Thursday 25 August 2011

ಒಂದು ಡೈರಿಯ ಕಥೆ ( ಮುಂದುವರಿದಿದೆ)


ಟ್ರೇನಿನಲ್ಲಿ ಸಿಕ್ಕಿದ ಬ್ಯಾಗನ್ನು ಹಿಂದಿರುಗಿಸುವ ನೆಪದಲ್ಲಿ ಅನಾಮಿಕಾ ಅದರೊಳಗಿದ್ದ ಡೈರಿಯನ್ನು ಓದಲು ಪ್ರಾರಂಭಿಸುತ್ತಾಳೆ. 

ಮುಂದೆ ಓದಿ ...

ಒಂದಿಷ್ಟು ಪೀಠಿಕೆಯ ಹಾಗೆ ಬರೆದಿದ್ದನಾದರೂ ಅದು ಯಾವ ರೀತಿಯಿಂದಲೂ ವಿಳಾಸ ತಿಳಿಯಲು ಸಹಾಯವಾಗುವಂತೆ ಇರಲಿಲ್ಲ.ಹೆಚ್ಚಿನವು ಅವನ ಜೀವನದ ಬಗ್ಗೆ , ಅದರ ಬಗೆಗಿನ ಅವನ ಅನುಭವದ ಬಗ್ಗೆ ಇತ್ತು. ತಂದೆ ತಾಯಿಯರ ಪ್ರೇಮವಿವಾಹ (ತಾಯಿಯ ಕಡೆಯವರಿಂದ ಬಹಳೇ ವಿರೋಧ ಕಟ್ಟಿಕೊಂಡು) ,ಮೂಲ ದಕ್ಷಿಣ ಕನ್ನಡದ ಜೈನರಾದರೂ ಹುಬ್ಬಳ್ಳಿಯಲ್ಲಿ ವಾಸವಾಗಿರುವುದು,ಎಂಬುದನ್ನು ಬಿಟ್ಟರೆ ಮತ್ತೆಲ್ಲ ವಿವರಗಳೂ unuseful. ಮೂರನೇ ಕ್ಲಾಸಿನಲ್ಲಿ ಅಪ್ಪನಿಗೆ ಗೊತ್ತಿಲ್ಲದಂತೆ ವೆಂಕಪ್ಪ ಶೆಟ್ಟರ ಅಂಗಡಿಗೆ ಹೋಗಿ ಎರಡು ರುಪಾಯಿಯ ಚಿಕ್ಕಿ ತೆಗೆದುಕೊಂಡು ತಿನ್ನುತ್ತಿದ್ದುದು, ಎರಡೂ ಮನೆಯವರ ವಿರೋಧವಿದ್ದರೂ ವಿನಾಯಕ ಮಾವ(ಪ್ರಭಂಜನನ ಅಮ್ಮನ ತಮ್ಮ)ನ ಮಗಳು ಆವಂತಿಯ ಮೇಲೆ ಉಂಟಾದ crush, ಹೀಗೆ ಎಷ್ಟೋ ವಿಷಯಗಳನ್ನು ಮೊದಲ ಬಾರಿಗೆ ಮನಸ್ಸಿನಿಂದ ಹೊರಕ್ಕೆ ಹರಿಯಬಿಟ್ಟಿದ್ದ . ಮುಂದೆ ೯ನೇ ಕ್ಲಾಸಿನಲ್ಲಿರುವಾಗ ಅದೇ ಆವಂತಿ ಮೆದುಳು ಜ್ವರದಿಂದ ತೀರಿಕೊಂಡಾಗ , ಭಾಷೆಗೆ ಇರುವ ಮಿತಿ ನೋವಿಗೆ ಎಲ್ಲಿಂದ ಬರಬೇಕು ಎಂದುಬಿಡುತ್ತಾನೆ. ಅವನು ಬರೆದಿದ್ದೆಲ್ಲಾ ಸತ್ಯವೇ? ಆ ವಾಕ್ಯಗಳು ಸತ್ಯಕ್ಕಿಂತಲೂ ಹೆಚ್ಚು ಪ್ರಾಮಾಣಿಕವಾಗಿದ್ದವು. ಪಿ.