Saturday 20 August 2011

ಒಂದು ಡೈರಿಯ ಕಥೆ


ಒಂದು ಕಥೆ ; ಪೂರ್ತಿಯಾಗಿ ಒಂದೇ ಸಲಕ್ಕೆ ಬರೆದರೆ ಬಹಳ ದೊಡ್ಡದಾಗಬಹುದೆಂಬ ಹೆದರಿಕೆಯಿಂದ ಎರಡು ಭಾಗವಾಗಿ ಅತಿಚಿಕ್ಕ ಧಾರಾವಾಹಿಯಾಗಿ ಪೋಸ್ಟಿಸುತ್ತಿದ್ದೇನೆ. 

ಮೊದಲ ಭಾಗ : 

ಇಂದಿಗೂ ನೆನಪಿದೆ . ಅದು ಶನಿವಾರ ೨೯ನೇ ತಾರಿಕು . ಮಧ್ಯಾಹ್ನವಷ್ಟೇ ಸೆಮಿಸ್ಟರ್ ಪರೀಕ್ಷೆ ಮುಗಿದಿತ್ತು., ಬೆಂಗಳೂರಿನ ಬಿಂಕದ ಬಲೆಯಿಂದ ತಪ್ಪಿಸಿಕೊಂಡು , ಬೆಳಗಾವಿಯೆಂಬ ಸ್ವಚ್ಛಂದ ಆಕಾಶದಲ್ಲಿಹಾರಲು ಮನವು ತವಕಿಸುತ್ತಿತ್ತು. ಬೇರೆಲ್ಲೂ ಜಾಗ ಸಿಗದೇ , ಬಹುತೇಕ ತುಂಬಿದ್ದ ಸಾಮಾನ್ಯ ಬೋಗಿಯಲ್ಲಿ ಜಾಗ ಹಿಡಿಯುವಲ್ಲಿ ನಾನು ನೃಪತುಂಗ (ನನ್ನ ದೊಡ್ಡಮ್ಮನ ಮಗ , ನನಗಿಂತ ಒಂದು ವರ್ಷಕ್ಕೆ ದೊಡ್ಡವನು , ನಮ್ಮದೇ ಕಾಲೇಜು) ಇಬ್ಬರೂ ಸುಸ್ತಾಗಿ ಹೋಗಿದ್ದೆವು. ನಮ್ಮ ಅಕ್ಕ-ಪಕ್ಕದಲ್ಲಿ ಬರೀ ಗಂಡು ಹುಡುಗರೇ ಇದ್ದದ್ದನ್ನು ಗಮನಿಸಿದಾಗ ಇರಿಸು-ಮುರಿಸಾಗಿದ್ದು ನಿಜ. ಆದರೆ ಅವರಲ್ಲಿಬ್ಬರು ನೃಪತುಂಗನ ಶಾಲಾ ಸಹಪಾಠಿಗಳೆಂದೂ , ಅವರ ಸಹಾಯದಿಂದಲೇ ನಮಗೇ ಸೀಟು ಸಿಕ್ಕಿದಂದು ನೃಪತುಂಗನಿಂದ ತಿಳಿದು ಬಂದಾಗ ಕೃತಜ್ಞತೆ ಮೂಡಿತ್ತು . ಹಿಂದಿನ ದಿನ night out  ಮಾಡಿದ್ದರಿಂದಲೇ ಏನೋ , ಎಂದೂ ರೈಲಿನಲ್ಲಿ ನಿದ್ದೆ ಮಾಡದ ನನಗೂ ಸ್ವಲ್ಪ ಕಣ್ಣು ಮುಚ್ಚಿ ಬಂದಂತಾಗುತ್ತಿತ್ತು.ಹೀಗೆ ತೂಕಡಿಸುತ್ತಿರುವಾಗ ಕಾಲ ಮೇಲೆ ಏನೋ ಯಮಭಾರದಂತದ್ದು ಬಿದ್ದಂತಾಯ್ತು. ಕಣ್ಣುಜ್ಜಿ ನೋಡಿದರೆ ಎದುರು ಬದಿಯಲ್ಲಿ ಕುಳಿತಿದ್ದ ಹುಡುಗರಲ್ಲಿ ಒಬ್ಬ ಕೆಳಗೆ ಬಿದ್ದುಕೊಂಡಿದ್ದ. ನನ್ನ ಕಾಲಗಂಟಿನ ಮೇಲೆ ಬಿದ್ದದ್ದು ಅವನ ತಲೆ ಎಂದು ತಿಳಿದು ಭಯಂಕರ ಸಿಟ್ಟು ಬಂತು.
