆರಕ್ಷಕ, ಆದರೆ ಅವನ ಶಕ್ತಿ, ವ್ಯಾಪ್ತಿ ದೊಡ್ಡದು. ಎಷ್ಟೋ ಜನರು ನರಕದ ಶಿಕ್ಷೆಗಂಜಿಯೇ ಒಳ್ಳೆಯವರಾಗಿ ಉಳಿದಿದ್ದಾರೆ ಎಂದರೆ ಸ್ವಲ್ಪ ಉತ್ಪ್ರೇಕ್ಷೆಯಾದೀತೇನೋ, ಆದರೆ ಒಂದು ದೃಷ್ಟಿಯಿಂದ ಅದು ನಿಜ. ಮನಸ್ಸಾಕ್ಷಿಯ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದವರಿಗೆ ದೇವರು ಅತ್ಯಗತ್ಯ.
ದೇವರ ಅವಶ್ಯಕತೆ ಮತ್ತೆ ಬರುವುದು ಅಹಂ ಎಂಬ ಒಂದು ಅರಿಷಡ್ವರ್ಗವನ್ನು ಹತ್ತಿಕ್ಕಲು. ನಾವೇ ಸರ್ವೋಚ್ಚರು ಎಂದು ಭಾವಿಸಿ, ಅದನ್ನೇ ನಿಜ ಎಂದು ನಂಬಿಕೊಂಡುಬಿಡುವ ಮನುಷ್ಯನ ಮೂಲ ಲಕ್ಷಣವನ್ನು ಒಂದು ಮಿತಿಯಲ್ಲಿಡಲು ಜಗತ್ತಿನ ಹೋಲಿಕೆಗಳಿಗೆ ಮೀರಿದ ಒಬ್ಬ ಅಪ್ರಮೇಯ ದೇವರೇ ಬೇಕು. ಏನೇನನ್ನೋ ಕಂಡುಹಿಡಿದು ಯಾವ ಯಾವುದೋ ವೈಚಿತ್ರ್ಯಗಳನ್ನು ವಿವರಿಸಿದ ವಿಜ್ಞಾನವೇ ಅರ್ಧಜ್ಞಾನವೆನಿಸಿಕೊಳ್ಳಬೇಕಾದರೆ ಇನ್ನೂ ಸಾಧಿಸಬೇಕಾಗಿರುವುದೇನೋ ಇದೆ , ಇನ್ನೂ ಕಂಡುಕೊಳ್ಳಬೇಕಾಗಿರುವುದೇನೋ ಇದೆ ಎಂಬುದನ್ನು ಆ ಅಸ್ತಿತ್ವ ತೋರಿಸುತ್ತದೆ. ನಮಗೆ ಅರ್ಥವೇ ಆಗದ ದೇವರ ಅಸ್ತಿತ್ವದ ಬಗ್ಗೆ ಮಾತನಾಡುವ ಹಕ್ಕು ನಮಗೆಷ್ಟರ ಮಟ್ಟಿಗೆ ಇದೆ? ಏನೇ ಇರಲಿ, ನಾವೆಷ್ಟು ಚಿಕ್ಕವರು ಎಂಬುದರ ಅರಿವು ನಮ್ಮಲ್ಲಿ ಹುಟ್ಟುವುದಕ್ಕೆ ನಮಗಿಂತ ಎಲ್ಲದರಲ್ಲಿಯೂ ಶ್ರೇಷ್ಠವಾದ ಒಬ್ಬ ದೇವರು ಬೇಕು.
ಮತ್ತೊಂದು ಅಂಶ, ಪ್ರಾಚೀನ ಕಾಲದಿಂದ ಹಿಡಿದು ಇಂದಿನವರೆಗೂ ಸಾಹಿತ್ಯ, ಚಿತ್ರಕಲೆ, ಸಂಗೀತ ಎಲ್ಲಾ ಕಲಾಪ್ರಕಾರಕ್ಕೂ ದೇವರೇ ಮೂಲಸೆಲೆ, ಸ್ಪಷ್ಟವಾಗಿ ತಿಳಿಯದ ದೇವರ ಸ್ವರೂಪ ಎಷ್ಟೋ ಕಲಾನವೀನತೆಗೆ ದಾರಿಮಾಡಿಕೊಟ್ಟಿದೆ.