ಯು. ವಿನ ಘಟನೆಗಳ ಬಗೆಗಿನ ಅವನ ಕೆಲವು ವಾಕ್ಯಗಳನ್ನು ಅವನು ಬರೆದಂತೆಯೇ ಉದ್ಧರಿಸುತ್ತೇನೆ " ನನಗೆ ಸಹಸ್ರ ವಿಧದಲ್ಲಿ ಸಹಾಯ ಮಾಡಿದ ನವೀನನೊಂದಿಗೆ ಸಹಾ ನಾನು ಪ್ರಾಮಾಣಿಕವಾಗಿರಲಿಲ್ಲ ಎಂಬುದಕ್ಕೆ ನಾನು ದುಃಖ ಪಡುತ್ತೇನೆ,  ಯಾವುದೇ ಕೆಲಸ ಇದ್ದರೂ ದಿನವೂ ಕಾಲೇಜಿಗೆ ಕರ್ತವ್ಯವೇನೋ ಎನ್ನುವ ತರಹ drop ಕೊಡುತ್ತಿದ್ದ ’ನವೀ’ಗೆ , ಆವಂತಿಯ hangoverನಿಂದ ಹೊರ ಬರಲು ಬಹಳೇ ಸಹಾಯ ಮಾಡಿದ ’ನವೀ’ಗೆ , ಎಷ್ಟೋ ಸಲ ನನ್ನನ್ನು ಬಚಾವ್ ಮಾಡಲು ನನ್ನ ತಪ್ಪುಗಳನ್ನು ತನ್ನದೆಂದುಕೊಂಡು ನನ್ನ ಮತ್ತು ಅವನ ಮನೆಗಳೆರಡರಲ್ಲೂ ಬೈಸಿಕೊಳ್ಳುತ್ತಿದ್ದ ’ನವೀ’ಯ ಬಳಿ ಕೂಡಾ ಶೈಕ್ಷಣಿಕ ಅಸೂಯೆಯಿಂದ ವರ್ತಿಸಿದೆನೇ ? ಅದು ಅವನು ನನಗೆ ತೋರಿಸುತ್ತಿದ್ದ ಸಹಾನುಭೂತಿಗೆ ತೋರಿದ ಪ್ರತಿಕಾರ ಎಂದು ಹೇಳಿಕೊಂಡರೂ( ನಾನು ಜಗತ್ತಿನಲ್ಲಿ ಏನೆನ್ನಾದರೂ ಸಹಿಸಬಲ್ಲೆ , ಸಹಾನುಭೂತಿಯನ್ನಲ್ಲ ). ಐ ಐ ಟಿ ಯ ಮೆಟೀರಿಯಲ್ಸ್ , ನಾನು ತರಿಸುತ್ತಿಲ್ಲ ಎಂದಿದ್ದು , ಮಿಗಿಲಾಗಿ ಪ್ರಣಮ್ಯಳ ಬಗೆಗಿನ ನವೀನನ ಪ್ರೇಮವನ್ನು ಬಹಿರಂಗ ಮಾಡಿ ’ನವೀ’ಯ image ಹಾಳು ಮಾಡಿ ಹಾಕಿದ್ದು . ಕೇವಲ ತಮಾಷೆಗೆಂದು ಬರೆದಿದ್ದ ಒಂದು ಪತ್ರ , ಯಾರು ಯಾರದೋ ಕೈ ತಲುಪಿ ಕೊನೆಗೆ ಪ್ರಾಂಶುಪಾಲರು  ’ideal ಹುಡುಗ’ ನವೀನನಿಗೆ ಛೀಮಾರಿ ಹಾಕುವ ಹಾಗಾಗಿ ನವೀನ ಖಿನ್ನತೆಗೆ ಹೋಗುವಷ್ಟರ ಮಟ್ಟಿಗೆ ಬೇಜಾರಾಗಿ ಇದ್ದಾಗಲೂ ಸತ್ಯ ಒಪ್ಪಿಕೊಳ್ಳದೇ ಹೋಗಿದ್ದು ಅಕ್ಷಮ್ಯವೇ.