"ರೀ , ಮಿಸ್ಟರ್, ವಿದ್ಯಾವಂತರ ತರಹ ಕಾಣ್ತೀರಾ, ಆದರೂ ಹೀಗಡ್ತೀರಾ, ಹೆಂಗಸರ ಜೊತೆ ಹೇಗೆ behave ಮಾಡಬೇಕು ಅಂತ ಗೊತ್ತಗಲ್ವಾ, ಛೀ........ " ಇನ್ನೂ ಏನೇನೋ ಬೈದುಬಿಡುತ್ತಿದ್ದೆನೇನೋ, ನೃಪತುಂಗ ತಡೆಯದೇ ಹೋಗಿದ್ದರೆ , ಕೆಳಗೆ ಬಿದ್ದಾತನ ಜೀವವಿಲ್ಲದ ಒಂದು ಕಾಲನ್ನು ನೋಡದೇ ಇದ್ದಿದ್ದರೆ. ಒಂದು ಕಾಲಿನ ಮೊಣಕಾಲಿನ ಕೆಳಗಿನ ಭಾಗ ಜೀವವನ್ನೇ ಕಳೆದುಕೊಂಡಿತ್ತು. . ಪಾಪ ಎನ್ನಿಸಿತಾದರೂ "sorry" ಎಂದು ಕೇಳಲು ಅಹಂ ಅಡ್ಡ ಬಂದು ಸುಮ್ಮನಾಗಿ , ಸರಿದು ಕಿಟಕಿಯಾಚೆಗಿನ ಕತ್ತಲನ್ನು ದಿಟ್ಟಿಸುತ್ತಾ ಕುಳಿತೆ.
ಹಾಗೇ ಕುಳಿತವಳಿಗೆ ಬೆಳಿಗ್ಗೆ ನೃಪತುಂಗ ಹುಬ್ಬಳ್ಳಿಯಲ್ಲಿ ಇಳಿಯುವ ಮೊದಲು ಎಬ್ಬಿಸಿದಾಗಲೇ ಎಚ್ಚರವಾಗಿದ್ದು. ನೃಪತುಂಗನಿಗೆ bye  ಮಾಡಿ ನನ್ನ ಸೀಟಿಗೆ ಬಂದು ಕೂರುವುದರೊಳಗೆ ಅವನದ್ದೇ ಫೊನು " ಏ ಅನಾಮಿಕಾ , ನಾನು ರೈಲಿನಲ್ಲೇ ಒಂದು ಬ್ಯಾಗ್ ಬಿಟ್ಟೆ , ಕಪ್ಪು ಬಣ್ಣದ್ದು . ಒಂದು ಸಲ ನೋಡಿಬಿಡು . " ಹೌದು , ನನ್ನ ಸೀಟಿನ ಮುಂದೇ ಇತ್ತು , ಅದನ್ನು ತೆಗೆದು ನನ್ನ ಸೀಟಿನ ಕೆಳಗಿದ್ದ ನನ್ನ ಲಗ್ಗೇಜಿನ ಜೊತೆ ಸೇರಿಸಿಟ್ಟೆ. ಅಕ್ಕ ಪಕ್ಕ , ಎದುರಿಗಿದ್ದ ಹುಡುಗರೆಲ್ಲಾ ಹುಬ್ಬಳ್ಳಿಯಲ್ಲಿಯೇ ಇಳಿದಿದ್ದರು. ಸ್ವಲ್ಪ ಹೊತ್ತಿಗೇ ಪಕ್ಕದ ಬೋಗಿಯಿಂದ ಮತ್ತೊಬ್ಬ ಬಂದು ಒಂದು ಕಪ್ಪು ಬ್ಯಾಗ್ ನ್ನು ಹುಡುಕತೊಡಗಿದಾಗ ನನಗಾಶ್ಚರ್ಯ, ಅವನನ್ನುಕೇಳಿಯೇ ಬಿಟ್ಟೆ .
" ನೀವು ಹುಡುಕುತ್ತಿರುವ ಬ್ಯಾಗ್ ನೃಪತುಂಗ ನದ್ದೇ? "
" ಅಲ್ಲ, ನನ್ನ ಫ್ರೆಂಡ್ ಪ್ರಭಂಜನನದ್ದು . wildcraft ಬ್ಯಾಗ್. ಅವನು ಹುಬ್ಬಳ್ಳಿಯಲ್ಲಿ ಇಳಿದುಕೊಂಡ. ನಾನು ಬೆಳಗಾವಿಗೆ ಹೋಗುವವನಿದ್ದುದರಿಂದ ಹುಡುಕುತ್ತೇನೆಎಂದು ಒಪ್ಪಿಕೊಂಡೆ" ಎಂದು ಹೇಳಿ, " ನೀವೇನಾದರೂ ನೋಡಿದಿರಾ ?" ಎಂದು ಕೇಳಿದ .
ಸುತ್ತ ಮುತ್ತ ಕಣ್ಣು ಹಾಯಿಸಿ ಎಲ್ಲೂ ಕಾಣದಾದಾಗ " ನೋಡಿಲ್ಲವಲ್ಲಾ" ಎಂದೆ.
ಬೆಳಗಾವಿಯಲ್ಲಿ ರೈಲು ನಿತ್ತು ಇನ್ನೇನು ಇಳಿಯಬೇಕು ಎನ್ನುವಷ್ಟರ ಹೊತ್ತಿಗೆ ನೃಪತುಂಗನ ಮತ್ತೊಂದು ಕಾಲ್ " ಸಿಕ್ತೇನೇ ನನ್ನ ಬ್ಯಾಗ್ , diesel  ಅಂತ ಬರಕಂಡಿದೆ ನೋಡು,...." ಏನೇನೋ ಹೇಳುತ್ತಿದ್ದ . ನಾನು ತೆಗೆದಿರಿಸಿಕೊಂಡಿದ್ದನ್ನು ನೋಡಿದರೆ wildcraft , ಆದ ಪ್ರಮಾದದ ಅರಿವಾಯ್ತು, ಆ ಹುಡುಗ ಕೇಳಿದಾಗ ಒಂದು ಸಲ ನೋಡುವ ವ್ಯವಧಾನವನ್ನು ತೋರದೇ " ನೋಡಿಲ್ಲ" ಎಂದ ತಪ್ಪಿಗೆ ಮತ್ತೊಂದು ಬ್ಯಾಗನ್ನೂ ಹೊತ್ತು ಮನೆಗೆ ಬಂದೆ.
ಮನೆಗೆ ಬಂದರೆ ರೈಲಿನ ಕಥೆಯ ಸುಳಿವೂ ನೆನಪಿರದ ಹಾಗೆ ಅಪ್ಪ ಅಮ್ಮನನ್ನು ಭೇಟಿಯಾದ ಸಂಭ್ರಮದಲ್ಲಿ ಮುಳುಗಿದೆ. ಮಧ್ಯಾಹ್ನ ಊಟವಾದ ನಂತರ ಲಘು ನಿದ್ದೆ ಮಾಡಲು ಹೋದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿದ್ದ ಅದೇ wildcraft ಬ್ಯಾಗ್ ತನ್ನ ಅಸ್ತಿತ್ವವನ್ನು ಜ್ಞಾಪಿಸಿತು.ತೆಗೆಯಲೇ , ಬೇಡವೇ ಎಂಬ ಗೊಂದಲದಲ್ಲಿಯೇ ಬ್ಯಾಗ್ ನ್ನು ತೆರೆದೆ. ಒಂದು ಟವೆಲ್, ಒಂದು shaving set , ಐದಾರು english ಪುಸ್ತಕಗಳು , ಯಾವುವೂ ನನಗೆ ಆ ಬ್ಯಾಗ್ ನ್ನು ಹಿಂತಿರುಗಿಸುವಲ್ಲಿ ಸಹಾಯ ಮಾಡುವಂತಹ ಸಾಮಾಗ್ರಿಗಳಿರಲಿಲ್ಲ . ಮತ್ತೆ ನೋಡಿದರೆ ಆ ಪುಸ್ತಕಗಳ ಅಡಿಯಲ್ಲಿ ನಲುಗಿ ಹೋಗಿದ್ದರೂ ತನ್ನದೇ ಅಸ್ತಿತ್ವ ಕಾಯ್ದುಕೊಂಡಿರುವಂತೆ ಒಂದು ಡೈರಿ ಇತ್ತು . ಅದೇ ಈ ಕಥೆಯ ಜೀವಾಳ.