ಪಂಪ, ರನ್ನ ,ಕುಮಾರವ್ಯಾಸಾದಿಗಳು ಬರೆದದ್ದೂ ದೇವರ ಕಥೆಯನ್ನೇ, ದಾಸಶ್ರ‍ೇಷ್ಟರು, ಅಕ್ಕ, ಬಸವಣ್ಣಾದಿಗಳು ಹಾಡಿಹೊಗಳಿದ್ದು ದೇವರ ವಿವಿಧ ರೂಪಗಳನ್ನೇ, ಅಜಂತ, ಎಲ್ಲೋರಾಗಳಲ್ಲಿ ಶಿಲೆ ಕಲೆಯಾಗಿದ್ದು ದೇವರ ಮೂರ್ತಿಯ ರೂಪದಲ್ಲಿಯೇ! ಒಂದು ವೇಳೆ ದೇವರೆಂಬ ವಿಚಾರವೇ ಇಲ್ಲದಿದ್ದರೆ ಕಲೆಗೆ ಆಗುತ್ತಿದ್ದ ಹಾನಿ ಅಪಾರ.
ಈ ವ್ಯಾಪಾರೀಕೃತ ಕಾಲದಲ್ಲಿ ದೇವರು ಕೇವಲ ಅಧ್ಯಾತ್ಮಿಕ ಶಕ್ತಿಯಾಗಷ್ಟೇ ಉಳಿಯದೇ ಎಷ್ಟೋ ಜನರ ಉದ್ಯೋಗವಾಗಿದ್ದಾನೆ ಉದಾ: ದೇಶದ ಕೋಟ್ಯಾಂತರ ದೇವಸ್ಥಾನಗಳಲ್ಲಿರುವ ಅರ್ಚಕರ ಹೊಟ್ಟೆಪಾಡಿನ ಪ್ರಶ್ನೆಯೇ ದೇವರು. ಈ ಒಂದು ನಂಬಿಕೆಯನ್ನು ಹಣವಾಗಿ ಪರಿವರ್ತಿಸಿಕೊಳ್ಳಲೇ ಎಷ್ಟೋ ದೇವಸ್ಥಾನಗಳು, ದೇವಸ್ಥಾನ ಸರಪಳಿಗಳು*( ಹೌದು, ಹೋಟೆಲ್ ಉದ್ಯಮದ ಹಾಗೆಯೇ) ಈಗಲೂ ಜನ್ಮತಾಳುತ್ತಿವೆ.ಅದು ತಪ್ಪು ಎಂದು ನಮಗೆ ಅನ್ನಿಸಿದರೂ ಅವರ ಹೊಟ್ಟೇಪಾಡೂ ನಡೆಯಬೇಕೆಂಬುದೂ ಸತ್ಯವಷ್ಟೇ!
ಇನ್ನೂ ಎಷ್ಟೋ ವಿಷಯಗಳಿವೆಯಾದರೂ ಸದ್ಯಕ್ಕೆ ಇಷ್ಟು ಸಾಕೆಂದುಕೊಂಡು ಒಂದು ಪೂರ್ಣವಿರಾಮವನ್ನಿಡುತ್ತಿದ್ದೇನೆ.

ಟಿಪ್ಪಣಿ:
೧. * - ಒಂದು ಈ ತರಹದ ಸರಪಳಿಯ ಹೆಸರನ್ನು ಬರೆಯುವ ಬಯಕೆಯನ್ನು ಸುಮ್ಮನೇ ಅದುಮಿಡುತ್ತಿದ್ದೇನೆ. :-|
೨.ಈ ಲೇಖನದ ಅರ್ಥ ನಾನು ಆಸ್ತಿಕ ಎಂದಾಗಲೀ ನಾಸ್ತಿಕ ಎಂದಾಗಲೀ ಅಲ್ಲ.

1 comment:

  1. Nice one :)
    Yashi
    http://www.justfreemoney.co.cc/

    ReplyDelete