ಆದರೆ ಅದೇ ಸಿಟ್ಟಿನಲ್ಲಿ ಪ್ರಣಾಮ್ಯಳ ಬಳಿ ಹೋಗಿ ಒಂದು ದಿನ ನಿನ್ನನ್ನು ನೋಡಿಕೊಳ್ಳೂತ್ತೇನೆ ಎಂದು ಧಮಕಿ ಹಾಕಿದರೂ , ಮುಂದೆ ಅವಳು ನನಗೆ ಬಹಳ ಕ್ಲೋಸ್ ಆಗಿದ್ದು ನಿಜ. ನವೀನ ಐ.ಐ.ಟಿ. ಯಲ್ಲಿ ಉತ್ತೀರ್ಣನಾಗಿ , ನಾನು ಆಗದೇ ಹೋಗಿದ್ದು ನನ್ನ ’ಚತುರ್’ತನಕ್ಕೆ ಆದ ಶಿಕ್ಷೆಯೇ ? " ಎಂದು ತನ್ನನ್ನೇ ಕೇಳಿಕೊಂಡು  ನವೀನನ ಬಗೆಗಿನ ಅಧ್ಯಾಯವನ್ನು ಅಂತ್ಯ ಮಾಡುತ್ತಾನೆ. ಈ ವಿಷಯದಲ್ಲಿ ನಿಜವಾಗಿಯೂ ಪ್ರಭಂಜನನ ತಪ್ಪಿತ್ತೇ ಅಥವಾ ಇದು ಅವನ ಅಕಾರಣ ಪ್ರಾಯಶ್ಚಿತ್ತವೇ ?  ಸರಿಯಾದ ಮಾಹಿತಿಯಿಲ್ಲದೇ ಅವಸರದ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ ಎಂದು ಆ ವಿಷಯವನ್ನು ಅಲ್ಲಿಗೇ ಬಿಟ್ಟೆ.
ಅವನು ಮುಂದುವರಿಯುತ್ತಾ ಹೇಳುತ್ತಾನೆ" ಹೊಸ ನಗರ , ಹೊಸ ಜೀವನ , ಹೊಸ ಗೆಳೆಯರು , ಹೀಗೆ ಮೊದಲ ಸೆಮಿಸ್ಟರ್ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಕಳೆದು ಹೋಗಿತ್ತು. ಅತಿ ಶಿಸ್ತಿನಿಂದ ಬೆಳೆಸಿದವರಿಗೆ , ಸ್ವಾತಂತ್ರ್ಯ ಮತ್ತು ಅವಕಾಶ ಒಟ್ಟಿಗೆ ಸಿಕ್ಕರೆ ಏನಾಗುತ್ತದೋ ಅದೇ ಅಯಿತು . ಚಲನಚಿತ್ರಗಳು, ಇಂಟರ್ನೆಟ್ ,ವೀಡಿಯೋ ಗೇಮ್ ಗಳು, ಮೊದಲಿನಿಂದ ಇದ್ದ ಪಠ್ಯೇತರ ಸಾಹಿತ್ಯದ ಪುಸ್ತಕ ಓದುವಿಕೆ , ಎಲ್ಲನೂ ಸೇರಿ ಮೊದಲ ಸೆಮಿಸ್ಟರ್ ನ್ನು ಭಯಂಕರ ವೈಫಲ್ಯವಾಗಿಸಿಬಿಟ್ಟವು. ಅದಕ್ಕಿಂತಲೂ ಹೆಚ್ಚು ಕಳವಳಕಾರಿಯಾಗಿದ್ದು ಅಗುತ್ತಿದ್ದ ನೈತಿಕ ಅಧಃಪತನ ,ಗಾಂಧಿವಾದಿ ಮಂಜಪ್ಪಯ್ಯ ಜೈನ್ ರ ಮೊಮ್ಮಗ ಅಶ್ಲೀಲ ಚಿತ್ರಗಳನ್ನು ನೋಡಿದ ಎನ್ನುವಲ್ಲಿಗೆ ನೈತಿಕತೆ ಒಂದು ಪಾತಾಳವನ್ನು ಮುಟ್ಟಿ ಆಗಿತ್ತು. ಅದಕ್ಕೆ ಗೆಳೆಯರನ್ನೂ , ಇಂಟೆರ್ನೆಟ್ಟನ್ನೂ ದೂರಿದರೆ ಅದು ಕೇವಲ ತಪ್ಪು ಜಾರಿಸುವ ಪ್ರಯತ್ನವಾಗುತ್ತದೆಯಾದ್ದರಿಂದ ತಪ್ಪೆಲ್ಲ ಅಗತ್ಯವಾದಷ್ಟು ಗಟ್ಟಿಯಾಗಿಲ್ಲದ ನನ್ನ ಮನೋನಿರ್ಧಾರದ್ದೇ , ಎನ್ನುವುದು ಹೆಚ್ಚು ಸಮಂಜಸ. ಹೀಗಿರುವಾಗ ಅಪ್ಪ ನನ್ನ ಹುಟ್ಟಿದ ಹಬ್ಬದ ಉಡುಗೊರೆಯಾಗಿ ಅಜ್ಜ ಮಂಜಪ್ಪಯ್ಯರ ಡೈರಿಯನ್ನು ಕೊಟ್ಟಿದ್ದು. ಅದು ನಿಜವಾಗಿಯೂ ನನ್ನ ಬದುಕನ್ನೇ ಬದಲಾಯಿಸಿತು. ಸತ್ಯ , ನ್ಯಾಯ ನಿಷ್ಟೆಯ ಬಗ್ಗೆ ಅವರ ಅಭಿಪ್ರಾಯ ಎಂತಹವರನ್ನು ಬದಲಾಯಿಸುವಂತಿತ್ತು. ಒಂದೊಂದು ಸಲ ಓದಿದಾಗ ಒಂದೊಂದು ಅರ್ಥ ಕಂಡು , ನನ್ನ  ಬಗ್ಗೆ ನನಗೇ ಅಸಹ್ಯ ಮೂಡಲಾರಂಭಿಸಿತು.ಎಂದು ಹೀಗೆ ಎಷ್ಟೋ ಚಿಕ್ಕ ದೊಡ್ದ ವಿಷಯಗಳ ಬಗ್ಗೆ, ಅವುಗಳ ಸರಿ-ತಪ್ಪು ನಿಲುವುಗಳ ಬಗ್ಗೆ  ಪ್ರಭಂಜನನು ಚರ್ಚೆ ಮಾಡುತ್ತ ಹೋಗುತ್ತಾನೆ. ತನ್ನ ಪ್ರತಿಯೊಂದು ಕಾರ್ಯವನ್ನು ಯಾವುದೇ ಪೂರ್ವಾಗ್ರಹವಿಲ್ಲದೇ ವಿಶ್ಲೇಷಣೆ ಮಾಡಿಕೊಳ್ಳುತ್ತಾನೆ. ಹೀಗೆಯೇ ಮುಂದಿನ ಮೂರು ಸೆಮಿಸ್ಟರ್ ಗಳ ಮತ್ತೊಂದಿಷ್ಟು ಅಷ್ಟೇನೂ ,ಮಹತ್ವದ್ದು ಎನಿಸದಂತಹ ಘಟನೆಗಳು , ಒಂದಿಷ್ಟು ಅನುಭವಗಳು ,ಒಂದಿಷ್ಟು ಉಚಿತ ಉಪದೇಶಗಳು,ಡೈರಿಯ ಉಳಿದ ಹಾಳೆಗಳನ್ನು ತುಂಬುತ್ತದೆ.  