ಇನ್ನೊಬ್ಬರ ಡೈರಿಯನ್ನು ಓದಬಾರದೆಂಬ ಪ್ರಜ್ಞೆಯನ್ನು ಮೀರಿ ಕುತೂಹಲ ಬೆಳೆದು ನಿಂತಾಗ , ಆ ಪ್ರಜ್ಞೆಯ ಕೆನ್ನೆಗೆ ಹೊಡೆಯುವಂತೆ ಅವನ ಡೈರಿಯ ಮೊದಲ ಪುಟದಲ್ಲೇ " ಇದು ಒಬ್ಬ ಭಾವುಕನ ಖಾಸಗಿ ಪ್ರದೇಶ , ಅತಿಕ್ರಮ ಪ್ರವೇಶ ನಿಷೇಧಿಸಲಾಗಿದೆ. " ಎಂದು ಬರೆದಿತ್ತು.ಮತ್ತೆ ಇದನ್ನು ಓದುವುದರಿಂದ ಯಾವ ರೀತಿಯಿಂದಲಾದರೂ ಬ್ಯಾಗ್ ನ್ನು ಹಿಂತಿರುಗಿಸಲು ಸಹಾಯ ಆಗಬಹುದೆಂದು ಸುಳ್ಳು ಸುಳ್ಳೇ ನನಗೆ ನಾನೇ ಕಾರಣ  ಕೊಟ್ಟುಕೊಂಡು ,ಓದಲಾರಂಭಿಸಿದೆ.   ಹೆಸರು ಮತ್ತು USN ಬಿಟ್ಟರೆ ಮತ್ತಾವ ವೈಯಕ್ತಿಕ ಮಾಹಿತಿಯೂ ಮೊದಲ ಪುಟಗಳಲ್ಲಿ ಬರೆದಿರಲಿಲ್ಲ . ( ನಮ್ಮದೇ ಕಾಲೇಜು , ೪ನೇ ಸೆಮೆಸ್ಟೆರ್ ಎಂದು ತಿಳಿದಿದ್ದು USNನಿಂದ ) ಬೇರೆ ದಾರಿಯಿಲ್ಲದೇ ಮಾರನೆಯೆ ದಿನ ಕಾಲೇಜಿಗೆ ಫೊನ್ ಮಾಡಿ ಕೇಳುವುದೆಂದು ನಿರ್ಧರಿಸಿ ಡೈರಿಯನ್ನು ಮಡಚಿಟ್ಟೆನಾದರೂ ಮತ್ತೆ ಕದ್ದು ಓದುವ ಮನಸಾಗಿ ತೆಗೆದು ಓದಲು ಕುಳಿತೆ.
ಡೈರಿ ಪ್ರಾರಂಭವಾಗುವುದು ೧-೬-೨೦೦೯ರಿಂದ , ಅಂದರೆ ಪ್ರಭಂಜನರ ಬ್ಯಾಚಿನ ಮೊದಲ ಬೇಸಿಗೆ ರಜೆ ಸುರುವಾದಂದಿನಿಂದ. " ಇದೇನೂ, ಈ ಡೈರಿ ಬರೆಯುವುದೇನೂ  ಎಂದು ಇಲ್ಲದ ಬಯಕೆ ಮೂಡಿ , ಆ ಕ್ಷಣದಲ್ಲಿ ದಾಖಲಿಸಲು ಆರಂಭಿಸಿದ ಹವ್ಯಾಸವಲ್ಲ , ರೂಢಿಸಿಕೊಳ್ಳಬೇಕೆಂದು ಬಹಳೇ ಪ್ರಯತ್ನ ಪಟ್ಟು , ಹಠ ಕಟ್ಟಿ ಕುಳಿತು ಸುರು ಮಾಡಿದ ಅಭ್ಯಾಸ. ಸುಳ್ಳು ಹೇಳುವುದು ಎಷ್ಟು ತಪ್ಪೋ , ಸತ್ಯವನ್ನು ಪೂರ್ತಿಯಾಗಿ ಹೇಳದೇ ಹೋಗುವುದೂ ಅಷ್ಟೇ ಪಾಪ, "ಅಶ್ವತ್ಥಾಮೋ ಹತಃ ಕುಂಜರಃ" ಎಂದ ಹಾಗೆ . ಸಾಮಾನ್ಯ ಮಾತ್ರದವರು ಸತ್ಯಕ್ಕೆ , ಪ್ರಾಮಾಣಿಕತೆಗೆ ತಪ್ಪಿ ನಡೆಯಬಾರದೆಂದರೆ ಹೆಜ್ಜೆ ಹೆಜ್ಜೆಗೂ ನಮ್ಮನ್ನು ತಿದ್ದುವ ಒಂದು ಶಕ್ತಿ ಬೇಕು , ಒಂದು ಸಾಕ್ಷಿ ಬೇಕು, ನಾನು  ಮನೆಯಲ್ಲಿದ್ದಾಗ ಅಕ್ಕ  ಉತ್ಪಲಾ ಇದ್ದ ಹಾಗೆ. ಆಸ್ತಿಕರಿಗೆ ದೇವರು ನೋಡುತ್ತಾನೆಂಬ ಹೆದರಿಕೆ ಇರುವ ಹಾಗೆ. ಅದೇ ಕಾರಣಕ್ಕೆ ನಾನು ಡೈರಿ ಬರೆಯಲಾರಂಭಿಸಿದ್ದು " ಎಂದು ಕಾರಣ ಕೊಟ್ಟುಕೊಳ್ಳುತ್ತಾನೆ.
                                                                                                                             ಮುಂದುವರಿಯುವುದು ...

No comments:

Post a Comment