ಕೊನೆಯ ಲಿಖಿತ ಪುಟದಲ್ಲಿದ್ದ ಈ ಸಾಲುಗಳು ನನ್ನ ಗಮನ ಸೆಳೆದಿದ್ದಂತೂ ಹೌದು " ನಾವೆಷ್ಟೇ ಒಳ್ಳೆಯವರಾಗಿರಹೋದರೂ ,ಪ್ರಾಮಾಣಿಕವಾಗಿರಹೋದರೂ , ಕೆಲವೊಂದು ಸಲ ವಿಧಿಯೋ ,ಆಕಸ್ಮಿಕಗಳೋ ನಿಮ್ಮನ್ನು ಅತ್ಯಂತ ಕೀಳಾಗಿ ಬಿಂಬಿಸಬಹುದು. ಆಗ ಅಂತಹವುಗಳನ್ನು ನಿರ್ಲಕ್ಷಿಸಿ , ನಿಮ್ಮ ತತ್ವಗಳಿಗೆ ಅಂಟಿಕೊಂಡಿರಬೇಕು ಎಂದು ನಾನೆಲ್ಲೋ ಮೊದಲು ಬರೆದಿದ್ದ ನೆನಪು , ಆದರೆ ಅದೆಷ್ಟು ಕಷ್ಟ ಎಂಬುದರ ಅನುಭವ ಇವತ್ತಾಯ್ತು , ಈಗಷ್ಟೇ ನಿದ್ರೆಯಿಂದ ಎಚ್ಚರವಾದರೂ ಮತ್ತೆ ಈಗ ಬಹಳ ನಿದ್ದೆ ಬರುತ್ತಿದೆಯಾದ್ದರಿಂದ ಈ ಘಟನೆಯ ಬಗ್ಗೆ ನಾಳೆ ಬರೆಯುತ್ತೇನೆ" ತಾರೀಕನ್ನು ನೋಡಿದರೆ ಮೇ ೨೯-೨೦೧೦, ಎಂದರೆ ನಿನ್ನೆ.
ಯಾರೂ ನೋಡಲಾರರು ಎಂಬ ಧೈರ್ಯವು ಎಂತಹ ತಪ್ಪನ್ನೂ ಮಾಡಲು ಪ್ರೋತ್ಸಾಹ ಕೊಡುತ್ತದೆ ಎಂಬುದೆಲ್ಲ ನಿಜವೆನಿಸಿ ನಾನೂ ಒಂದು ಡೈರಿಯನ್ನು ಬರೆಯಬೇಕೆಂಬ ಖಚಿತ ನಿರ್ಧಾರ ಮಾಡಿದ್ದೆ. ಆದರೆ ಇವಾವುವೂ ಬ್ಯಾಗ್ ನ್ನು ಹಿಂತಿರುಗಿಸುವ ನನ್ನ ಉದ್ದೇಶಕ್ಕೆ ಸಹಾಯಕಾರಿಯಾಗಲಿಲ್ಲವಾಗಿ ಮಾರನೆ ದಿನ ಕಾಲೇಜಿಗೆ ಫೋನು ಮಾಡಿ USN  ಉಪಯೋಗಿಸುವುದೇ ಅನಿವಾರ್ಯವಾಯಿತು.ಕಾಲೇಜಿನಿಂದ ವಿಳಾಸ ಮತ್ತು ಮನೆಯ ದೂರವಾಣಿ ಸಂಖ್ಯೆ ಪಡೆದು , ಮನೆಗೆ ಕರೆ ಮಾಡಿದರೆ ಅವನ ಅಮ್ಮ "ಅವನು ಇವತ್ತು ಬೆಳಿಗ್ಗೆಯಷ್ಟೇ ದಿಲ್ಲಿಗೆ ಹೊದ, ಅದೇನೋ internship ಅಂತೆ. ಹಾಂ, ಒಂದು ಬ್ಯಾಗ್ ನ್ನು ರೈಲಿನಲ್ಲಿ ಕಳೆದುಕೊಂಡನಂತೆ , ಬಹಳೇ ಪೇಚಾಡಿಕೊಂಡ ,ಅದೇನೇನೋ ಮಹತ್ವದ documents ಎಲ್ಲಾ ಇತ್ತಂತೆ " , ಎಂದು ಹೇಳಿ ಅವನ ಮೊಬೈಲ್ ಸಂಖ್ಯೆಯನ್ನು ಕೊಟ್ಟರು. ಪ್ರಭಂಜನ್ ಗೆ ಕರೆ ಮಾಡಿದರೆ ನಾನೆಣಿಸಿದ್ದಕ್ಕಿಂತ ಬಹಳ ಶಾಂತವಾಗಿದ್ದ ," ಸರಿ ಹಾಗಾದರೆ , ನೀವು ಡೈರಿಯನ್ನು ಓದಿಲ್ಲ ಎಂದು ನಾನು ನಂಬಲಾರೆ. ಎಂತಿದ್ದರೂ ನೀವು ಡೈರಿಯನ್ನು ಓದಿಯಾಗಿದೆ ,ಅದನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ . ನಾನು ಬರುವುದು ಆಗಸ್ಟ್ ಪ್ರಾರಂಭದಲ್ಲಿ , ಕಾಲೇಜು ಆರಂಭವಾಗುವುದಕ್ಕಿಂತ ಒಂದು ವಾರ ಮೊದಲು .,ನಾನೇ ಬೆಳಗಾವಿಗೆ ಬರುತ್ತೇನೆ ತೆಗೆದುಕೊಂಡು ಹೋಗಲು. ನಮ್ಮ ಮನೆಗೆ ಬ್ಯಾಗ್ ನ್ನು ಕೊಟ್ಟರೆ ಅವರು ಓದುವ ಅವಕಾಶ ಇದೆಯಾದ್ದರಿಂದ ಅದು ನಿಮ್ಮ ಬಳಿಯಿರುವುದೇ ಸುರಕ್ಷಿತ . ನಿಜವೆಂದರೆ  ಡೈರಿ ಬರೆಯಲು ಪ್ರಾರಂಭಿಸಿದ್ದೇ ಅವರ ಕಲ್ಪನೆಯ ’ಪ್ರಭಂಜನ’ನ ಮಟ್ಟಕ್ಕೆ ನಾನು ನನ್ನನ್ನು ಪುನರುತ್ಥಾನ ಮಾಡಿಕೊಳ್ಳಲಿಕ್ಕೆ, .ಅಷ್ಟೇ. ಮುಂದೊಂದು ದಿನ ನಾನೇ ಹೇಳುತ್ತೇನೆ . ಏಕೆಂದರೆ ’ನನ್ನ ಮಗ ಹಿಂದೊಂದು ದಿನ ಹಾಳಾಗಿದ್ದನಾದರೂ ಮತ್ತೆ ಅವನಷ್ಟಕ್ಕೆ ಅವನೇ ಸ್ಫೂರ್ತಿ ಪಡೆದು ಸರಿಯಾದ ಎಂಬುದು ಎಷ್ಟು ಸಮಾಧಾನ ಕೊಡುತ್ತದೆಯೋ , ಅಷ್ಟೇ ಚಿಂತೆಯನ್ನು ನನ್ನ ಮಗ ಈಗ ದಾರಿ ತಪ್ಪಿದ್ದಾನೆ ಎಂಬುದು ಕೊಡುತ್ತದೆ ’ "  ಎಂದು ಒಂದೇ ಉಸಿರಿನಲ್ಲಿ ಹೇಳಿ ನಿಲ್ಲಿಸಿದ . ನಾನು ಕೇಳಬೇಕೆಂದಿದ್ದನ್ನೆಲ್ಲ ಕೇವಲ ಧ್ವನಿ ಬದಲಾವಣೆಯಿಂದಷ್ಟಲೇ ಗುರುತಿಸಿ , ಅದಕ್ಕೆ ತಕ್ಕ ಸಮಜಾಯಿಷಿ ಕೊಟ್ಟ ಪ್ರಭಂಜನನ ಬಗ್ಗೆ ಮೆಚ್ಚುಗೆ ಮೂಡಿದ್ದು ಸಹಜವೇ.

ಒಂದೂವರೆ ತಿಂಗಳ ನಂತರ...
ನನ್ನ ಜೀವನದ ದೊಡ್ಡ ಆಶ್ಚರ್ಯ ಆಗಿದ್ದು ಬೆಳಗಾವಿಯ ರೈಲ್ವೇ ನಿಲ್ದಾಣದಲ್ಲಿ , ಪ್ರಭಂಜನನನ್ನು ನೋಡಿದಾಗ. ಊಹೆಗಳೂ ಮುಟ್ಟದಷ್ಟು ಚಿಕ್ಕದಾಗಿತ್ತು ಜಗತ್ತು , ಪ್ರಭಂಜನ ಎದುರು ಬಂದು ನಿಂತಾಗ ಭೂಮಿ ಬಾಯಿ ಬಿಡಬಾರದೇ ಎನಿಸಿದ್ದು ಅವನ ಡೈರಿಯನ್ನು ಓದಿದ್ದ ನಾಚಿಕೆಯಿಂದಲ್ಲ . ಅರ್ಧ ಸತ್ತ ಒಂದು ಕಾಲು , ಕ್ಷಣಕ್ಷಣಕ್ಕೂ ಸರಿ ಪಡಿಸಿಕೊಳ್ಳುತ್ತಿದ್ದ ಕನ್ನಡಕ ,ನಿಮ್ಮ ಸಹಾನುಭೂತಿ ನೀವೆ ಇಟ್ಟುಕೊಳ್ಳಿ ಎಂದು ಕಣ್ಣಿನಲ್ಲೇ ಹೇಳಿಕೊಂಡು ಬರುವ ಈ ಪ್ರಭಂಜನ ಹಾಗೂ ಅಂದು ರಾತ್ರಿ ರೈಲಿನಲ್ಲಿ  ವಿನಾಕಾರಣ ನನ್ನ ಕೈಯಲ್ಲಿ ಬೈಸಿಕೊಂಡ ಆ ಕುಂಟು ಹುಡುಗ ಇಬ್ಬರೂ ಒಬ್ಬರೇ ಆದ್ದರಿಂದ . ಸಹಾನುಭೂತಿಯ ಬಗೆಗಿನ ಅವನ ಕೋಪ , ನವೀನನ ಕೊಡುತ್ತಿದ್ದ ಡ್ರಾಪ್ ನ ಮಹತ್ವ, ಅವನು ಬರೆದ ಕೊನೆಯ ದಿನದ ಅನುಭವ ಎಲ್ಲವೂ ಈಗ ಒಂದು ಸ್ಪಷ್ಟವಾದ ರೂಪ ಪಡೆಯತೊಡಗಿದವು.ನಾನೇನು ಮಾತನಾಡಲಿ ಎಂದು ತಡವರಿಸುತ್ತಿರುವಾಗ ಅವನೇ ಮಾತನಾಡತೊಡಗಿಡದ " ನೀವೇನೂ ಸಂಕೋಚಪಟ್ಟುಕೊಳ್ಳಬೇಡಿ , ಆ ದಿನ ನಿಮ್ಮ ಪರಿಸ್ಥಿತಿಯಲ್ಲಿ ನಾನಿದ್ದು , ನಾನು ಒಬ್ಬ ಹುಡುಗಿಯಾಗಿದ್ದರೂ ನೀವು ಮಾಡಿದ್ದನ್ನೇ ,ಮಾಡುತ್ತಿದ್ದೆನೇನೋ! ನೀವು ನನ್ನ ಅಳಲನ್ನು ಓದಿದ್ದರಿಂದ ನಿಮಗೆ ಮತ್ತೂ ಮುಜುಗರವೆನ್ನಿಸಬಹುದಷ್ಟೇ, ಈ ಡೈರಿಯ ವಿಷಯ ನಮ್ಮಿಬ್ಬರಲ್ಲಿಯೇ ಇರಲಿ , ಯಾರಿಗೂ ದಯವಿಟ್ಟು ಹೇಳಬೇಡಿ " ಎಂದು ತಿರಸ್ಕರಿಸಲಾಗದಂತೆ ಬೇಡಿಕೆಯನ್ನಿಟ್ಟು ಮಾತು ಮರೆತವನಂತೆ ನಿಂತ . ಮನಸ್ಸನ್ನು ಅರಿಯುವ ಅವನ ಶಕ್ತಿಗೆ ಬೆರಗಾಗಿ ,ಇಡೀ ಒಂದು ವರ್ಷದ ಡೈರಿಯಲ್ಲಿ  ಒಂದು ಸಲವೂ ತನ್ನ ಅಂಗವೈಕಲ್ಯದ ಬಗ್ಗೆ ಪ್ರಸ್ತಾಪಿಸದ ಅವನ ಆತ್ಮಗೌರವದ ಬಗ್ಗೆ ಪ್ರಶಂಸೆ ಮೂಡಿ ಮಾತನಾಡಬೇಕೆನ್ನೆಸಿದರೂ ಮಾತನಾಡಲಾರದೇ ಹೋದೆ. ನಾನು ಗೊಂದಲದಲ್ಲಿ ಮಾತನಾಡದಿದ್ದನ್ನು ನಿರಾಸಕ್ತಿ ಎಂದು ಅಪಾರ್ಥ ಮಾಡಿಕೊಂಡನೋ , ಅವನಿಗೂ ಮಾತಾಡಲು ಏನೂ ಸಿಗಲಿಲ್ಲವೋ ಈ ಭೇಟಿ ಇಷ್ಟಕ್ಕೇ ಸಾಕು ಎನ್ನುವಂತೆ " ಧನ್ಯವಾದಗಳು , ಕಳೆದು ಹೋಯ್ತೆಂದುಕೊಂಡಿದ್ದ ಅತಿ ಮಹತ್ವದ ಈ ಬ್ಯಾಗ್ ನ್ನು ಸಿಗುವಂತೆ ಮಾಡಿದ್ದಕ್ಕೆ" ಎಂದು ಹೇಳಿ , ನಾನು ತಲೆ ಅಲ್ಲಾಡಿಸಿದ್ದನ್ನು ನೋಡಿದ ಮೇಲೆ , ಮತ್ತೆ ಹಿಂತಿರುಗಿ ನೋಡದೇ ಹೋದ.
                                                                                                                         
ಟಿಪ್ಪಣಿ :

ಇದೊಂದು ಕಾರಣವಾಗಬಹುದೆಂದು ನಾನು ಭಾವಿಸೆನಾದರೂ ಈ ಕಥೆಯನ್ನು ಬರೆಯುವಾಗ ಬೇರೊಂದು ಐಡಿಯಾ ಬಂದು ಅದು ಈ ಕಥೆಯ ಮೇಲೆ ಒಂದಿಷ್ಟು ಪ್ರಭಾವ ಬೀರಿದ್ದರಿಂದ ಸ್ವಲ್ಪ ಅಪೂರ್ಣ ಎನಿಸಬಹುದೇ ಈ ಕಥೆ ? ನೀವೇ ತೀರ್ಪುಗಾರರು.


4 comments:

  1. ಅಂತ್ಯ ಚೆನ್ನಾಗಿದೆ... ನಿಜಕ್ಕೂ ಅನೂಹ್ಯ.. ಇನ್ನೂ ಉತ್ತಮ ಕಥೆಗಳು ನಿನ್ನಿಂದ ಸೃಜಿಸಲ್ಪಡಲಿ...

    ReplyDelete
  2. Tumbaa chennaagi baredidderi. Nimmantha engineer-bloggers-gala kannada prema nodi khushi aaytu.
    You deserve ovation for this story:-)

    ReplyDelete
  3. @ganesh ಅನಂತ ಧನ್ಯವಾದಗಳು.

    @anonymous abhimaani : ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು. ವೃತ್ತಿ ಯಾವುದಾದರೇನಂತೆ, ಭಾಷೆ ಮತ್ತು ಅದರ ಬಗೆಗಿನ ಅಭಿಮಾನಕ್ಕೆ ಅದರ ಎಲ್ಲೆಯಿದೆಯೇ. ದಯವಿಟ್ಟು ಮುಂದಿನ ಸಲ ನಿಮ್ಮ ಹೆಸರನ್ನು ವ್ಯಕ್ತಪಡಿಸಿ. (ಯಾವುದೇ ಆಕ್ಷೇಪ ಇಲ್ಲದೇ ಹೋದರೆ)

    ReplyDelete
  4. tumba chennagide....

    ReplyDelete